ನೆಲ್ಯಾಡಿ: ಜೇಸಿಐ ನೆಲ್ಯಾಡಿ, ಮಹಿಳಾ ಜೇಸಿ ಹಾಗೂ ಜೂನಿಯರ್ ಜೇಸಿವಿಂಗ್ ನೆಲ್ಯಾಡಿ ಇದರ ಆಶ್ರಯದಲ್ಲಿ 1 ವಾರ ನಡೆದ 42ನೇ ವರ್ಷದ ಜೇಸಿ ಸಪ್ತಾಹ-2025 ’ಸಪ್ತಸಂಭ್ರಮ’ ಸಮಾರೋಪ ಸೆ.15ರಂದು ಸಂಜೆ ನೆಲ್ಯಾಡಿ ಸಂತಜಾರ್ಜ್ ವಿದ್ಯಾಸಂಸ್ಥೆಯಲ್ಲಿ ಜರಗಿತು.
ವಿಶೇಷ ಆಹ್ವಾನಿತರಾಗಿದ್ದ ಜೇಸಿಐ ಭಾರತದ ವಲಯ 15ರ ಆಡಳಿತ ವಿಭಾಗದ ವಲಯ ನಿರ್ದೇಶಕ ಅಜಿತ್ ಕುಮಾರ್ ರೈ ಮಾತನಾಡಿ, ಜೇಸಿಐ ಸಾರ್ವಜನಿಕ ಕಾರ್ಯಚಟುವಟಿಕೆಗಳ ಮೂಲಕ ಯುವಕರಿಗೆ ಉತ್ತಮ ಮಾರ್ಗದರ್ಶನ, ನಾಯಕತ್ವ ಹಾಗೂ ಜೀವನದಲ್ಲಿ ಯಶಸ್ವಿಯಾಗಲು ಅಗತ್ಯವಾದ ತರಬೇತಿ ನೀಡುತ್ತಿದೆ. ಈ ವರ್ಷ ನೆಲ್ಯಾಡಿ ಜೇಸಿಐ ಉತ್ತಮ ಸೇವಾ ಚಟುವಟಿಕೆಗಳಿಂದ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು. ಇನ್ನೋರ್ವ ಅತಿಥಿ ಮುಡಿಪು ಕೆಎಸ್ಆರ್ಟಿಸಿ ಚಾಲನಾ ತರಬೇತಿ ಕೇಂದ್ರದ ನಿವೃತ್ತ ಪ್ರಾಂಶುಪಾಲ ಮುರಳೀಧರ ಆಚಾರ್ಯ ಮಾತನಾಡಿ, ಜೇಸಿ ಸಂಸ್ಥೆಯಲ್ಲಿ ದೊರೆಯುವ ವ್ಯಕ್ತಿತ್ವ ವಿಕಸನ ತರಬೇತಿಗಳು ಉದ್ಯೋಗ ಸಂದರ್ಶನಗಳಲ್ಲಿ ಸಹಾಯವಾಗುತ್ತದೆ ಎಂದರು.

ವೇದಿಕೆಯಲ್ಲಿ ಸಂತ ಜಾರ್ಜ್ ವಿದ್ಯಾಸಂಸ್ಥೆಯ ಸಂಚಾಲಕ ಫಾ.ನೋಮಿಸ್ ಕುರಿಯಾಕೋಸ್, ನೆಲ್ಯಾಡಿ ಜೇಸಿಐ ನಿಕಟಪೂರ್ವ ಅಧ್ಯಕ್ಷೆ ಸುಚಿತ್ರ ಜೆ.ಬಂಟ್ರಿಯಾಲ್, ಮಹಿಳಾ ಜೇಸಿ ಅಧ್ಯಕ್ಷೆ ಪ್ರವೀಣಿ ಸುಧಾಕರ ಶೆಟ್ಟಿ, ಯೋಜನಾ ನಿರ್ದೇಶಕರಾದ ಪುರಂದರ ಗೌಡ ಡೆಂಜ, ವಿನ್ಯಾಸ್ ಬಂಟ್ರಿಯಾಲ್ ಉಪಸ್ಥಿತರಿದ್ದರು. ನೆಲ್ಯಾಡಿ ಜೇಸಿಐ ಅಧ್ಯಕ್ಷ ಡಾ.ಸುಧಾಕರ ಶೆಟ್ಟಿ ಅಧ್ಯಕ್ಷತೆ ವಹಿಸಿ ಸ್ವಾಗತಿಸಿದರು.
ಪೂರ್ವಾಧ್ಯಕ್ಷ ಜಯಾನಂದ ಬಂಟ್ರಿಯಲ್ ಗಣ್ಯರನ್ನು ವೇದಿಕೆಗೆ ಆಹ್ವಾನಿಸಿದರು. ಸುಪ್ರೀತಾ ರವಿಚಂದ್ರ ಜೇಸಿವಾಣಿ ವಾಚಿಸಿದರು. ವಿ. ಆರ್.ಹೆಗ್ಡೆ, ಲೀಲಾ ಮೋಹನ್, ದಯಾಕರ ರೈ ಅತಿಥಿಗಳನ್ನು ಪರಿಚಯಿಸಿದರು. ಕಾರ್ಯದರ್ಶಿ ನವ್ಯ ಪ್ರಸಾದ್ ವಂದಿಸಿದರು.
ಸಮಾರೋಪಕ್ಕೆ ಮೊದಲು ಲಹರಿ ಸಂಗೀತ ಕಲಾ ಕೇಂದ್ರ ಐಐಸಿಟಿ ನೆಲ್ಯಾಡಿ ಇವರ ವತಿಯಿಂದ ’ನಗಬೇಕು ಆಗಾಗ ಬದುಕಿನೊಳಗೆ’ ಶೀರ್ಷಿಕೆಯ ಸಂಗೀತ, ನೃತ್ಯ ಮತ್ತು ಹಾಸ್ಯ ಕಾರ್ಯಕ್ರಮ ನಡೆಯಿತು. ಆರ್ಯಭಟ ಪ್ರಶಸ್ತಿ ಪುರಸ್ಕೃತ ವಿಶ್ವನಾಥ್ ಶೆಟ್ಟಿ ಕೆ. ಕಾರ್ಯಕ್ರಮ ನಡೆಸಿಕೊಟ್ಟರು. ಬಳಿಕ ನಡೆದ ಜೆಸಿಐ ಕುಟುಂಬೋತ್ಸವದಲ್ಲಿ ಡಾ.ಸದಾನಂದ ಕುಂದರ್ ಅವರು ಜೇಸಿ, ಜೇಸಿರೆಟ್ ಮತ್ತು ಜೂನಿಯರ್ ಜೇಸಿಗಳಿಗೆ ವಿವಿಧ ಸ್ಪರ್ಧೆ ನಡೆಸಿ, ವಿಜೇತರಿಗೆ ಬಹುಮಾನ ವಿತರಿಸಿದರು.
ಕಮಲಪತ್ರ ಪ್ರಶಸ್ತಿ ಪ್ರದಾನ;
ನೆಲ್ಯಾಡಿ ಜೇಸಿಐ ಪೂರ್ವಾಧ್ಯಕ್ಷ ಮೋಹನ್ ಕುಮಾರ್ ಡಿ ಅವರಿಗೆ ಕಮಲ ಪತ್ರ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸಾಧನಾಶ್ರೀ ಪುರಸ್ಕೃತ ಮೋಹನ್ ವಿ. ಗೌಡ ಅವರನ್ನು ಗೌರವಿಸಲಾಯಿತು.