ಸವಣೂರು ಮತ್ತಷ್ಟು ಪ್ರಗತಿಯನ್ನು ಕಾಣಬೇಕು- ಸವಣೂರು ಸೀತಾರಾಮ ರೈ
ಪುತ್ತೂರು: ಮಂಗಳೂರಿನಲ್ಲಿ ಕೇಂದ್ರ ಕಚೇರಿಯನ್ನು ಹೊಂದಿರುವ ಶ್ರೀ ರಾಮಕೃಷ್ಣ ಕ್ರೆಡಿಟ್ ಕೋ-ಓಪರೇಟಿವ್ ಸೊಸೈಟಿಯ 27ನೇ ಶಾಖೆಯು ಸವಣೂರಿನ ಸಿಂಧೂರ್ ಕಾಂಪ್ಲೆಕ್ಸ್ನ ನೆಲಮಹಡಿಯಲ್ಲಿ ಜೂ.8 ರಂದು ಶುಭಾರಂಭಗೊಂಡಿತು.
ಸವಣೂರು ಮತ್ತಷ್ಟು ಪ್ರಗತಿಯನ್ನು ಕಾಣಬೇಕು- ಸವಣೂರು ಸೀತಾರಾಮ ರೈ
ಶ್ರೀ ರಾಮಕೃಷ್ಣ ಕ್ರೆಡಿಟ್ ಕೋ-ಓಪರೇಟಿವ್ ಸೊಸೈಟಿಯ ನಿರ್ದೇಶಕರಾಗಿರುವ ಸಹಕಾರರತ್ನ ಸವಣೂರು ಕೆ.ಸೀತಾರಾಮ ರೈಯವರು ಶ್ರೀ ರಾಮಕೃಷ್ಣ ಸೊಸೈಟಿಯ 27ನೇ ಶಾಖೆಯನ್ನು ಸವಣೂರಿನಲ್ಲಿ ದೀಪ ಬೆಳಗಿಸಿ, ಉದ್ಘಾಟಿಸಿ, ಮಾತನಾಡಿ ಅಭಿವೃದ್ಧಿಯ ದೃಷ್ಟಿಯಿಂದ ಹೊಸ ಹೊಸ ವ್ಯವಸ್ಥೆಗಳು ಸವಣೂರಿಗೆ ಬರಬೇಕು, ಆಮೂಲಕ ಸವಣೂರು ಮತ್ತಷ್ಟು ಪ್ರಗತಿಯನ್ನು ಕಾಣಬೇಕು ಎಂಬುದು ನನ್ನ ಆಶಯವಾಗಿದ್ದು, ಈ ನಿಟ್ಟಿನಲ್ಲಿ ಸಹಕಾರ ಕ್ಷೇತ್ರದಲ್ಲಿ ಬಹುದೊಡ್ಡ ಸಾಧನೆ ಮಾಡಿರುವ ಶ್ರೀ ರಾಮಕೃಷ್ಣ ಸೊಸೈಟಿಯು ಸವಣೂರಿನಲ್ಲಿ ಆರಂಭಗೊಂಡಿದೆ. ಕೆಲವೇ ತಿಂಗಳುಗಳಲ್ಲಿ ಸವಣೂರಿನಲ್ಲಿ ಸ್ವಂತ ಕಟ್ಟಡಕ್ಕೆ ಆದರ್ಶ ಸಹಕಾರ ಸಂಘದ ಸವಣೂರು ಶಾಖೆ ಮತ್ತು ಕೇಂದ್ರ ಕಚೇರಿಯು ಸ್ಥಳಾಂತರಗೊಳ್ಳಲಿದೆ, ಆ ಬಳಿಕ ಈಗ ಇರುವ ಆದರ್ಶ ಸಹಕಾರ ಸಂಘದ ಸ್ಥಳದಲ್ಲಿ ಶ್ರೀ ರಾಮಕೃಷ್ಣ ಸೊಸೈಟಿಯು ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸಲಿದೆ ಎಂದು ಹೇಳಿ, 30 ವರ್ಷಗಳಿಂದ ಸವಣೂರಿನ ಅಭಿವೃದ್ಧಿಯಾಗಬೇಕು ಎಂಬ ನಿಟ್ಟಿನಲ್ಲಿ ನಾನು ಹತ್ತು ಹಲವು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ, ಅದಕ್ಕೆ ತಮ್ಮೆಲ್ಲರ ಸಹಕಾರ ದೊರೆತಿದೆ. ಸವಣೂರು ಸೇರಿದಂತೆ ಸುತ್ತಮುತ್ತಲಿನ ಗ್ರಾಮದ ಜನರು ಶ್ರೀ ರಾಮಕೃಷ್ಣ ಸೊಸೈಟಿಗೆ ಪೂರ್ಣ ಪ್ರಮಾಣದ ಸಹಕಾರವನ್ನು ನೀಡಬೇಕಾಗಿ ವಿನಂತಿಸಿದರು.
ಸಹಕಾರ ಕ್ಷೇತ್ರದಲ್ಲಿ ಹೊಸದಾಖಲೆ-ಕೆ.ಜೈ ರಾಜ್ ಬಿ.ಶೆಟ್ಟಿ
ಅಧ್ಯಕ್ಷತೆ ವಹಿಸಿದ್ದ ಶ್ರೀ ರಾಮಕೃಷ್ಣ ಕ್ರೆಡಿಟ್ ಕೋ-ಓಪರೇಟಿವ್ ಸೊಸೈಟಿಯ ಅಧ್ಯಕ್ಷ ಕೆ.ಜೈರಾಜ್ ಬಿ.ಶೆಟ್ಟಿರವರು ಮಾತನಾಡಿ ಶ್ರೀ ರಾಮಕೃಷ್ಣ ಸೊಸೈಟಿಯು 1100 ಕೋಟಿ ವ್ಯವಹಾರ, 591 ಕೋಟಿ ಠೇವಣೀ, 510ಕೋಟಿ ಸಾಲ, 16.29 ಕೋಟಿ ಲಾಭಗಳಿಸಿದ್ದು, 16 ವರ್ಷದಿಂದ 25 ಶೇಕಡಾ ಡಿವಿಡೆಂಡ್ನ್ನು ನೀಡುವ ಮೂಲಕ ಸಹಕಾರ ಕ್ಷೇತ್ರದಲ್ಲಿ ಹೊಸದಾಖಲೆಯನ್ನು ಬರೆದಿದೆ ಎಂದರು.
ಸೀತಾರಾಮ ರೈಯವರ ಸಹಕಾರ ಮನೋಭಾವ ಮೆಚ್ಚುವಂತದ್ದು- ವಿಠಲ ಪಿ.ಶೆಟ್ಟಿ
ಶ್ರೀ ರಾಮಕೃಷ್ಣ ಕ್ರೆಡಿಟ್ ಕೋ-ಓಪರೇಟಿವ್ ಸೊಸೈಟಿಯ ನಿರ್ದೇಶಕ ವಿಠಲ ಪಿ. ಶೆಟ್ಟಿರವರು ಮಾತನಾಡಿ ಸವಣೂರಿನಲ್ಲಿ ತನ್ನದೇ ಆದ ಆದರ್ಶ ಸಹಕಾರ ಸಂಸ್ಥೆ ಇದ್ದರೂ, ಶ್ರೀ ರಾಮಕೃಷ್ಣ ಸೊಸೈಟಿಯ ಶಾಖೆಯನ್ನು ಆರಂಭಿಸಲು ಮುಂದೆ ಬಂದಿರುವ ಸೀತಾರಾಮ ರೈಯವರ ಸಹಕಾರ ಮನೋಭಾವ ಮೆಚ್ಚುವಂತದ್ದು ಎಂದು ಪ್ರಶಂಶಿಸಿದರು.
ತುಂಬಾ ಸಂತೋಷದ ವಿಷಯ- ಡಾ,ಬೂಡಿಯಾರ್ ಸಂಜೀವ ರೈ
ಶ್ರೀ ರಾಮಕೃಷ್ಣ ಕ್ರೆಡಿಟ್ ಕೋ-ಓಪರೇಟಿವ್ ಸೊಸೈಟಿಯ ನಿರ್ದೇಶಕ ಡಾ.ಬೂಡಿಯಾರ್ ಸಂಜೀವ ರೈಯವರು ಮಾತನಾಡಿ ಸವಣೂರಿನಲ್ಲಿ ಸೀತಾರಾಮ ರೈಯವರ ಮುತುವರ್ಜಿಯಿಂದ ಶ್ರೀ ರಾಮಕೃಷ್ಣ ಸೊಸೈಟಿಯ ಶಾಖೆ ಆರಂಭವಾಗಿರುವುದು ತುಂಬಾ ಸಂತೋಷದ ವಿಷಯವಾಗಿದೆ ಎಂದರು.
