ಪುತ್ತೂರು ಗ್ರಾಮಾಂತರ ಪ್ರದೇಶದ ಸಮಸ್ಯೆ ಮಂಡಿಸಿದ ಸದಸ್ಯ ನಿತೀಶ್ ಕುಮಾರ್ ಶಾಂತಿವನ
ಪುತ್ತೂರು: ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ ನೇತೃತ್ವದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಬಿಎಸ್ಎನ್ಎಲ್ ಟೆಲಿಕಾಂ ಸಂಸ್ಥೆಯ ಸಲಹಾ ಸಮಿತಿ ಸಭೆಯು ಜೂ.17ರಂದು ಮಂಗಳೂರು ಪಾಂಡೇಶ್ವರ ಬಿಎಸ್ಎನ್ಎಲ್ ಕಛೇರಿಯಲ್ಲಿ ನಡೆಯಿತು.

ಸಭೆಯಲ್ಲಿ ಟೆಲಿಕಾಂ ದ.ಕ ಜಿಲ್ಲಾ ಸಮಿತಿ ಸದಸ್ಯರಾದ ನಿತೀಶ್ ಕುಮಾರ್ ಶಾಂತಿವನರವರು ಪುತ್ತೂರು ವಿಧಾನಸಭಾ ಕ್ಷೇತ್ರದ ಗ್ರಾಮಾಂತರ ಪ್ರದೇಶದಲ್ಲಿ ಕಂಡು ಬಂದಿರುವ ಮೊಬೈಲ್ ನೆಟ್ವರ್ಕ್ ಸಮಸ್ಯೆಗಳ ಬಗ್ಗೆ ವಿಷಯ ಮಂಡಿಸಿದರು. ಈ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ವಿಟ್ಲ ಪಟ್ಟಣ ಪಂಚಾಯತ್ ವ್ಯಾಪ್ತಿಯ ಆಲಂಗಾರು, ಪುಚ್ಚೆಗುತ್ತು, ಸೇರಾಜೆ, ಮಾಮೇಶ್ವರ, ಬದನಾಜೆ ಪರಿಸರದಲ್ಲಿ, ಕೇಪು ಗ್ರಾಮದ ಸಾರಡ್ಕ, ಕುದ್ದುಪದವು ಪ್ರದೇಶದಲ್ಲಿ, ಅಳಿಕೆ ಗ್ರಾಮದ ಎರುಂಬು ಪರಿಸರದಲ್ಲಿ ಬಿಎಸ್ಎನ್ಎಲ್ ನೆಟ್ವರ್ಕ್ ರೇಂಜ್ನ ಸಮಸ್ಯೆ ಇರುವ ಬಗ್ಗೆ ತಿಳಿಸಲಾಯಿತು. ಬಂಟ್ವಾಳ ತಾಲೂಕು ಪೆರ್ನೆಯಲ್ಲಿ ಬಿಎಸ್ಎನ್ಎಲ್ ಟವರ್ ಆಗ್ಬೇಕು ಎಂಬ ಬೇಡಿಕೆಯನ್ನು ಇಡಲಾಯಿತು. ಪುತ್ತೂರು ತಾಲೂಕಿನ ಕೊಳ್ತಿಗೆ ಗ್ರಾಮದ ಶೇಡಿಗುರಿ ಎಂಬಲ್ಲಿ ಹೊಸತಾಗಿ ನಿರ್ಮಿಸಿರುವ ಟವರ್ ಚಾಲನೆಯಲ್ಲಿ ಇರುವುದಿಲ್ಲ ಎಂಬ ಬಗ್ಗೆ ತಿಳಿಸಲಾಯಿತು. ತಾಲೂಕಿನ ಒಳಮೊಗ್ರು ಗ್ರಾಮದ ಅಜ್ಜಿಕಲ್ಲು ಪರಿಸರದಲ್ಲಿ ನೆಟ್ವರ್ಕ್ ಸಮಸ್ಯೆ ಇದ್ದು ಈ ಬಗ್ಗೆ ಗಮನ ಹರಿಸುವಂತೆ ತಿಳಿಸಲಾಯಿತು. ಕಡಬ ತಾಲೂಕಿನ ಬಜತ್ತೂರು ಗ್ರಾಮದ ಕಾಂಚನದಲ್ಲಿ ಬ್ಯಾಟರಿ ಸಮಸ್ಯೆ ಇದೆ, ಪಾಣಾಜೆ ಅರ್ಲಪದವಿನಲ್ಲಿ ನೆಟ್ವರ್ಕ್ ಸಮಸ್ಯೆ ಹಾಗೇ ಕೆಯ್ಯೂರು ಗ್ರಾಮದ ಎಟ್ಟಿಯಡ್ಕದಲ್ಲಿ ಬಿಎಸ್ಎನ್ಎಲ್ ಟವರ್ ಆಗಿದ್ದು ಆದರೆ ಸಮೀಪದ 1.5 ಕಿ.ಮೀ ವ್ಯಾಪ್ತಿಯ ಕಣಿಯಾರು ಭಾಗಕ್ಕೆ ನೆಟ್ವರ್ಕ್ ಸಮಸ್ಯೆ ಕಂಡು ಬರುತ್ತಿದೆ ಹಾಗೇ ಈಶ್ವರಮಂಗಲ, ನೆಟ್ಟಣಿಗೆ ಮುಡ್ನೂರು ಭಾಗದಲ್ಲಿರುವ ನೆಟ್ವರ್ಕ್ ಸಮಸ್ಯೆಯ ವಿಚಾರವನ್ನು ನಿತೀಶ್ ಕುಮಾರ್ ಶಾಂತಿವನರವರ ಬಿಎಸ್ಎನ್ಎಲ್ ಅಧಿಕಾರಿಗಳ ಗಮನಕ್ಕೆ ತಂದರು.
ಸಭೆಯಲ್ಲಿ ಬಿಎಸ್ಎನ್ಎಲ್ ಸಂಸ್ಥೆಯ ಪಿಜಿಎಂ ನವೀನ್ ಕುಮಾರ್ ಗುಪ್ತಾ, ಎಜಿಎಂ ಜನಾರ್ದನ, ಸಿಎಓ ಸೂರ್ಯನಾರಾಯಣ ನಾಯ್ಕ್, ಎಸ್ಡಿಇ ರಾಘವೇಂದ್ರ ಕೆ ಸೇರಿದಂತೆ ಟೆಲಿಕಾಂ ಸಲಹಾ ಸಮಿತಿ ಸದಸ್ಯರುಗಳು, ಅಧಿಕಾರಿಗಳು ಭಾಗವಹಿಸಿದ್ದರು.
ಒಳಮೊಗ್ರು ಗ್ರಾಮದ ಅಜ್ಜಿಕಲ್ಲು ಪರಿಸರದಲ್ಲಿ ನೆಟ್ವರ್ಕ್ ಇಲ್ಲ, ಕೊಳ್ತಿಗೆ ಶೇಡಿಗುರಿ ಹೊಸ ಟವರ್ ಚಾಲನೆಯಲ್ಲಿಲ್ಲ, ಕೆಯ್ಯೂರಿನ ಕಣಿಯಾರು ಪ್ರದೇಶ, ಪಾಣಾಜೆಯ ಆರ್ಲಪದವು ಭಾಗಗಳಲ್ಲಿ ನೆಟ್ವರ್ಕ್ ಸಮಸ್ಯೆ ಇದೆ.
