ಪುತ್ತೂರು: ವಿವೇಕಾನಂದ ಪದವಿಪೂರ್ವ ಕಾಲೇಜಿನ ವೈದೇಹಿ ಸಭಾಂಗಣದಲ್ಲಿ ಕಲಾ ಸಂಘದ ವತಿಯಿಂದ ‘Think Better- Feel Better’ ವಿಷಯದ ಕುರಿತು ಕಾರ್ಯಗಾರವನ್ನು ಹಮ್ಮಿಕೊಳ್ಳಲಾಯಿತು. ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ವಿವೇಕಾನಂದ ಮಹಾವಿದ್ಯಾಲಯದ ಮನಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪ್ರೊ. ಚಂದ್ರಕಾಂತ ಗೋರೆ ಉಪಸ್ಥಿತರಿದ್ದರು.ಈ ಸಂದರ್ಭದಲ್ಲಿ ಅವರು ಮಾತನಾಡುತ್ತಾ, ನಮ್ಮ ಕಾರ್ಯಗಳು ನಮ್ಮ ಆಲೋಚನೆಗಳಂತೆಯೇ ಸಾಗುತ್ತದೆ. ನಾವು ಧನಾತ್ಮಕ ಆಲೋಚನೆ ಮಾಡಿದಾಗ ಮಾತ್ರ ಬದುಕು ಸುಗಮವಾಗಿ ಸಾಗಬಲ್ಲದು. ಜೀವನದಲ್ಲಿ ಗುರಿ ಇರಿಸಿಕೊಂಡು ಸಾಗಿದಾಗ ದಾರಿ ಸ್ಪಷ್ಟವಾಗುತ್ತಾ ಹೋಗುತ್ತದೆ. ಕಠಿಣ ಪರಿಶ್ರಮದ ಮೂಲಕ ಜೀವನದಲ್ಲಿ ಸಾಫಲ್ಯತೆಯನ್ನು ಪಡೆಯಬಹುದು ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ವಿವೇಕಾನಂದ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ದೇವಿಚರಣ್ ರೈ ಎಮ್ ಮಾತನಾಡುತ್ತಾ, ದೃಷ್ಟಿಯಂತೆ ಸೃಷ್ಟಿ, ಜಗತ್ತನ್ನು ನಾವು ಹೇಗೆ ನೋಡುತ್ತೇವೋ ಅದೇ ರೀತಿ ಜೀವನ ಸಾಗುತ್ತಾ ಹೋಗುತ್ತದೆ. ನಮ್ಮ ಬದುಕಿನ ಒಳಿತು ಕೆಡುಕುಗಳು ನಮ್ಮ ಕೈಯಲ್ಲಿಯೇ ಇದೆ ಎಂದು ಅವರು ಹೇಳಿದರು.ಬಳಿಕ ಚಟುವಟಿಕೆಗಳ ಜೊತೆಗೆ ಸಾಕ್ಷ್ಯಚಿತ್ರ ಪ್ರದರ್ಶನದ ಮೂಲಕ ಕಾರ್ಯಾಗಾರವನ್ನು ವಿದ್ಯಾರ್ಥಿಗಳಿಗೆ ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಕಲಾ ಸಂಘದ ಸಂಯೋಜಕರಾದ ಮೋನಿಷಾ ಎನ್, ಉಪನ್ಯಾಸಕ, ಉಪನ್ಯಾಸಕೇತರ ವೃಂದದವರು ಹಾಗೂ ಕಲಾ ವಿಭಾಗದ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ದ್ವಿತೀಯ ಪಿಯುಸಿ ಕಲಾ ವಿಭಾಗದ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಪ್ರಥಮ ಕಲಾ ವಿಭಾಗದ ವಿದ್ಯಾರ್ಥಿನಿ ಕ್ಷಮಾ ಪಿ ಸ್ವಾಗತಿಸಿ, ವಿದ್ಯಾರ್ಥಿನಿ ರಕ್ಷಿತಾ ಪಿ.ಎಲ್ ವಂದಿಸಿದರು. ದ್ವಿತೀಯ ಪಿಯುಸಿ ಕಲಾ ವಿಭಾಗದ ವಿದ್ಯಾರ್ಥಿನಿ ರೂಪಶ್ರೀ ಕಾರ್ಯಕ್ರಮವನ್ನು ನಿರೂಪಿಸಿದರು.