ಪುತ್ತೂರು: ಸ್ವಚ್ಚತೆ ಮಾಡುವವರಿದ್ದಾರೆ ಎಂದು ಸಾರ್ವಜನಿಕರು ಸುಮ್ಮನಿರುವುದಲ್ಲ. ನಗರವನ್ನು ಸ್ವಚ್ಚವಾಗಿಡುವಲ್ಲಿ ನಾಗರೀಕರ ಪಾತ್ರವೂ ಮಹತ್ವವಾಗಿದೆ. ನಾಗರೀಕರ ಕರ್ತವ್ಯವೂ ಇದೆ. ಮನೆಯ ಕಸವನ್ನು ರಸ್ತೆ ಬದಿ ಎಸೆಯುವುದಲ್ಲ. ಇದಕ್ಕಾಗಿ ನಾಗರೀಕರಿಗೂ ಕೌನ್ಸಿಲಿಂಗ್ನ ಆವಶ್ಯಕತೆಯಿದೆ. ರಸ್ತೆ ಬದಿ ತ್ಯಾಜ್ಯ ಎಸೆಯುವವರ ವಿರುದ್ಧ ಕ್ರಮಕೈಗೊಳ್ಳಬೇಕು. ಸ್ವಚ್ಚತೆಯ ಬಗ್ಗೆ ಸಾರ್ವಜನಿಕರೂ ಮಾಹಿತಿ ಪಡೆದುಕೊಳ್ಳಬೇಕಾದ ಆವಶ್ಯಕತೆಯಿದೆ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.

ಪುರಭವನದಲ್ಲಿ ಸೆ.23ರಂದು ನಡೆದ ಪೌರಕಾರ್ಮಿಕರ ದಿನಾಚರಣೆಯನ್ನು ಉದ್ಘಾಟಸಿ, ಅವರು ಮಾತನಾಡಿದರು. ಪ್ರತಿದಿನ ಬೆಳಿಗ್ಗೆ 5 ಗಂಟೆಗೆ ಎದ್ದು ಸ್ವಚ್ಚತೆ ಮಾಡುವವರು ಪೌರಕಾರ್ಮಿಕರು. ಅವರಿಗೆ ನಮನ ಕೊಡುವವರು ಕಡಿಮೆ. ಪೌರ ಕಾರ್ಮಿಕರನ್ನು ಕೀಳು ನೋಭಾವನೆಯಲ್ಲಿ ಕಾಣಬಾರದು. ಅವರಿಗೆ ಸಮಾಜದಲ್ಲಿ ಗೌರವ ಕೊಡುವ ಕೆಲಸವಾಗಬೇಕು. ಅವರು ಮಾಡುವ ಕೆಲಸ ದೇವರ ಕೆಲಸವಾಗಿದ್ದು ಸಮಾಜಕ್ಕೆ ಅರ್ಪಣೆ ಮಾಡುವ ಕೆಲಸವಾಗಬೇಕು. ಪೌರ ಕಾರ್ಮಿಕರ ಸೇವೆಗೆ ಸರಕಾರವು ಮಹತ್ವ ನೀಡುತ್ತದೆ. ಯಾರೂ ಮಾಹಿತಿಯ ಕೊರತೆಯಿಂದ ತ್ಯಾಜ್ಯವನ್ನು ಎಸೆಯುವುದಿಲ್ಲ. ಪ್ರತಿಯೊಬ್ಬ ನಾಗರೀಕರ ಮನಸ್ತತಿ ಬದಲಾಗಬೇಕಾದ ಆವಶ್ಯಕತೆಯಿದೆ ಎಂದು ಹೇಳಿದ ಶಾಸಕರು ಪುತ್ತೂರಿನಲ್ಲಿಯೂ ನಗರ ಬೆಳೆಯುತ್ತಿದೆ. ಅದಕ್ಕೆ ಪೂರಕವಾಗಿ ಡ್ರೈನೇಜ್ ಸಿಸ್ಟಮ್ ಬಂದಿಲ್ಲ. ನಗರದ ಅಭಿವೃದ್ಧಿಗೆ ಪೂರಕವಾಗಿ ಡ್ರೈನೇಜ್ ಸಿಸ್ಟಮ್ಗೂ ಮಹತ್ವ ನೀಡಲಾಗುವುದು ಎಂದರು.
