ಪುತ್ತೂರು: ಅಕ್ಷಯ ಕಾಲೇಜಿನಲ್ಲಿ – ಬಿ ಸಿ ಎ ವಿಭಾಗದ “ ಬೈಟ್ ಬ್ಲಿಜ್” ಐ ಟಿ ಕ್ಲಬ್ ಮತ್ತು ಆಂತರಿಕ ಗುಣಮಟ್ಟದ ಭರವಸೆ ಕೋಶ ಸಹಭಾಗಿತ್ವದಲ್ಲಿ “21 ನೇ ಶತಮಾನದ ಕೌಶಲ್ಯದ ಪ್ರಾವೀಣ್ಯತೆ” ಎಂಬ ವಿಷಯದಲ್ಲಿ ಕಾರ್ಯಾಗಾರ ನಡೆಯಿತು.
ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ವಾಣಿಜ್ಯ ವಿಭಾಗದ ಉಪನ್ಯಾಸಕ ಕಿಶನ್ ಎನ್ ರಾವ್ ವಿದ್ಯಾರ್ಥಿಗಳಿಗೆ ವಿಶೇಷ ಉಪನ್ಯಾಸ ನೀಡಿದರು. 21ನೇ ಶತಮಾನದಲ್ಲಿ ಸ್ಪರ್ಧಾತ್ಮಕವಾಗಿ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಹಲವು ಕ್ಷೇತ್ರಗಳಲ್ಲಿ ಕೃತಕ ಬುದ್ಧಿಮತ್ತೆ ಉಪಯೋಗಿಸಿ ತಂತ್ರಜ್ಞಾನದಲ್ಲಿ ಕ್ರಾಂತಿಯನ್ನು ಸೃಷ್ಟಿಸುತ್ತಿರುವ ಮನುಷ್ಯನಿಗೆ ಅಷ್ಟೇ ಸವಾಲುಗಳನ್ನು ಎದುರಿಸುವ ಅನಿವಾರ್ಯತೆ ಇದೆ. ಸವಾಲುಗಳನ್ನು ತಂತ್ರಗಾರಿಕೆಯಿಂದ ಎದುರಿಸಬೇಕಾದರೆ ಕೌಶಲ್ಯಗಳನ್ನು ಮೈಗೂಡಿಸಿಕೊಳ್ಳಬೇಕು. 21ನೇ ಶತಮಾನದ ಕೌಶಲ್ಯಗಳು ಎಂದರೆ ಆಧುನಿಕ ಜಗತ್ತಿನಲ್ಲಿ ಯಶಸ್ವಿಯಾಗಲು ಅಗತ್ಯವಿರುವ ಸಾಮರ್ಥ್ಯಗಳು ಮತ್ತು ಜ್ಞಾನ. ಇವುಗಳಲ್ಲಿ ವಿಮರ್ಶಾತ್ಮಕ ಚಿಂತನೆ, ಸಂವಹನ, ಸಹಯೋಗ, ಸೃಜನಶೀಲತೆ, ತಂತ್ರಜ್ಞಾನ ಸಾಕ್ಷರತೆ ಮತ್ತು ಸಮಸ್ಯೆ ಪರಿಹಾರದ ಕೌಶಲ್ಯಗಳು,ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂವಹನ ,ಉತ್ಪಾದಕತೆ ಮತ್ತು ಹೊಣೆಗಾರಿಕೆ ಗಳಂತಹ ಕೌಶಲ್ಯದ ಪ್ರಾವೀಣ್ಯತೆಯ ಅಗತ್ಯದ ಬಗ್ಗೆ ಸಾಕಷ್ಟು ಮಾಹಿತಿಗಳನ್ನು ನೀಡಿದರು.

ಬಿ ಸಿ ಎ ವಿಭಾಗದ ಮುಖ್ಯಸ್ಥೆ ದೀಕ್ಷಾ ರೈ ಪ್ರಾಸ್ತಾವಿಕವಾಗಿ ಮಾತನಾಡಿ ವೇಗವಾಗಿ ಮುನ್ನೆಡೆಯುತ್ತಿರುವ ತಂತ್ರಜ್ಞಾನ ಯುಗದಲ್ಲಿ ವಿದ್ಯಾರ್ಥಿಗಳು ತಮ್ಮ ಕೌಶಲ್ಯ ಗಳನ್ನು ಯಥಾವತ್ತಾಗಿ ಅಭಿವೃದ್ಧಿ ಪಡಿಸಿಕೊಳ್ಳುವುದು ಅನಿವಾರ್ಯ. ಈ ನಿಟ್ಟಿನಲ್ಲಿ ಹೊಸ ತಂತ್ರಜ್ಞಾನ ಆವಿಷ್ಕಾರವಾಗುವಂತೆ ಹೊಸ ಕೌಶಲ್ಯಗಳನ್ನು ಅಳವಡಿಸಿಕೊಳ್ಳುವುದರ ಅಗತ್ಯದ ಬಗ್ಗೆ ತಿಳಿಸಿದರು.
ಪ್ರಥಮ ಬಿ.ಸಿ. ಎ ವಿಭಾಗದ ವಿದ್ಯಾರ್ಥಿಗಳಾದ ಚಂಪ್ರೀತ ವಂದಿಸಿ,ವೀಕ್ಷ ಕಾರ್ಯಕ್ರಮ ನಿರೂಪಿಸಿದರು.