ಪುತ್ತೂರು: ಕೆಎಸ್ಆರ್ಟಿಸಿ ಬಸ್ಗಳಲ್ಲಿ ಜಾರಿಯಿರುವ ರೌಂಡ್ಆಫ್ ವ್ಯವಸ್ಥೆಯನ್ನು ಸ್ಥಗಿತಗೊಳಿಸಲು ಕರಾರಸಾ ನಿಗಮ ವ್ಯವಸ್ಥಾಪಕ ನಿರ್ದೇಶಕ ಅಕ್ರಂ ಪಾಷ ಆದೇಶ ಹೊರಡಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ರೌಂಡ್ಆಫ್ ವ್ಯವಸ್ಥೆಯ ಕುರಿತು ಆಕ್ರೋಶ ವ್ಯಕ್ತವಾದ ಬೆನ್ನಲ್ಲೆ ಈ ಆದೇಶ ಹೊರಬಿದ್ದಿದೆ.ಇತ್ತೀಚೆಗೆ ಪ್ರಯಾಣಿಕರೊಬ್ಬರು ಉಪ್ಪಿನಂಗಡಿಯಿಂದ ಆಲಂಕಾರು ಕಡೆಗೆ ಸ್ಲೀಪರ್ ಬಸ್ನಲ್ಲಿ ಹೊರಟಿದ್ದರು. ಟಿಕೆಟ್ ದರ 46 ರೂ. ಆಗಿದ್ದರೂ ನಿರ್ವಾಹಕ 50 ರೂ. ಪಡೆದಿದ್ದರು. ಈ ಟಿಕೆಟಿನ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹಾಕಿ ಗಮನಸೆಳೆದಿದ್ದರು. ಇದರ ಕುರಿತು ಗಮನಕ್ಕೆ ತಂದುಕೊಂಡ ಮಾಜಿ ಸಚಿವ ಸುರೇಶ್ ಕುಮಾರ್ ಅವರು ಅದನ್ನು ಹಂಚಿಕೆ ಮಾಡಿ ಸಾರಿಗೆ ಸಚಿವರು ಅಥವಾ ಸಂಬಂಧಪಟ್ಟ ಅಧಿಕಾರಿಗಳು ಇದಕ್ಕೆ ಸ್ಪಷ್ಟೀಕರಣ ನೀಡಬೇಕೆಂದು ಕೇಳಿದ್ದರು. ಟಿಕೆಟ್ ದರ ಹೆಚ್ಚು ತೆಗೆದುಕೊಂಡಿರುವುದಕ್ಕೆ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದ್ದಂತೆ ಕೆಎಸ್ಆರ್ಟಿಸಿ ಸ್ಪಷ್ಟನೆ ನೀಡಿ ತನ್ನ ಹಿಂದಿನ ಆದೇಶವನ್ನು ರದ್ದುಗೊಳಿಸಿದೆ.
ಏನಿದು ರೌಂಡ್ ಆಫ್
ಈ ವ್ಯವಸ್ಥೆಯು ಪ್ರತಿಷ್ಠಿತ ಸಾರಿಗೆಗಳಲ್ಲಿ(ಪ್ರೀಮಿಯಂ ಸೇವೆ ನೀಡುವ 400 ಬಸ್ಸುಗಳಲ್ಲಿ ಮಾತ್ರ) ಜಾರಿಯಲ್ಲಿತ್ತು. ಅದರಲ್ಲೂ ಅವತಾರ್ ಕೌಂಟರ್ಗಳಲ್ಲಿ ಮತ್ತು ಇಟಿಎಂ ಯಂತ್ರಗಳಲ್ಲಿ ಚಿಲ್ಲರೆ ಸಮಸ್ಯೆಯಿಂದ ಪ್ರಯಾಣ ದರವನ್ನು ರೌಂಡ್ ಆಫ್ ಮಾಡಲು 2016 ರಲ್ಲಿ ಆದೇಶಿಸಲಾಗಿತ್ತು. ಅನಂತರ ರಾಜಹಂಸ, ವೋಲ್ವೋ, ಸ್ಲೀಪರ್ ಮೊದಲಾದ ಆಯ್ದ ಬಸ್ಗಳಲ್ಲಿ ಈ ಪದ್ಧತಿ ಜಾರಿಗೆ ಬಂದಿತ್ತು. ಅಂದರೆ ಟಿಕೆಟ್ ದರ 36 ರೂ. ಇದ್ದರೆ 40 ರೂ., 41 ರೂ. ಇದ್ದರೆ 45 ರೂ.ಗೆ ರೌಂಡ್ ಆಪ್ ಮಾಡಿ ತೆಗೆದುಕೊಳ್ಳಬಹುದಾಗಿತ್ತು. ಟಿಕೆಟ್ ದರ ಜತೆಗೆ ಹೆಚ್ಚುವರಿ ಮೊತ್ತವನ್ನು ಟಿಕೆಟ್ನಲ್ಲಿ ಉಲ್ಲೇಖೀಸಿಯೇ ಸಂಗ್ರಹಿಸಲಾಗುತಿತ್ತು.