ಅಮೃತ ನಗರೋತ್ಥಾನದಲ್ಲಿ ನಗರಸಭೆಗೆ 30 ಕೋಟಿ ರೂ.ಅನುದಾನ; 16.69 ಕೋಟಿ ವೆಚ್ಚದಲ್ಲಿ ರಸ್ತೆ, ಚರಂಡಿ ಕಾಮಗಾರಿಗೆ ಶಂಕು ಸ್ಥಾಪನೆ

0

3 ಕೋಟಿ ಯಷ್ಟು ವಿವಿಧ ಯೋಜನೆಗಳ ಕಾರ್ಯಾದೇಶ ಪತ್ರ ಫಲಾನುಭವಿಗಳಿಗೆ ವಿತರಣೆ

  • ಪ್ರತಿ ವಿಧಾನ ಸಭಾ ಕ್ಷೇತ್ರದಲ್ಲೂ ಕನಿಷ್ಠ 1,500 ಕೋಟಿ ರೂ. ವೆಚ್ಚದ ಅಭಿವೃದ್ಧಿ ಕಾರ್ಯ; ಪ್ರತಾಪ್‌ಸಿಂಹ ನಾಯಕ್
  • ಪುತ್ತೂರು ಸರ್ವ ಜನಾಂಗದ ಅಭಿವೃದ್ಧಿಯ ತೋಟವಾಗುತ್ತಿದೆ: ಸಂಜೀವ ಮಠಂದೂರು
  • ಪುತ್ತೂರು ನಗರಸಭೆ ರಾಜ್ಯದಲ್ಲಿ ಹೆಸರು ಗಳಿಸಬೇಕೆಂಬ ಗುರಿ: ಕೆ.ಜೀವಂಧರ್ ಜೈನ್

ಪುತ್ತೂರು: ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ ಹಂತ-4ರ ಯೋಜನೆಯಡಿ ಪುತ್ತೂರು ನಗರಸಭೆಗೆ ಮಂಜೂರಾಗಿರುವ ರೂ.30 ಕೋಟಿ ಅನುದಾನದ ಪೈಕಿ ರೂ. 16.96 ಕೋಟಿ ವೆಚ್ಚದ ರಸ್ತೆ ಮತ್ತು ಚರಂಡಿ ಕಾಮಗಾರಿಗಳ ಶಂಕು ಸ್ಥಾಪನೆ ಮತ್ತು ಸುಮಾರು ರೂ. 3 ಕೋಟಿಯಷ್ಟು ವಿವಿಧ ಯೋಜನೆಗಳ ಕಾರ್ಯಾದೇಶ ಪತ್ರವನ್ನು ಫಲಾನುಭವಿಗಳಿಗೆ ವಿತರಿಸುವ ಕಾರ್ಯಕ್ರಮ ಡಿ.11ರಂದು ಪುತ್ತೂರು ಪುರಭವನದಲ್ಲಿ ನಡೆಯಿತು. ವಿಧಾನ ಪರಿಷತ್ತು ಸದಸ್ಯ ಪ್ರತಾಪ್ ಸಿಂಹ ನಾಯಕ್ ಅವರು ಶಂಕು ಸ್ಥಾಪನೆ ನೆರವೇರಿಸಿ, ವಿವಿಧ ಯೋಜನೆಗಳ ಕಾರ್ಯಾದೇಶ ಪತ್ರವನ್ನು ಫಲಾನುಭವಿಗಳಿಗೆ ವಿತರಿಸಿದರು.

