ಪುತ್ತೂರು: ಪುತ್ತೂರು ವಿಧಾನಸಭಾ ಕ್ಷೇತ್ರದ ವಿವಿಧ ಗ್ರಾಮೀಣ ಭಾಗದಲ್ಲಿ ಕ್ರೀಡಾಂಗಣ ಇದೆ ಆದರೆ ಅವುಗಳು ಆಡಲು ಸುಸಜ್ಜಿತವಾಗಿಲ್ಲ, ಪಂದ್ಯಾಟಕ್ಕೆ ಮೊದಲು ಸಂಘಟಕರೇ ಅದನ್ನು ದುರಸ್ಥಿ ಮಾಡಿ ಆಡುವ ಸ್ಥಿತಿ ಇದೆ. ಸೂಕ್ತ ವ್ಯವಸ್ಥೆ ಇಲ್ಲದ ಕಾರಣ ಬಿಸಿಲಲ್ಲಿ ಆಡುವ ಪರಿಸ್ಥಿತಿ ಇದ್ದು ಇದಕ್ಕಾಗಿ ಕ್ಷೇತ್ರದ ಒಟ್ಟು 10 ಕಡೆಗಳಲ್ಲಿ ಇರುವ ಕ್ರೀಡಾಂಗಣವನ್ನೇ ದುರಸ್ಥಿ ಕಾರ್ಯ ನಡೆಯಲಿದ್ದು ಮುಂದಕ್ಕೆ ರಾತ್ರಿ ವೇಳೆ ಹೊನಲು ಬೆಳಕಿನಲ್ಲೇ ಕ್ರಿಕೆಟ್ ಆಟಕ್ಕೆ ವ್ಯವಸ್ಥೆ ಮಾಡುವುದಾಗಿ ಶಾಸಕ ಅಶೋಕ್ ರೈ ಹೇಳಿದರು.
ಕಾವು ಮಾಣಿಯಡ್ಕದಲ್ಲಿ ನಡೆದ ಕ್ರಿಕೆಟ್ ಪಂದ್ಯಾಟ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಶಾಸಕರು ಮಾಣಿಯಡ್ಕದಲ್ಲಿರುವ ಹೆಲಿಪ್ಯಾಡ್ ತುಂಬಾ ಸುಂದರವಾಗಿದೆ. ಇದನ್ನು ದೊಡ್ಡ ಮೈದಾನವಾಗಿ ಪರಿವರ್ತನೆ ಮಾಡುತ್ತೇನೆ. ಯುವಜನ ಮತ್ತು ಕ್ರೀಡಾ ಇಲಾಖೆಗೆ ಇದನ್ನು ಸೇರಿಸುವ ಮೂಲಕ ಅನುದಾನವನ್ನು ಇಟ್ಟು ದುರಸ್ಥಿ ಮಾಡಲಾಗುವುದು. ಕ್ರೀಡಾಂಗಣದ ಸುತ್ತಲೂ ಬೆಳಕಿನ ವ್ಯವಸ್ಥೆಯನ್ನು ಮಾಡುವ ಮೂಲಕ ಇದನ್ನು ಸುಸಜ್ಜಿತ ಕ್ರೀಡಾಂಗಣವಾಗಿ ಪರಿವರ್ತಿಸಿ ಈ ಭಾಗದ ಗ್ರಾಮೀಣ ಯುವಕರ ಕ್ರೀಡಾಕೂಟಕ್ಕೆ ನೆರವಾಗುವಂತೆ ಮಾಡುತ್ತೇನೆ. ಕ್ರೀಡಾಂಗಣದ ಬಳಿಯೇ ಜಿಮ್ ಸೆಂಟರನ್ನು ಪ್ರಾರಂಭಿಸಿ ಯುವಕರ ಆರೋಗ್ಯದ ಕಡೆಗೂ ಹೆಚ್ಚು ಗಮನಹರಿಸುವಲ್ಲಿ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು. ಆರಂಭದಲ್ಲಿ ಕ್ಷೇತ್ರದ ಒಟ್ಟು ಹತ್ತು ಕ್ರೀಡಾಂಗಣವನ್ನು ಇದೇ ರೀತಿ ಅಭಿವೃದ್ದಿ ಮಾಡಲಾಗುವುದು, ಸ್ಥಳ ದಾಖಲೆ ಸಿದ್ದಪಡಿಸುವಂತೆ ಸ್ಥಳದಿಂದಲೇ ಗ್ರಾಪಂ ಹಾಗೂ ವಿಎಗಳಿಗೆ ಸೂಚನೆಯನ್ನು ನೀಡಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಕೆಪಿಸಿಸಿ ಸಂಯೋಜಕರಾದ ಕಾವು ಹೇಮನಾಥ ಶೆಟ್ಟಿ ಸೂಕ್ತ ಕ್ರೀಡಾಂಗಣದ ವ್ಯವಸ್ಥೆ ಇಲ್ಲದ ಕಾರಣ ಮತ್ತು ಕಾಲೇಜು ಮೈದಾನವನ್ನು ಕ್ರೀಡಾಕೂಟಕ್ಕೆ ನೀಡಲು ಶಿಕ್ಷಣ ಇಲಾಖೆ ಅನುಮತಿ ನೀಡದ ಕಾರಣ ಕ್ರೀಡಾಳುಗಳಿಗೆ ತೊಂದರೆಯಾಗಿದೆ. ಹಗಲು ಹೊತ್ತು ಬಹಳ ಕಷ್ಟದಲ್ಲಿ ಬಿಸಿಲಲ್ಲಿ ಆಡಬೇಕಾದ ಅನಿವಾರ್ಯತೆ ಇದೆ. ಶಾಸಕರ ಈ ಹೊಸ ಯೋಜನೆ ಯುವ ಸಮೂಹಕ್ಕೆ ದೊಡ್ಡ ಕೊಡುಗೆಯಾಗಿದೆ. ಕ್ರೀಡೆಗೆ ನಾವೆಲ್ಲರೂ ಪ್ರೋತ್ಸಾಹ ನೀಡಬೇಕಾದ ಅವಶ್ಯಕತೆ ಇದೆ ಎಂದು ಹೇಳಿದರು.
ವೇದಿಕೆಯಲ್ಲಿ ಜಿಪಂ ಮಾಜಿ ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ, ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ ಎನ್ ಎಸ್ ಯು ಐ ರಾಜ್ಯ ಉಪಾಧ್ಯಕ್ಷ ಫಾರೂಕ್ ಬಾಯಬ್ಬೆ, ನಗರಸಭಾ ಸದಸ್ಯ ಬಶೀರ್ ಪರ್ಲಡ್ಕ ಮೊದಲಾದವರು ಉಪಸ್ಥಿತರಿದ್ದರು.