ಟ್ಯಾಂಕರ್ ಅಡ್ಡಗಟ್ಟಿ ದರೋಡೆ: ದೂರು

0

ಉಪ್ಪಿನಂಗಡಿ: ಕಾರಿನಲ್ಲಿ ಬಂದ ದರೋಡೆಕೋರರ ತಂಡವೊಂದು ಟ್ಯಾಂಕರ್ ಚಾಲಕನಿಗೆ ಹಲ್ಲೆ ನಡೆಸಿ ನಗದು ಹಣ ಸಹಿತ ದಾಖಲೆ ಪತ್ರಗಳನ್ನು ದೋಚಿದ ಘಟನೆ ಶುಕ್ರವಾರ ತಡರಾತ್ರಿ ಶಿರಾಡಿ ಗ್ರಾಮದ ಗಡಿ ದೇವಸ್ಥಾನದ ಬಳಿ ನಡೆದಿದೆ.
ಸುರತ್ಕಲ್ ಕಡಂಬೋಡಿ ಮನೆ ನಿವಾಸಿ 61 ರ ಹರೆಯದ ಅಸ್ಕರ್ ವಿನ್ಸೆಂಟ್ ಸೋನ್ಸ್ ಎಂಬ ಟ್ಯಾಂಕರ್ ಚಾಲಕ ಹಲ್ಲೆಗೀಡಾಗಿ ದರೊಡೆಗೊಳಗಾಗಿರುವ ವ್ಯಕ್ತಿ. ಹಲ್ಲೆಯಿಂದ ಇವರ ಕೈ , ಬಾಯಿ ಹಾಗೂ ಕಣ್ಣಿಗೆ ಹಾನಿಯಾಗಿದ್ದು, ಅವರ ಪರ್ಸ್ ನಲ್ಲಿದ್ದ ೬೦೦೦ ರೂಪಾಯಿ ಹಣವನ್ನು ದರೋಡೆಕೋರರು ಎಗರಿಸಿದ್ದಾರೆ.
ಮಂಗಳೂರಿನ ಕೂಳೂರಿನಿಂದ ಡಾಂಬಾರು ತುಂಬಿದ ಟ್ಯಾಂಕರನ್ನು ಕ್ಲೀನರ್ ತೌಷೀಪ್ ನೊಂದಿಗೆ ಚಲಾಯಿಸಿಕೊಂಡು ಹೋಗುತ್ತಿದ್ದ ವೇಳೆ ಖಾಸಗಿ ಬಸ್ಸೊಂದರಿಂದ ಇಳಿದ ವ್ಯಕ್ತಿಯೋರ್ವ ತನ್ನ ಟ್ಯಾಂಕರನ್ನು ನಿಲ್ಲಿಸಲು ಸೂಚಿಸಿದ್ದು, ನಿಲ್ಲಿಸಲು ನಿರಾಕರಿಸಿದಾಗ ಕೆಎ 19 ಎಂಇ 7353 ನಂಬರ್ ಪ್ಲೇಟ್ ಅಳವಡಿಸಿದ್ದ ಫಾರ್ಚೂನರ್ ಕಾರೊಂದನ್ನು ಅದರ ಚಾಲಕ ನಮ್ಮ ಟ್ಯಾಂಕರ್ ಗೆ ಅಡ್ಡವಾಗಿ ನಿಲ್ಲಿಸಿ, ಕಾರಿನಲ್ಲಿದ್ದ ಮೂವರು ಬಂದು ಟ್ಯಾಂಕರ್ ಕ್ಯಾಬಿನ್ ಒಳಗೆ ಪ್ರವೇಶಿಸಿ ನನ್ನಲ್ಲಿದ್ದ ೬೦೦೦ ರೂ. ಹಣ ಇದ್ದ ಪರ್ಸನ್ನು, ವಾಹನಾ ಚಾಲನಾ ಪರವಾನಿಗೆ ಸಹಿತ ಟ್ಯಾಂಕರ್‌ಗೆ ಸಂಬಂಧಿಸಿದ ದಾಖಲೆಗಳನ್ನು, ಬಿಲ್‌ಗಳನ್ನು ಕಿತ್ತುಕೊಂಡೊಯ್ದಿರುವುದಲ್ಲದೆ, ನನ್ನನ್ನು ಟ್ಯಾಂಕರ್ ನಿಂದ ಕೆಳಗೆ ಎಳೆದು ಹಾಕಿ ನನ್ನ ಮೇಲೆ ಕೈಯಿಂದ ಹೊಡೆದು, ಕಾಲಿನಿಂದ ತುಳಿದು ಹಲ್ಲೆ ನಡೆಸಿರುತ್ತಾರೆ ಎಂದು ಪೊಲೀಸರಿಗೆ ನೀಡಲಾದ ದೂರಿನಲ್ಲಿ ತಿಳಿಸಿರುತ್ತಾರೆ. ಪ್ರಕರಣ ದಾಖಲಿಸಿಕೊಂಡ ಉಪ್ಪಿನಂಗಡಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

LEAVE A REPLY

Please enter your comment!
Please enter your name here