ನಗರ ಸಭಾ ಉಪಾದ್ಯಕ್ಷ ಬಾಲಚಂದ್ರ ಕೆಮ್ಮಿಂಜೆ ಮಾತನಾಡಿ, ಜನಸಂಖ್ಯೆ ಆಧಾರದಲ್ಲಿ ಪೌರಕಾರ್ಮಿಕರ ನೇಮಕವಾಗಬೇಕಿದ್ದರೂ ಪುತ್ತೂರಿನಲ್ಲಿ ಕೇವಲ ಶೇ.35ರಷ್ಟು ಮಾತ್ರ ಪೌರ ಕಾರ್ಮಿಕರಿದ್ದಾರೆ. ಅವರಿಂದ ಸ್ಚಚ್ಚತೆಯಲ್ಲಿ ರಾಜ್ಯದಲ್ಲಿ 2ನೇ ಸ್ಥಾನ ಪಡೆದುಕೊಂಡಿದೆ. ಪ್ರಧಾನಿ ನರೇಂದ್ರ ಮೋದಿಯವರು ಸ್ವಚ್ಚತೆಗೆ ಆಧ್ಯತೆ ನೀಡಿ ಪೌರಕಾರ್ಮಿಕರಿಗೂ ವಿಶೇಷ ಸ್ಥಾನ ನೀಡುತ್ತಾರೆ. ಸ್ವಚ್ಚ ಭಾರತ್ ಯೋಜನೆಯಲ್ಲಿ ಅನುದಾನ ನೀಡುತ್ತಿದ್ದಾರೆ. ಬನ್ನೂರು ಡಂಪಿಂಗ್ ಯಾರ್ಡ್ನಲ್ಲಿ ಪಾರಂಪರಿಕವಾಗಿದ್ದ ತ್ಯಾಜ್ಯಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡಲಾಗುತ್ತಿದ್ದು ಶೂನ್ಯ ಡಂಪಿಂಗ್ ಯಾರ್ಡ್ ನಿರ್ಮಾಣವಾಗಲಿದೆ ಎಂದರು.
ನಗರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ಸುಂದರ ಪೂಜಾರಿ ಬಡಾವು ಮಾತನಾಡಿ, ಸ್ವಚ್ಚತೆ ಮೂಲಕ ನಗರವನ್ನು ಸುಂದರವಾಗಿಸುವಲ್ಲಿ ಪೌರ ಕಾರ್ಮಿಕರ ಕೊಡುಗೆ ಅಪಾರವಾಗಿದ್ದು ಅವರಿಗೆ ಸಾಷ್ಟಾಂಗ ಪ್ರಣಾಮಗಳನ್ನು ಸಲ್ಲಿಸುವುದಾಗಿ ತಿಳಿಸಿದರು. ಪೌರ ಕಾರ್ಮಿಕರ ಸ್ವಚ್ಚತಾ ಶ್ರಮಕ್ಕೆ ಸೋಮವಾರದ ಸಂತೆ ನಡೆದು ಮರುದಿನ ಕಿಲ್ಲೆಮೈದಾನದ ಸ್ವಚ್ಚತೆಯೇ ಉದಾಹರಣೆಯಾಗಿದೆ ಎಂದರು.
ಸಂಪನ್ಮೂಲ ವ್ಯಕ್ತಿಯಾಗಿದ್ದ ರಾಜ್ಯ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ರಾಮಕುಂಜ ಶ್ರೀ ರಾಮಕುಂಜೇಶ್ವರ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಸತೀಶ್ ಭಟ್ ಮಾತನಾಡಿ, ಪ್ರತಿಯೊಬ್ಬರಿಗೂ ನಮ್ಮ ದೇಶ ಸಿಂಗಾಪುರ, ಜಪಾನ್, ಜರ್ಮನಿ ಆಗಬೇಕು ಎಂಬ ಆಕಾಂಕ್ಷೆಗಳಿರುತ್ತದೆ. ಆದರೆ ಜನತೆ ಅದಕ್ಕೆ ಸ್ಪಂದಿಸುತ್ತಾರಾ ಎಂಬ ಪ್ರಶ್ನೆಯಿದೆ. ಸ್ವಚ್ಚತೆ ಕಾಪಾಡುವಲ್ಲಿ ನಾಗರಿಕರ ಜವಾಬ್ದಾರಿ ಮಹತ್ತರವಾಗಿದ್ದು, ಸರಕಾರ ಇಲಾಖೆಗಳ ಮೂಲಕ ಜನತೆಗೆ ಜಾಗೃತಿ ಮೂಡಿಸುವ ಕೆಲಸ ನಡೆಯಬೇಕಿದೆ. ಸ್ವಚ್ಚತೆ ಇರುವಲ್ಲಿ ಆರೋಗ್ಯವಿದೆ ಎಂದ ಅವರು ಸ್ವಚ್ಚ ಪುತ್ತೂರು ನಿರ್ಮಾಣದಲ್ಲಿ ಪೌರ ಕಾರ್ಮಿಕರ ಬಹುದೊಡ್ಡ ಕೊಡುಗೆಯಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ನಗರ ಸಭಾ ಅಧ್ಯಕ್ಷೆ ಲೀಲಾವತಿ ಅಣ್ಣು ನಾಯ್ಕ ಮಾತನಾಡಿ, ನಗರದ ಸ್ವಚ್ಚತೆ ಕಾಪಾಡುವ ಪೌರಕಾರ್ಮಿಕರು ದೇಶದ ಬೆನ್ನೆಲುಬು. ಅವರು ದೇಶದ ಶಕ್ತಿಯಾಗಿದ್ದಾರೆ. ಪೌರಕಾರ್ಮಿಕರ ಕಠಿಣ ಶ್ರಮದ ಫಲವಾಗಿ ಸ್ವಚ್ಚತೆಯಲ್ಲಿ 36ನೇ ಸ್ಥಾನದಲ್ಲಿದ್ದ ನಗರ ಸಭೆ ಇಂದು 2ನೇ ಸ್ಥಾನಕ್ಕೆ ಬರುವಲ್ಲಿ ಸಹಕಾರಿಯಾಗಿದೆ. ಮುಂದಿನ ದಿನಗಳಲ್ಲಿ ಪ್ರಥಮ ಸ್ಥಾನ ಗಳಿಸಲಿದೆ. ಇದಕ್ಕೆಲ್ಲಾ ಸಹಕರಿಸಿದ ಪೌರಕಾರ್ಮಿಕರು ಹಾಗೂ ಅಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸಿದರು.
ಸಾಧಕ ಪೌರಕಾರ್ಮಿಕರಿಗೆ ಸನ್ಮಾನ, ಗೌರವಾರ್ಪಣೆ:
ಪೌರ ಕಾರ್ಮಿಕರಾದ ಉಮಾವತಿ, ವೀರಪ್ಪ, ಬಪ್ಪಯ್ಯ ಯಾನೆ ಕೃಷ್ಣಪ್ಪ, ಚಂದ್ರಶೇಖರ, ಚಿದಾನಂದ, ದಸ್ತಗಿರಿ, ಶಿವಕುಮಾರ್, ಯಶೋಧ, ಸೀತಾ ಹಾಗೂ ಪ್ರವೀಣ ಇವರನ್ನು ಸನ್ಮಾನಿಸಲಾಯಿತು. ಆರೋಗ್ಯ ನಿರೀಕ್ಷಕರಾದ ರಾಮಚಂದ್ರ, ಶ್ವೇತಾ ಕಿರಣ್, ಪರಿಸರ ಅಭಿಯಂತ ಶಬರೀನಾಥ್ ರೈ, ಲೆಕ್ಕ ಅಧೀಕ್ಷಕ ರಾಮಚಂದ್ರ ಸಾಗರ್, 35 ಮಂದಿ ಪೌರ ಕಾರ್ಮಿಕರು, ಹತ್ತು ಮಂದಿ ಚಾಲಕರು ಹಾಗೂ ಮೂರು ಮಂದಿ ಮೇಲ್ವಿಚಾರಕರ ಹಾಗೂ ಸಾಹಸ್ ಸಂಸ್ಥೆಯ ಪ್ರತಿನಿಧಿಗಳನ್ನು ಗೌರವಿಸಲಾಯಿತು. ಪೌರಕಾರ್ಮಿಕರಿಗೆ ಗೌರವದ ಜೊತೆಗೆ ತಲಾ ರೂ.7000ಮೊತ್ತವನ್ನು ಅವರ ಖಾತೆಗೆ ಜಮೆ ಮಾಡಲಾಗಿದೆ. ರಾಜ್ಯ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ಸತೀಶ್ ಭಟ್ರವರನ್ನು ಕಾರ್ಯಕ್ರಮದಲ್ಲಿ ಗೌರವಿಸಲಾಯಿತು.
