ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ‘ಮಮ’ ಪರಿವಾರದ ಸಭೆ- 5 ಅಂಶಗಳ ಕಾರ್ಯಕ್ರಮದ ಸಮಾಲೋಚನೆ

0

ಪುತ್ತೂರು: ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ’ಮಮ’ ಪರಿವಾರದ ಸಭೆಯು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ ಅವರ ಅಧ್ಯಕ್ಷತೆಯಲ್ಲಿ ಡಿ.22ರಂದು ಸಂಜೆ ದೇವಳದ ಸಭಾಭವನದಲ್ಲಿ ನಡೆಯಿತು.

ಮುಳಿಯ ಕೇಶವಪ್ರಸಾದ್ ಅವರು ಮಾತನಾಡಿ, ದೇವಳದಿಂದ 5 ಅಂಶಗಳ ಕಾರ್ಯಕ್ರಮಗಳ ಯೋಜನೆ ಹಾಕಿಕೊಳ್ಳಲಾಗಿದೆ. ಜನವರಿ ತಿಂಗಳಲ್ಲಿ ಭಾರತೀಯ ಪರಂಪರಾಗತ ಕಾರ್ಯಕ್ರಮಗಳನ್ನು ನಡೆಸಲು ಮಮ ಪರಿವಾರದ ವಾರ್ಡ್ ಸಮಿತಿಗಳಿಂದ ಪ್ರತಿಭೆಗಳಿಗೆ ಅವಕಾಶ ಮತ್ತು ಅವರಿಂದ ದೇವರಿಗೆ ಸೇವಾ ರೂಪದಲ್ಲಿ ಕಾರ್ಯಕ್ರಮ ಸಮರ್ಪಣೆಗೆ ಅವಕಾಶ ನೀಡಲಾಗುವುದು. ಹಾಗಾಗಿ ಡಿ.27ರ ಒಳಗಾಗಿ ಭಾಗವಹಿಸುವವರು ಹೆಸರು ನೋಂದಾಯಿಸುವಂತೆ ವಿನಂತಿಸಿದರು. ಇದರ ಜೊತೆಗೆ ದೇವಳದ ಕಡೆಯಿಂದಲೂ ಸ್ವಚ್ಛತಾ ಜಾಗೃತಿ ಮಾಡುವ ಕಾರ್ಯಕ್ರಮ, ಧಾರ್ಮಿಕ ಶಿಕ್ಷಣ ಕೇಂದ್ರದ ಶಿಕ್ಷಕರಿಗೆ ಮತ್ತು ನಿರ್ವಾಹಕರಿಗೆ ಪ್ರಶಿಕ್ಷಣ, ಅಷ್ಟಮಂಗಲ ಪ್ರಶ್ನೆಯಲ್ಲಿ ಕಂಡು ಬಂದಂತೆ ಮಕರ ಸಂಕ್ರಮಣದ ದಿನ ಸಂಜೆ ಗೋಧೋಳಿ ಲಗ್ನದಲ್ಲಿ ದೇವಳದಲ್ಲಿ ಗಿರಿಜಾ ಕಲ್ಯಾಣ ಕಾರ್ಯಕ್ರಮ ಮಾಡಲಾಗುವುದು. ಈ ನಿಟ್ಟಿನಲ್ಲಿ ಭಕ್ತರ ಸಹಕಾರ ಯಾಚಿಸಿದರು.

ನಗರಸಭೆ ಮಾಜಿ ಅಧ್ಯಕ್ಷ ನೆಲ್ಲಿಕಟ್ಟೆ ಜಗದೀಶ್ ಶೆಟ್ಟಿ ಸಹಿತ ಹಲವಾರು ಮಂದಿ ಸಲಹೆ ಸೂಚನೆ ನೀಡಿದರು. ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಬಿ.ಐತ್ತಪ್ಪ ನಾಯ್ಕ್, ರವೀಂದ್ರನಾಥ ರೈ ಬಳ್ಳಮಜಲು, ಶೇಖರ್ ನಾರಾವಿ, ಡಾ. ಸುಧಾ ಎಸ್ ರಾವ್, ವೀಣಾ ಬಿ.ಕೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸದಸ್ಯ ರಾಮಚಂದ್ರ ಕಾಮತ್ ಸ್ವಾಗತಿಸಿ, ರಾಮದಾಸ್ ಗೌಡ ವಂದಿಸಿದರು.

ಗ್ರೋಗ್ರಾಸಕ್ಕೆ ಅವಕಾಶ:

ಮನೆ ಮನೆಗಳಲ್ಲಿ ವಿಶೇಷ ಕಾರ್ಯಕ್ರಮದಲ್ಲಿ ಗೋ ಗ್ರಾಸ ಇಡುವ ಕಾರ್ಯಕ್ರಮ ಇರುತ್ತದೆ. ಅದೇ ರೀತಿ ಮದುವೆ, ಜನ್ಮದಿನದ ವಿಶೇಷ ಕಾರ್ಯಕ್ರಮವನ್ನು ದೇವಳದ ಕಾಮಧೇನು ಗೋ ಶಾಲೆಯಲ್ಲಿ ಗೋಗ್ರಾಸ ನೀಡುವ ಮೂಲಕ ದೇವರ ಸೇವೆ ಮಾಡಲು ಅವಕಾಶವಿದೆ. ಕನಿಷ್ಠ ರೂ. 2ಸಾವಿರ ಒಂದು ದಿನದ ಖರ್ಚನ್ನು ಸಮರ್ಪಣೆ ಮಾಡಿ. ವೈದಿಕರ ಮೂಲಕ ಗೋ ಶಾಲೆಯಲ್ಲಿ ಪೂಜೆ ಮಾಡುವ ಅವಕಾಶವಿದೆ. ಭಕ್ತರು ಸದುಪಯೋಗ ಪಡೆಯಬಹದು.

ಕೇಶವಪ್ರಸಾದ್ ಮುಳಿಯ ಅಧ್ಯಕ್ಷರು
ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಪುತ್ತೂರು

LEAVE A REPLY

Please enter your comment!
Please enter your name here