ಸಂತ್ರಸ್ತೆ ಮನೆಗೆ ಭೇಟಿ – ಎಸ್ಪಿಗೆ ಮನವಿಗೆ ನಿರ್ಣಯ
ನ್ಯಾಯ ಸಿಗದಿದ್ದರೆ ಪ್ರತಿಭಟನೆ – ಮಧು ಆಚಾರ್ಯ
ಪುತ್ತೂರು: ಮದುವೆಯಾಗುವುದಾಗಿ ನಂಬಿಸಿ ಯುವತಿಯನ್ನು ಗರ್ಭವತಿಯನ್ನಾಗಿಸಿ ಯುವಕ ನಾಪತ್ತೆಯಾದ ಪ್ರಕರಣದ ಸಂತ್ರಸ್ಥೆಗೆ ನ್ಯಾಯ ದೊರಕಿಸಿಕೊಡುವ ಕುರಿತು ವಿಶ್ವಕರ್ಮ ಒಕ್ಕೂಟದ ನೇತೃತ್ವದಲ್ಲಿ ಸಮಾಜದ ತುರ್ತು ಸಭೆ ಜು.2ರಂದು ಕರ್ಮಲ ವಿಶ್ವಕರ್ಮ ಸಮಾಜ ಸೇವಾ ಸಭಾಂಗಣದಲ್ಲಿ ನಡೆಯಿತು. ಸಭೆಯಲ್ಲಿ ಸಮಾಜಬಾಂಧವರ ಅಭಿಪ್ರಾಯ ಪಡೆದು ಮುಂದೆ ಸಂತ್ರಸ್ತೆಯನ್ನು ಭೇಟಿ ಮಾಡಿ ಅಲ್ಲಿಂದ ಮಹಿಳಾ ಪೊಲೀಸ್ ಠಾಣೆ ಹಾಗು ಎಸ್ಪಿಯವರಿಗೆ ಮನವಿ ನೀಡಿ ಒಂದೆರಡು ದಿನದಲ್ಲಿ ಯಾವುದೇ ಬೆಳವಣಿಗೆ ಇಲ್ಲದಿದ್ದ ಪಕ್ಷದಲ್ಲಿ ಸಮಾಜ ಬಾಂಧವರಿಂದ ಪ್ರತಿಭಟನೆ ನಡೆಸುವುದಾಗಿ ನಿರ್ಣಯಿಸಲಾಯಿತು.

ವಿಶ್ವಕರ್ಮ ಜಿಲ್ಲಾ ಒಕ್ಕೂಟದ ಅಧ್ಯಕ್ಷ ಮಧು ಆಚಾರ್ಯ ಅವರು ಮಾತನಾಡಿ, ಇವತ್ತು ನಮ್ಮ ಸಮಾಜ ಹೆಣ್ಣು ಮಗಳಿಗೆ ಅನ್ಯಾಯ ಆಗಿದೆ. ಸಂತ್ರಸ್ತೆ ಮತ್ತು ತಾಯಿ ನಮ್ಮಲ್ಲಿ ಬಂದಿಲ್ಲ ಎಂಬ ವಿಷಯ ಬೇಡ. ಒಗ್ಗಟ್ಟು ಹಾಗೆ ಹೀಗೆ ಹೇಳುವಾಗ ನಮ್ಮ ಹಿಂದು ಮಗಳಿಗೆ ಅನ್ಯಾಯ ಆದಾಗ ಸುಮ್ಮನೆ ಕೂತುಕೊಳ್ಳಲಾಗುವುದಿಲ್ಲ. ನಮ್ಮ ಕಮ್ಯುನಿಟಿ ಆಗಲಿ ಇನ್ನೊಂದು ಕಮ್ಯುನಿಟಿ ಆಗಲಿ ಅದು ಸಣ್ಣ ವಿಷಯ ಅಲ್ಲ. ಯಾರೋ ಬಿಜೆಪಿ ಮುಖಂಡನ ಮಗ ನಮ್ಮ ಸಮಾಜದ ಹೆಣ್ಣು ಮಗಳಿಗೆ ಅನ್ಯಾಯ ಮಾಡಿದ್ದಾನೆ. ಈ ಕುರಿತು ನಾವು ಮೊದಲು ಆಕೆಯ ಮನೆಗೆ ಹೋಗಿ ಮಾತನಾಡಿ ಬಳಿಕ ಎಸ್ಪಿಗೆ ಮನವಿ ಕೊಡುವುದು. ಆ ಬಳಿಕ ಪೊಲೀಸರು ಕ್ರಮ ಸರಿಯಾಗಿ ಕೈಗೊಳ್ಳದಿದ್ದಲ್ಲಿ ನಾವು ಅನ್ಯಾಯ ಮಾಡಿದ ಯುವಕನ ಮನೆ ಮುಂದೆ ಮತ್ತು ಪೊಲೀಸ್ ಠಾಣೆ ಮುಂದೆ ಉಗ್ರ ಪ್ರತಿಭಟನೆ ಮಾಡಲಿದ್ದೇವೆ ಎಂದರು.
