ನಿಡ್ಪಳ್ಳಿ: ಬೆಟ್ಟಂಪಾಡಿ ಗ್ರಾಮದ ಕಕ್ಕೂರು ಅಂಗನವಾಡಿ ಕೇಂದ್ರದಲ್ಲಿ ಹೆತ್ತವರ ಸಭೆ ಮತ್ತು ಸ್ತ್ರೀಶಕ್ತಿ ಸಂಘಗಳ ಸಭೆ ರವಿಕಲಾ ಕೋಡಿ ಇವರ ಅಧ್ಯಕ್ಷತೆಯಲ್ಲಿ ಜು.19ರಂದು ನಡೆಯಿತು.
ಬೆಟ್ಟಂಪಾಡಿ ಗ್ರಾಮ ಪಂಚಾಯತ್ ಸದಸ್ಯರುಗಳಾದ ಮೊಯಿದು ಕುಂಞ ಕೋನಡ್ಕ, ಮಹಾಲಿಂಗ ನಾಯ್ಕ ಉಪಸ್ಥಿತರಿದ್ದು ಕಕ್ಕೂರು ಅಂಗನವಾಡಿ ಕೇಂದ್ರ ಉತ್ತಮ ಕೇಂದ್ರ ಇಲ್ಲಿಗೆ ಎಲ್ಲರ ಸಹಕಾರ ಇರಲಿ ಎಂದು ಶುಭ ಹಾರೈಸಿದರು.ಅಂಗನವಾಡಿ ಪುಟಾಣಿಗಳಿಗೆ ಅವರ ಪರವಾಗಿ ಬಣ್ಣದ ಕೊಡೆಗಳನ್ನು ಕೊಡುಗೆಯಾಗಿ ನೀಡಿದರು. ಬಾಲವಿಕಾಸ ಸಮಿತಿ ಸದಸ್ಯ ಬಾಲಕೃಷ್ಣ ಭಟ್ ಕಕ್ಕೂರು ಅಂಗನವಾಡಿ ಮಕ್ಕಳಿಗೆ ಫ್ಯಾನ್ ಕೊಡುಗೆಯಾಗಿ ನೀಡಿ ಮಾತನಾಡಿ ಮಕ್ಕಳ ಮತ್ತು ಅಂಗನವಾಡಿಯ ಮುಂದಿನ ಉತ್ತಮ ಭವಿಷ್ಯಕ್ಕೆ ಎಲ್ಲರೂ ಒಗ್ಗಟ್ಟಿನಿಂದ ಇನ್ನಷ್ಟು ಸಹಕಾರಗಳನ್ನು ನೀಡೋಣ. ನಾನು ಸದಾ ನಿಮ್ಮ ಜೊತೆಗೆ ಇದ್ದೇನೆ ಎಂದು ಶುಭ ಹಾರೈಸಿದರು. ಮಹಿಳಾ ವೇದಿಕೆ ಸದಸ್ಯರಾದ ಪ್ರೇಮಲತಾ ಜೆ ರೈ, ಸಮಿತಿ ಸದಸ್ಯರಾದ ಮೈಮುನ, ಜಲಜಾಕ್ಷಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಬಾಲ ವಿಕಾಸ ಸಮಿತಿಯನ್ನು ಪುನರ್ ರಚಿಸಲಾಗಿ ಅವಿನಾಶ್ ಆನಡ್ಕ ಹಾಗೂ ಅನಿಷ ಡೆಮ್ಮಂಗರ ಇವರನ್ನು ಸಮಿತಿ ನೂತನ ಸದಸ್ಯರನ್ನಾಗಿ ಆಯ್ಕೆ ಮಾಡಲಾಯಿತು.

ಅಂಗನವಾಡಿ ಪುಟಾಣಿಗಳು ಪ್ರಾರ್ಥಿಸಿದರು. ಪ್ರೇಮಲತಾ ಜೆ. ರೈ ಸ್ವಾಗತಿಸಿ ಅಂಗನವಾಡಿ ಸಹಾಯಕಿ ಮಮತಾ ವಂದಿಸಿದರು. ಅಂಗನವಾಡಿ ಕಾರ್ಯಕರ್ತೆ ಶ್ಯಾಮಲ ಎಂ ಕಾರ್ಯಕ್ರಮ ನಿರೂಪಿಸಿದರು.