![](https://puttur.suddinews.com/wp-content/uploads/2024/06/Imperial_Manjunatheshwara_-GL-Acharya.gif)
ಪುತ್ತೂರು: ಕರ್ನಾಟಕ ವಿಧಾನಪರಿಷತ್ತಿಗೆ ಕರ್ನಾಟಕ ನೈರುತ್ಯ ಪದವೀಧರರ ಕ್ಷೇತ್ರ ಮತ್ತು ನೈರುತ್ಯ ಶಿಕ್ಷಕರ ಕ್ಷೇತ್ರಗಳ ಚುನಾವಣೆಗೆ ಸಂಬಂಧಿಸಿ ಮತಗಟ್ಟೆ ಸಮೀಪ ಪುತ್ತೂರು ಕಿಲ್ಲೆ ಮೈದಾನದ ಸೋಮವಾರದ ಸಂತೆ ನಡೆಯಲಿರುವ ಹಿನ್ನೆಲೆಯಲ್ಲಿ ಸಂತೆಯನ್ನು ರದ್ದುಗೊಳಿಸದೆ ಸಂತೆಯ ಪ್ರವೇಶದ ಮುಖ್ಯ ದ್ವಾರವನ್ನು ಬಂದ್ ಮಾಡಲಾಗುವುದು. ಹಿಂಬಂದಿಯ ಗೇಟಿನ ಮೂಲಕ ಸಾರ್ವಜನಿಕರಿಗೆ ಸಂತೆಗೆ ಆಗಮಿಸಲು ಅವಕಾಶ ಮಾಡಲಾಗಿದೆ ಎಂದು ಪುತ್ತೂರು ತಹಸೀಲ್ದಾರ್ ಕುಂಞಿ ಅಹಮ್ಮದ್ ಅವರು ಪತ್ರಿಕಾ ಮಾದ್ಯಮದವರಿಗೆ ತಿಳಿಸಿದ್ದಾರೆ.
![](https://puttur.suddinews.com/wp-content/uploads/2024/06/IMG20240602104005-1.jpg)
ಮತದಾನ ಪ್ರಕ್ರಿಯೆ ಕಾನೂನು ಸುವ್ಯವಸ್ಥೆ ಕಾಪಾಡುವ ಮತ್ತು ಮುಕ್ತ ಹಾಗು ನ್ಯಾಯೋಚಿತ ನಿಷ್ಪಕ್ಷವಾಗಿ ಚುನಾವಣೆಯನ್ನು ನಡೆಸುವ ಸಲುವಾಗಿ ಜಿಲ್ಲಾಧಿಕಾರಿಗಳ ಆದೇಶದಂತೆ ಕಿಲ್ಲೆ ಮೈದಾನದ ಸೋಮವಾರ ಸಂತೆಯು ಕೂಡಾ ಚುನಾವಣೆ ಸಂದರ್ಭದಲ್ಲಿ ನಡೆಯುತ್ತದೆ. ಚುನಾವಣೆಯ ಮತಗಟ್ಟೆಯ ಸ್ಥಳಕ್ಕೆ ಸುಮರು 250 ಮೀಟರ್ ದೂರದಲ್ಲಿ ಸಂತೆ ನಡೆಯುತ್ತಿದ್ದು, ಮತಗಟ್ಟೆ ಕೇಂದ್ರದ ಮೂಲಕ ಸಂತೆ ನಡೆಯುವ ಮೈದಾನಕ್ಕೆ ಸಂಪರ್ಕ ರಸ್ತೆಯು ಹಾದು ಹೋಗುವುದರಿಂದ ಮತಗಟ್ಟೆಯ ವ್ಯಾಪ್ತಿಯಲ್ಲಿ ಹೆಚ್ಚಿನ ಜನಸಂದಣಿ ಮತ್ತು ವಾಹನ ದಟ್ಟಣೆಯಾಗದಂತೆ ಮುಂಜಾಗ್ರತಕ್ರಮವಾಗಿ ಸಾರ್ವಜನಿಕ ಹಿತದೃಷ್ಟಿಯಿಂದ ಮತ್ತು ಚುನಾವಣೆಯನ್ನು ಸುಗಮವಾಗಿ ನಡೆಸಲು ಕಿಲ್ಲೆ ಮೈದಾನದ ವಾರದ ಸಂತೆಯ ಮುಖ್ಯ ದ್ವಾರವನ್ನು ಮುಚ್ಚಿ ಕಿಲ್ಲೆ ಮೈದಾನದ ಹಿಂಭಾಗದ ಗೇಟಿನ ಮೂಲಕ ಸಾರ್ವಜನಿಕರಿಗೆ ತೆರಳಲು ವ್ಯವಸ್ಥೆ ಕಲ್ಪಿಸಲಾಗಿದೆ ಎಂದವರು ಹೇಳಿದರು.
