ದ.12 ರಿಂದ ಬೆಳಗಾವಿಯಲ್ಲಿ ಅನಿರ್ಧಿಷ್ಟಾವಧಿ ಮುಷ್ಕರ

0

ಬೀದಿ ದೀಪ ನಿರ್ವಹಣೆ ಹೊರತುಪಡಿಸಿ
ಉಳಿದೆಲ್ಲಾ ಕರ್ತವ್ಯ ಸ್ಥಗಿತ

ಗ್ರಾ.ಪಂ.ನೌಕರರ ಶ್ರೇಯೋಭಿವೃದ್ಧಿ ಸಂಘದ ಸಮಾಲೋಚನಾ ಸಭೆಯಲ್ಲಿ ತೀರ್ಮಾನ

ಪುತ್ತೂರು: ಬೀದಿ ದೀಪ ನಿರ್ವಹಣೆ ಹೊರತು ಪಡಿಸಿ ಉಳಿದಂತೆ ಪಂಚಾಯತ್‌ಗೆ ಸಂಬಂಧಿಸಿದ ಎಲ್ಲಾ ಕೆಲಸ ಕಾರ್ಯಗಳನ್ನು ಸ್ಥಗಿತಗೊಳಿಸಿ ಡಿ.12ರಿಂದ ಬೆಳಗಾವಿಯಲ್ಲಿ ನಡೆಯಲಿರುವ ಅನಿರ್ಧಿಷ್ಟಾವಧಿ ಮುಷ್ಕರದಲ್ಲಿ ಭಾಗಿಯಾಗುವುದಾಗಿ ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ್ ನೌಕರರ ಶ್ರೇಯೋಭಿವೃದ್ಧಿ ಸಂಘದ ಸಮಾಲೋಚನಾ ಸಭೆಯಲ್ಲಿ ತೀರ್ಮಾನಿಸಲಾಗಿದೆ.


ಸಭೆಯು ನ.12 ರಂದು ತಾಲೂಕು ಅಧ್ಯಕ್ಷ ಹೊನ್ನಪ್ಪರವರ ಅಧ್ಯಕ್ಷತೆಯಲ್ಲಿ ಆರ್ಯಾಪು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.ನಮ್ಮ ಹೋರಾಟ ಪಂಚಾಯತ್‌ನ ವಿರುದ್ಧವಾಗಲಿ, ಅಧಿಕಾರಿಗಳ ವಿರುದ್ಧವಾಗಲೀ ಅಲ್ಲ.ನಮ್ಮ ಬೇಡಿಕೆ ಈಡೇರಿಸಲು ಆಗ್ರಹಿಸಿ ಮುಷ್ಕರ ನಡೆಸಲಾಗುವುದು.ಈ ಮುಷ್ಕರದಲ್ಲಿ ಪ್ರತಿ ಪಂಚಾಯತ್‌ನಿಂದ ಕನಿಷ್ಠ ಇಬ್ಬರು ಭಾಗವಹಿಸುವುದು.ಸಿಬ್ಬಂದಿಗಳಿಗಿರುವ ರಜೆಗಳನ್ನು ಬಳಸಿಕೊಂಡು ಮುಷ್ಕರದಲ್ಲಿ ಭಾಗಿಗಳಾಗುವುದು.ತಮ್ಮ ರಜೆಗಳಿಗೆ ಮುಂಚಿತವಾಗಿ ಸಿಬ್ಬಂದಿಗಳು ಮನವಿ ಸಲ್ಲಿಸಬೇಕು.ಅಲ್ಲದೆ ರಾಜ್ಯ, ಜಿಲ್ಲೆ ಹಾಗೂ ತಾಲೂಕು ಸಂಘಟನೆಯಿಂದಲೂ ಇದಕ್ಕೆ ಪೂರಕವಾಗಿ ಮನವಿ ಮಾಡಲಾಗುವುದು ಎಂದು ಸಭೆಯಲ್ಲಿ ನಿರ್ಧರಿಸಲಾಯಿತು.

