![](https://puttur.suddinews.com/wp-content/uploads/2024/06/Imperial_Manjunatheshwara_-GL-Acharya.gif)
ಪುತ್ತೂರು: ಜೀವನದಲ್ಲಿ ನಾವು ಪರಸ್ಪರ ಸಂಬಂಧಗಳಿಗೆ ಬೆಲೆ ಕೊಡಬೇಕೇ ವಿನಹ ಹಣಕ್ಕಾಗಿ ಅಲ್ಲ. ಹಣದಿಂದ ಸಹಬಾಳ್ವೆ ಎಂದಿಗೂ ಆಗದು. ಎಲ್ಲರೊಂದಿಗೆ ಸಹೋದರತ್ವ ಮನೋಭಾವದಿಂದ ಬಾಳಬೇಕಾದುದು ಇಂದಿನ ಅಗತ್ಯ ಜೊತೆಗೆ ಪ್ರಸ್ತುತ ವರ್ಷದ ಸಿಹಿ-ಕಹಿ ಅನುಭವವನ್ನು ಮರೆತು ಮುಂದಿನ ವರ್ಷ ಪ್ರೀತಿಯ, ಸಂತೋಷದ, ಶಾಂತಿಯ ವರ್ಷ ಎಲ್ಲರದಾಗಲಿ ಎಂದು ಪಿಡಿಜಿ ರಂಗನಾಥ ಭಟ್ ರವರು ಹೇಳಿದರು.
ರೋಟರಿ ಕ್ಲಬ್ ಪುತ್ತೂರು ವತಿಯಿಂದ ಕ್ಲಬ್ ಮಾಜಿ ಅಧ್ಯಕ್ಷ ಝೇವಿಯರ್ ಡಿ’ಸೋಜರವರ ಪ್ರಾಯೋಜಕತ್ವದಲ್ಲಿ ಅವರ ಕೂರ್ನಡ್ಕ ನಿವಾಸದಲ್ಲಿ ಡಿ.29 ರಂದು ಏರ್ಪಡಿಸಿದ ಕ್ರಿಸ್ಮಸ್ ಹಬ್ಬ ಹಾಗೂ ಹೊಸ ವರ್ಷಾಚರಣೆಯ ಕಾರ್ಯಕ್ರಮದಲ್ಲಿ ಅವರು ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.
![](https://puttur.suddinews.com/wp-content/uploads/2023/12/ff059ef3-1c5b-496e-b8ec-f829aca09b7f.jpg)
ಗೌರವ ಅತಿಥಿ, ರೋಟರಿ ಕ್ಲಬ್ ಪುತ್ತೂರು ಮಾಜಿ ಅಧ್ಯಕ್ಷ ಗಿಲ್ಬರ್ಟ್ ಡಿ’ಸೋಜ ಮಾತನಾಡಿ, ರೋಟರಿ ಎಂಬುದು ವಿಶ್ವದಲ್ಲಿ ಒಳ್ಳೆಯ ಸಂಸ್ಥೆಯಾಗಿದೆ. ರೋಟರಿ ಸಂಸ್ಥೆಯು ಚಾರಿಟಿ ಮೂಲಕ ಎಷ್ಟೋ ಜನರ ಬಾಳನ್ನು ಬೆಳಗಿಸಿದೆ. ನಾವು ಮತ್ತೊಬ್ಬರ ಬಾಳಿಗೆ ನೆರವಿನ ಸಹಾಯಹಸ್ತ ನೀಡುವ ಮೂಲಕ ಬೆಳಕಾಗಬೇಕು ಜೊತೆಗೆ ಎಲ್ಲಾ ರಾಷ್ಟ್ರಗಳು ಒಗ್ಗೂಡಿ ಒಂದು ದೇಶ ಎನಿಸಿಕೊಳ್ಳುವಂತಾಗಬೇಕು ಎಂದರು.
ಅಧ್ಯಕ್ಷತೆ ವಹಿಸಿದ ರೋಟರಿ ಪುತ್ತೂರು ಅಧ್ಯಕ್ಷ ಜೈರಾಜ್ ಭಂಡಾರಿ ಮಾತನಾಡಿ, ಪುತ್ತೂರಿನ ಹಿರಿಯ ಕ್ಲಬ್ ಎನಿಸಿದ ರೋಟರಿ ಪುತ್ತೂರು ಜನರ ಮನಸ್ಸಿನಲ್ಲಿ ಉಳಿಯುಂತಹ ಪ್ರಾಜೆಕ್ಟ್ ಗಳನ್ನು ಹಮ್ಮಿಕೊಂಡಿದೆ. ಶಾಂತಿ, ಪ್ರೀತಿಯ ಧ್ಯೋತಕವೆನಿಸಿದ ಈ ಕ್ರಿಸ್ಮಸ್ ಹಾಗೂ ಹೊಸ ವರ್ಷದ ಆಚರಣೆಯನ್ನು ಕ್ಲಬ್ ಮಾಜಿ ಅಧ್ಯಕ್ಷ ಝೇವಿಯರ್ ಡಿ’ಸೋಜರವರು ಸುಂದರವಾಗಿ ಹಮ್ಮಿಕೊಂಡಿದ್ದು, ಝೇವಿಯರ್ ರವರ ಹಿರಿತನ ಹಾಗೂ ಹೃದಯ ಶ್ರೀಮಂತಿಕೆಯಿಂದ ಈ ಕಾರ್ಯಕ್ರಮದಲ್ಲಿ ಅನೇಕರು ಸೇರಿಕೊಂಡು ಕಾರ್ಯಕ್ರಮದ ಕಳೆಯನ್ನು ಹೆಚ್ಚಿಸಿದ್ದಾರೆ ಎಂದರು.
