ನೆಲ್ಯಾಡಿ: ಉಜ್ವಲ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ ನೆಲ್ಯಾಡಿ ಇದರ 2024-25ನೇ ಸಾಲಿನ ವಾರ್ಷಿಕ ಮಹಾಸಭೆ ಸೆ.3ರಂದು ನೆಲ್ಯಾಡಿ ಗ್ರಾ.ಪಂ.ಸಭಾಂಗಣದಲ್ಲಿ ನಡೆಯಿತು.
ನೆಲ್ಯಾಡಿ ಗ್ರಾ.ಪಂ.ಅಧ್ಯಕ್ಷ ಸಲಾಂ ಬಿಲಾಲ್ ಉದ್ಘಾಟಿಸಿ ಮಾತನಾಡಿ, ಸಂಜೀವಿನಿ ಒಕ್ಕೂಟವು ಗ್ರಾಮ ಪಂಚಾಯಿತಿಯ ಅವಿಭಾಜ್ಯ ಅಂಗದಂತೆ ಕಾರ್ಯ ನಿರ್ವಹಿಸುತ್ತಿದೆ. ಗ್ರಾಮ ನೈರ್ಮಲ್ಯ ಕಾಪಾಡುವಲ್ಲಿ, ಗ್ರಾಮೀಣ ಮಹಿಳೆಯರ ಜೀವನೋಪಾಯ ವೃದ್ಧಿ ಹಾಗೂ ಸ್ವಸಹಾಯ ಗುಂಪುಗಳ ಮೂಲಕ ಆರ್ಥಿಕ ಬಲವರ್ಧನೆ ಮಾಡುವಲ್ಲಿ ಒಕ್ಕೂಟ ಪ್ರಮುಖ ಪಾತ್ರ ವಹಿಸುತ್ತಿದೆ. ಇದು ಪಂಚಾಯಿತಿ ಅಭಿವೃದ್ಧಿಗೆ ಪೂರಕವಾಗಿದೆ ಎಂದರು.
ವಲಯ ಮೇಲ್ವಿಚಾರಕಿ ನಮಿತಾ ಮಾತನಾಡಿ, ಎನ್ಆರ್ಎಲ್ಎಂ ಯೋಜನೆಗಳ ಸಾಲ ಸೌಲಭ್ಯ ಹಾಗೂ ಹೊಸ ಸಂಘಗಳ ರಚನೆಯ ಬಗ್ಗೆ ಮಾಹಿತಿ ನೀಡಿದರು. ಎಫ್ಎಲ್ಸಿಆರ್ಪಿ ಗೀತಾ ವಿಮೆಗಳ ಬಗ್ಗೆ ಹಾಗೂ ನೆಲ್ಯಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ಲೀಲಾವತಿ ಅವರು ಮಹಿಳೆಯರ ಆರೋಗ್ಯ ಮತ್ತು ಪೌಷ್ಟಿಕತೆಯ ಕುರಿತು ಮಾಹಿತಿಯನ್ನು ನೀಡಿದರು. ಒಕ್ಕೂಟದ ಅಧ್ಯಕ್ಷೆ ನಳಿನಾಕ್ಷಿ ಅಧ್ಯಕ್ಷತೆ ವಹಿಸಿ, ಸ್ವಾಗತಿಸಿದರು.
ನೆಲ್ಯಾಡಿ ಗ್ರಾ.ಪಂ.ಕಾರ್ಯದರ್ಶಿ ಭಾರತಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಒಕ್ಕೂಟದ ಅತ್ಯುತ್ತಮ ಸಂಘವನ್ನು ಹಾಗೂ ಒಕ್ಕೂಟದಿಂದ ಸಾಲ ಪಡೆದು ಸ್ವಉದ್ಯೋಗ ಮಾಡುವ ಮೂವರು ಮಹಿಳೆಯರನ್ನು ಗೌರವಿಸಲಾಯಿತು. ಕಾರ್ಯದರ್ಶಿ ಭವ್ಯ ವಾರ್ಷಿಕ ವರದಿ ವಾಚಿಸಿದರು. ಪವಿತ್ರಾ ವಂದಿಸಿದರು. ವನಜಾ ನಿರೂಪಿಸಿದರು. ಒಕ್ಕೂಟದ ಉಪಾಧ್ಯಕ್ಷೆ ಝೋಹರಾ, ಜೊತೆ ಕಾರ್ಯದರ್ಶಿ ಪ್ರಭಾವತಿ, ಕೋಶಾಧಿಕಾರಿ ಪುಷ್ಪಲತಾ, ಸದಸ್ಯರಾದ ಉಮಾಶ್ರೀ, ಅನಿತಾ, ಸುಮಿತ್ರ, ಗುಲಾಬಿ, ಪ್ರೇಮ, ಸುಮಿತ್ರ, ಹಿಲ್ಡಾ, ಸೀತಮ್ಮ, ಭವಾನಿ ಸಹಕರಿಸಿದರು. ಒಕ್ಕೂಟದ ಸದಸ್ಯರಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಯಿತು.