ನೆಲ್ಯಾಡಿ: ಬಜತ್ತೂರು ಸರಕಾರಿ ಹಿ.ಪ್ರಾ.ಶಾಲೆಯಲ್ಲಿ ಎಲ್ಕೆಜಿ ತರಗತಿ ಕೊಠಡಿ ಹಾಗೂ ಶಾಲಾ ಬಸ್ ಸೌಲಭ್ಯದ ಉದ್ಘಾಟನೆ ಜೂ.2ರಂದು ನಡೆಯಿತು.
ಉದ್ಘಾಟಿಸಿ ಮಾತನಾಡಿದ ಶಾಸಕ ಅಶೋಕ್ ಕುಮಾರ್ ರೈ ಅವರು, ಗುಣಮಟ್ಟದ ಶಿಕ್ಷಣಕ್ಕೆ ರಾಜ್ಯ ಸರಕಾರ ಕರ್ನಾಟಕ ಪಬ್ಲಿಕ್ ಸ್ಕೂಲ್ ತೆರೆಯುತ್ತಿದ್ದು, ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ನಾಲ್ಕು ಶಾಲೆಗಳು ಕೆಪಿಎಸ್ ಶಾಲೆಗಳಾಗಿ ಪರಿವರ್ತನೆಗೊಳ್ಳಲಿವೆ. ಕನಿಷ್ಠ 2 ಗ್ರಾಮಗಳಲ್ಲಿ ಒಂದು ಕೆಪಿಎಸ್ ಶಾಲೆಗಳನ್ನು ತೆರೆಯುವ ಯೋಜನೆ ಮುಂದಿನ ದಿನಗಳಲ್ಲಿ ನಡೆಯಲಿದೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್.ಮಾತನಾಡಿ, ಇಲಾಖೆ ವತಿಯಿಂದ ಆಗಬೇಕಾದ ಕೆಲಸವನ್ನು ಮಾಡಿಕೊಡುವುದಾಗಿ ಹೇಳಿದರು. ಗ್ರಾ.ಪಂ.ಅಧ್ಯಕ್ಷ ಗಂಗಾಧರ ಗೌಡ ಪಿ.ಎನ್.ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಣ ಸಮನ್ವಯ ಟ್ರಸ್ಟ್ನ ಅಧ್ಯಕ್ಷರಾದ ಉದಯ ಮಣಿಕ್ಕಳ ಅವರು ಮಾತನಾಡಿ, ಶೈಕ್ಷಣಿಕ ಅಭಿವೃದ್ಧಿಯ ಪ್ರಯತ್ನ ಯಶಸ್ವಿ ಆಗಬೇಕಾದರೆ ಗ್ರಾಮದ ಶಿಕ್ಷಣ ಆಸಕ್ತರು ಕೈ ಜೋಡಿಸಬೇಕು ಎಂದು ಹೇಳಿದರು.
ಗ್ರಾ.ಪಂ.ಉಪಾಧ್ಯಕ್ಷೆ ವಿಮಲಾ ಬೆದ್ರೋಡಿ, ಸದಸ್ಯರಾದ ಉಮೇಶ್ ಓಡ್ರಪಾಲ್, ಪ್ರೆಸಿಲ್ಲಾ ಬೆದ್ರೋಡಿ, ರತ್ನಾ, ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್., ಪ್ರಭಾರ ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಚಕ್ರಪಾಣಿ ಎ.ವಿ., ನವೀನ್, ಡಾ.ರಾಜಾರಾಮ್ ಕೆ.ಬಿ., ಯು.ಟಿ.ತೌಸಿಫ್, ರಾಮಚಂದ್ರ ಆಲಾಜೆ ಮತ್ತಿತರರು ಉಪಸ್ಥಿತರಿದ್ದರು.
ಸಾಮಾಜಿಕ ಕಾರ್ಯಕರ್ತ ವಿಲ್ಪ್ರೆಡ್ ಡಿ.ಸೋಜ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಲಾ ಮುಖ್ಯಶಿಕ್ಷಕ ಮಂಜುನಾಥ ಕೆ.ವಿ. ಸ್ವಾಗತಿಸಿ, ಎಸ್ಡಿಎಂಸಿ ಅಧ್ಯಕ್ಷ ಗೋಪಾಲ ವಳಾಲ್ ವಂದಿಸಿದರು. ಶಿಕ್ಷಕರಾದ ಮೋಹನ್ಚಂದ್ರ, ಪವಿತ್ರಾ ಕಾರ್ಯಕ್ರಮ ನಿರೂಪಿಸಿದರು.
ಶಾಲೆಯಲ್ಲಿ ಮಕ್ಕಳ ಸಂಖ್ಯೆ ಇಳಿಮುಖವಾದಾಗ ಮಕ್ಕಳನ್ನು ಮತ್ತೆ ಸರ್ಕಾರಿ ಶಾಲೆಗೆ ಸೆಳೆಯಲು ಶಿಕ್ಷಣ ಸಮನ್ವಯ ಟ್ರಸ್ಟ್ ಎಂಬ ಸಂಸ್ಥೆ ಹುಟ್ಟು ಹಾಕಲಾಯಿತು. ಆ ಮೂಲಕ ಟ್ರಸ್ಟ್ ಬಸ್ ಖರೀದಿಸಿದೆ. ಜೊತೆಗೆ ಸರ್ಕಾರಿ ಶಾಲೆಯಲ್ಲೇ ಎಲ್ಕೆಜಿಯಿಂದ ಎಸ್ಎಸ್ಎಸ್ಎಲ್ಸಿ ತನಕ ಶಿಕ್ಷಣವನ್ನು ಆಂಗ್ಲಮಾಧ್ಯಮದಲ್ಲಿ ಉಚಿತವಾಗಿ ಪಡೆಯುವಂತಾಗಲು ಟ್ರಸ್ಟ್ ಕಾರ್ಯೋನ್ಮುಖವಾಗಿದೆ.