ಮೆರಿಸ್ಸಾ ಲೋಬೋ ಪ್ರಾರ್ಥಿಸಿದರು. ಜಿಲ್ಲಾ ಗವರ್ನರ್ ಆಗಿ ಕರ್ತವ್ಯ ನಿರ್ವಹಿಸಿದ ಪಿಡಿಜಿ ಡಾ.ಭಾಸ್ಕರ್ ಎಸ್, ಪ್ರಕಾಶ್ ಕಾರಂತ್ ಹಾಗೂ ಸಹಕಾರ ರತ್ನ ಪುರಸ್ಕೃತ ಸವಣೂರು ಸೀತಾರಾಮ ರೈ ರವರಿಗೆ ಹೂ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದ ಪ್ರಾಯೋಜಕತ್ವ ವಹಿಸಿದ ಕ್ಲಬ್ ಮಾಜಿ ಅಧ್ಯಕ್ಷ ಪ್ರೊ|ಝೇವಿಯರ್ ಡಿ’ಸೋಜರವರು ಸ್ವಾಗತಿಸಿದರು. ಕಾರ್ಯದರ್ಶಿ ಸುಜಿತ್ ಡಿ. ರೈ ವರದಿ ಮಂಡಿಸಿದರು. ತನುಜಾ ಝೇವಿಯರ್ ಡಿಸೋಜರವರು ವಂದಿಸಿದರು. ಕ್ಲಬ್ ಅಂತರ್ರಾಷ್ಟ್ರೀಯ ಸೇವಾ ನಿರ್ದೇಶಕ ವಿ.ಜೆ ಫೆರ್ನಾಂಡೀಸ್ ಕಾರ್ಯಕ್ರಮ ನಿರೂಪಿಸಿದರು.
ಸಮಾಜಮುಖಿ ಕಾರ್ಯಗಳು.. ಕಮ್ಯೂನಿಟಿ ಸರ್ವಿಸ್ ವತಿಯಿಂದ
ಪ್ರಭಾವತಿ, ಲಿಂಗಪ್ಪ ಗೌಡ, ಕೃಷ್ಣಮ್ಮ ಎಂಬವರಿಗೆ 16500/- ವೆಚ್ಚದ ಮೂರು ವೀಲ್ ಚೇರ್ ಗಳನ್ನು, ಬಾಳಿಲ ವಿದ್ಯಾಬೋಧಿನಿ ಹಿರಿಯ ಪ್ರಾಥಮಿಕ ಶಾಲೆಗೆ ವಾಟರ್ ಫ್ಯೂರಿಫೈಯರ್, ಬಪ್ಪಳಿಗೆ ಅಂಗನವಾಡಿ ಕೇಂದ್ರದಲ್ಲಿ ಪುಸ್ತಕ ಇಡಲು ಕಬಾಟ್, ಕ್ಷೇತ್ರ ಸಂಪನ್ಮೂಲ ಕೇಂದ್ರದ ಅಶಕ್ತ ವಿದ್ಯಾರ್ಥಿಯೋರ್ವರ ವೈದ್ಯಕೀಯ ನಿರ್ವಹಣ ವೆಚ್ಚ ರೂ.15000/-, ಮೊರಾರ್ಜಿ ದೇಸಾಯಿ ಬಲ್ನಾಡು ಶಾಲೆಗೆ ರೂ.14 ಸಾವಿರ, ಪಿಡಿಜಿ ರಂಗನಾಥ ಭಟ್ ರವರು ಹಸ್ತಾಂತರಿಸಿದರು. ಕಮ್ಯೂನಿಟಿ ಸರ್ವಿಸ್ ನಿರ್ದೇಶಕ ಸೋಮಶೇಖರ್ ರೈ ಕಾರ್ಯಕ್ರಮ ನಿರ್ವಹಿಸಿದರು.
ಮೌನ ಪ್ರಾರ್ಥನೆ..
ಕ್ಲಬ್ ಹಿರಿಯ ಸದಸ್ಯ ಹೆರಾಲ್ಡ್ ಮಾಡ್ತಾರವರ ತಾಯಿ ಸೆವ್ರಿನ್ ಮಾಡ್ತಾರವರು ಡಿ.28 ರಂದು ಅಗಲಿದ್ದು, ಅವರ ಆತ್ಮಕ್ಕೆ ಚಿರಶಾಂತಿಯನ್ನು ಭಗವಂತ ಕರುಣಿಸಲೆಂದು ಒಂದು ನಿಮಿಷದ ಮೌನ ಪ್ರಾರ್ಥನೆಯನ್ನು ಸಲ್ಲಿಸಲಾಯಿತು.