ಪಂಚಾಯತ್‌ನಿಂದ ಅನುಮೋದನೆಯಾಗದಿರುವ ಸಿಬ್ಬಂದಿಗಳು ಮುಷ್ಕರದಲ್ಲಿ ಭಾಗಿಗಳಾದರೆ ಅವರಿಗೆ ಆಗುವ ತೊಂದರೆಗಳ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಗಿದ್ದು, ಪಂಪು ಚಾಲಕರು ಸೇರಿದಂತೆ ಪಂಚಾಯತ್‌ನಲ್ಲಿರುವವರು ಎಲ್ಲರೂ ಪಂಚಾಯತ್ ಸಿಬ್ಬಂದಿಗಳೇ ಆಗಿದ್ದು ಅವರು ಮುಷ್ಕರದಲ್ಲಿ ಭಾಗವಹಿಸಲಿದ್ದಾರೆ.ಅನುಮೋದನೆ ದೊರೆಯದ ಸಿಬ್ಬಂದಿಗಳಿಗೆ ಏನೇ ಸಮಸ್ಯೆ ಬಂದರೂ ತಾಲೂಕು, ಜಿಲ್ಲೆ ಹಾಗೂ ರಾಜ್ಯ ಸಂಘಟನೆಗಳ ಸಹಕಾರ, ಬೆಂಬಲ ನೀಡುವುದಾಗಿ ಸಭೆಯಲ್ಲಿ ನಿರ್ಧರಿಸಲಾಗಿದೆ.ಡಿ.೧೨ರಿಂದ ಅನಿರ್ಧಿಷ್ಟವಾಗಿ ನಡೆಯುವ ಮುಷ್ಕರದಲ್ಲಿ ಎಲ್ಲಾ ನೌಕರರು ಕೆಲಸ ಕಾರ್ಯಗಳನ್ನು ಸ್ಥಗಿತಗೊಳಿಸಿ,ಬೆಳಗಾವಿ ಪ್ರತಿಭಟನೆಯಲ್ಲಿ ಭಾಗವಹಿಸಬೇಕು.ಅಲ್ಲಿಗೆ ತೆರಳಲು ಅಸಾಧ್ಯವಾದವರು ಕರ್ತವ್ಯಕ್ಕೆ ಹಾಜರಾಗದೇ ಮನೆಯಲ್ಲಿಯೇ ಇರಬೇಕು ಎಂದು ಸಭೆಯಲ್ಲಿ ತೀರ್ಮಾನಿಸಲಾಯಿತು.
`ಹೊಳಪು’ ಕಾರ್ಯಕ್ರಮಕ್ಕೆ ಗೈರು: ನ.26ರಂದು ಕುಂದಾಪುರದ ಕೋಟದಲ್ಲಿ ನಡೆಯಲಿರುವ ಗ್ರಾಮ ಪಂಚಾಯತ್ ಸದಸ್ಯರ ಕ್ರೀಡಾಕೂಟ `ಹೊಳಪು’ ಕಾರ್ಯಕ್ರಮದಲ್ಲಿ ಪಂಚಾಯತ್ ನೌಕರರೂ ಭಾಗವಹಿಸುವಂತೆ ಆಮಂತ್ರಣ ಬಂದಿದೆ.ಆದರೆ ಈ ಕಾರ್ಯಕ್ರಮದಲ್ಲಿ ನೌಕರರು ಭಾಗವಹಿಸದಿರಲು ಈಗಾಗಲೇ ನಿರ್ಧರಿಸಲಾಗಿದೆ.ನಮ್ಮ ಹೋರಾಟ ನಿರಂತರ.ಇದರಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ತಾಲೂಕು ಅಧ್ಯಕ್ಷ ಹೊನ್ನಪ್ಪ ತಿಳಿಸಿದರು.

ಚುನಾವಣಾ ಕರ್ತವ್ಯ ಸೇರಿದಂತೆ ಪಂಚಾಯತ್ ನೌಕರರು ಎಲ್ಲಾ ರೀತಿಯ ಕೆಲಸಗಳನ್ನು ನಿರ್ವಹಿಸಬೇಕಾಗಿದೆ.ಆದರೂ ಜನರು ಹಾಗೂ ಅಧಿಕಾರಿಗಳಿಂದ ಬೈಸಿಕೊಂಡು ಕೆಲಸ ಮಾಡುವ ನಮಗೆ ದೊರೆಯುವುದು ಶೂನ್ಯ ಮಾತ್ರ.ನಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಸಲ್ಲಿಸಿರುವ ನಮ್ಮ ಮನವಿಗೆ ಯಾವುದೇ ಸ್ಪಂದನೆಯಿಲ್ಲ.ಹೀಗಾಗಿ ಹೋರಾಟ ಅನಿವಾರ್ಯವಾಗಿದೆ.ಹೋರಾಟ ನಮ್ಮ ಉಳಿವಿಗಾಗಿ.ಇದಕ್ಕಾಗಿ ಪ್ರತಿಯೊಬ್ಬ ನೌಕರರೂ ಎಲ್ಲಾ ಕರ್ತವ್ಯಗಳನ್ನು ಸ್ಥಗಿತಗೊಳಿಸಿ ಮುಷ್ಕರದಲ್ಲಿ ಭಾಗವಹಿಸುವ ಮೂಲಕ ಬೆಂಬಲಿಸಬೇಕು ಎಂದು ಹೊನ್ನಪ್ಪ ತಿಳಿಸಿದರು.

ಕಾರ್ಯದರ್ಶಿ ಶಶಿಧರ ಮಾವಿನಕಟ್ಟೆ ಮಾತನಾಡಿ, ಪಂಚಾಯತ್‌ನ ಅಭಿವೃದ್ಧಿ ಕಾರ್ಯಗಳನ್ನು ನಿಭಾಯಿಸುವವರು ನೌಕರರು.ಆದರೂ ನಮಗೆ ಯಾವುದೇ ಸೇವಾ ಭದ್ರತೆಯಿಲ್ಲ.ಕನಿಷ್ಠ ವೇತನದಲ್ಲಿ ದುಡಿಯಬೇಕಾಗಿದೆ.ಪಂಚಾಯತ್ ನೌಕರರನ್ನು ಸಿ ಮತ್ತು ಡಿ ದರ್ಜೆಯ ನೌಕರರನ್ನಾಗಿ ನೇಮಕಗೊಳಿಸಬೇಕು.ಅರ್ಹತೆಯಾಧಾರದಲ್ಲಿ ಮುಂಭಡ್ತಿ ನೀಡಬೇಕು.ಇದಕ್ಕಾಗಿ ನೌಕರರಾದ ನಾವೆಲ್ಲರೂ ಒಗ್ಗಟ್ಟಿನಿಂದ ಮುಷ್ಕರದಲ್ಲಿ ಭಾಗಿಗಳಾಗಿ ಸರಕಾರವನ್ನು ಎಚ್ಚರಿಸಲಾಗುವುದು ಎಂದು ಹೇಳಿದರು.
ಸಂಘದ ಕಾರ್ಯದರ್ಶಿ ಮಮತಾ, ಹೋರಾಟ ಸಮಿತಿ ಅಧ್ಯಕ್ಷ ಗಣೇಶ, ಕಾರ್ಯದರ್ಶಿ ಜ್ಯೋತಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ತಾಲೂಕಿನ ಎಲ್ಲಾ ಪಂಚಾಯತ್‌ಗಳ ನೌಕರರು ಸಭೆಯಲ್ಲಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here