ರಸ್ತೆಗೆ ಬ್ಯಾರಿಕೇಟ್ ಅಳವಡಿಕೆ:
ಕಿಲ್ಲೆ ಮೈದಾನಕ್ಕೆ ಹೋಂದಿಕೊಂಡಂತೆ ಕೋರ್ಟ್ ರಸ್ತೆಗೆ ಬ್ಯಾರಿಕೇಟ್ ಹಾಕಿ ರಸ್ತೆ ಬಂದ್ ಮಾಡಿ ಮತ್ತು ಕೃತಿಕ ಹೊಟೇಲ್ನಿಂದ ಕೋಟ್ ರಸ್ತೆಗೆ ಹಾದು ಹೋಗುವ ರಸ್ತೆಯನ್ನು ಕೃತಿಕ ಹೊಟೇಲ್ ಮುಂಭಾಗ ಬ್ಯಾರಿಕೇಟ್ ಮೂಲಕ ಬಂದ್ ಮಾಡಿ ವಾಹನ ಸಂಚಾರ ನಿಷೇಧಿಸಲಾಗುವುದು. ಇಲ್ಲಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗುವುದು. ಅದೇ ರೀತಿ ಮಮ್ಮಿ ಕ್ಯಾಂಟೀನ್ ಬಳಿಯಿಂದ ತಾಲೂಕು ಕಚೇರಿ ಮೂಲಕ ಹಾದು ಹೋಗುವ ರಸ್ತೆಗೂ ಬ್ಯಾರಿಕೇಟ್ ಅಳವಡಿಸಿ ವಾಹನ ಸಂಚಾರ ನಿಷೇಧಿಸಲಾಗುವುದು. ಮತದಾರರು ಮತಗಟ್ಟೆಗೆ ತೆರಳಿ ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿದೆ ಎಂದು ತಹಶೀಲ್ದಾರ್ ಹೇಳಿದರು.
ಕೋರ್ಟ್ ಕಲಾಪಕ್ಕೆ ತೊಂದರೆ ಆಗದಂತೆ ಬಂದೋಬಸ್ತ್:
ನ್ಯಾಯಾಲಯದ ದೈನಂದಿನ ಕಲಾಪಗಳಿಗೆ ಯಾವುದೇ ಅಡಚಣೆಯಾಗದಂತೆ ಸೂಕ್ತ ಬಂದೋಬಸ್ತ್ ಕಲ್ಪಿಸುವವಂತೆ ಪೊಲೀಸ್ ಇಲಾಖೆಗೆ ಸೂಚಿಸಲಾಗಿದೆ ಎಂದು ತಹಸೀಲ್ದಾರ್ ಹೇಳಿದರು. ಪತ್ರಿಕಾಗೋಷ್ಟಿಯಲ್ಲಿ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಹನುಮ ರೆಡ್ಡಿ, ಪುತ್ತೂರು ನಗರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಸತೀಶ್ ಜಿ.ಜೆ ಉಪಸ್ಥಿತರಿದ್ದರು.