ಬಡಗನ್ನೂರು: ಯಕ್ಷ ಮಿತ್ರರು ಬೆಂಗಳೂರು(ರಿ) ಟ್ರಸ್ಟ್ ಇವರ ಆಶ್ರಯದಲ್ಲಿ ಬೆಂಗಳೂರಿನ ಆಂಧ್ರಹಳ್ಳಿಯ ಆರ್ ಕೆ ಭಟ್ ಬೆಳ್ಳಾರೆ ಇವರ ‘ಶಬರಿಗಿರಿ’ ನಿವಾಸದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಾರ್ಷಿಕ ಕ್ಯಾಲೆಂಡರ್ -2026ನ್ನು ಬಿಡುಗಡೆಗೊಳಿಸಲಾಯಿತು.

ಯಕ್ಷಗಾನ ಕ್ಷೇತ್ರದಲ್ಲಿ ಅನನ್ಯ ಸಾಧನೆ ಮಾಡಿದ ಯಕ್ಷಗಾನ ಕಲಾವಿದರ ಸವಿವರ ಈ ಕ್ಯಾಲೆಂಡರನಲ್ಲಿ ಇರುವುದು ವಿಶೇಷವಾಗಿರುತ್ತದೆ. ಕಾರ್ಯಕ್ರಮದಲ್ಲಿ ಕರ್ನಾಟಕ ಮಾನವ ಹಕ್ಕುಗಳ ಆಯುಕ್ತ ಡಾ. ಟಿ ಶ್ಯಾಮ್ ಭಟ್, ಯಕ್ಷಮಿತ್ರ ಬಳಗದ ಅಧ್ಯಕ್ಷ ಆರ್.ಕೆ ಭಟ್ ಬೆಳ್ಳಾರೆ, ಉಪಾಧ್ಯಕ್ಷ ಕಿರಣ್ ಕುಮಾರ್ ಕಾರ್ಯದರ್ಶಿ ಶ್ಯಾಮ್ ಸೂರ್ಯರವರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮ ನಡೆದಿದ್ದು, ವಿದುಷಿ ಪ್ರಣತಿ ಪದ್ಯಾಣ ಬಳಗದವರಿಂದ ಭರತನಾಟ್ಯ ಕಾರ್ಯಕ್ರಮ ಹಾಗೂ ಯುವ ಮಹಿಳಾ ಭಾಗವತರಿಂದ ಅಮೋಘಗಾನ ವೈಭವ ಕಾರ್ಯಕ್ರಮ ನಡೆಯಿತು.
ಹಿಮ್ಮೇಳದಲ್ಲಿ ಭಾಗವತರಾಗಿ ಭವ್ಯಶ್ರೀ ಕುಲ್ಕುಂದ, ಹೇಮಸ್ವಾತಿ ಕುರಿಯಾಜೆ, ದಿವ್ಯಶ್ರೀ ಪುತ್ತಿಗೆ ಹಾಗೂ ಚಂಡೆವಾದಕರಾಗಿ ವಂದನ ಮಾಲೆಂಕಿ, ಮದ್ದಲೆವಾದಕರಾಗಿ ಶಾವ್ಯ ತಲಕಲ, ದೇವಿಕಾ ಕುರಿಯಾಜೆ, ಅವನಿ ಕೊಡಿಬ್ಯೆಲು ಹಾಗೂ ಚಕ್ರತಾರದಲ್ಲಿ ಮಾಸ್ಟರ್ ಅಗಸ್ತ್ಯಕುಲ್ಕುಂದ ಭಾಗವಹಿಸಿದ್ದರು.
ಯಕ್ಷಮಿತ್ರ ಬಳಗ ಬೆಂಗಳೂರು ಇವರ ವತಿಯಿಂದ ನಡೆದ ಯಕ್ಷಗಾನ ಪರಂಪರೆಯನ್ನು ಉಳಿಸುವ ಈ ಕಾರ್ಯಕ್ರಮ ಎಲ್ಲರ ಪ್ರಶಂಸೆಗೆ ಸಾಕ್ಷಿಯಾಯಿತು. ಶಿಕ್ಷಕ ಚಂದ್ರಶೇಖರ ಸುಳ್ಯಪದವು ಕಾರ್ಯಕ್ರಮ ನಿರೂಪಿಸಿದರು.