ಪುತ್ತೂರು:ಮದುವೆಯಾಗುವುದಾಗಿ ನಂಬಿಸಿ ಯುವತಿಗೆ ವಂಚನೆ ಪ್ರಕರಣದ ಆರೋಪಿಯಾಗಿರುವ ಬಪ್ಪಳಿಗೆ ಶ್ರೀಕೃಷ್ಣಜೆ.ರಾವ್ ಮನೆಯಲ್ಲಿ ಪುತ್ತೂರು ಮಹಿಳಾ ಪೊಲೀಸ್ ಠಾಣೆಯ ಪೊಲೀಸರು ಸ್ಥಳ ಮಹಜರು ನಡೆಸಿದರು.
ಇನ್ಸ್ಪೆಕ್ಟರ್ ಸುನಿಲ್ ಕುಮಾರ್ ನೇತೃತ್ವದಲ್ಲಿ ಜು.28ರಂದು ಸಂಜೆ ಮಹಜರು ನಡೆಯಿತು.ಆರೋಪಿಯು ತನ್ನನ್ನು ಮದುವೆಯಾಗುವುದಾಗಿ ನಂಬಿಸಿ, ಬಪ್ಪಳಿಗೆಯ ಆತನ ಮನೆಯಲ್ಲಿ ಯಾರೂ ಇಲ್ಲದ ಸಂದರ್ಭ ಕರೆಸಿಕೊಂಡು ಬಲವಂತದ ದೈಹಿಕ ಸಂಪರ್ಕ ಬೆಳೆಸಿದ್ದಾಗಿ ಸಂತ್ರಸ್ತೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಬಪ್ಪಳಿಗೆ ಮನೆಯಲ್ಲಿ ಮಹಜರು ನಡೆಯಿತು.
ಈ ಸಂದರ್ಭ ಸಂತ್ರಸ್ತೆ,ಆಕೆಯ ಮಗು ಮತ್ತು ತಾಯಿ ಅಲ್ಲದೆ ಆರೋಪಿಯ ಸಹೋದರಿ, ಓರ್ವ ಸಾಕ್ಷಿದಾರ ಹಾಗೂ ವಕೀಲೆ ಶೈಲಜಾ ಅಮರನಾಥ್ ಉಪಸ್ಥಿತರಿದ್ದರು ಎಂದು ಮಾಹಿತಿ ಲಭಿಸಿದೆ.ಪ್ರಕರಣದ ಆರೋಪಿ ಶ್ರೀಕೃಷ್ಣಜೆ ರಾವ್ ಜಾಮೀನಿನಲ್ಲಿ ಬಿಡುಗಡೆ ಕೋರಿ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಾಲಯ ಈಗಾಗಲೇ ವಜಾಗೊಳಿಸಿದೆ.ಆರೋಪಿಯು ನ್ಯಾಯಾಂಗ ಬಂಧನದಲ್ಲಿದ್ದು ಆತನ ಪರ ಹೈಕೋರ್ಟ್ನಲ್ಲಿ ಜಾಮೀನು ಅರ್ಜಿ ಸಲ್ಲಿಸಲು ಸಿದ್ದತೆ ನಡೆಯುತ್ತಿದೆ ಎಂದು ತಿಳಿದು ಬಂದಿದೆ.