ಪುತ್ತೂರು:ಶಿವಗಿರಿ ಮಠ ವರ್ಕಲ, ಕೇರಳ, ಶ್ರೀ ನಾರಾಯಣ ಗುರು ಅಧ್ಯಯನ ಪೀಠ, ಮಂಗಳೂರು ವಿಶ್ವವಿದ್ಯಾನಿಲಯದ ಆಶ್ರಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಮತ್ತು ಮಹಾತ್ಮ ಗಾಂಧಿ ಐತಿಹಾಸಿಕ ಸಂವಾದ ಶತಮಾನೋತ್ಸವದ ಅಂಗವಾಗಿ ಡಿ.3 ರಂದು ಕೊಣಾಜೆ ಮಂಗಳ ಗಂಗೋತ್ರಿ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಶ್ರೀ ಮಹಾಗುರುವಿನ ಮಹಾ ಸಮಾಧಿ ಶತಾಬ್ದಿ ಸರ್ವಮತ ಸಮ್ಮೇಳನದ ಶತಮಾನೋತ್ಸವವನ್ನು ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯರವರು ಉದ್ಘಾಟಿಸಲಿದ್ದಾರೆ.
ಬ್ರಹ್ಮಶ್ರೀ ನಾರಾಯಣ-ಮಹಾತ್ಮ ಗಾಂಧಿ ಸಂವಾದ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಸುಮಾರು 25 ಸಾವಿರ ಜನ ಸೇರುವ ನಿರೀಕ್ಷೆಯಿದ್ದು ರಾಜಕೀಯ ರಹಿತ ಕಾರ್ಯಕ್ರಮವಾಗಿದೆ. ಮಾನವ ಸಹೋದರತೆ, ಧಾರ್ಮಿಕ ಸಹಿಷ್ಣುತೆ, ಸತ್ಯ-ಅಹಿಂಸೆಯ ಮೌಲ್ಯಗಳನ್ನು ಮತ್ತೆ ನೆನಪಿಸುವ ವೇದಿಕೆಯಾಗಲಿದೆ. ಪ್ರಸ್ತುತ ಕಾಲಘಟ್ಟದಲ್ಲಿ ನಾರಾಯಣ ಗುರುಗಳ ಅನುಯಾಯಿಗಳು ಗುರುಗಳ ತತ್ವ ಸಿದ್ಧಾಂತಗಳನ್ನು ಮನವರಿಕೆ ಮಾಡುವ ಪ್ರಯತ್ನ ಈ ಕಾರ್ಯಕ್ರಮದ್ದಾಗಿದೆ.
ಅವಿಭಜಿತ ಪುತ್ತೂರು ಬಿಲ್ಲವ ಸಂಘದಿಂದ 2 ಸಾವಿರ ಜನ:
ಅದರಂತೆ ಪುತ್ತೂರು ಬಿಲ್ಲವ ಸಂಘದ ಅಧ್ಯಕ್ಷ ಸತೀಶ್ ಕುಮಾರ್ ಕೆಡೆಂಜಿರವರ ನೇತೃತ್ವದಲ್ಲಿ ಅವಿಭಜಿತ ಪುತ್ತೂರು ಹಾಗೂ ಕಡಬ ತಾಲೂಕಿನ ಬಿಲ್ಲವ ಸಂಘದ 55 ಗ್ರಾಮ ಸಮಿತಿಗಳಿಂದ ಸುಮಾರು 2 ಸಾವಿರ ಬಿಲ್ಲವ ಸಮುದಾಯ ಸುಮಾರು 25 ಖಾಸಗಿ ಬಸ್ಸುಗಳಲ್ಲಿ ಕೊಣಾಜೆ ಮಂಗಳ ಗಂಗೋತ್ರಿ ವಿಶ್ವವಿದ್ಯಾಲಯಕ್ಕೆ ಬೆಳಿಗ್ಗೆ ತೆರಳಿರುತ್ತಾರೆ. ಬೆಳಿಗ್ಗೆ ಹದಿನೈದು ಬಸ್ಸುಗಳು ಕಿಲ್ಲೆ ಮೈದಾನದಿಂದ, ಉಳಿದ ಹತ್ತು ಬಸ್ಸುಗಳು ಕಡಬ, ಉಪ್ಪಿನಂಗಡಿ ಮುಖೇನ ಮಂಗಳೂರಿಗೆ ತೆರಳಿವೆ. ಅಲ್ಲದೆ ಹಲವಾರು ಮಂದಿ ತಮ್ಮ ತಮ್ಮ ಖಾಸಗಿ ವಾಹನಗಳಲ್ಲಿಯೂ ತೆರಳಿರುತ್ತಾರೆ. ಸಮ್ಮೇಳನಕ್ಕೆ ತೆರಳುವ ಸಂದರ್ಭದಲ್ಲಿ ಪುತ್ತೂರು ಬಿಲ್ಲವ ಸಂಘದ ಅಧ್ಯಕ್ಷ ಸತೀಶ್ ಕುಮಾರ್ ಕೆಡಂಜಿ, ಕಾರ್ಯದರ್ಶಿ ಬಿ.ಟಿ ಮಹೇಶ್ಚಂದ್ರ ಸಾಲಿಯಾನ್, ಉಪಾಧ್ಯಕ್ಷರಾದ ಚಿದಾನಂದ ಸುವರ್ಣ, ಪುಷ್ಪಾವತಿ ಕೇಕುಡೆ, ಕೋಶಾಧಿಕಾರಿ ಜನಾರ್ದನ ಪೂಜಾರಿ ಪದಡ್ಕ, ಜೊತೆ ಕಾರ್ಯದರ್ಶಿ ಪುರುಷೋತ್ತಮ ಬರೆಂಬೆಟ್ಟು, ವಿವಿಧ ಗ್ರಾಮ ಸಮಿತಿ ಪದಾಧಿಕಾರಿಗಳು ಸಹಿತ ಹಲವರು ಭಾಗವಹಿಸಿದ್ದರು.
