ನಿಡ್ಪಳ್ಳಿ: ಪಾಣಾಜೆ ಸುಬೋಧ ಪ್ರೌಢಶಾಲೆಯ 2025-26 ನೇ ಸಾಲಿನ ಶೈಕ್ಷಣಿಕ ವರ್ಷದ ಪ್ರಾರಂಭೋತ್ಸವವು ಜೂ.2ರಂದು ಶಾಲಾ ಸಂಚಾಲಕರಾದ ಗಿಳಿಯಾಲು ಮಹಾಬಲೇಶ್ವರ ಭಟ್ಟರ ಅಧ್ಯಕ್ಷತೆಯಲ್ಲಿ ವಿಜೃಂಭಣೆಯಿಂದ ನಡೆಯಿತು.
ಸಂಚಾಲಕರಾದ ಮಹಾಬಲೇಶ್ವರ ಭಟ್ ಹಾಗೂ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಹಾಜಿ.ಎಸ್ ಅಬೂಬಕ್ಕರ್ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಮಹಾಬಲೇಶ್ವರ ಭಟ್ ಶಿಕ್ಷಣದ ಪ್ರಾಮುಖ್ಯತೆ, ವಿದ್ಯಾರ್ಥಿಗಳ ಜವಾಬ್ದಾರಿ ಮತ್ತು ಶಿಸ್ತಿನ ಶಿಕ್ಷಣ ತಮ್ಮ ಯಶಸ್ಸಿಗೆ ಕಾರಣ ಎಂದು ಮಕ್ಕಳಿಗೆ ಕಿವಿ ಮಾತು ಹೇಳಿದರು.
ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಹಾಜಿ.ಎಸ್ ಅಬೂಬಕ್ಕರ್ ಮಾತನಾಡಿ ಶಾಲೆಯಲ್ಲಿ ಮಕ್ಕಳ ಕರ್ತವ್ಯಗಳ ಬಗ್ಗೆ ವಿವರಿಸಿ ಶುಭ ಹಾರೈಸಿದರು. ಬೆಂಗಳೂರಿನ ವಾಂಟಿವಾ ಕಂಪೆನಿಯಲ್ಲಿ ಇಂಜಿನಿಯರಿಂಗ್ ಮೆನೇಜರ್ ಆಗಿರುವ ಶ್ರೀನಿಧಿ ನಿಡುಗಳ ಅವರ ಸಂಸ್ಥೆಯಿಂದ ನೀಡಿದ ಶೈಕ್ಷಣಿಕ ಕಿಟ್ಟನ್ನು ಹಾಗೂ ಇಲಾಖೆ ನೀಡಿದ ಪಠ್ಯಪುಸ್ತಕಗಳನ್ನು ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೆ ವಿತರಿಸಲಾಯಿತು. ಸಂಚಾಲಕರು ನೀಡಿದ ಪೆನ್ನುಗಳನ್ನು ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ ಹಾಗೂ ಶಿಕ್ಷಕೇತರ ಸಿಬ್ಬಂದಿಯವರಿಗೆ ವಿತರಿಸಲಾಯಿತು. ವಿದ್ಯಾರ್ಥಿನಿ ಸಿಂಚನ ಎಸ್ ಪ್ರಾರ್ಥಿಸಿ ಶಾಲಾ ಮುಖ್ಯ ಶಿಕ್ಷಕಿ ನಿರ್ಮಲಾ ಕೆ ಸ್ವಾಗತಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಸುದೀರ್ ಎಸ್ ಪಿ ಶಾಲೆಯಲ್ಲಿ ವಿದ್ಯಾರ್ಥಿಗಳು ಅನುಸರಿಸಬೇಕಾದ ನಿಯಮಗಳನ್ನು ವಿವರಿಸಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಸಹಶಿಕ್ಷಕರು ಶಿಕ್ಷಕೇತರ ಸಿಬ್ಬಂದಿಯವರು ಸಹಕರಿಸಿದರು.