ಕೇಂದ್ರ, ರಾಜ್ಯದ ಹೊಂದಾಣಿಕೆಯಿಂದ ಪ್ರತಿ ವಿಧಾನಕ್ಷೇತ್ರದಲ್ಲೂ ಕನಿಷ್ಠ ರೂ. 1,500 ಕೋಟಿಯ ಅಭಿವೃದ್ಧಿ ಕಾರ್ಯ:

ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್‌ರವರು ಮಾತನಾಡಿ, ಕರ್ನಾಟಕ ಮತ್ತು ಕೇಂದ್ರ ಸರಕಾರದಿಂದ ಪ್ರತಿ ವಿಧಾನಸಭಾ ಕ್ಷೇತ್ರಗಳಿಗೂ ಹಲವು ಅಭಿವೃದ್ಧಿ ಯೋಜನೆ ಬಂದಿದೆ. ಹಿಂದಿನ ಸರಕಾರ ಇರುವಾಗ ಕನಿಷ್ಠ ರೂ. 300 ರಿಂದ 400 ಕೋಟಿಯ ಅಭಿವೃದ್ಧಿ ಕೆಲಸ ಆಗಿತ್ತು. ಆದರೆ ಈಗಿನ ಕೇಂದ್ರ ಮತ್ತು ರಾಜ್ಯ ಸರಕಾರದ ಹೊಂದಾಣಿಕೆಯಿಂದ ದಕ್ಷಿಣ ಕನ್ನಡ ಜಿಲ್ಲೆಯ ಪ್ರತಿ ವಿಧಾನಸಭಾ ಕ್ಷೇತ್ರದಲ್ಲೂ ಕನಿಷ್ಠ ರೂ. 1,500 ಕೋಟಿಯ ಅಭಿವೃದ್ಧಿ ಕಾರ್ಯ ಆಗಿದೆ. ಒಂದೊಂದು ಬೂತ್ ಮಟ್ಟಕ್ಕೂ ಏನಾದರೂ ಒಂದು ಕಾರ್ಯಕ್ರಮ ಹೋಗಿದೆ. ಸಮಾಜದ ಎಲ್ಲಾ ವರ್ಗದ ಜನರಿಗೂ ಪ್ರಯೋಜನ ಸಿಕ್ಕಿದೆ. ಅಭಿವೃದ್ದಿಯಲ್ಲಿ ನಾವಿದ್ದು, ಬದಲಾದ ಭಾರತನ್ನು ನೋಡುತ್ತಿದ್ದೇವೆ ಎಂದರು.

ಕೇಂದ್ರ, ರಾಜ್ಯ ಸರಕಾರ ಒಂದೇ ಆದಾಗ ಅಭಿವೃದ್ಧಿ ಕಾಣಬಹುದು:

ಸ್ಥಿರ ಮತ್ತು ನಿರಂತರ ಒಂದೇ ಸರಕಾರದಿಂದ ಅಭಿವೃದ್ಧಿ ಸಾಧ್ಯವಿದೆ. ಇದಕ್ಕೆ ಗುಜರಾತ್ ಮಾದರಿಯಾಗಿದೆ. ಒಂದು ಸರಕಾರ ಬಂದಾಗ ಯೋಜನೆ ಜಾರಿಗೊಳಿಸುವುದು, ಇನ್ನೊಂದು ಸರಕಾರ ಬಂದಾಗ ಆ ಯೋಜನೆ ಕೈ ಬಿಟ್ಟು ಅವರದ್ದೇ ಹೊಸ ಯೋಜನೆ ಆರಂಭಿಸುವುದರಿಂದ ಆ ಯೋಜನೆಗೆ ನಿರಂತರತೆ ಇರುವುದಿಲ್ಲ. ಸಂಪತ್ತಿನ ದೃಷ್ಟಿಯಲ್ಲಿ ಗುಜರಾತ್‌ಗಿಂದ ಹೆಚ್ಚು ಅವಕಾಶ ಇರುವ ರಾಜ್ಯ ಕರ್ನಾಟಕ ಎಂದು ಪ್ರತಾಪ್ ಸಿಂಹ ನಾಯಕ್ ಹೇಳಿದರು.

