ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ಶೇ.100 ಸಾಲ ವಸೂಲಾತಿಗೆ ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನಿಂದ ಪ್ರಶಸ್ತಿ

0

ನೆಲ್ಯಾಡಿ: ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸರ್ವತೋಮುಖ ಪ್ರಗತಿಯ ಸಾಧನೆಗೆ ಸಂಬಂಧಿಸಿ ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನಿAದ ನಿರಂತರ ಐದು ವರ್ಷಗಳಿಂದ ವಿಶೇಷ ಸಾಧನೆ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಪ್ರಸ್ತುತ ವರ್ಷ ಸಂಘವು ಶೇ.100 ಸಾಲ ವಸೂಲಾತಿ ಮಾಡಿರುವುದಕ್ಕೆ ಆ.14ರಂದು ನಡೆದ ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಮಹಾಸಭೆಯಲ್ಲಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.


ಸಂಘದ ಅಧ್ಯಕ್ಷ ಉಮೇಶ್ ಶೆಟ್ಟಿ ಪಟ್ಟೆ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಯಾಕರ ರೈ ಕೆ.ಎಂ., ಉಪಾಧ್ಯಕ್ಷ ಕಮಲಾಕ್ಷ ಗೌಡ, ನಿರ್ದೇಶಕರಾದ ಉಷಾ ಅಂಚನ್, ಪ್ರಶಾಂತ ರೈರವರಿಗೆ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಡಾ|ಎಂ.ಎನ್ ರಾಜೇಂದ್ರ ಕುಮಾರ್, ಉಪಾಧ್ಯಕ್ಷ ವಿನಯಕುಮಾರ್, ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕ ರಮೇಶ್, ಜಿಲ್ಲಾ ಸಹಕಾರಿ ಯೂನಿಯನ್‌ನ ಅಧ್ಯಕ್ಷ ಪ್ರಸಾದ್ ಕೌಶಲ್ ಶೆಟ್ಟಿ, ನಿರ್ದೇಶಕರಾದ ಶಶಿಕುಮಾರ್ ರೈ, ಜಯರಾಮ ರೈ, ದೇವಿಪ್ರಸಾದ್ ಶೆಟ್ಟಿ, ಕುಶಾಲಪ್ಪ ಗೌಡ ಪೂವಾಜೆ ಹಾಗೂ ಇತರ ನಿರ್ದೇಶಕರು ಪ್ರಶಸ್ತಿ ಪ್ರಧಾನ ಮಾಡಿದರು.


64 ವರ್ಷಗಳ ಇತಿಹಾಸ ಹೊಂದಿರುವ ಸಂಘವು 2023-24ನೇ ಆರ್ಥಿಕ ವರ್ಷದಲ್ಲಿ 480.80ಕೋಟಿ ರೂ. ವಾರ್ಷಿಕ ವ್ಯವಹಾರ ಮಾಡಿ 1.54ಕೋಟಿ ರೂ.ಲಾಭ ಗಳಿಸಿದೆ. ಸಂಘದಲ್ಲಿ 6259 ಸದಸ್ಯರಿದ್ದು 8.73 ಕೋಟಿ ಪಾಲು ಬಂಡವಾಳವಿರುತ್ತದೆ. 30 ಕೋಟಿ ರೂ.ಠೇವಣಿ ಇದ್ದು, 80 ಕೋಟಿ ರೂ.ಸದಸ್ಯರ ಸಾಲವಿರುತ್ತದೆ. 106 ಕೋಟಿ ರೂ.ದುಡಿಯುವ ಬಂಡವಾಳವಿರುತ್ತದೆ. ಸಂಘವು ನೆಲ್ಯಾಡಿ, ಕೌಕ್ರಾಡಿ, ಇಚ್ಲಂಪಾಡಿ, ಶಿರಾಡಿ, ಗೋಳಿತೊಟ್ಟು, ಕೊಣಾಲು, ಆಲಂತಾಯ ಕಂದಾಯ ಗ್ರಾಮಗಳ ವ್ಯಾಪ್ತಿ ಹೊಂದಿದೆ. ನೆಲ್ಯಾಡಿಯಲ್ಲಿ ಸಂಘದ ಕೇಂದ್ರ ಕಚೇರಿ, ಗೋಳಿತೊಟ್ಟು ಶಾಖೆ, ಶಿರಾಡಿ ಶಾಖೆಗಳಲ್ಲಿ ಎಲ್ಲಾ ರೀತಿಯ ವ್ಯವಹಾರ ಹಾಗೂ ಇಚ್ಲಂಪಾಡಿ ಶಾಖೆಯಲ್ಲಿ ಪಡಿತರ ವ್ಯವಹಾರ ಮಾಡುತ್ತಿದೆ. ಕೇಂದ್ರ ಕಚೇರಿ ಮತ್ತು ಗೋಳಿತೊಟ್ಟು ಶಾಖೆಯು ಸ್ವಂತ ಕಟ್ಟಡದಲ್ಲಿ ವ್ಯವಹಾರ ಮಾಡಿ ಶಿರಾಡಿ ಶಾಖೆಯು ಬಾಡಿಗೆ ಕಟ್ಟಡದಲ್ಲಿ ವ್ಯವಹಾರ ಮಾಡುತ್ತಿದೆ. ಇದೀಗ ಶಿರಾಡಿ ಶಾಖೆಗೆ ಸಂಬAಧಿಸಿದ ಕಟ್ಟಡ ನಿರ್ಮಾಣ ಕೊನೆಯ ಹಂತದಲ್ಲಿದ್ದು ಶೀಘ್ರದಲ್ಲೇ ಲೋಕಾರ್ಪಣೆಗೊಳ್ಳಲಿದೆ.