ವೇದಿಕೆಯಲ್ಲಿ ಶ್ರೀ ರಾಮಕೃಷ್ಣ ಕ್ರೆಡಿಟ್ ಕೋ-ಓಪರೇಟಿವ್ ಸೊಸೈಟಿಯ ಮಹಾಪ್ರಬಂಧಕ ಗಣೇಶ್ ಜಿ.ಕೆ, ಸವಣೂರು ಶಾಖಾ ಪ್ರಭಾರ ವ್ಯವಸ್ಥಾಪಕರಾದ ರಾಧಿಕಾ ರೈ ಉಪಸ್ಥಿತರಿದ್ದರು.
ಶ್ರೀ ರಾಮಕೃಷ್ಣ ಸೊಸೈಟಿಯ ನಿರ್ದೇಶಕ ಪಿ.ಬಿ.ದಿವಾಕರ್ ರೈ ಸ್ವಾಗತಿಸಿ, ನಿರ್ದೇಶಕ ಕುಂಬ್ರ ದಯಾಕರ್ ಆಳ್ವ ವಂದಿಸಿದರು. ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ್ ಪಿ ಕಾರ್ಯಕ್ರಮ ನಿರೂಪಿಸಿದರು

ಹುಟ್ಟುಹಬ್ಬದ ಕೇಕ್
ಸಹಕಾರರತ್ನ ಸವಣೂರು ಸೀತಾರಾಮ ರೈಯವರ 78ನೇ ಹುಟ್ಟುಹಬ್ಬ ಜೂ.9 ರಂದು ನಡೆಯಲಿದ್ದು, ಆ ಪ್ರಯುಕ್ತ ಶ್ರೀ ರಾಮಕೃಷ್ಣ ಸೊಸೈಟಿಯ ವತಿಯಿಂದ ಹುಟ್ಟು ಹಬ್ಬದ ಸಲುವಾಗಿ ಕೇಕ್ ಕತ್ತರಿಸಿ, ಸಂಭ್ರಮಿಸಲಾಯಿತು.
ಠೇವಣಿ ಪತ್ರ- ಉಳಿತಾಯ ಖಾತೆಯ ಪುಸ್ತಕ ಹಸ್ತಾಂತರ
ಸವಣೂರು ಶಾಖೆಯ ಪ್ರಥಮ ಠೇವಣಿ ಪತ್ರವನ್ನು ಸವಣೂರು ಸೀತಾರಾಮ ರೈ ಮತ್ತು ಉಳಿತಾಯ ಖಾತೆಯ ಪುಸ್ತುಕವನ್ನು ಸವಣೂರು ಸುಂದರ ರೈಯವರಿಗೆ ಹಸ್ತಾಂತರ ಮಾಡಲಾಯಿತು.
ಗೌರವಾರ್ಪಣೆ
ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದ ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ್ ಪಿ ಹಾಗೂ ಪ್ರಾರ್ಥನೆಗೈದ ಕೃಪಾಲಿ ಮತ್ತು ಮೋಕ್ಷರವರನ್ನು ಗೌರವಿಸಲಾಯಿತು. ಉದ್ಯಮಿ ಸವಣೂರು ಸುಂದರ ರೈ, ನಾಟಿ ವೈದ್ಯ ವಾಸುದೇವ ಇಡ್ಯಾಡಿ, ರಬ್ಬರ್ ಸೊಸೈಟಿಯ ಅಧ್ಯಕ್ಷ ಪ್ರವೀಣ್ ಕುಮಾರ್ ಕೆಡೆಂಜಿಗುತ್ತು, ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ತಾರಾನಾಥ ಕಾಯರ್ಗ, ಮಾಸ್ ಸಂಸ್ಥೆಯ ನಿರ್ದೇಶಕಿ ಸುಧಾ ಎಸ್ ರೈ ಪುಣ್ಚಪ್ಪಾಡಿ, ಮಾಸ್ ಸವಣೂರು ಶಾಖಾ ಮೇನೇಜರ್ ಯತೀಶ್, ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ರಾಜಲಕ್ಷ್ಮಿ ಎಸ್ ರೈ, ಅದರ್ಶ ವಿವಿಧೋದ್ದೇಶ ಸಹಕಾರ ಸಂಘದ ಸವಣೂರು ಶಾಖಾ ಮೇನೇಜರ್ ಇಂದಿರಾ ಅತಿಥಿಗಳನ್ನು ಗೌರವಿಸಿದರು. ಸವಣೂರು ಗ್ರಾ.ಪಂ, ಅಧ್ಯಕ್ಷೆ ಸುಂದರಿ ಸೇರಿದಂತೆ ನೂರಾರು ಮಂದಿ ಉಪಸ್ಥಿತರಿದ್ದರು.