ದಯವಿಟ್ಟು ಆನೆ ಹಾವಳಿಗೆ ಶಾಶ್ವತ ಪರಿಹಾರ ಕೊಡಿ – ಶಾಸಕರ ಮುಂದೆ ಅಳಲು ತೋಡಿಕೊಂಡ ಕೊಳ್ತಿಗೆ ಗ್ರಾಮದ ಕೃಷಿಕರು

0

ಅರಣ್ಯ ಸಚಿವರ ಜೊತೆ ಮಾತುಕತೆ ನಡೆಸಿದ್ದೇನೆ, ಆನೆಯನ್ನು ಓಡಿಸಿದ ಬಳಿಕ ಶಾಶ್ವತ ಸೋಲಾರ್ ಬೇಲಿ ಅವಳಡಿಕೆ: ಶಾಸಕ ಅಶೋಕ್ ರೈ ಭರವಸೆ

ಪುತ್ತೂರು: ಕೊಳ್ತಿಗೆ ಗ್ರಾಮ ಪಂಚಾಯತ್ ವ್ಯಾಪ್ತಿ ಸೇರಿದಂತೆ ನೆರೆಯ ಕೆಯ್ಯೂರು, ಮಾಡ್ನೂರು ಗ್ರಾಮಗಳ ವ್ಯಾಪ್ತಿಯಲ್ಲಿ ಕಳೆದ ಒಂದೂವರೆ ವರ್ಷಗಳಿಂದ ನಿರಂತರವಾಗಿ ಕಾಡಾನೆಯೊಂದು ಕೃಷಿ ತೋಟಗಳಿಗೆ ದಾಳಿ ನಡೆಸುತ್ತಿದ್ದು ಹಲವು ಮಂದಿ ಕೃಷಿಕರಿಗೆ ಅಪಾರ ಕೃಷಿ ನಾಶ ಉಂಟಾಗಿದೆ. ಇದಲ್ಲದೆ ಇತ್ತೀಚಿಗೆ ಕಣಿಯಾರು ಅರ್ತ್ಯಡ್ಕ ಎಂಬಲ್ಲಿ ಮಹಿಳೆಯೊಬ್ಬರು ಆನೆ ದಾಳಿಗೆ ಸಾವನ್ನಪ್ಪಿದ್ದಾರೆ. ಈ ಎಲ್ಲಾ ಬೆಳವಣಿಗೆಗಳನ್ನು ಗಮನಿಸಿಕೊಂಡು ಈ ಭಾಗದ ಜನರಿಗೆ ನಿತ್ಯ ಆನೆ ಭಯ ಉಂಟಾಗಿದ್ದು ಸಂಜೆಯಾಗುತ್ತಲೆ ಮನೆಯಿಂದ ಹೊರಬರಲು ಭಯಪಡುತ್ತಿದ್ದಾರೆ. ಅರಣ್ಯ ಇಲಾಖೆಯವರು ಆನೆಯನ್ನು ಅದೆಷ್ಟೇ ಬಾರಿ ಓಡಿಸಿದರೆ ಮತ್ತೆ ಮತ್ತೆ ಆನೆ ಗ್ರಾಮಕ್ಕೆ ದಾಳಿ ಮಾಡುತ್ತಿರುವುದರಿಂದ ಆನೆಯನ್ನು ಶಾಶ್ವತವಾಗಿ ಓಡಿಸುವ ಅಥವಾ ಸ್ಥಳಾಂತರ ಮಾಡುವ ಕೆಲಸ ಆಗಬೇಕು, ಆನೆ ಹಾವಳಿಗೆ ಶಾಶ್ವತ ಪರಿಹಾರವನ್ನು ದೊರಕಿಸಿಕೊಡಬೇಕು ಎಂಬ ನಿಟ್ಟಿನಲ್ಲಿ ಕೊಳ್ತಿಗೆ ಭಾಗದ ಕೃಷಿಕರು ಪುತ್ತೂರು ವಿಧಾನ ಸಭಾ ಕ್ಷೇತ್ರದ ಶಾಸಕ ಅಶೋಕ್ ಕುಮಾರ್ ರೈಯವರ ಮುಂದೆ ತಮ್ಮ ಅಳಲು ತೋಡಿಕೊಳ್ಳುವ ಮೂಲಕ ಮನವಿ ಮಾಡಿಕೊಂಡರು. ಜೂ.21ರಂದು ಕೊಳ್ತಿಗೆ ಗ್ರಾಮ ಪಂಚಾಯತ್ ಕಛೇರಿ ಸಭಾಂಗಣದಲ್ಲಿ ನಡೆದ ಅರಣ್ಯ ಇಲಾಖೆಯ ಅಧಿಕಾರಿಗಳ ಹಾಗೂ ಆನೆ ದಾಳಿಯಿಂದ ಸಮಸ್ಯೆಗೊಳಗಾದ ಕೃಷಿಕರ ಸಭೆಯಲ್ಲಿ ಶಾಸಕರು ಕೃಷಿಕರ ಸಮಸ್ಯೆಗಳನ್ನು ಆಲಿಸಿದರು.


