ಪುತ್ತೂರು: ಕೃಷಿ ಇದೆ ಎಂದು ಸುಳ್ಳು ದಾಖಲೆ ಸೃಷ್ಟಿಸಿ ಸಹಕಾರಿ ಸಂಘದಿಂದ 0% ಸಾಲ ಪಡೆದು ವಂಚಿಸಲಾಗಿದೆ ಎಂಬ ದೂರಿನ ವಿಚಾರಕ್ಕೆ ಸಂಬಂಧಿಸಿ ನೋಟೀಸ್ ಜಾರಿಗೊಳಿಸಿರುವುದಕ್ಕಾಗಿ 34 ನೆಕ್ಕಿಲಾಡಿ ಗ್ರಾಮದ ಅಲಿಮಾರ ಸಂಕಯ್ಯ ಪೂಂಜಾರವರ ಪತ್ನಿ ಕುಸುಮಾವತಿ ರೈಯವರು ಉಪ್ಪಿನಂಗಡಿ ಸಹಕಾರಿ ವ್ಯವಸಾಯಿಕ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮತ್ತು ಅಧ್ಯಕ್ಷರಿಗೆ ಲಿಖಿತ ಉತ್ತರ ನೀಡಿದ್ದಾರೆ.
ನೆಕ್ಕಿಲಾಡಿ ಗ್ರಾಮದ ಸಂಕಪ್ಪ ರೈಯವರ ಮಗ ರಾಧಾಕೃಷ್ಣ ರೈಯವರು ಸಹಕಾರ ಸಂಘಗಳ ಉಪನಿಬಂಧಕರು, ದ. ಕ. ಜಿಲ್ಲೆ ಮಂಗಳೂರು ಇವರಿಗೆ ದಿನಾಂಕ: 07.09.2022ಕ್ಕೆ ನೀಡಿದ್ದಾರೆ ಎನ್ನಲಾದ ದೂರು ದ್ವೇಷಪೂರಿತವಾಗಿದೆ ಮತ್ತು ಆಧಾರ ರಹಿತವಾಗಿರುತ್ತದೆ. ಪುತ್ತೂರು ತಾಲೂಕು 34ರಿಗಳು ಸೂಕ್ತ ಸ್ಥಳ ಪರಿಶೀಲನೆ ಮಾಡಿ ನಂತರವೇ ರೆವಿನ್ಯೂ ದಾಖಲೆಗಳಲ್ಲಿ ನಮೂದಿಸುವುದಾಗಿದೆ. ಅಲ್ಲದೆ 2009ನೇ ಇಸವಿ ಮತ್ತು 2016ನೇ ಇಸವಿಯಲ್ಲಿ ಗ್ರಾಮಕರಣಿಕರು ಕೂಡ ಸ್ಥಳ ಪರಿಶೀಲಿಸಿ ಮೇಲ್ಕಾಣಿಸಿದ ಜಮೀನಿನಲ್ಲಿರುವ ಕೃಷಿಯನ್ನು ಪರಿಗಣಿಸಿ ನೀಡಿದ ದೃಢಪತ್ರ ಗಳನ್ನು ಕೂಡ ಈ ಉತ್ತರದ ಜೊತೆ ಲಗತ್ತಿಸಲಾಗಿದೆ.
ಪ್ರಸ್ತುತ ನಮ್ಮ ಸಹಕಾರಿ ಸಂಘದಿಂದ ವಾರ್ಷಿಕ ಬೆಳೆ ಸಾಲ ನೀಡುವ ಸಮಯ ಕೂಡಾ ಸೂಕ್ತ ತನಿಖೆ ನಡೆಸಿ ಬೆಳೆ ಸಾಲ ಪಡೆಯಲು ನನ್ನ ಅರ್ಹತೆಯನ್ನು ಮನಗಂಡು ಬೆಳೆ ಸಾಲವನ್ನು ಪ್ರಸ್ತುತ ವಾರ್ಷಿಕ ವರ್ಷದಲ್ಲಿ ನೀಡಿರುತ್ತೀರಿ. ಈವರೆಗಿನ ಎಲ್ಲಾ ಸಾಲವನ್ನು ಅವಧಿಗೆ ಸರಿಯಾಗಿ ಪಾವತಿಸುತ್ತಾ ಬರುತ್ತಿದ್ದೇನೆ.