ಶಾಸಕರೇ ಕುದ್ದು ನಿಂತು ಮದುವೆ ಮಾಡಿಸಲಿ:
ಸಂತ್ರಸ್ತೆ ಪೊಲೀಸ್ ಠಾಣೆಗೆ ದೂರು ನೀಡಲು ಹೋದಾಗ ಶಾಸಕರ ಮನವಿಯಂತೆ ಮದುವೆ ಮಾತುಕತೆ ಮತ್ತು ಮುಚ್ಚಳಿಕೆಯನ್ನು ಆರೋಪಿ ಕೊಟ್ಡಿದ್ದಾನೆ. ಆ ಬಳಿಕ ಹುಡುಗ ಮದುವೆ ಒಪ್ಪದೆ ಮೋಸ ಮಾಡಿದ್ದಾನೆ. ಈಗ ಶಾಸಕರೇ ಕುದ್ದು ನಿಂತು ಅವರಿಗೆ ಮದುವೆ ಮಾಡಿ ಕೊಡಬೇಕು. ಯಾಕೆಂದರೆ ಅವರು ಈಗಾಗಲೇ ಅದಕ್ಕೆ ಎಂಟ್ರಿ ಆಗಿದ್ದಾರೆ. ನಾವು ಈಗ ಶಾಸಕರಲ್ಲಿ ಹೋಗಿ ಮನವಿ ಕೊಡಬೇಕಾಗಿದೆ. ಮಾಡಿಲ್ಲ ಎಂದರೆ ಮುಂದೆ ವಿಶ್ವಕರ್ಮದವರು ಸಂತ್ರಸ್ತೆಗೆ ನ್ಯಾಯ ಕೊಡುವ ತನಕ ಹೋರಾಟ ಮಾಡಬೇಕಾಗಿದೆ ಎಂದು ಮಧು ಆಚಾರ್ಯ ಹೇಳಿದರು.
