ಪುತ್ತೂರು: ವೀರಮಂಗಲದ ಆನಾಜೆ ಶ್ರೀಮಹಾವಿಷ್ಣು ಸೇವಾ ಪ್ರತಿಷ್ಠಾನದ ಬೆಳ್ಳಿ ಹಬ್ಬದ ಪ್ರಯುಕ್ತ ನಡೆಯಲಿರುವ ವಿವಿಧ ಕಾರ್ಯಕ್ರಮಗಳ ಅಂಗವಾಗಿ ಜೂ.29ರಂದು ವೀರಮಂಗಲದ ಶ್ರೀವಿಷ್ಣುಮೂರ್ತಿ ದೇವಸ್ಥಾನದ ಬಳಿಯ ವೆಂಕಪ್ಪ ಪೂಜಾರಿ ಅವರ ಗಂಡಿಗದ್ದೆಯಲ್ಲಿ ನಡೆದ ವಿವಿಧ ಮನೋರಂಜನಾತ್ಮಕ ಕ್ರೀಡಾಕೂಟಗಳೊಂದಿಗೆ ನಡೆದ ಕೆಸರ್ಡ್ ಗೊಬ್ಬುಲು ಸಂಭ್ರಮ ಮನೆ ಮಾಡಿತು.

ಕಾರ್ಯಕ್ರಮದಲ್ಲಿ 100 ಮೀಟರ್ ಓಟ, ಲಿಂಬೆ ಚಮಚ ಓಟ, ಗೂಟ ಸುತ್ತಿ ಓಟ, 3 ಕಾಲಿನ ಓಟ, ಅಡಿಕೆ ಹಾಳೆ ಓಟ, ಹಿಮ್ಮುಖ ಓಟ, ಕಂಬಳ ಓಟ ಹಾಗೂ ಹಗ್ಗ ಜಗ್ಗಾಟ ಸೇರಿದಂತೆ ಹಲವು ಕ್ರೀಡೆಗಳು ನೋಡುಗರಿಗಂತು ಬಹಳಷ್ಟು ಮುದ ನೀಡಿತ್ತು. ಗೂಟದ ಓಟ, ಕಂಬಳದ ಓಟದಲ್ಲಿ ಕೆಸರಿನಲ್ಲಿ ಬಿದ್ದು ಎದ್ದು ಓಡುವುದು, ಹಗ್ಗ ಜಗ್ಗಾಟವಂತೂ ಮೈನವಿರೇಳಿಸುವಂತಿದ್ದು ಗುಂಪು ಜೋರಾಗಿ ಕೆಸರಿನಲ್ಲಿ ಬೀಳುತ್ತಿರುವ ದೃಶ್ಯಗಳು ನೋಡುಗರನ್ನು ಮನರಂಜಿಸಿತು.
ಮಕ್ಕಳು, ಮಹಿಳೆಯರು ಹಾಗೂ ಪುರುಷರಿಗಾಗಿ ಪ್ರತ್ಯೇಕ ಪ್ರತ್ಯೇಕವಾಗಿ ನಡೆದ ವಿನೂತನ ಸ್ಪರ್ಧೆಗಳು ಕಣ್ಮನ ಸೆಳೆದವು. ಒಂದೆಡೆ ಗೆಲ್ಲುವ ತವಕ, ಇನ್ನೊಂದೆಡೆ ಕೆಸರಿನ ಗದ್ದೆಯಲ್ಲಿ ಆಟದ ಸಂಭ್ರಮದಲ್ಲಿರುವ ಸ್ಪರ್ಧಾಳುಗಳು ಸಖತ್ ಎಂಜಾಯ್ ಮಾಡಿದರು. ಗದ್ದೆಯಲ್ಲಿ ಪರಸ್ಪರ ಕೆಸರು ಎರಚಿಕೊಳ್ಳುವುದು, ಒಬ್ಬರನೊಬ್ಬರೂ ಕೆಸರಿನಲ್ಲಿ ಎಳೆದಾಡಿಕೊಳ್ಳುತ್ತಾ ಕ್ರೀಡಾಕೂಟದಲ್ಲಿ ಸಂಭ್ರಮಿಸಿದರು.