ಪುತ್ತೂರು ಸರ್ವ ಜನಾಂಗದ ಅಭಿವೃದ್ಧಿಯ ತೋಟವಾಗುತ್ತಿದೆ:

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಸಂಜೀವ ಮಠಂದೂರುರವರು ಮಾತನಾಡಿ, ಪ್ರತಿಯೊಬ್ಬ ನಾಗರಿಕನಿಗೂ ಬದುಕು ಕೊಡುವ ಚಿಂತನೆಯಲ್ಲಿ ನಗರಸಭೆ ಯೋಜನೆ ಹಾಕಿಕೊಂಡಿದೆ. ಹಾಗಾಗಿ ಪುತ್ತೂರು ನಗರಸಭೆ ಸರ್ವಜನಾಂಗದ ಅಭಿವೃದ್ಧಿಯ ತೋಟವಾಗುತ್ತಿದೆ ಎಂದರು. ಯಾವಾಗ ಸಮಾಜದ ಕಟ್ಟಕಡೆಯ ವ್ಯಕ್ತಿಯೂ ಸ್ವಾವಲಂಬಿಯಾಗಿ ಜೀವನ ಮಾಡುತ್ತಾನೋ ಆಗ ನಗರಸಭೆಗೂ ಸಾರ್ಥಕತೆ ಬರುತ್ತದೆ. ಆ ಸಾರ್ಥಕತೆಯ ಕಡೆಗೆ ಪುತ್ತೂರು ನಗರಸಭೆ ಹೋಗುತ್ತಿದೆ. ಇದಕ್ಕೆ ಹಿಂದೆ ಆಡಳಿತ ಮಾಡಿದ ಹಿರಿಯರಾದ ದಿ.ರಾಮಚಂದ್ರ ಶೆಣೈ, ರಾಮ್ ಭಟ್ ಇರಬಹುದು. ಅವರ ಆದರ್ಶಗಳು, ಸಮಾಜಮುಖಿ ಚಿಂತನೆಗಳು ಇವತ್ತು ಇಲ್ಲಿ ಆಡಳಿತ ಮಾಡುತ್ತಿರುವ ನಗರಸಭೆ ಸದಸ್ಯರಿಗೆ ಪ್ರೇರಣಾದಾಯಕವಾಗಿದೆ ಎಂದರು.

ಭ್ರಷ್ಟಾಚಾರ ಮುಕ್ತ ದೀರ್ಘಕಾಲಿಕ ಯೋಜನೆಗಳು:

