ಭಾರತೀಯ ವಾಯುಪಡೆಗೆ ಸಂತ ಫಿಲೋಮಿನಾ ಕಾಲೇಜಿನ ಎನ್.ಸಿ.ಸಿ. ಕೆಡೆಟ್ ಮಂಜುನಾಥ್ ಟಿ. ವಿ ಆಯ್ಕೆ
ಕಾಲೇಜಿನ ವತಿಯಿಂದ ಅಭಿನಂದನಾ ಕಾರ್ಯಕ್ರಮ
ಪುತ್ತೂರು: ಸಂತ ಫಿಲೋಮಿನಾ ಕಾಲೇಜಿನ ದ್ವಿತೀಯ ಬಿ.ಎಸ್ಸಿ ವಿಭಾಗದ ವಿದ್ಯಾರ್ಥಿ ಕೆಡೆಟ್ ಮಂಜುನಾಥ್ ಟಿ. ವಿ ಅವರು ಭಾರತೀಯ ವಾಯುಪಡೆಯ ವೈದ್ಯಕೀಯ ಸಹಾಯಕರಾಗಿ ಸೇವೆ ಸಲ್ಲಿಸಲು ಜುಲೈ 1 ರಂದು ಬೆಂಗಳೂರಿನ ಮಿಲಿಟರಿ ತರಬೇತಿ ಕೇಂದ್ರಕ್ಕೆ ಹಾಜರಾಗಲಿದ್ದಾರೆ.

ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಶಿಕ್ಷಕ ವೆಂಕಟೇಶ ಟಿ. ಜೆ. ಮತ್ತು ರಾಧಮಣಿ ಜಿ ಆರ್ ದಂಪತಿಯ ಪುತ್ರರಾಗಿರುವ ಮಂಜುನಾಥ್ ಟಿ. ವಿ. 2013 ರಿಂದ ಹಲವಾರು ಭಾರತಿಯ ಸೈನ್ಯದ ಹಲವು ವಿಭಾಗದ ಆಯ್ಕೆ ಪ್ರಕ್ರಿಯೆಗಳಲ್ಲಿ ಭಾಗವಹಿಸಿದ್ದರು. ಅಂತಿಮವಾಗಿ ಭಾರತೀಯ ವಾಯುಪಡೆಯ ವೈದ್ಯಕೀಯ ಸಹಾಯಕರಾಗಿ ಆಯ್ಕೆಗೊಂಡ ಸಲುವಾಗಿ ಕಾಲೇಜಿನ ವತಿಯಿಂದ ಅಭಿನಂದನಾ ಕಾರ್ಯಕ್ರಮವನ್ನು ಸಂಯೋಜಿಸಲಾಯಿತು.
ಅಭಿನಂದನಾ ಕಾರ್ಯದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಚಾರ್ಯ ವಂ| ಡಾ| ಆ್ಯಂಟನಿ ಪ್ರಕಾಶ್ ಮೊಂತೇರೊ ಮಾತನಾಡಿ, ದೇಶ ಸೇವೆ ಎಂಬುದು ಒಂದು ಮಹತ್ಕಾರ್ಯ. ಹೇಗೆ ಒಬ್ಬ ಸಂನ್ಯಾಸಿ ತನ್ನ ಕುಟುಂಬವನ್ನು ತ್ಯಜಿಸಿ ಸಂನ್ಯಾಸಿ ಜೀವನವನ್ನು ಜೀವನ ನಡೆಸುತ್ತಾನೋ ಅದೇ ರೀತಿ ಸೈನಿಕರು ತಮ್ಮ ಕುಟುಂಬವನ್ನು ತ್ಯಜಿಸಿ ದೇಶ ಸೇವೆ ಮಾಡುವ ಮೂಲಕ ತನ್ನ ಅಮೂಲ್ಯ ಜೀವವನ್ನು ನೀಡಲು ಸಿದ್ಧರಾಗಿರುತ್ತಾರೆ. ದೇವರ ಆಶೀರ್ವಾದದ ಜೊತೆಗೆ ಹೆತ್ತವರ ಆಶೀರ್ವಾದ ಅತೀ ಮುಖ್ಯ ಎಂದು ಹೇಳಿ ಶುಭಕೋರಿದರು.
