ಶ್ರೀ ಕೃಷ್ಣನ ಜೀವನ ಬದುಕಿಗೆ ಆದರ್ಶ: ಸುನೀಲ್ ಕುಮಾರ್ ದಡ್ಡು
ಉಪ್ಪಿನಂಗಡಿ: ಶ್ರೀ ಕೃಷ್ಣನ ಜನ್ಮ ಮತ್ತು ಜೀವನ ನಮ್ಮ ಬದುಕಿಗೊಂದು ಪಾಠವಾಗಿದೆ. ಯಾವ ರೀತಿಯಲ್ಲಿ ಜೀವನದಲ್ಲಿ ಸದುದ್ದೇಶವನ್ನಿಟ್ಟುಕೊಂಡು ಮುಂದೆ ಬರಬೇಕು. ಉತ್ತಮ ಜೀವನ ಹೇಗೆ ನಡೆಸಬೇಕು ಎಂಬ ಅಂಶಗಳು ಶ್ರೀ ಕೃಷ್ಣನ ತತ್ತ್ವಾದರ್ಶಗಳಲ್ಲಿ ಅಡಗಿದೆ. ಈತನ ಜೀವನ ನಮಗೆ ಬದುಕಿನಲ್ಲಿ ಹೊಸ ಹೊಸ ಸಾಧ್ಯತೆಗಳನ್ನು ತೆರೆದಿಡುತ್ತದೆ ಎಂದು ಉಪ್ಪಿನಂಗಡಿ ಸಿಎ ಬ್ಯಾಂಕ್ ಅಧ್ಯಕ್ಷರಾದ ಸುನೀಲ್ ಕುಮಾರ್ ದಡ್ಡು ತಿಳಿಸಿದರು.
ಇಲ್ಲಿನ ಪೆರಿಯಡ್ಕದ ಶ್ರೀ ದುರ್ಗಾ ಭಜನಾ ಮಂದಿರದ ವತಿಯಿಂದ ನಡೆದ ೪೫ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಠಮಿ ಮತ್ತು ಮೊಸರು ಕುಡಿಕೆಯ ಸಭಾ ಕಾರ್ಯಕ್ರಮದಲ್ಲಿ ಅವರು ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು.
ಕಾರ್ಯಕ್ರಮದಲ್ಲಿ ಆಟೋಟ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಬಳಿಕ ವಾರದ ಭಜನಾ ಸೇವೆ ನಡೆದು ಪ್ರಸಾದ ವಿತರಿಸಲಾಯಿತು.
ವೇದಿಕೆಯಲ್ಲಿ ಪೆರಿಯಡ್ಕದ ನಂದಗೋಕುಲ ಶಿಶು ಮಂದಿರದ ಅಧ್ಯಕ್ಷರಾದ ರಾಮಚಂದ್ರ ಮಣಿಯಾಣಿ, ಪ್ರಮುಖರಾದ ಜಯಂತ ಪೊರೋಳಿ, ಭಜನಾ ಮಂದಿರದ ಅಧ್ಯಕ್ಷರಾದ ಪ್ರಸನ್ನ ಕುಮಾರ್ ಪೆರಿಯಡ್ಕ ಉಪಸ್ಥಿತರಿದ್ದರು.
ಭಜನಾ ಮಂದಿರದ ಕಾರ್ಯದರ್ಶಿ ದುರ್ಗಾಕುಮಾರ್ ಸ್ವಾಗತಿಸಿ, ವಂದಿಸಿದರು. ಅವನೀಶ್ ಭಟ್ ಕಾರ್ಯಕ್ರಮ ನಿರೂಪಿಸಿದರು.