ಮೈನವಿರೇಳಿಸುವ ಕೆಸರು ಗದ್ದೆ ಆಟಗಳು ಜನರ ಮನಸ್ಸು ಗೆದ್ದವು, ಎದ್ನೋ, ಬಿದ್ನೋ ಎಂಬಂತೆ ಕೆಸರಿನಲ್ಲಿ ಆಡಿದ ಜನರು ಸ್ಪರ್ಧೆ ಜತೆಗೆ ಆಟದಲ್ಲಿ ಸಂಭ್ರಮಿಸಿ ಮಿಂದೆದ್ದರು. ಇಂತಹದ್ದೊಂದು ಸಂಭ್ರಮದ ಕ್ಷಣಗಳಿಗೆ ಮಳೆಯೂ ಅಡ್ಡಿಪಡಿಸದೇ ಆಸ್ಪದ ನೀಡಿತು. ವೀರಮಂಗಲದಲ್ಲಿ ಪ್ರಥಮ ಬಾರಿಗೆ ನಡೆದ ಕೆಸರು ಗದ್ದೆ ಕ್ರೀಡೆಯಲ್ಲಿ ಮಕ್ಕಳು, ಮಹಿಳೆಯರು, ಪುರುಷರ ಜೊತೆಗೆ ಹಿರಿಯ ಉತ್ಸಾಹದಲ್ಲಿ ಭಾಗವಹಿಸಿದ್ದರು.
ಕಾರ್ಯಕ್ರಮವನ್ನು ಪ್ರಗತಿಪರ ಕೃಷಿಕ ವೆಂಕಪ್ಪ ಪೂಜಾರಿಯವರು ಉದ್ಘಾಟಿಸಿ, ಚಾಲನೆ ನೀಡಿದರು. ಮುಖ್ಯ ಅತಿಥಿಯಾಗಿದ್ದ ನಿವೃತ್ತ ಯೋಧ ಸುಂದರ ಗೌಡ ನಡುಬೈಲು ಮಾತನಾಡಿ, ಕೆಸರು ಗದ್ದೆ ಕ್ರೀಡೆಗಳನ್ನು ಆಯೋಜಿಸುವ ತುಳುನಾಡಿನ ಪುರಾತನ ಕ್ರೀಡೆಗಳನ್ನು ಮತ್ತೆ ಪರಿಚಯಿಸುತ್ತಿದೆ. ಪುರಾತನ ಸಂಪ್ರದಾಯ, ಕ್ರೀಡೆಗಳು ಉಳಿಯುವ ನಿಟ್ಟಿನಲ್ಲಿ ಕೆಸರುಗದ್ದೆ ಕ್ರೀಡೆಗಳು ಸಹಕಾರಿಯಗಿದೆ ಎಂದರು.
ಕಾರ್ಯಕ್ರಮದಲ್ಲಿ ಕ್ರೀಡಾಕೂಟ ಆಯೋಜನೆಗೆ ಗದ್ದೆ ಒದಗಿಸಿದ, ಕಾರ್ಯಕ್ರಮದ ಉದ್ಘಾಟಕರಾದ ವೆಂಕಪ್ಪ ಪೂಜಾರಿಯವರನ್ನು ಗೌರವಿಸಲಾಯಿತು. ಪ್ರತಿಷ್ಠಾನದ ಅಧ್ಯಕ್ಷ ಹರೀಶ್ ಆಚಾರ್ಯ ಸ್ವಾಗತಿಸಿದರು. ಕಾರ್ಯದರ್ಶಿ ವಿಜಯ ಕುಮಾರ್ ವಂದಿಸಿ, ನಿರಂಜನ ಕುಲಾಲ್ ಕಾರ್ಯಕ್ರಮ ನಿರೂಪಿಸಿದರು. ಪ್ರತಿಷ್ಠಾನದ ನಿಟಕಪೂರ್ವ ಅಧ್ಯಕ್ಷ ಗೋಪಾಲಕೃಷ್ಣ ವೀರಮಂಗಲ ಬಹುಮಾನ ವಿಜೇತರ ಪಟ್ಟಿ ಓದಿದರು. ಯೋಗೀಶ್ ವೀರಮಂಗಲ ಕ್ರೀಡಾ ನಿರೂಪಣೆ ಮಾಡಿದರು. ಸಿಂಚನ, ದೀಕ್ಷಾ, ಕೃತಿಕಾ ಹಾಗೂ ನಾವಿಣ್ಯ ಪ್ರಾರ್ಥಿಸಿದರು.