ಪ್ರತಿಭಾ ಪುರಸ್ಕಾರ:
ಎಸ್ಎಸ್ಎಲ್ಸಿಯಲ್ಲಿ ಅತ್ಯಧಿಕ ಅಂಕ ಪಡೆದ ಪೌರಕಾರ್ಮಿಕರ ಮಕ್ಕಳಿಗೆ ನೀಡುವ ಪ್ರತಿಭಾ ಪುರಸ್ಕಾರವನ್ನು ನಗರ ಸಭೆಯ ಸ್ವಚ್ಚತಾ ವಾಹಿನಿ ಚಾಲಕ ಕೂಸಪ್ಪರವರ ಪುತ್ರಿ ದಿಶಾ ಹಾಗೂ ಪೌರಕಾರ್ಮಿಕ ಲೋಕಯ್ಯ ನಾಯ್ಕರ ಪುತ್ರ ಶ್ರೀಕಾಂತ್ ಲಂಬಾನಿಯವರಿಗೆ ನೀಡಿ ಗೌರವಿಸಲಾಯಿತು.
ಬಹುಮಾನ ವಿತರಣೆ:
ಪೌರಕಾರ್ಮಿಕರ ದಿನಾಚರಣೆಯ ಅಂಗವಾಗಿ ನಗರ ಸಭಾ ಸದಸ್ಯರ, ಸಿಬ್ಬಂದಿಗಳು, ಪೌರಕಾರ್ಮಿಕರು ಹಾಗೂ ಅವರ ಮಕ್ಕಳಿಗೆ ನಡೆಸಿದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಎಐ ತಂತ್ರಜ್ಞಾನ ಹಾಡು ಬಿಡುಗಡೆ:
ಪೌರಕಾರ್ಮಿಕರ ದೈನಂದಿನ ಕೆಲಸಕಾರ್ಯಗಳನ್ನು ಆದರಿತವಾಗಿ ನಗರ ಸಭೆಯು ಲೆಕ್ಕ ಅಧೀಕ್ಷಕ ರಾಮಚಂದ್ರ ಸಾಗರ್ ಅವರು ಎಐ ತಂತ್ರಜ್ಞಾನದಲ್ಲಿ ನಿರ್ಮಿಸಿದ ವಿಡಿಯೋವನ್ನು ಕಾರ್ಯಕ್ರಮದಲ್ಲಿ ಬಿಡುಗಡೆಗೊಳಿಸಿ, ಎಲ್ಇಡಿ ಪರದೆಯಲ್ಲಿ ಪ್ರದರ್ಶಿಸಲಾಯಿತು.
ನಗರ ಸಭೆಯ ಪೌರಾಯುಕ್ತೆ ವಿದ್ಯಾ ಎಸ್ ಕಾಳೆ ಸ್ವಾಗತಿಸಿದರು. ಉಪಾಧ್ಯಕ್ಷ ಬಾಲಚಂದ್ರ ಕೆಮ್ಮಿಂಜೆ ವಂದಿಸಿದರು. ಶಿಕ್ಷಕ ಬಾಲಕೃಷ್ಣ ರೈ ಪೊರ್ದಾಲ್ ಕಾರ್ಯಕ್ರಮ ನಿರೂಪಿಸಿದರು. ನಗರ ಸಭೆಯ ಸಿಬ್ಬಂದಿ ವಾಣಿ ಪ್ರಾರ್ಥಿಸಿದರು. ಪೌರ ಕಾರ್ಮಿಕರಾದ ವೀರಪ್ಪ, ಉಮಾವತಿ, ಕೃಷ್ಣ ಪ್ಪ ಬಪ್ಪಳಿಗೆ, ಯಶೋಧ, ಶಿವಕುಮಾರ್ ಅತಿಥಿಗಳನ್ನು ಶಾಲು ಹಾಕಿ ಸ್ವಾಗತಿಸಿದರು. ಸಭಾ ಕಾರ್ಯಕ್ರಮದ ಪ್ರಾರಂಭದಲ್ಲಿ ನೆಲ್ಲಿಕಟ್ಟೆ ಖಾಸಗಿ ಬಸ್ ನಿಲ್ದಾಣದ ಬಳಿಯಿಂದ ಹೊರಟ ಪೌರ ಕಾರ್ಮಿಕರ ಜಾಥಾವು ಕೆಎಸ್ಆರ್ಟಿಸಿ ಬಸ್ ನಿಲ್ದಾಣ, ಮುಖ್ಯರಸ್ತೆ ಮೂಲಕ ಶ್ರೀಧರ ಭಟ್ ಅಂಗಡಿ ಬಳಿಯಿಂದಾಗಿ ಕಿಲ್ಲೇ ಮೈದಾನದ ತನಕ ಸಾಗಿ ಬಂತು. ಸಭಾ ಕಾರ್ಯಕ್ರಮದ ಬಳಿಕ ಭೋಜನ, ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.