ಉಪ್ಪಿನಂಗಡಿ: ಕಳೆದ ತಿಂಗಳ ಮೇ.30ರಂದು ಸುರಿದ ಭಾರೀ ವರ್ಷ ಧಾರೆಗೆ ಧರೆ ಕುಸಿದು ಮನೆಯ ಹಿಂಭಾಗಕ್ಕೆ ಬಿದ್ದಿದ್ದು, ಮನೆಯಲ್ಲಿರುವ ಅಸಾಹಯಕ ಮಹಿಳೆ ತನ್ನ 3 ಎಳೆಯ ಮಕ್ಕಳೊಂದಿಗೆ ಅಸಹಾಯಕ ಸ್ಥಿತಿಯಲ್ಲಿ ದಿನ ಕಳೆಯುವಂತಹ ಘಟನೆಯೊಂದರ ಬಗ್ಗೆ ಉಪ್ಪಿನಂಗಡಿ ಗ್ರಾಮದ ಹಿರ್ತಡ್ಕ ಎಂಬಲ್ಲಿಂದ ವರದಿಯಾಗಿದೆ.
ಕೆಳ ದಿನಗಳಿಂದ ಮತ್ತೆ ಮಳೆ ನಿರಂತರವಾಗಿ ಸುರಿಯುತ್ತಿದ್ದು, ಮಳೆ ನೀರಿನ ಅಬ್ಬರಕ್ಕೆ ಇಡೀ ಧರೆಯೇ ಮನೆಯ ಮೇಲೆ ಬೀಳುವ ಭೀತಿ ವ್ಯಕ್ತವಾಗಿದೆ. ಆದರೆ ಪಂಚಾಯತ್ ಅಥವಾ ಕಂದಾಯ ಇಲಾಖೆಯವರಿಂದ ಯಾವುದೇ ಸ್ಪಂದನೆ ದೊರಕದೆ ಅಸಹಾಯಕ ಸ್ಥಿತಿಯಲ್ಲಿ ದಿನ ಕಳೆಯುವಂತಾಗಿದೆ ಎಂದು ಉಪ್ಪಿನಂಗಡಿ ಗ್ರಾಮದ ಹಿರ್ತಡ್ಕ ನಿವಾಸಿ ಹಪ್ಸ ಎಂಬ ಮಹಿಳೆ ಪತ್ರಿಕೆ ಮುಂದೆ ತನ್ನ ಅಸಹಾಯಕತೆಯನ್ನು ವ್ಯಕ್ತಪಡಿಸಿದ್ದಾರೆ.
ಮೇ 30ರಂದು ರಾತ್ರಿ ಗುಡ್ಡ ಜರಿದು ಮನೆಯ ಹಿಂಬದಿ ಗೋಡೆಗೆ ಬಿದ್ದಿದ್ದು, ಅದರ ಮಣ್ಣು ಮನೆಯ ಹಿಂಬದಿ ಬಿದ್ದಿದೆ. ಹಫ್ಸ ಅವರ ಗಂಡ 9 ವರ್ಷದ ಹಿಂದೆ ಅಪಘಾತದಲ್ಲಿ ಮೃತಪಟ್ಟಿದ್ದು, ಹಫ್ಸ ಬೀಡಿ ಕಟ್ಟಿಕೊಂಡು ತನ್ನ 3 ಮಕ್ಕಳನ್ನು ಸಲಹಿಕೊಂಡು ಕಷ್ಟದ ಜೀವನ ನಡೆಸುತ್ತಿದ್ದಾರೆ. ಇದೀಗ ಬಂದೆರಗಿದ ಈ ಸಂಕಷ್ಠ ಮಹಿಳೆ ಮತ್ತು ಮಕ್ಕಳನ್ನು ಮತ್ತಷ್ಟು ಕಷ್ಟದ ಕೂಪಕ್ಕೆ ತಳ್ಳಿದೆ. ಮನೆಯ ಮೇಲೆ ಬಿದ್ದಿರುವ ಮಣ್ಣು ತೆಗೆಯುವುದಕ್ಕೂ ಹಣದ ವ್ಯವಸ್ಥೆ ಇಲ್ಲವಾಗಿದ್ದು, ಪಂಚಾಯತ್ನವರು ಕನಿಷ್ಠ ಮಣ್ಣು ತೆಗೆಸಿ ಕೊಡುವುದಕ್ಕಾದರೂ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಸ್ಪಂದನೆ ತೋರಿರುವುದಿಲ್ಲ ಎಂದು ನೋವು ತೋಡಿಕೊಂಡಿದ್ದಾರೆ.
94/ಸಿ ಅರ್ಜಿ ಮಂಜೂರು ಆಗಿಲ್ಲ:
ಕಳೆದ ಕೆಲ ವರ್ಷಗಳಿಂದ 5 ಸೆಂಟ್ಸ್ ಜಾಗದಲ್ಲಿ ಇವರು ಮನೆ ನಿರ್ಮಿಸಿಕೊಂಡಿದ್ದು, ನಿವೇಶನ ಮಂಜೂರು ಮಾಡುವಂತೆ ಕಳೆದ 7 ವರ್ಷಗಳ ಹಿಂದೆ ಅರ್ಜಿ ಕೊಟ್ಟಿದ್ದೇನೆ. ಅದರ ಮಂಜೂರಾತಿಯೂ ಆಗಿಲ್ಲ. ಹಲವು ಬಾರಿ ಗ್ರಾಮ ಪಂಚಾಯತ್, ಗ್ರಾಮಕರಣಿಕರ ಕಚೇರಿಗೆ ಅಲೆದಾಡಿದ್ದೇನೆ. ಯಾವುದೇ ಪ್ರಯೋಜನವಾಗಿಲ್ಲ. ಎಳೆಯ ಮಕ್ಕಳನ್ನು ಹಿಡಿದುಕೊಂಡು ಕಚೇರಿಗೆ ಅಲೆದಾಡಿ ಸಾಕಾಗಿ ಹೋಗಿದೆ ಎಂದು ತನ್ನ ಅಸಹಾಯಕತೆಯನ್ನು ವ್ಯಕ್ತಪಡಿಸಿದ್ದಾರೆ.
ಸೂಕ್ತ ವ್ಯವಸ್ಥೆಗೆ ಪ್ರಯತ್ನಿಸಲಾಗುವುದು: ಕಂದಾಯ ನಿರೀಕ್ಷಕರು
ಹಫ್ಸ ಅವರು ಸರಕಾರಿ ಜಾಗದಲ್ಲಿ ಮನೆ ಕಟ್ಟಿಕೊಂಡಿದ್ದಾರೆ. ಆದರೂ ಪೂರ್ಣ ಪ್ರಮಾಣದಲ್ಲಿ ಮನೆ ಹಾನಿಯಾಗಿದ್ದರೆ ಮಾತ್ರ ಪರಿಹಾರ ನೀಡುವುದಾಗಿದೆ. ಆದರೆ ಇವರ ಮನೆಗೆ ಹಾನಿಯಾಗಿಲ್ಲ, ಪರಿಶೀಲನೆ ನಡೆಸಿ ಸೂಕ್ತ ವ್ಯವಸ್ಥೆಗೆ ಪ್ರಯತ್ನಿಸಲಾಗುವುದು.
ಚಂದ್ರ ನಾಯ್ಕ್, ಕಂದಾಯ ನಿರೀಕ್ಷಕರು, ಉಪ್ಪಿನಂಗಡಿ