ಪುತ್ತೂರು ನಗರಸಭೆ ಅಧಿಕಾರಕ್ಕೆ ಬಂದ 2 ವರ್ಷದಲ್ಲಿ ಹತ್ತಾರು ಅಭಿವೃದ್ಧಿ ಕೆಲಸ ಆಗಿದೆ. ದೀರ್ಘಕಾಲಿಕ ಯೋಜನೆಗಳು ಪಾರದರ್ಶಕವಾಗಿ, ಭ್ರಷ್ಟಾಚಾರ ಮುಕ್ತವಾಗಿ, ಕಾಲಮಿತಿಯೊಳಗೆ ನಡೆಯುತ್ತಿದೆ. ಉದ್ಯಾನಗಳು, ನಗರಸಭೆ ಸಂಪರ್ಕ ರಸ್ತೆಗಳು, ಎಪಿಎಂಸಿ ರೈಲ್ವೇ ಅಂಡರ್ ಪಾಸ್ ಯೋಜನೆ, ಹಾರಾಡಿಯಿಂದ ರೈಲ್ವೇ ನಿಲ್ದಾಣ ಸಂಪರ್ಕ ರಸ್ತೆ ಅಭಿವೃದ್ದಿ, ನೆಲ್ಲಿಕಟ್ಟೆಯಿಂದ ಮಡಿವಾಳಕಟ್ಟೆ ಸ್ಮಶಾನದ ಮೂಲಕ ಹಾರಾಡಿ ಸಂಪರ್ಕ ರಸ್ತೆ, ವಿವೇಕಾನಂದ ಕಾಲೇಜು ಸಂಪರ್ಕ ಮಾಡುವ ರೈಲ್ವೇ ಬ್ರಿಡ್ಜ್ ಅಗಲೀಕರಣಕ್ಕೆ ಈಗಾಗಲೇ ಮಣ್ಣು ಪರೀಕ್ಷೆ ನಡೆದಿದೆ. ಪುತ್ತೂರು ಕೆಎಸ್ಸಾರ್ಟಿಸಿ ಬಸ್ ನಿಲ್ದಾಣಕ್ಕೆ ಕೋಟಿ ಚೆನ್ನಯ ಹೆಸರು ನಾಮಕರಣ, ರೋಟರಿ ಸಹಯೋಗದೊಂದಿಗೆ ಕಸ ವಿಲೇವಾರಿ ಘಟಕದಲ್ಲಿ ಸಿಎನ್‌ಜಿ ಗ್ಯಾಸ್ ಉತ್ಪಾದನೆ ಘಟಕವೂ ಕೆಲವೇ ದಿನದಲ್ಲಿ ಉದ್ಘಾಟನೆಯಾಗಲಿದೆ. ನಗರಸಭಾ ನೂತನ ಕಾರ್ಯಾಲಯ ಕಟ್ಟಡ ಕಾಮಗಾರಿ ಶೀಘ್ರ ಆರಂಭಗೊಳ್ಳಲಿದೆ. ನಗರದೊಳಗೆ ಮೂಲಭೂತ ಸೌಕರ್ಯಗಳಿಗೆ ಆದ್ಯತೆ ಕೊಡುವ ಕೆಲಸ ನಗರಸಭೆ ಆಡಳಿತದಿಂದ ಆಗಿದೆ. ಮುಂದಿನ ದಿನ ಪುತ್ತೂರು ಜಿಲ್ಲಾ ಕೇಂದ್ರವಾಗಬೇಕಾದರೆ ಎಲ್ಲಾ ಸೌಲಭ್ಯ ನಗರಸಭೆಯಲ್ಲಿ ಇರುವಷ್ಟರ ಮಟ್ಟಿಗೆ ಕಾರ್ಯಗಳು ನಡೆಯುತ್ತಿದೆ ಎಂದು ಸಂಜೀವ ಮಠಂದೂರು ಹೇಳಿದರು. ಜಿಲ್ಲಾ ಅಭಿವೃದ್ದಿಕೋಶ ಯೋಜನಾ ನಿರ್ದೇಶಕ ಅಭಿಷೇಕ್ ಅವರು ಮಾತನಾಡಿದರು.

ಪುತ್ತೂರು ನಗರಸಭೆ ರಾಜ್ಯದಲ್ಲಿ ಹೆಸರು ಗಳಿಸಬೇಕೆಂಬ ಗುರಿ:

