ಕಾಡಾನೆ ಹಾವಳಿಗೆ ಶಾಶ್ವತ ಪರಿಹಾರ ಅಗತ್ಯ : ಅಧಿವೇಶನದಲ್ಲಿ ಎಂಎಲ್‌ಸಿ ಕಿಶೋರ್ ಕುಮಾರ್ ಆಗ್ರಹ

0

ಪುತ್ತೂರು:ಕಾಡಾನೆ ಹಾವಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕಾದ ಅಗತ್ಯವಿದೆ ಎಂದು ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಬೊಟ್ಯಾಡಿ ಅವರು ಸರಕಾರದ ಗಮನ ಸೆಳೆದಿದ್ದಾರೆ.


ವಿಧಾನಪರಿಷತ್ತಿನ ಮುಂಗಾರು ಅಧಿವೇಶನದಲ್ಲಿ ತಮ್ಮ ಚುಕ್ಕೆ ಗುರುತಿನ ಪ್ರಶ್ನೆಯಲ್ಲಿ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರಲ್ಲಿ,ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುತ್ತಿರುವ ಮಾನವ-ಕಾಡು ಪ್ರಾಣಿ ಸಂಘರ್ಷದ ಕುರಿತು ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.ಪುತ್ತೂರು, ಸುಳ್ಯ, ಕಡಬ ಹಾಗೂ ಬೆಳ್ತಂಗಡಿ ತಾಲೂಕುಗಳಲ್ಲಿ ಕಾಡಾನೆಗಳು ನಾಡಿಗೆ ನುಗ್ಗಿ ಬೆಳೆ ಹಾನಿ ಮಾಡುವ ಘಟನೆಗಳು ದಿನೇದಿನೇ ಹೆಚ್ಚುತ್ತಿವೆ.ಅರಣ್ಯ ಇಲಾಖೆಯ ನಿರ್ಲಕ್ಷ್ಯದಿಂದ ರೈತರು ಜೀವ, ಆಸ್ತಿ ಮತ್ತು ಕೃಷಿ ಸಂಪತ್ತು ಕಳೆದುಕೊಳ್ಳುತ್ತಿದ್ದಾರೆ ಎಂದು ಕಿಶೋರ್ ಕುಮಾರ್ ಅವರು ಕಳವಳ ವ್ಯಕ್ತಪಡಿಸುವ ಮೂಲಕ, ಬಹುಮುಖ್ಯವಾಗಿರುವ ಸಮಸ್ಯೆ ಕುರಿತು ಸರಕಾರದ ಗಮನ ಸೆಳೆದು ಅಗತ್ಯ ಕ್ರಮಕ್ಕೆ ಒತ್ತಾಯಿಸಿದರು.


ಮುಖ್ಯ ಬೇಡಿಕೆಗಳು:
ದ.ಕ.ಜಿಲ್ಲೆಯಲ್ಲಿ ಶಾಶ್ವತ ಆನೆ ಶಿಬಿರ ಸ್ಥಾಪನೆಯಾಗಲಿ:
ಆನೆಗಳನ್ನು ಸೆರೆಹಿಡಿಯಲು ಪ್ರಸ್ತುತ ದುಬಾರೆ, ಹುಣಸೂರು ಮತ್ತಿಗೋಡು ಅಥವಾ ಶಿವಮೊಗ್ಗದ ಸಕ್ರೆಬೈಲು ಶಿಬಿರದ ಆನೆಗಳ ಸಹಾಯ ಪಡೆಯಬೇಕಾಗಿದೆ.ಇದರಿಂದ ಕಾರ್ಯಾಚರಣೆಯಲ್ಲಿ ಕನಿಷ್ಠ ಎರಡು ದಿನಗಳ ವಿಳಂಬವಾಗುತ್ತದೆ.ಸುಬ್ರಮಣ್ಯ ಸಮೀಪ ಸಾಕಾನೆಗಳನ್ನು ಪಳಗಿಸಿ ಶಿಬಿರ ಸ್ಥಾಪಿಸಿದರೆ ತ್ವರಿತ ಕಾರ್ಯಾಚರಣೆ ಸಾಧ್ಯವಾಗುತ್ತದೆ ಹಾಗೂ ಪ್ರವಾಸೋದ್ಯಮಕ್ಕೂ ಉತ್ತೇಜನ ಸಿಗುತ್ತದೆ.


ಆನೆಗಳಿಗೆ ರೇಡಿಯೋ ಕಾಲರ್ ಐಡಿ ಅಳವಡಿಕೆ:
ಕಾಡಾನೆಗಳ ಚಲನವಲನವನ್ನು ನಿಖರವಾಗಿ ಪತ್ತೆ ಹಚ್ಚಲು ಆನೆಗಳಿಗೆ ರೇಡಿಯೋ ಕಾಲರ್ ಐಡಿ ಅಳವಡಿಕೆ ಕಾರ್ಯ ತಕ್ಷಣ ಕ್ರಮ ಕೈಗೊಳ್ಳಬೇಕು.ತುರ್ತು ಸಂದರ್ಭಗಳಲ್ಲಿ ಶೀಘ್ರ ಕಾರ್ಯಾಚರಣೆಗೆ ಆನೆ ನಿಗ್ರಹ ಪಡೆ(ಇಟಿಎಫ್)ಅಗತ್ಯ ಎಂದು ಕಿಶೋರ್ ಗಮನ ಸೆಳೆದಿದ್ದಾರೆ.‌


ಸೋಲಾರ್ ಬೇಲಿಗೆ ಶೇ.100 ಸಬ್ಸಿಡಿ:
ಸೋಲಾರ್ ಬೇಲಿಗೆ ಈಗಿನ ಶೇ.50 ಸಬ್ಸಿಡಿಯನ್ನು ಶೇ.100ಕ್ಕೆ ಹೆಚ್ಚಿಸಿ,ಕಾಡಂಚಿನ ಗ್ರಾಮಗಳ ಕೃಷಿ ಜಮೀನು ಮತ್ತು ಮನೆಗಳನ್ನು ರಕ್ಷಿಸಲು ಸಹಾಯ ಮಾಡಬೇಕು.ಬೆತ್ತ ಬೆಳೆಯುವುದರಿಂದ ಕಾಡು ನಾಶವಾಗುತ್ತಿದ್ದು, ಆಹಾರಾಭಾವದಿಂದ ಇತರ ಕಾಡುಪ್ರಾಣಿಗಳು ನಾಡಿಗೆ ನುಗ್ಗುತ್ತಿರುವುದರಿಂದ ಕಾಡಿನಲ್ಲಿ ಬೆತ್ತ ಬೆಳೆಯುವುದನ್ನು ತಕ್ಷಣ ನಿಷೇಽಸಬೇಕು ಎಂದು ಕಿಶೋರ್ ಆಗ್ರಹಿಸಿದ್ದಾರೆ.


ಕೋವಿ ಲೈಸನ್ಸ್ ವಿತರಣೆ ಮತ್ತು ನವೀಕರಣ ಸರಳೀಕರಣಗೊಳಿಸಬೇಕು:
ರೈತರಿಗೆ ಕಾಡು ಪ್ರಾಣಿಗಳಿಂದ ತಮ್ಮನ್ನು ಹಾಗೂ ಬೆಳೆಗಳನ್ನು ರಕ್ಷಿಸಲು ಅಗತ್ಯವಿರುವ ಕೋವಿಗಳಿಗೆ ಲೈಸನ್ಸ್ ವಿತರಣೆಯ ಮತ್ತು ನವೀಕರಣದ ಪ್ರಕ್ರಿಯೆಯನ್ನು ಸುಗಮಗೊಳಿಸಬೇಕು ಎಂದೂ ಕಿಶೋರ್ ಕುಮಾರ್ ಸರಕಾರವನ್ನು ಆಗ್ರಹಿಸಿದ್ದಾರೆ.

ಸರ್ಕಾರ ಈ ಬೇಡಿಕೆಗಳನ್ನು ತ್ವರಿತವಾಗಿ ಪರಿಗಣಿಸಿ, ದಕ್ಷಿಣ ಕನ್ನಡ ಜಿಲ್ಲೆಯ ಜನಜೀವನ ಮತ್ತು ಕೃಷಿಯನ್ನು ಕಾಡಾನೆ ಹಾವಳಿಯಿಂದ ರಕ್ಷಿಸಲು ಶಾಶ್ವತ ಪರಿಹಾರ ಕ್ರಮ ಕೈಗೊಳ್ಳಬೇಕೆಂದು ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಅವರು ಒತ್ತಾಯಿಸಿದರು.ಹಿರಿಯ ಶಾಸಕರಾದ ಪ್ರತಾಪ್‌ಸಿಂಹ ನಾಯಕ್ ಅವರು ಇದಕ್ಕೆ ಧ್ವನಿಗೂಡಿಸಿದರು ಎಂದು ಎಂಎಲ್‌ಸಿ ಕಿಶೋರ್ ಕುಮಾರ್ ಅವರ ಮಾಧ್ಯಮ ಕಾರ್ಯದರ್ಶಿ ಆದಿತ್ಯನಾರಾಯಣ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here