ಪುತ್ತೂರು: ಈ ಹಿಂದೆ ನಾನು ಲೆಟರ್ ಕೊಟ್ರೆ ಕರೆಂಟ್ ಇಲ್ಲದ ಮನೆಗೆ ಕರೆಂಟ್ ಸಂಪರ್ಕ ಕೊಡುತ್ತಿದ್ದರು. ಆದರೆ ಸುಪ್ರಿಂ ಕೋರ್ಟಿನ ಆದೇಶದಿಂದಾಗಿ ಕರೆಂಟ್ ಸಂಪರ್ಕಕ್ಕೆ ಸ್ವಲ್ಪ ಅಡಚಣೆಯಾಗಿದ್ದು ಈ ಬಗ್ಗೆ ಅಧಿವೇಶನದಲ್ಲಿ ಮಾತನಾಡಿ ಬಡವರ ಮನೆಗೆ ಕರೆಂಟ್ ಮತ್ತು ಕುಡಿಯುವ ನೀರಿನ ಸಂಪರ್ಕ ಕೊಡಿಸುವಲ್ಲಿ ಕಾನೂನು ಸಡಿಲಿಕೆ ಮಾಡಬೇಕೆಂದು ಮನವಿ ಮಾಡುವುದಾಗಿ ಶಾಸಕ ಅಶೋಕ್ ರೈ ಹೇಳಿದರು.
ಅವರು ನರಿಮೊಗರು ವಲಯ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿ ಕಾರ್ಯಕರ್ತರ ಜೊತೆ ಸಭೆ ನಡೆಸಿದರು.
ಬಡವರು ತುಂಬ ಕಷ್ಟದಿಂದ ಮನೆ ಕಟ್ಟುತ್ತಾರೆ. ಕೆಲವೊಂದು ಮನೆಗಳಿಗೆ ದಾಖಲೆಗಳು ಇರುವುದಿಲ್ಲ. ದಾಖಲೆ ಇಲ್ಲದ ಮನೆಗಳಿಗೆ ವಿದ್ಯುತ್ ಮತ್ತು ನೀರು ಸಂಪರ್ಕ ನೀಡುವಲ್ಲಿ ಗ್ರಾಪಂ ಗೆ ಕಾನೂನು ಅಡ್ಡಿಯಾಗುತ್ತಿದೆ. ಕಾಂಗ್ರೆಸ್ ಸರಕಾರ ಬಡವರ ಪರವಾಗಿದೆ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಬಡವರು ಭಯಪಡಬೇಕಾದ ಅಗತ್ಯವಿಲ್ಲ. ಸರಕಾರದ ಜೊತೆ ಚರ್ಚೆ ನಡೆಸಿ ಈ ಎರಡು ಸಮಸ್ಯೆಯನ್ನು ಬಗೆಹರಿಸುವುದಾಗಿ ಶಾಸಕರು ಭರವಸೆ ನೀಡಿದರು. ಈ ವೇಳೆ ವಲಯ ಅಧ್ಯಕ್ಷ ಹೊನ್ನಪ್ಪ ಕೈಂದಾಡಿ, ಬಾಬು ಶೆಟ್ಟಿ, ಯಾಕೂಬ್ ಮುಲಾರ್ ಸೇರಿದಂತೆ ಪಕ್ಷದ ಪ್ರಮುಖರು ಇದ್ದರು.