ನಗರಸಭೆ ಅಧ್ಯಕ್ಷ ಕೆ ಜೀವಂಧರ್ ಜೈನ್‌ರವರು ಪ್ರಾಸ್ತಾವಿಕವಾಗಿ ಮಾತನಾಡಿ, ಪುತ್ತೂರು ನಗರಸಭೆಯಲ್ಲಿ ಸುಮಾರು 320 ಮನೆಗಳ ದುರಸ್ಥಿಗೆ ಅನುದಾನ ನೀಡುವ ಕಾರ್ಯಕ್ರಮ ನಗರಸಭೆ ಆದ ಬಳಿಕದ ಪ್ರಥಮ ಸಾಧನೆಯಾಗಿದೆ. 65 ಹೊಸ ಮನೆ ನೀಡಲಾಗುತ್ತಿದೆ. ಹಿಂದುಳಿದ ವರ್ಗಗಳಿಗೆ ಶೇ.7.25ರಲ್ಲಿ ಯಾವುದೇ ಸವಲತ್ತು ಕೊಡಲು ಆಗುತ್ತಿರಲಿಲ್ಲ. ಆದರೆ ಈ ಬಾರಿ ವಿಶೇಷವಾಗಿ ಪ್ರತಿ ವಾರ್ಡ್‌ಗೆ 6 ರಂತೆ 185 ಮನೆಗಳಿಗೆ ಅನುದಾನ ನೀಡುತ್ತಿದ್ದೇವೆ. ಒಟ್ಟು ಪುತ್ತೂರು ನಗರಸಭೆಯಲ್ಲಿ ಬಹಳಷ್ಟು ಅಭಿವೃದ್ಧಿ ಕಾರ್ಯ ನಡೆಯುತ್ತಿದೆ. ಕೇವಲ ಅಮೃತ ನಗರೋತ್ಥಾನ ಮಾತ್ರವಲ್ಲದೆ ನಗರಸಭಾ ನಿಧಿಯಿಂದ ಕೂಡಾ ಒಂದಷ್ಟು ಫಲಾನುಭವಿಗಳ ಪಟ್ಟಿ ತಯಾರಿಸಿ ಮನೆ ದುರಸ್ತಿ, ವಿದ್ಯುತ್, ಶೌಚಾಲಯ, ನೀರಿನ ಸೌಲಭ್ಯಕ್ಕೆ ಅನುದಾನ ನೀಡಲಾಗುತ್ತದೆ. ಪ್ರತಿ ವಾರ್ಡ್‌ಗೆ ತಲಾ ರೂ. 25ಲಕ್ಷ ಹಂಚಿಕೆ ಮಾಡಿ ಟೆಂಡರ್ ಕರೆದು ಕಾಮಗಾರಿಗೆ ಚಾಲನೆ ಕೊಡುವ ಕೆಲಸ ಆಗಿದೆ. ಶಾಸಕರ ಮುತುವರ್ಜಿಯಿಂದ ರೂ. 3 ಕೋಟಿ ಅನುದಾನ ಹೆಚ್ಚುವರಿಯಾಗಿ ಬಂದಿದೆ. ಪ್ರತಿ ವಾರ್ಡ್‌ನಲ್ಲಿ ಪಾರ್ಕ್‌ಗಳ ನಿರ್ಮಾಣ ಮಾಡುವ ಉದ್ದೇಶ, ಸ್ಮಾರ್ಟ್ ಸಿಟಿ ಬಸ್‌ನಿಲ್ದಾಣ ಮಾಡುತ್ತಿದ್ದೇವೆ. ಪಾರ್ಕಿಂಗ್‌ನ ವ್ಯವಸ್ಥೆಗೆ ಜಾಗ ನೋಡುತ್ತಿದ್ದೇವೆ. ವಾಣಿಜ್ಯ ಸಂಕೀರ್ಣ ಮಾಡುವ ಚಿಂತನೆ ಮಾಡುತ್ತಿದ್ದೇವೆ. ಸ್ವಚ್ಛತೆಯ ಕೆಲಸ ಮಾಡುವ ಪೌರ ಕಾರ್ಮಿಕರಿಗೆ ಸುಮಾರು 1 ಎಕ್ರೆ ಜಾಗದಲ್ಲಿ ರೂ. 1.7 ಕೋಟಿ ವೆಚ್ಚದಲ್ಲಿ ವಸತಿ ನಿರ್ಮಾಣ ಕೈಗೊಳ್ಳಲಿದ್ದೇವೆ. ನಗರಸಭೆಯ ಮುಖ್ಯರಸ್ತೆ ಅಗಲೀಕರಣ, ಬೆದ್ರಾಳ ಸೇತುವೆ ನಿರ್ಮಾಣ, ಸಂಪರ್ಕ ರಸ್ತೆ, ಹಾರಾಡಿ ರೈಲ್ವೇ ನಿಲ್ದಾಣ ಸಂಪರ್ಕ ರಸ್ತೆಗೆ ಟೆಂಡರ್ ಆಗಿದ್ದು, 15 ದಿವಸದಲ್ಲಿ ಕಾಮಗಾರಿ ನಡೆಯಲಿದೆ. ಈ ರೀತಿಯ ಅಭಿವೃದ್ಧಿ ಕೆಲಸಗಳು ನಿರಂತರವಾಗಿ ನಗರಸಭೆಯಿಂದ ನಡೆಯುತ್ತಿದೆ. ಪುತ್ತೂರಿನ ನಗರಸಭೆ ರಾಜ್ಯದಲ್ಲಿ ಹೆಸರು ಗಳಿಸಬೇಕೆಂಬ ಉದ್ದೇಶವಿಟ್ಟುಕೊಂಡು ಎಲ್ಲಾ 31 ಸದಸ್ಯರು ಯಶಸ್ವಿಯಾಗಿ ಕೆಲಸ ಮಾಡುತ್ತಿದ್ದಾರೆ ಎಂದರು.

