ಉಪ್ಪಿನಂಗಡಿ: ಗೋ ಮಾತಾ ಸಂರಕ್ಷಣಾ ಚಳವಳಿ ಪೆರ್ನೆ ಇದರ ವತಿಯಿಂದ ಗೋ ಹತ್ಯೆಯನ್ನು ಖಂಡಿಸಿ ಸೆ.6ರಂದು ಬಂಟ್ವಾಳ ತಾಲೂಕಿನ ಪೆರ್ನೆ ಗ್ರಾಮದ ಕಡಂಬುವಿನ ಕಾರ್ಲ ರಾಮದ್ವಾರದ ಬಳಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ದ್ವೇಷ ಭಾಷಣ ಮಾಡಿದ ಆರೋಪದಲ್ಲಿ ಹಿಂದೂ ಸಂಘಟನೆಗಳ ಪರ ಮುಖಂಡ ಗಣರಾಜ್ ಭಟ್ ಕೆದಿಲ ಎಂಬವರ ಮೇಲೆ ಉಪ್ಪಿನಂಗಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬೆಳಗ್ಗೆ 10.30ರಿಂದ 11.30ರವರೆಗೆ ಪ್ರತಿಭಟನೆ ನಡೆದಿದ್ದು, ಈ ಪ್ರತಿಭಟನೆಯಲ್ಲಿ ಪ್ರತಿಭಟನಕಾರರನ್ನುದ್ದೇಶಿಸಿ ಮಾತನಾಡಿದ ಗಣರಾಜ್ ಭಟ್ ಕೆದಿಲ ಸ್ಥಳೀಯವಾಗಿ ಧಾರ್ಮಿಕ, ಸಮುದಾಯಿಕವಾಗಿ ದ್ವೇಷ ಭಾವನೆ ಹುಟ್ಟಿಸುವ ಉದ್ದೇಶದಿಂದ ಗುಂಪು ಗುಂಪುಗಳ, ಸಮುದಾಯಗಳ ಮಧ್ಯೆ ವೈಮನಸ್ಸು ಬೆಳೆಸುವಂತೆ ಪ್ರತಿಭಟನಕಾರರನ್ನು ಉದ್ದೇಶಿಸಿ ಪ್ರಚೋದನಾಕಾರಿಯಾಗಿ ಮಾತನಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದ್ದು, ಈ ಹಿನ್ನೆಲೆಯಲ್ಲಿ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ: 78/2025ಕಲಂ: 353 (2)ಬಿಎನ್ಎಸ್ 2023 ಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.