ಆಲಂಕಾರು ಪ್ರಾಥಮಿಕ ಕೃ.ಪ.ಸ.ಸಂಘದ ನಿವೃತ್ತ ಶಾಖಾ ವ್ಯವಸ್ಥಾಪಕ ಸಂತೋಷ್ ರೈ ನಿಧನ

0

ಆಲಂಕಾರು: ಕೊಯಿಲ ಗ್ರಾಮದ ಸಬಳೂರು ಆರ‍್ವಾರ ಬಾಳಿಕೆ ನಿವಾಸಿ ಸಂತೋಷ್ ರೈ(60ವ.)ರವರು ಅಲ್ಪಕಾಲದ ಅನಾರೋಗ್ಯದಿಂದ ಡಿ.8ರಂದು ಸ್ವಗೃಹದಲ್ಲಿ ನಿಧನರಾಗಿದ್ದಾರೆ.


ಸಂತೋಷ್ ರೈಯವರಿಗೆ ವಾರದ ಹಿಂದೆ ಅನಾರೋಗ್ಯ ಕಾಣಿಸಿಕೊಂಡಿದ್ದು ಮಂಗಳೂರಿನ ಎ.ಜೆ.ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ವೆಂಟಿಲೇಟರ್‌ನಲ್ಲಿಯೇ ಇದ್ದು ಚಿಕಿತ್ಸೆ ಪಡೆಯುತ್ತಿದ್ದ ಅವರನ್ನು ಡಿ.8ರಂದು ಮನೆಗೆ ಕರೆದುಕೊಂಡು ಬರಲಾಗಿತ್ತು. ಮಧ್ಯಾಹ್ನದ ವೇಳೆಗೆ ಅವರು ನಿಧನರಾದರೆಂದು ವರದಿಯಾಗಿದೆ. ಸಂತೋಷ್ ರೈಯವರು ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ 30ಕ್ಕೂ ಹೆಚ್ಚು ವರ್ಷಗಳ ಕಾಲ ಸೇವೆ ಸಲ್ಲಿಸಿ ಶಾಖಾ ವ್ಯವಸ್ಥಾಪಕರಾಗಿ ಕಳೆದ ಸೆಪ್ಟಂಬರ್ 30ರಂದು ನಿವೃತ್ತಿಯಾಗಿದ್ದರು. ಇವರು ಆಲಂಕಾರು ವಲಯ ಬಂಟರ ಸಂಘದ ಕೋಶಾಧಿಕಾರಿಯಾಗಿ, ಆತೂರು ಶ್ರೀ ಸದಾಶಿವ ಮಹಾಗಣಪತಿ ದೇವಸ್ಥಾನದ ಉತ್ಸವ ಸಮಿತಿ ಅಧ್ಯಕ್ಷರಾಗಿ, ದೇವಸ್ಥಾನದ ಜೀರ್ಣೋದ್ದಾರ ಸಮಿತಿ, ಏಣಿತ್ತಡ್ಕ ಶಿರಾಡಿ ದೈವಸ್ಥಾನದ ಆಡಳಿತ ಮೊಕ್ತೇಸರರಾಗಿ, ಆರ‍್ವಾರ ಬಾಳಿಕೆ ಟ್ರಸ್ಟ್‌ನ ಅಧ್ಯಕ್ಷರಾಗಿ, ಕೊಯಿಲ-ರಾಮಕುಂಜ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ, ಸಬಳೂರು ಸರಕಾರಿ ಶಾಲಾ ಸುವರ್ಣಮಹೋತ್ಸವ ಸಮಿತಿ ಸೇರಿದಂತೆ ಹಲವು ಸಾಮಾಜಿಕ, ಧಾರ್ಮಿಕ ಸಂಘ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದರು. ದೈವದ ಮಧ್ಯಸ್ಥರಾಗಿಯೂ ಸೇವೆ ಸಲ್ಲಿಸುತ್ತಿದ್ದರು. ಕೃಷಿ, ಹೈನುಗಾರಿಕೆಯಲ್ಲಿಯೂ ತೊಡಗಿಕೊಂಡಿದ್ದರು.

ಮೃತರು ಪತ್ನಿ ಕಾಣಿಯೂರು ಸರಕಾರಿ ಪ.ಪೂ.ಕಾಲೇಜಿನ ಉಪನ್ಯಾಸಕಿ ಶಶಿಕಲಾ ರೈ, ಪುತ್ರಿ ಧೃತಿ ರೈ, ಸಹೋದರರಾದ ಆರ‍್ವಾರ ಪುರಂದರ ರೈ, ನ್ಯಾಯವಾದಿ ದಿನಕರ ರೈ, ಜವಾಹಾರ್ ರೈ, ಪ್ರಕಾಶ್ ರೈ, ಸಹೋದರಿಯರಾದ ಪವಿತ್ರಾ ರೈ, ಸೇವಂತಿ ಶೆಟ್ಟಿಯವರನ್ನು ಅಗಲಿದ್ದಾರೆ. ಮೃತರ ಮನೆಗೆ ಹಲವು ಗಣ್ಯರು ಭೇಟಿ ನೀಡಿ ಸಂತಾಪ ಸೂಚಿಸಿದ್ದಾರೆ.

LEAVE A REPLY

Please enter your comment!
Please enter your name here