ಸನ್ಮಾನ:

ಪುತ್ತೂರು ನಗರಸಭೆಗೆ ಹೆಚ್ಚುವರಿಯಾಗಿ ರೂ. 3 ಕೋಟಿ ಅನುದಾನ ರಾಜ್ಯದಿಂದ ತರಿಸಿಕೊಟ್ಟ ಶಾಸಕ ಸಂಜೀವ ಮಠಂದೂರು ಅವರಿಗೆ ನಗರಸಭೆ ಅಧ್ಯಕ್ಷರು ಮತ್ತು ಸದಸ್ಯರು ಸೇರಿ ಅಭಿನಂದಿಸಿದರು. ಶಾಲು, ಹಾರ, ಫಲಪುಷ್ಪ ನೀಡಿ ಗೌರವಿಸಿದರು.

ನಗರಸಭೆ ಉಪಾಧ್ಯಕ್ಷೆ ವಿದ್ಯಾ ಆರ್ ಗೌರಿ, ಸ್ಥಾಯಿ ಸಮಿತಿ ಅಧ್ಯಕ್ಷ ಬಾಲಚಂದ್ರ, ನಗರಯೋಜನಾ ಪ್ರಾಧಿಕಾರದ ಅಧ್ಯಕ್ಷ ಭಾಮಿ ಅಶೋಕ್ ಶೆಣೈ, ಜಿಲ್ಲಾ ಅಭಿವೃದ್ದಿಕೋಶ ಯೋಜನಾ ನಿರ್ದೇಶಕ ಅಭಿಷೇಕ್, ಜಿಲ್ಲಾ ಅಭಿವೃದ್ದಿ ಕೋಶದ ಕಾರ್ಯಪಾಲಕ ಅಭಿಯಂತರ ಪುರಂದರ ಕೋಟ್ಯಾನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ನಗರಸಭಾ ಸದಸ್ಯರಾದ ಪಿ.ಜಿ ಜಗನ್ನಿವಾಸ ರಾವ್, ಶಿವರಾಮ್ ಸಪಲ್ಯ, ಪ್ರೇಮ್ ಕುಮಾರ್, ಗೌರಿ ಬನ್ನೂರು, ಮನೋಹರ್ ಕಲ್ಲಾರೆ, ಯೂಸುಫ್ ಡ್ರೀಮ್, ಮಾಜಿ ಪುರಸಭಾ ಅಧ್ಯಕ್ಷ ಲೋಕೇಶ್ ಹೆಗ್ಡೆ, ಸಹಾಯಕ ಕಾರ್ಯಪಾಲಕ ಅಭಿಯಂತರ ದುರ್ಗಾಪ್ರಸಾದ್, ಮ್ಯಾನೇಜರ್ ಪಿ.ಎಸ್.ಡಿ ಸೋಜ ಅತಿಥಿಗಳನ್ನು ಗೌರವಿಸಿದರು. ತೆಂಕಿಲ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿನಿಯರು ನಾಡಗೀತೆ ಹಾಡಿದರು. ಪೌರಾಯುಕ್ತ ಮಧು ಎಸ್ ಮನೋಹರ್ ಸ್ವಾಗತಿಸಿದರು. ನಗರಸಭಾ ಸದಸ್ಯ ಪಿ.ಜಿ ಜಗನ್ನಿವಾಸ ರಾವ್ ವಂದಿಸಿದರು. ಅಡಿಕೆ ಪತ್ರಿಕೆ ಉಪ ಸಂಪಾದಕ ನಾ.ಕಾರಂತ ಪೆರಾಜೆ ಕಾರ್ಯಕ್ರಮ ನಿರೂಪಿಸಿದರು. ಇತ್ತೀಚೆಗೆ ನಿಧನರಾದ ನಗರಸಭೆ ಕಸ ಸಾಗಾಟ ವಾಹನದ ಚಾಲಕ ಸಚಿನ್ ಅವರ ಆತ್ಮಕ್ಕೆ ಚಿರಶಾಂತಿ ಕೋರಿ ಒಂದು ನಿಮಿಷದ ಮೌನ ಪ್ರಾರ್ಥನೆಯನ್ನು ಸಭಾ ಕಾರ್ಯಕ್ರಮದ ಆರಂಭದಲ್ಲಿ ಮಾಡಲಾಯಿತು.