ಸಂಘದ ಆಡಳಿತ ಮಂಡಳಿಯಲ್ಲಿ 12 ಮಂದಿ ಚುನಾಯಿತ ನಿರ್ದೇಶಕರಿದ್ದು ಅಧ್ಯಕ್ಷರಾಗಿ ನಿರಂತರ 30 ವರ್ಷಗಳಿಂದ ಉಮೇಶ್ ಶೆಟ್ಟಿ ಪಟ್ಟೆ ಕಾರ್ಯನಿರ್ವಹಿಸುತ್ತಿದ್ದಾರೆ. ಉಪಾಧ್ಯಕ್ಷರಾಗಿ ಕಮಲಾಕ್ಷ ಗೌಡ, ನಿರ್ದೇಶಕರಾಗಿ ಜಯಾನಂದ ಬಂಟ್ರಿಯಾಲ್, ಬಾಲಕೃಷ್ಣ ಬಾಣಜಾಲು, ಸರ್ವೋತ್ತಮ ಗೌಡ, ಪ್ರಶಾಂತ್ ರೈ ಸುದರ್ಶನ್, ಉಷಾ ಅಂಚನ್, ಸುಲೋಚನಾ ಡಿ., ಅಣ್ಣು ಬಿ, ಸುಮಿತ್ರ, ಗುರುರಾಜ್ ಭಟ್, ವಲಯ ಮೇಲ್ವಿಚಾರ ವಸಂತ ಎಸ್ ಹಾಗೂ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ದಯಾಕರ ರೈ ಕೆ. ಕಾರ್ಯನಿರ್ವಹಿಸುತ್ತಿದ್ದಾರೆ.

ಉಮೇಶ್ ಶೆಟ್ಟಿ ಪಟ್ಟೆ
ಅಧ್ಯಕ್ಷರು ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ

ಸಾಧನೆ ಸಂತಸ ತಂದಿದೆ:
ನಮ್ಮ ಸಹಕಾರಿ ಸಂಘವು 23 ವರ್ಷಗಳ ಬಳಿಕ ಶೇ.100 ಸಾಲ ವಸೂಲಾತಿ ಮಾಡಿರುವುದು ಸಂತಸ ತಂದಿದೆ. ಈ ಸಾಧನೆಯನ್ನು ಗುರುತಿಸಿ ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಪ್ರಶಸ್ತಿ ನೀಡಿರುವುದಕ್ಕೆ ಆಭಾರಿಯಾಗಿದ್ದೇವೆ. ಈ ಪ್ರಶಸ್ತಿಯನ್ನು ನೀಡಿರುವ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷರಾದ ಡಾ|ಎಂ.ಎನ್ ರಾಜೇಂದ್ರ ಕುಮಾರ್ ಮತ್ತು ನಿರ್ದೇಶಕರಿಗೆ ಅಭಿನಂದನೆಗಳು. ಇದಕ್ಕೆ ಕಾರಣಕರ್ತರಾದ ನಮ್ಮ ಸಂಘದ ಆಡಳಿತ ಮಂಡಳಿ ನಿರ್ದೇಶಕರು, ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಸಿಬ್ಬಂದಿಗಳು ಹಾಗೂ ಸದಸ್ಯರಿಗೆ ಕೃತಜ್ಞತೆಗಳು.

LEAVE A REPLY

Please enter your comment!
Please enter your name here