ಕಾಲೇಜಿನ ಉಪಪ್ರಾಶುಪಾಲ ಡಾ| ವಿಜಯ ಕುಮಾರ್ ಎಂ. ಮಾತನಾಡಿ, ಈಗಿನ ಪ್ರಪಂಚದಲ್ಲಿ ಭಾರತೀಯ ಸೈನ್ಯಕ್ಕೆ ಯುವಕ ಯುವತಿಯರು ಸೇರ್ಪಡೆಗೊಳ್ಳುತ್ತಿರುವುದು ಕಡಿಮೆ ಆಗುತ್ತಿದೆ. ಕಾರಣ ಕಷ್ಟಪಡಲು, ಕಡಿಮೆ ವೇತನ, ಹೆತ್ತವರ ಪ್ರೋತ್ಸಾಹ ಇತ್ಯಾದಿ. ಆದರೆ ಕೆಡೆಟ್ ಮಂಜುನಾಥ್ ಟಿ. ವಿ. ಹಲವಾರು ಆಯ್ಕೆ ಪ್ರಕ್ರಿಯೆಗಳಲ್ಲಿ ಭಾಗವಸಿ ಆಯ್ಕೆ ಆಗದಿದ್ದರೂ ದೃತಿಗೆಡದೆ ತನ್ನ ಪರಿಶ್ರಮದಿಂದ ಭಾರತೀಯ ವಾಯುಪಡೆಗೆ ಆಯ್ಕೆಯಾಗಿರುವುದು ಕಾಲೇಜಿಗೆ, ಊರಿಗೆ, ಹಾಗೂ ತನ್ನ ಹೆತ್ತವರಿಗೆ ಹೆಮ್ಮೆಯ ವಿಚಾರವಾಗಿದೆ ಎಂದು ಹೇಳಿ ಅವರಿಗೆ ಶುಭಕೋರಿದರು.
ಅಭಿನಂದನಾ ಕಾರ್ಯದಲ್ಲಿ ಕಾಲೇಜಿನ ಪರೀಕ್ಷಾಂಗ ಕುಲಸಚಿವ ಡಾ| ವಿನಯಚಂದ್ರ, ಹಣಕಾಸು ಅಧಿಕಾರಿ ಡಾ| ಎಡ್ವಿನ್ ಡಿಸೋಜಾ, ಶೈಕ್ಷಣಿಕ ಉಪಕುಲಸಚಿವ ವಿಪಿನ್ ನಾಯ್ಕ್ , ಪರೀಕ್ಷಾಂಗ ಉಪಕುಲಸಚಿವ ಅಭಿಷೇಕ್ ಸುವರ್ಣ, ಐಕ್ಯೂಎಸಿ ಸಂಯೋಜಕಿ ಡಾ| ಮಾಲಿನಿ ಕೆ ಜೊತೆಗೆ ಕಾಲೇಜಿನ ಶಿಕ್ಷಕ ಮತ್ತು ಆಡಳಿತ ಸಿಬ್ಬಂದಿವರ್ಗ ಹಾಗೂ ವಿದ್ಯಾರ್ಥಿಗಳು ಭಾಗವಸಿದರು. ಕಾಲೇಜಿನ ಎನ್.ಸಿ.ಸಿ. ಅಧಿಕಾರಿ ಕ್ಯಾಪ್ಟನ್ ಜೋನ್ಸನ್ ಡೇವಿಡ್ ಸಿಕ್ವೇರಾ ಕಾರ್ಯಕ್ರಮವನ್ನು ನಿರೂಪಿಸಿದರು.