ಶಾಸಕ ಸಂಜೀವ ಮಠಂದೂರು ಅವರಿಗೆ ಪುತ್ತೂರಿನ ಮಟ್ಟಿಗೆ ಇರುವ ಕಳಕಳಿ ಬೇರೆಲ್ಲೂ ಇಲ್ಲ. ಅವರು ಮಾಡುತ್ತಿರುವ ಕೆಲಸವನ್ನು ಬಹಳ ಹತ್ತಿರದಿಂದ ನಾನು ನೋಡುತ್ತಿದ್ದೇನೆ. ಅವರಲ್ಲಿ ಆಲೋಚನೆಗಳು ಇದ್ದಾವೆ. ಅದನ್ನು ಅನುಷ್ಟಾನಕ್ಕೆ ತರುವ ಪ್ರಾಮಾಣಿಕ ಪ್ರಯತ್ನ ಇದೆ. ಅವರು ಬೆಂಗಳೂರಲ್ಲಿ ಮಂತ್ರಿಗಳನ್ನು ಭೇಟಿ ಮಾಡಿ ಒಂದಲ್ಲಾ ಒಂದು ರೀತಿಯ ಯೋಜನೆಗಳನ್ನು ಪುತ್ತೂರಿಗೆ ತರುತ್ತಾರೆ. ಅದಕ್ಕೆ ಉದಾಹರಣೆ ಇವತ್ತಿನ ಕೋಟಿಗಟ್ಟಲೆ ಅನುದಾನದ ಕಾರ್ಯಕ್ರಮ. ಈ 5 ವರ್ಷದಲ್ಲಿ ಅತ್ಯಂತ ಹೆಚ್ಚಿನ ದಾಖಲೆಯ ಅಭಿವೃದ್ಧಿ ಕಾರ್ಯ ಅವರಿಂದ ಆಗಿದೆ.‌