ನಮಗೆ ಯಾರನ್ನು ಗೆಲ್ಲಿಸಲಾಗದಿದ್ದರೂ ಸೋಲಿಸಲಂತು ಖಂಡಿತ ಆಗುತ್ತದೆ:
ರಾಜಕೀಯ ಪಕ್ಷದಲ್ಲಿ ನಮ್ಮ ಸಮಾಜದವರಿಗೆ ಯಾವ ಸೀಟ್ ಕೊಡುವುದಿಲ್ಲ. ನಮಗೆ ದೊಡ್ಡ ಅನ್ಯಾಯ ಆಗಿದೆ. ಸಂತ್ರಸ್ತೆಯ ಕುರಿತು ನಮ್ಮವರಲ್ಲಿ ವಿಚಾರಿಸಿದರೆ ಯಾರೋ ಎನೋ ಆಗಿದೆ ಎಂದು ಹೇಳಿದವರೂ ಇದ್ದಾರೆ. ಆರೋಪಿಯ ತಂದೆ ಬಿಜೆಪಿ ಮುಖಂಡರಾಗಿರಬಹುದು, ಜ್ಯೋತಿಷಿ ಆಗಿರಬಹುದು, ದೇವಸ್ಥಾನದಲ್ಲಿ ಇರಬಹುದು. ನಾವೆಲ್ಲ ಒಗ್ಗಟ್ಟಿನಲ್ಲಿರಬೇಕು. ನಮ್ಮಲ್ಲಿ ಅದು ಇದು ಇಲ್ಲ
ಗ್ರೂಪ್ ಇಲ್ಲ. ನಾವೆಲ್ಲ ಒಂದು. ಗ್ರೂಪ್ ಹೇಳುವವರನ್ನು ಬದಿಗಿಡುವ ನಮ್ಮ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಅನ್ಯಾಯ ಆಗಲು ಬಿಡುವುದಿಲ್ಲ. ನಮಗೆ ಯಾರನ್ನು ಗೆಲ್ಲಿಸಲಾಗದಿದ್ದರೂ ಸೋಲಿಸಲಂತು ಕಂಡಿತಾ ಆಗುತ್ತದೆ ಎಂದು ಮಧು ಆಚಾರ್ಯ ಹೇಳಿದರು.
ಅವಿಭಜಿತ ದ.ಕ ಜಿಲ್ಲಾ ವಿಶ್ವಕರ್ಮ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಮುರಳಿಧರ ಆಚಾರ್ಯ, ಉಪಾಧ್ಯಕ್ಷ ಅಲೆವೂರು ಯೋಗೀಶ್ ಆಚಾರ್ಯ ಹರ್ಷವರ್ದನ್ ನಿಟ್ಟೆ, ಜಯರಾಮ ಆಚಾರ್ಯ ಸಾಲಿಗ್ರಾಮ, ಜಯರಾಮ ಆಚಾರ್ಯ ಕುಲಾಯಿ, ಜಿಲ್ಲಾ ವಿಶ್ವಕರ್ಮ ಹಿತರಕ್ಷಣಾ ಸಂಘದ ಗೌರವಾಧ್ಯಕ್ಷ ಜನಾರ್ಧನ ಆಚಾರ್ಯ ಕಾಣಿಯೂರು, ವಿಶ್ವಕರ್ಮ ಬೀರಮಲೆ ಅಧ್ಯಕ್ಷ ಗಂಗಾದರ ಆಚಾರ್ಯ , ಕೋಶಾಧಿಕಾರಿ ನಿರಂಜನ ಆಚಾರ್ಯ, ಪುತ್ತೂರು ವಿಶ್ವಕರ್ಮ ಸಮಾಜ ಸಭಾ ಸುರೇಂದ್ರ ಆಚಾರ್ಯ, ಯುವಮಿಲನ ಅಧ್ಯಕ್ಷ ಹರೀಶ್ ಆಚಾರ್ಯ, ಅನೆಗುಂದಿ ಗುರುದೇವ ಪರಿಷತ್ ಪುತ್ತೂರು ಸಮಿತಿ ಅಧ್ಯಕ್ಷ ವಿ ಪುರುಷೋತ್ತಮ ಆಚಾರ್ಯ, ಉಮೇಶ್ ಆಚಾರ್ಯ, ಮಹಿಳಾ ಸಂಘದ ಅಧ್ಯಕ್ಷೆ ಇಂದಿರ ಪುರುಷೋತ್ತಮ ಆಚಾರ್ಯ, ವಿಶ್ವ ಬ್ರಾಹ್ಮಣ ಸೇವಾ ಸಂಘದ ಅಧ್ಯಕ್ಷ ಶ್ರೀಧರ ಆಚಾರ್ಯ, ಪುರಸಭೆ ಮಾಜಿ ಸದಸ್ಯ ಉದಯ ಆಚಾರ್ಯ ಸಹಿತ ಹಲವಾರು ಮಂದಿ ಸಭೆಯಲ್ಲಿ ಉಪಸ್ಥಿತರಿದ್ದರು.