ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯಲ್ಲಿ ದೀಪಾವಳಿ ಆಚರಣೆ

0

ಪುತ್ತೂರು: ನಮ್ಮ ದೇಶದಲ್ಲಿ ಆಚರಿಸುವುದಾದರೆ ಪ್ರತಿ ದಿನವೂ ಹಬ್ಬವೇ, ಪಾಡ್ಯದಿಂದ ಹುಣ್ಣಿಮೆಯವರೆಗೆ ಮತ್ತೆ ಪಾಡ್ಯದಿಂದ ಅಮವಾಸ್ಯೆಯವರೆಗೆ ಹೀಗೆ ಪ್ರತಿಯೊಂದು ದಿನವೂ ಮಹತ್ವಪೂರ್ಣವಾದದ್ದು ಎಂದು ವಿವೇಕಾನಂದ ಪದವಿಪೂರ್ವ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ರವೀಂದ್ರ.ಪಿ ಹೇಳಿದರು.


ಅವರು ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯಲ್ಲಿ ನಡೆದ ದೀಪಾವಳಿ ಆಚರಣೆ ಸಮಾರಂಭದಲ್ಲಿ ಮಾತನಾಡಿದರು. ನಮ್ಮ ಹಬ್ಬಗಳ ಆಚರಣೆ ಇತರ ದೇಶಗಳಂತಲ್ಲ, ಅದಕ್ಕೆ ಸಾಮಾಜಿಕ ಮಹತ್ವವಿದೆ ಅದರ ಹಿಂದೆ ಅರ್ಥಪೂರ್ಣವಾದ ಸಂಗತಿಗಳಿವೆ ಎಂದರು. ಪ್ರೇರಕ ಶಕ್ತಿಗೆ 100 ವರ್ಷ ಹಾಗೂ ಇಂಜಿನಿಯರಿಂಗ್ ಕಾಲೇಜಿಗೆ 25 ವರ್ಷವಾದ ಈ ಶುಭಗಳಿಗೆಯಲ್ಲಿ ಇಂದಿನ ಆಚರಣೆ ಅತ್ಯಂತ ಮಹತ್ವವನ್ನು ಪಡೆದಿದೆ ಎಂದರು. ಪುರಾಣಗಳು, ವೇದಗಳು, ಉಪನಿಷತ್ ಸಾರಗಳು ಯುವ ಜನತೆಯನ್ನು ತಲಪುತ್ತಿಲ್ಲ, ಸಾಮಾಜಿಕ ಜಾಲತಾಣಗಳ ದಾಳಿಯಿಂದ ನಾವು ಕಳೆದುಹೋಗುತ್ತಿದ್ದೇವೆ ಎಂದು ಹೇಳಿದರು.


ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಇಂಜಿನಿಯರಿಂಗ್ ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷ ವಿಶ್ವಾಸ್ ಶೆಣೈ ಮಾತನಾಡಿ ನಮ್ಮ ಸಂಸ್ಥೆಯು ಸಮಾಜದಲ್ಲಿ ವಿಭಿನ್ನವಾಗಿ ಗುರುತಿಸಿಕೊಂಡಿದೆ. ಹಿರಿಯರ ಆಶಯದಂತೆ ಹಿಂದುತ್ವದ ಬಗ್ಗೆ ಕಾಳಜಿ ಹಾಗೂ ಅಭಿಮಾನದಿಂದ ಮುಂದುವರಿಯುತ್ತಿದೆ. ಇಲ್ಲಿ ಪ್ರತಿಯೊಂದು ಹಬ್ಬಗಳನ್ನೂ ವಿಶಿಷ್ಟ ರೀತಿಯಲ್ಲಿ ಆಚರಿಸಲಾಗುತ್ತದೆ ಎಂದರು. ಕಾಲೇಜಿಗೆ 25 ವರ್ಷಗಳಾದ ಈ ಸಂದರ್ಭದಲ್ಲಿ ಪಂಚವಿಂಶತಿ ಸರಣಿ ಕಾರ್ಯಕ್ರಮಗಳು ನಡೆಯುತ್ತಿವೆ ಎಂದರು.


ವಿವೇಕಾನಂದ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರೊ.ದೇವಿಚರಣ್.ರೈ, ನರೇಂದ್ರ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರೊ.ಪ್ರಸಾದ್ ಶಾನುಭೋಗ್, ಉಪ್ಪಿನಂಗಡಿ ಇಂದ್ರಪ್ರಸ್ಥ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರೊ.ಎಚ್.ಕೆ.ಪ್ರಕಾಶ್ ವಿಶೇಷ ಆಹ್ವಾನಿತರಾಗಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಇಂಜಿನಿಯರಿಂಗ್ ಕಾಲೇಜು ಆಡಳಿತ ಮಂಡಳಿಯ ಸಂಚಾಲಕ ಸುಬ್ರಮಣ್ಯ ಭಟ್.ಟಿ.ಎಸ್, ಕೋಶಾಧಿಕಾರಿ ಮುರಳೀಧರ ಭಟ್.ಬಿ, ನಿರ್ದೇಶಕ ಸತ್ಯನಾರಾಯಣ ಭಟ್, ಪ್ರಾಂಶುಪಾಲ ಡಾ.ಮಹೇಶ್‌ಪ್ರಸನ್ನ.ಕೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಸಾಮಾರಂಭದ ಮೊದಲು ಅತಿಥಿಗಳು ಗೋಪೂಜೆಯನ್ನು ನೆರವೇರಿಸಿದರು. ಕಾಲೇಜಿನ ಭೂಮಿಕಾ ಕಲಾ ಸಂಘದ ವಿದ್ಯಾರ್ಥಿಗಳು ಸಂಘದ ಶತಮಾನ-ರಾಷ್ಟ್ರ ಸೇವೆಯ ಶತಕ ಎನ್ನುವ ವಿಶಿಷ್ಟ ಪರಿಕಲ್ಪನೆಯ ಕಾರ್ಯಕ್ರಮವನ್ನು ಪ್ರಸ್ತುತಪಡಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಸುಡುಮದ್ದು ಪ್ರದರ್ಶನ ನಡೆಯಿತು.

LEAVE A REPLY

Please enter your comment!
Please enter your name here