ಕೃಷಿಕರ ಸಮಸ್ಯೆಗಳನ್ನು, ಸಲಹೆಗಳನ್ನು ಆಲಿಸಿಕೊಂಡ ಶಾಸಕರು ಕೆಲವೊಂದು ಭರವಸೆಗಳನ್ನು ಕೃಷಿಕರಿಗೆ ನೀಡಿದರು. ಮುಖ್ಯವಾಗಿ ಆನೆ ವಿಚಾರವಾಗಿ ಈಗಾಗಲೇ ಅರಣ್ಯ ಇಲಾಖೆಯ ಸಚಿವರ ಜೊತೆ ಮಾತುಕತೆಗಳನ್ನು ನಡೆಸಿದ್ದೇನೆ ಹಾಗೇ ಆನೆಯ ಸ್ಥಳಾಂತರ ಬಗ್ಗೆಯೂ ಸರಕಾರಕ್ಕೆ ಬರೆದುಕೊಳ್ಳಲಾಗಿದೆ ಎಂಬ ವಿಚಾರವನ್ನು ತಿಳಿಸಿದ ಶಾಸಕರು ಆನೆಯನ್ನು ಸ್ಥಳಾಂತರ ಮಾಡುವ ವಿಷಯವಾಗಿ ಮಾತನಾಡಿ ಇದು ಅಷ್ಟೊಂದು ಸುಲಭದ ಕೆಲಸವಲ್ಲ ಇದಕ್ಕೆ ಸರಕಾರದ ಮಟ್ಟದಲ್ಲಿ ಅನುಮತಿಯೂ ಬೇಕಾಗುತ್ತದೆ. ಇದಲ್ಲದೆ ಸುಮಾರು ೮ ಪಳಗಿದ ಆನೆಗಳು ಕೂಡ ಬೇಕಾಗುತ್ತದೆ. ಸಾಕಷ್ಟು ಪೂರ್ವ ತಯಾರಿ ಕೂಡ ಬೇಕಾಗುತ್ತದೆ.ನಮ್ಮದು ಗುಡ್ಡಗಾಡು ಪ್ರದೇಶವಾಗಿರುವುದರಿಂದ ಆನೆಯನ್ನು ಹಿಡಿದು ಸ್ಥಳಾಂತರ ಮಾಡುವುದು ಅಷ್ಟು ಸುಲಭದ ಕೆಲಸವಲ್ಲ ಎಂಬ ವಿಚಾರವನ್ನು ತಿಳಿಸಿದರು. ಆದ್ದರಿಂದ ಈಗಾಗಲೇ ಒಂದೆರಡು ಆನೆಗಳು ಇರುವ ಬಗ್ಗೆ ಅರಣ್ಯ ಇಲಾಖೆಯ ಅಧಿಕಾರಿಗಳು ಗಮನಕ್ಕೆ ತಂದಿದ್ದಾರೆ. ಈ ಆನೆಗಳು ಕೇರಳ ಕಡೆಯಿಂದ ನಮ್ಮೂರಿಗೆ ಬಂದಿವೆ ಎಂಬ ಮಾಹಿತಿ ಕೂಡ ಇದೆ. ಆದ್ದರಿಂದ ಈ ಆನೆಗಳು ಎಲ್ಲಿಂದ ಬಂದಿದ್ದವೋ ಅಲ್ಲಿಗೆ ಮತ್ತೆ ಅಟ್ಟಿಸುವ ಕೆಲಸ ಮಾಡಬೇಕಾಗುತ್ತದೆ. ಹೀಗೆ ಆನೆಗಳನ್ನು ಹಿಮ್ಮೆಟ್ಟಿಸಿದ ಬಳಿಕ ಮತ್ತೆ ಬಾರದಂತೆ ಸೋಲಾರ್ ತಂತಿ ಬೇಲಿಯನ್ನು ಹಾಕುವ ಕಾರ್ಯ ಮುಂದುವರೆಯಲಿದೆ ಎಂದು ಶಾಸಕ ಅಶೋಕ್ ರೈ ಭರವಸೆ ನೀಡಿದರು. ಈಗಾಗಲೇ ಆನೆಗುಂಡಿ ಪ್ರದೇಶದಲ್ಲಿ 4 ಕಿಲೋ ಮೀಟರ್ ಸೋಲಾರ್ ತಂತಿ ಬೇಲಿ ಹಾಕುವ ಕೆಲಸ ಆಗಿದೆ. ಇನ್ನು 5 ಕಿಲೋ ಮೀಟರ್ ಸೋಲಾರ್ ತಂತಿ ಬೇಲಿ ರಚನೆಗೆ ಟೆಂಡರ್ ಕೂಡ ಆಗಿದೆ ಎಂಬ ವಿಚಾರವನ್ನು ತಿಳಿಸಿದರು.


