ಪುತ್ತೂರು: ಹವಾಮಾನ ಆಧಾರಿತ ಬೆಳೆ ವಿಮೆಯ ಪರಿಹಾರ ಮೊಬಲಗಿನಲ್ಲಿ ಕೃಷಿಕರಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸಲು ಸರಕಾರಿ ಯಂತ್ರ ಮಧ್ಯ ಪ್ರವೇಶ ಮಾಡಬೇಕೆಂದು ಒತ್ತಾಯಿಸಿ ಉಪ್ಪಿನಂಗಡಿ ಸಹಕಾರಿ ವ್ಯವಸಾಯಿಕ ಸಂಘದ ವತಿಯಿಂದ ಪುತ್ತೂರು ಸಹಾಯಕ ಕಮಿಷನರ್ ರವರಿಗೆ ಮನವಿ ಸಲ್ಲಿಸಲಾಯಿತು.
ಅಡಿಕೆ ಕೃಷಿಕನ ವಿಚಾರದಲ್ಲಿ ಎಕ್ರೆಯೊಂದಕ್ಕೆ ಕೃಷಿಕ 2590 ರೂ. ವಿಮಾ ಕಂತು ಪಾವತಿಸಿದರೆ, ಕೇಂದ್ರ ಸರಕಾರ 5180 ರೂ. ಹಾಗೂ ರಾಜ್ಯ ಸರಕಾರ 10360 ರೂ. ವಿಮಾ ಕಂತು ಪಾವತಿಸುತ್ತದೆ. ಒಟ್ಟು 18130 ರೂ. ವಿಮಾ ಕಂತನ್ನು ಪಡೆದು ಎಕ್ರೆಗೆ ಕೇವಲ 10,441 ರೂಪಾಯಿ ಹಣವನ್ನು ವಿಮಾಪರಿಹಾರ ಧನವಾಗಿ ಬಿಡುಗಡೆ ಮಾಡಿರುವುದು ಅತಿ ವೃಷ್ಠಿಯಿಂದ ಹಾನಿಗೀಡಾದ ಕೃಷಿಕರಿಗೆ ಮಾಡಿರುವ ಅನ್ಯಾಯವಾಗಿದೆ ಎಂದಿರುವ ಉಪ್ಪಿನಂಗಡಿ ಸಹಕಾರಿ ವ್ಯವಸಾಯಿಕ ಸಂಘದ ಅಧ್ಯಕ್ಷ ಸುನಿಲ್ ಕುಮಾರ್ ದಡ್ಡು, ಈ ಬಗ್ಗೆ ರಾಜ್ಯ ಸರಕಾರ ತ್ವರಿತಗತಿಯಲ್ಲಿ ಮಧ್ಯ ಪ್ರವೇಶಿಸಿ ಕೃಷಿಕರಿಗೆ ನ್ಯಾಯ ಒದಗಿಸಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ನಿಯೋಗದಲ್ಲಿ ಉಪ್ಪಿನಂಗಡಿ ಸಹಕಾರಿ ವ್ಯವಸಾಯಿಕ ಸಂಘದ ಉಪಾಧ್ಯಕ್ಷ ದಯಾನಂದ ಸರೋಳಿ, ನಿರ್ದೇಶಕರಾದ ರಾಜೇಶ್, ವಸಂತ ಗೌಡ ಪಿಜಕ್ಕಳ, ಉಷಾ ಮುಳಿಯ, ಸಂಧ್ಯಾ, ಸುಂದರ ಎನ್, ಬಜತ್ತೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಗಂಗಾಧರ ಪಿ.ಎನ್, ಸದಸ್ಯರಾದ ಸಂತೋಷ್ ಪರ್ದಾಂಜೆ, ಹಿರೇಬಂಡಾಡಿ ಗ್ರಾಮ ಪಂಚಾಯತ್ ಸದಸ್ಯರಾದ ಸೌಕತ್ ಅಲಿ, ಉಪ್ಪಿನಂಗಡಿ ಗ್ರಾಮ ಪಂಚಾಯತ್ ಸದಸ್ಯರಾದ ಸುರೇಶ್ ಅತ್ರಮಜಲು, ಪ್ರಮುಖರಾದ ಸದಾನಂದ ನೆಕ್ಕಿಲಾಡಿ, ಜನಾರ್ದನ ಹಿರೇಬಂಡಾಡಿ ಭಾಗವಹಿಸಿದ್ದರು.