ಪ್ರಸ್ತುತ ಮೇಲ್ಕಾಣಿಸಿದ ಜಮೀನಿನಲ್ಲಿದ್ದ ಅಡಿಕೆ ಕೃಷಿ ಹಾನಿಗೊಂಡಿದ್ದು ಅದನ್ನು ಪುನಶ್ಚೇತನಗೊಳಿಸುವ ಸಲುವಾಗಿ ಹೊಸ ಅಡಿಕೆ ಕೃಷಿಯನ್ನು ಕಳೆದ ಜೂನ್ ತಿಂಗಳಿನಲ್ಲಿ ಮಾಡಿರುವುದಾಗಿದೆ. ಈ ರೀತಿ ಅಡಿಕೆ ಪುನಶ್ಚೇತನಗೊಳಿಸಬೇಕಾದಲ್ಲಿ ಸಹಕಾರಿ ಸಂಘದಿಂದ ಪಡೆದ ಬೆಳೆ ಸಾಲವನ್ನು ಅವಧಿ ಮುಂಚಿತವಾಗಿ ಸಂದಾಯ ಮಾಡಬೇಕೆಂಬ ನಿಯಮ ಇಲ್ಲವೆಂಬುದು ನನ್ನ ತಿಳುವಳಿಕೆಯಾಗಿದೆ. ತಾವು ನನಗೆ ನೀಡಿರುವ ನೋಟೀಸ್ ನಿಮ್ಮ ಮೇಲೆ ಅನುಚಿತ ಪ್ರಭಾವವನ್ನು ಬೀರಿ ಕೊಡಿಸಿದ ನೋಟೀಸ್ ಎಂಬುದು ತಮ್ಮ ನೋಟೀಸಿನ ಉಲ್ಲೇಖವನ್ನು ನೋಡಿದಾಗ ವೇದ್ಯವಾಗುತ್ತದೆ. ಇದನ್ನು ಕೃಷಿಕಳಾದ ನನಗೆ ನೀವು ನೀಡುತ್ತಿರುವ ಕಿರುಕುಳ ಎಂಬುದಾಗಿ ತಿಳಿಯಬೇಕಾಗುತ್ತದೆ. ತಮಗೆ ದೂರು ನೀಡಿರುವ ರಾಧಾಕೃಷ್ಣ ರೈಯವರ ಪತ್ನಿ ತಮ್ಮ ಸಂಘದಲ್ಲಿ ಪ್ರಸ್ತುತ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದು, ಸದ್ರಿ ಸುಜಾತ ರೈಯವರ ವಿರುದ್ಧ ನಾನು ಸಿವಿಲ್ ನ್ಯಾಯಾಲಯದಲ್ಲಿ ದಾವೆ ಸಲ್ಲಿಸಿದ್ದು, ಅದಕ್ಕೆ ಪ್ರತೀಕಾರವಾಗಿ ತಮ್ಮ ಕಛೇರಿಗೆ ಆಕೆಯ ಗಂಡನ ಮೂಲಕ ಸುಳ್ಳು ಅರ್ಜಿಗಳನ್ನು ಕೊಡಿಸುತ್ತಿರುವುದಾಗಿದೆ.
ಅಲ್ಲದೆ ಸುಜಾತ ಆರ್. ರೈಯವರು ಕೇವಲ 0.81 ಎಕ್ರೆ ಆಸ್ತಿ ಹೊಂದಿದ್ದು, ತಮ್ಮ ಬ್ಯಾಂಕಿನಿಂದ ರೂಪಾಯಿ: 8,50,೦೦೦.೦೦ (ಎಂಟು ಲಕ್ಷದ ಐವತ್ತು ಸಾವಿರ)ಕ್ಕಿಂತ ಮೇಲ್ಪಟ್ಟು ಸಾಲ ಪಡೆದಿದ್ದು, ಇಷ್ಟು ಕಡಿಮೆ ವಿಸ್ತೀರ್ಣದ ಕೃಷಿ ಭೂಮಿಗೆ ಇಷ್ಟು ದೊಡ್ಡ ಮೊತ್ತದ ಸಾಲ ನೀಡುವರೇ ಕಾನೂನಿನಲ್ಲಿ ಅವಕಾಶ ಇದೆಯೇ ಎಂಬುದು ನನ್ನ ಪ್ರಶ್ನೆಯಾಗಿದೆ. ಆದ್ದರಿಂದ ದುರುದ್ದೇಶದಿಂದ ತಾವು ನೀಡಿದ ನೋಟೀಸಿನಂತೆ ನನ್ನ ವಿರುದ್ಧ ತಮ್ಮ ಸಂಘದಿಂದ ಕ್ರಮ ಜರುಗಿಸಿದ್ದಲ್ಲಿ, ಪ್ರತಿಯಾಗಿ ಸಾಧ್ಯವಿರುವ ಎಲ್ಲಾ ರೀತಿಯ ಕಾನೂನು ಕ್ರಮಗಳನ್ನು ತಮ್ಮ ವಿರುದ್ಧ ವೈಯುಕ್ತಿಕ ನೆಲೆಯಲ್ಲಿ ಹಾಗೂ ಸಂಘದ ಮೇಲೆ ಜರುಗಿಸುವುದಾಗಿ ಈ ಮೂಲಕ ತಿಳಸುತ್ತಿದ್ದೇನೆ. ಪ್ರಸ್ತುತ ನನ್ನ ವೃದ್ಧಾಪ್ಯದ ಕಾರಣದಿಂದ ನನಗೆ ಸಹಿ ಹಾಕಲು ಕಷ್ಟವಾಗುವುದರಿಂದ ನನ್ನ ಎಡಗೈ ಹೆಬ್ಬೆಟ್ಟಿನ ಗುರುತು ಲಗತ್ತಿಸಿರುತ್ತೇನೆ ಎಂದು ಕುಸುಮಾವತಿ ರೈ ಪತ್ರದಲ್ಲಿ ತಿಳಿಸಿದ್ದಾರೆ.