ಪುತ್ತೂರು: ಪುತ್ತೂರಿನ ಕಬಕ ಪುತ್ತೂರು ರೈಲು ನಿಲ್ದಾಣ ಅತ್ಯಂತ ಮಹತ್ವದ ಆಯಕಟ್ಟಿನ ಪ್ರದೇಶ. ಇದೊಂದು ಸುಳ್ಯ, ಉಪ್ಪಿನಂಗಡಿ, ಬೆಳ್ತಂಗಡಿಗೆ ಜಂಕ್ಷನ್ ಇದ್ದಂತೆ. ಹಾಗಾಗಿ ನಾನಾ ದೇಗುಲಗಳಿಗೆ ಹೋಗಲೆಂದು ರೈಲು ಮೂಲಕ ಬರುವವರಿಗೆ ಪುತ್ತೂರು ರೈಲ್ವೇ ನಿಲ್ದಾಣವೇ ಇಳಿದಾಣ. ವ್ಯಾಪಾರ, ಅನೇಕ ಮಂದಿ ನಿತ್ಯ ಉದ್ಯೋಗ ನಿಮಿತ್ತ ಮಂಗಳೂರಿಗೆ ರೈಲಿನ ಮೂಲಕ ಹೋಗುತ್ತಾರೆ. ಅವರು ರೈಲು ಹತ್ತುವುದು ಮತ್ತು ಇಳಿಯುವುದು ಪುತ್ತೂರು ರೈಲ್ವೇ ನಿಲ್ದಾಣದಲ್ಲಿ ಹಾಗೆ ಬರುವ ಮತ್ತು ಹೋಗುವ ಪ್ರಯಾಣಿಕರಿಗೆ ರೈಲ್ವೇ ನಿಲ್ದಾಣದ ವಠಾರದಲ್ಲೇ ಇರುವ ಮುಚ್ಚಿಗೆ ಇಲ್ಲದ ಇಂಗು ಗುಂಡಿಯೊಂದು ಅಪಾಯಕಾರಿಯಾಗಿ ಪರಿಣಮಿಸಿದೆ.
ನಿತ್ಯ ಸಾವಿರಾರು ಮಂದಿ ರೈಲ್ವೇ ನಿಲ್ದಾಣಕ್ಕೆ ಹೋಗುವಾಗ ತಮ್ಮ ವಾಹನಗಳನ್ನು ಪಾರ್ಕ್ ಮಾಡಿ ಹೋಗುವ ದಾರಿಯಲ್ಲೇ ಅಪಾಯಕಾರಿ ಇಂಗು ಗುಂಡಿಯೊಂದಿದೆ. ಇದಕ್ಕೆ ಯಾವುದೇ ಮುಚ್ಚಿಗೆ ಇಲ್ಲದೆ ಮಳೆಗಾಲದಲ್ಲಿ ನೀರು ತುಂಬಿದ್ದು ಕೆರೆಯಂತಾಗಿದೆ. ಪ್ರಯಾಣಿಕರು ನಡೆದಾಡುವಾಗ ಸ್ವಲ್ಪ ಎಡವಿದರೂ ಗುಂಡಿಗೆ ಬೀಳುವುದು ಗ್ಯಾರೆಂಟಿ. ಇದರ ಜೊತೆಗೆ ಇಂಗುಗುಂಡಿಯಲ್ಲಿ ಕೊಳೆತ ವಸ್ತುಗಳು, ತ್ಯಾಜ್ಯಗಳು, ಪ್ಲಾಸ್ಟಿಕ್ ಬಾಟಲಿಗಳು ಸೇರಿದ್ದು, ಸಾಂಕ್ರಾಮಿಕ ರೋಗಗಳಿಗೂ ಇದು ನಾಂದಿಯಾಗಲಿದೆ.
ಆದರ್ಶ ರೈಲು ನಿಲ್ದಾಣವಾಗಿ ಮೇಲ್ದರ್ಜೆಗೇರಿದ ಕಬಕ ಪುತ್ತೂರು ರೈಲ್ವೇ ನಿಲ್ದಾಣದಲ್ಲಿ ಈ ರೀತಿಯಾಗಿರುವುದಕ್ಕೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ. ಮುಂದಿನ ಅಪಾಯ ಸಂಭವಿಸುವ ಮೊದಲು ತಕ್ಷಣ ಇಂಗುಗುಂಡಿಗೆ ಮುಚ್ಚಿಗೆ ವ್ಯವಸ್ಥೆ ಕಲ್ಪಿಸುವಂತೆ ಸಾರ್ವಜನಿಕರು ರೈಲ್ವೇ ಇಲಾಖೆಯನ್ನು ಒತ್ತಾಯಿಸಿದ್ದಾರೆ.