ಪ್ರತಾಪ್‌ಸಿಂಹ ನಾಯಕ್, ವಿಧಾನಪರಿಷತ್ ಸದಸ್ಯರು

3 ಕೋಟಿಯಷ್ಟು ಯೋಜನಾ ಕಾರ್ಯಾದೇಶ ಪತ್ರ ವಿತರಣೆ

ಅಮೃತ ನಗರೋತ್ಥಾನ ಯೋಜನೆ ಹಂತ-4ರಡಿ ಶೇ.24.10ರಲ್ಲಿ ಪರಿಶಿಷ್ಟ ಪಂಗಡದ 50 ಮಂದಿಗೆ ಮನೆದುರಸ್ಥಿಗೆ ತಲಾ ರೂ.40 ಸಾವಿರದಂತೆ ಒಟ್ಟು ರೂ.20ಲಕ್ಷ, 15 ಮಂದಿಗೆ ಶೌಚಾಲಯ ನಿರ್ಮಾಣಕ್ಕಾಗಿ ತಲಾ ರೂ. 15ಸಾವಿರದಂತೆ ರೂ.2.25ಲಕ್ಷ, 15 ಮಂದಿಗೆ ವಿದ್ಯುತ್ ಸಂಪರ್ಕ ಸೌಲಭ್ಯಕ್ಕೆ ತಲಾ ರೂ. 13ಸಾವಿರದಂತೆ ರೂ. 1.95ಲಕ್ಷ, 23 ಮಂದಿಗೆ ನೀರಿನ ಸಂಪರ್ಕಕ್ಕೆ ತಲಾ ರೂ. 6ಸಾವಿರದಂತೆ ರೂ. 1.38 ಲಕ್ಷ, 38 ಮಂದಿಗೆ ಹೊಸ ಮನೆ ನಿರ್ಮಾಣಕ್ಕೆ ತಲಾ ರೂ. 3ಲಕ್ಷದಂತೆ 1.14 ಕೋಟಿ. ಶೇ.7.25ರ ಅಡಿಯಲ್ಲಿ 20 ಮಂದಿಗೆ ಮನೆ ದುರಸ್ಥಿಗೆ ತಲಾ ರೂ.40 ಸಾವಿರದಂತೆ ರೂ. 5ಲಕ್ಷ, ಶೌಚಾಲಯ ನಿರ್ಮಾಣಕ್ಕೆ 10 ಮಂದಿಗೆ ತಲಾ ರೂ.15 ಸಾವಿರದಂತೆ ರೂ.1.15ಲಕ್ಷ, ವಿದ್ಯುತ್ ಸಂಪರ್ಕಕ್ಕೆ 10 ಮಂದಿಗೆ ತಲಾ ರೂ. 13ಸಾವಿರದಂತೆ ರೂ. 1.30ಲಕ್ಷ, ನೀರಿನ ಸಂಪರ್ಕಕ್ಕೆ 15 ಮಂದಿಗೆ ತಲಾ ರೂ. 6ಸಾವಿರದಂತೆ ರೂ. 90ಸಾವಿರ, ಹೊಸಮನೆ ನಿರ್ಮಾಣಕ್ಕೆ 15 ಮಂದಿಗೆ ತಲಾ ರೂ. 3ಲಕ್ಷದಂತೆ ರೂ. 4.5 ಕೋಟಿ. ಯೋಜನೆ ಶೇ.7.25ರಲ್ಲಿ ಹಿಂದುಳಿದ ವರ್ಗದ ಫಲಾನುಭವಿಗಳಿಗೆ ಮನೆದುರಸ್ಥಿಗೆ 185 ಮಂದಿಗೆ ತಲಾ ರೂ. 40ಸಾವಿರದಂತೆ ರೂ. 7.3 ಕೋಟಿ, ಯೋಜನೆ ಶೇ.5ರಲ್ಲಿ ವಿಕಲಚೇತನ 12 ಮಂದಿಗೆ ಹೊಸ ಮನೆ ನಿರ್ಮಾಣಕ್ಕೆ ತಲಾ ರೂ. 3ಲಕ್ಷದಂತೆ ರೂ. 3.6 ಕೋಟಿ, ವಿಕಲಚೇತನರು ಚಲಾಯಿಸುವ ದ್ವಿಚಕ್ರವಾಹನಕ್ಕೆ ರೂ. 2.7ಕೋಟಿಯನ್ನು ಇರಿಸಲಾಗಿದ್ದು, ಒಟ್ಟು ಅಂದಾಜು ರೂ. 3 ಕೋಟಿಯಷ್ಟು ಸೌಲಭ್ಯ ವಿತರಣೆ ಮಾಡಲಾಗಿದೆ. ಸಭಾ ಕಾರ್ಯಕ್ರಮದಲ್ಲಿ ಸಾಂಕೇತಿಕವಾಗಿ ಫಲಾನುಭವಿಗಳಿಗೆ ಕಾರ್ಯಾದೇಶ ಪತ್ರ ವಿತರಣೆ ಮಾಡಲಾಯಿತು. ಕಾರ್ಯಾದೇಶ ಪತ್ರವನ್ನು ಶಾಸಕ ಸಂಜೀವ ಮಠಂದೂರು ಮತ್ತು ವಿಧಾನ ಪರಿಷತ್ತು ಸದಸ್ಯ ಪ್ರತಾಪ್ ಸಿಂಹ ನಾಯಕ್‌ರ ವಿತರಣೆ ಮಾಡಿದರು. ನಗರಸಭೆ ಸಿಬ್ಬಂದಿ ಜಯಲಕ್ಷ್ಮೀ ಬೇಕಲ್ ಆದೇಶ ಪತ್ರ ವಿತರಣಾ ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here