ಪುತ್ತೂರು: ಭಾರತ ಕಾರ್ಗಿಲ್ ಯುದ್ಧದಲ್ಲಿ ವಿಜಯ ಸಾಧಿಸಿದ ದಿನವಾದ ಜುಲೈ 26ರಂದು ವಿವೇಕಾನಂದ ಪದವಿಪೂರ್ವ ವಿದ್ಯಾಲಯದ ವೈದೇಹಿ ಸಭಾಂಗಣದಲ್ಲಿ ಕಾರ್ಗಿಲ್ ವಿಜಯ – ಯೋಧ ನಮನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜು ಆಡಳಿತ ಮಂಡಳಿಯ ನಿರ್ದೇಶಕರಾದ ಡಾ. ಕೆ. ಎನ್. ಸುಬ್ರಹ್ಮಣ್ಯ ಅವರು ವಹಿಸಿಕೊಂಡು ಕಾರ್ಗಿಲ್ ವಿಜಯ ದಿವಸವು ಕೇವಲ ಸಂಭ್ರಮಾಚರಣೆ ಅಲ್ಲ, ಬದಲಿಗೆ ಹಗಲು-ಇರುಳು, ಮಳೆ-ಗಾಳಿ ಎನ್ನದೆ ಗಡಿ ಕಾಯುವ ಯೋಧರ ಬಲಿದಾನವನ್ನು ಸ್ಮರಿಸುವ ಅಪೂರ್ವ ಸಂದರ್ಭವಾಗಿದೆ. ಸೈನಿಕರು ಕೇವಲ ಹೊಟ್ಟೆಪಾಡಿಗಾಗಿ ಸೈನ್ಯ ಸೇರುತ್ತಾರೆ ಎಂಬ ಮೂರ್ಖತನದ ಹೇಳಿಕೆ ಸಲ್ಲದು. ಈ ದೇಶದ ಪ್ರತಿಯೊಬ್ಬ ಭಾರತೀಯನಿಗೂ ತಾವು ಜನ್ಮವೆತ್ತ ಈ ನಾಡಿನ ಬಗ್ಗೆ ಹೆಮ್ಮೆ ಹಾಗೂ ಅಭಿಮಾನ ಇರಬೇಕು ಎಂದು ಹೇಳಿದರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾರತೀಯ ಗಡಿ ಭದ್ರತಾ ಪಡೆಯ ನಿವೃತ್ತ ಸಬ್ ಇನ್ ಸ್ಪೆಕ್ಟರ್ ಬಾಲಕೃಷ್ಣ ಎನ್. ಎ. ಹಾಗೂ ನಿವೃತ್ತ ಸಹಾಯಕ ಸಬ್ ಇನ್ ಸ್ಪೆಕ್ಟರ್ ಪದ್ಮನಾಭ ಸೊರಂಜಾ ಪಾಲ್ಗೊಂಡರು.
ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಬಾಲಕೃಷ್ಣ ಎನ್.ಎ. ಅವರು ದೇಶ ಸೇವೆ ಎಂಬುದು ಅತ್ಯಂತ ಶ್ರೇಷ್ಟವಾದ ಸೇವೆ. ಇಂದಿನ ಕಾಲದಲ್ಲಿ ವಿದ್ಯಾರ್ಥಿಗಳಿಗೆ ಸೈನ್ಯಕ್ಕೆ ಸೇರಿ ದೇಶಕ್ಕಾಗಿ ದುಡಿಯಲು ಹಲವು ವಿಧದ ಸೌಲಭ್ಯಗಳಿವೆ. ಅದೇ ರೀತಿ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಲು ಪುರುಷರಿಗೆ ಹಾಗೂ ಮಹಿಳೆಯರಿಗೆ ಸಮಾನವಾದ ಅವಕಾಶಗಳಿವೆ. ಅದರ ಸದುಪಯೋಗವನ್ನು ಪ್ರತಿಯೊಬ್ಬರೂ ಪಡೆದುಕೊಂಡು, ದೇಶದ ಸಂರಕ್ಷಣೆ ತನ್ನ ಕರ್ತವ್ಯ ಎಂಬುದನ್ನು ಮನಗಂಡು ಸಾಧ್ಯವಾದಷ್ಟು ಸಂಖ್ಯೆಯಲ್ಲಿ ಸೈನ್ಯವನ್ನು ಸೇರುವ ಕಡೆ ನಮ್ಮ ಗಮನವನ್ನು ಕೇಂದ್ರೀಕರಿಸಬೇಕು ಎಂದರು. ಕಾರ್ಗಿಲ್ ಯುದ್ಧದ ಹಿನ್ನಲೆ, ಆ ಸಂದರ್ಭದಲ್ಲಿ ಭಾರತವು ಎದುರಿಸಬೇಕಾಗಿ ಬಂದ ಹಲವು ಸನ್ನಿವೇಶಗಳ ಕುರಿತಾದ ಸವಿವರವಾದ ಮಾಹಿತಿಯನ್ನು ಇಲೆಕ್ಟ್ರಾನಿಕ್ಸ್ ವಿಭಾಗದ ಭೀಮ ಭಾರದ್ವಾಜ್ ನೀಡಿದರು. ಬಳಿಕ ನಿವೃತ್ತ ಯೋಧರಾದ ಬಾಲಕೃಷ ಎನ್.ಎ. ಹಾಗೂ ಪದ್ಮನಾಭ ಸೊರಂಜಾ ಇವರನ್ನು ಕಾಲೇಜಿನ ವತಿಯಿಂದ ಗೌರವಿಸಿ,ಸನ್ಮಾನಿಸಲಾಯಿತು. ಜತೆಗೆ ದೇಶಕ್ಕಾಗಿ ಪ್ರಾಣವನ್ನರ್ಪಿಸಿದ ವೀರ ಯೋಧರಿಗೆ ನಮನ ಸಲ್ಲಿಸಲಾಯಿತು.
ಕಾರ್ಯಕ್ರಮದಲ್ಲಿ ಕಾಲೇಜಿನ ಉಪನ್ಯಾಸಕ, ಉಪನ್ಯಾಸಕೇತರ ವೃಂದದವರು ಹಾಗೂ ಪ್ರಥಮ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಭಾಗಿಯಾದರು. ಕಾಲೇಜಿನ ವಿದ್ಯಾರ್ಥಿನಿಯರು ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ಯೋಧರನ್ನು ಸ್ಮರಿಸುತ್ತಾ ಸೇನಾ ನಮನ ಗೀತೆಯನ್ನು ಹಾಡಿದರು. ಪ್ರಾಂಶುಪಾಲರಾದ ದೇವಿಚರಣ್ ರೈ ಎಂ ಪ್ರಾಸ್ತಾವಿಕ ನುಡಿಗಳೊಂದಿಗೆ ಸ್ವಾಗತಿಸಿ, ಶೈಕ್ಷಣಿಕ ಸಂಯೋಜಕರಾದ ಶ್ರೀವತ್ಸ ಎನ್ ವಂದಿಸಿದರು. ವಾಣಿಜ್ಯ ವಿಭಾಗದ ಉಪನ್ಯಾಸಕಿ ಉಷಾ ಎ. ಎಂ ಕಾರ್ಯಕ್ರಮವನ್ನು ನಿರೂಪಿಸಿದರು.