ಕೇರಳ ಭಾಗದಿಂದ ಬರುವ ಆನೆಗಳಿವು
ಅದೆಷ್ಟೋ ವರ್ಷಗಳ ಹಿಂದೆಯೇ ಕೊಳ್ತಿಗೆ ಗ್ರಾಮದಲ್ಲಿ ಆನೆಗಳು ಕಂಡಿದ್ದು ಇಲ್ಲ ಆದ್ದರಿಂದ ಪ್ರಸ್ತುತ ಇರುವ ಒಂದೆರಡು ಆನೆಗಳು ನೆರೆಯ ಕೇರಳ ಭಾಗದಿಂದ ಇಲ್ಲಿಗೆ ಬಂದಿದ್ದು ಆಗಿವೆ. ಕೇರಳ ಅರಣ್ಯ ಇಲಾಖೆಯವರು ಈ ಹಿಂದೆ ಅವರಿಗೆ ಸೇರಿದ ಅರಣ್ಯ ವ್ಯಾಪ್ತಿಯಲ್ಲಿ ಸೋಲಾರ್ ತಂತಿ ಬೇಲಿ ಹಾಕಿರುವ ಕಾರಣ ನಮ್ಮ ಭಾಗಕ್ಕೆ ಬಂದ ಎರಡು ಆನೆಗಳು ಕೇರಳದ ಕಡೆಗೆ ಹೋಗಲು ಸಾದ್ಯವಾಗದೆ ಇಲ್ಲೇ ಉಳಿದುಕೊಂಡಿವೆ. ಆಹಾರವನ್ನು ಹುಡುಕಿಕೊಂಡು ಅವುಗಳು ನಾಡಿಗೆ ಬರುತ್ತಿದೆ. ಸಣ್ಣ ಅಡಿಕೆ ಸಸಿ, ತೆಂಗಿನ ಸಸಿ ಹಾಗೂ ಬಾಳೆಗಿಡಗಳನ್ನು ನಾಶ ಮಾಡುತ್ತಿದೆ. ಇಲ್ಲೇ ಉಳಿದಿರುವ ಎರಡು ಆನೆಗಳನ್ನು ಮತ್ತೆ ಕೇರಳದ ಕಾಡಿಗೆ ಅಟ್ಟುವ ಕೆಲಸ ಇಲಾಖೆಯಿಂದ ಆಗಬೇಕು ಎಂದು ಸಭೆಯಲ್ಲಿದ್ದ ಸತ್ಯನಾರಾಯಣ ಭಟ್, ಕೆ.ಎಸ್.ವೆಂಕಟ್ರಮಣ ಗೌಡ, ಪವನ್ ಡಿ.ಜಿ, ಶ್ರೀದರ್ ಪೂಜಾರಿ ಚಾಲೆಪಡ್ಪು, ಲೋಕೇಶ್ ಪೆರ್ಲಂಪಾಡಿ ಸೇರಿದಂತೆ ಕೃಷಿಕರು ಆಗ್ರಹಿಸಿದರು.


ಆನೆ ಇದೆ ಎಂಬ ಬಗ್ಗೆ ಮಾಹಿತಿ ಕೊಡಿ
ಗ್ರಾಮಸ್ಥರಾದ ಲೋಕೇಶ್ ಪೆರ್ಲಂಪಾಡಿ ಮಾತನಾಡಿ, ಗ್ರಾಮಕ್ಕೆ ಕಾಡಾನೆ ಬಂದಿದೆಯೋ ಇಲ್ಲವೋ ಎಂಬುದು ನಮಗೆ ಗೊತ್ತಾಗುತ್ತಿಲ್ಲ. ಹಠಾತ್ತನೆ ಆನೆ ಎದುರು ಸಿಕ್ಕಿದರೆ ಯಾರಿಗೂ ಏನೂ ಮಾಡುವ ಹಾಗಿಲ್ಲ . ಆನೆ ಬಂದ ವಿಚಾರ ಅರಣ್ಯ ಇಲಾಖೆಯವರ ಗಮನಕ್ಕೆ ಬಂದರೆ ತಕ್ಷಣ ಅದನ್ನು ಗ್ರಾಮಸ್ಥರಿಗೆ ತಿಳಿಸಬೆಕು. ಶಾಲೆಯ ಮಕ್ಕಳನ್ನು ಕರೆದುಕೊಂಡು ಹೋಗುವುದು, ಬರುವುದು ನಡೆಯುತ್ತಿರುವಾಗ ಆನೆಗಳು ಬಂದಲ್ಲಿ ಜನ ಭಯಗೊಳ್ಳುತ್ತಾರೆ. ಆನೆಗಳು ಬಂದರೆ ಇಲಾಖೆ ಸೈರನ್ ಮೂಲಕ ಅಥವಾ ಅನೌನ್ಸ್ ಮೂಲಕ ಜನರಿಗೆ ತಿಳಿಸುವ ಕೆಲಸವನ್ನು ಮಾಡಬೇಕು ಆಗ ಜನರಿಗೆ ತಮ್ಮ ಬಗ್ಗೆ ಜಾಗೃತರಾಗಿರಲು ಸಾದ್ಯವಾಗುತ್ತದೆ ಎಂದು ಸಭೆಯಲ್ಲಿ ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅರಣ್ಯ ಸಂರಕ್ಷಣಾಧಿಕಾರಿ ಕಿರಣ್ ಬಿ.ಕೆ ರವರು ಆನೆಗಳು ಗ್ರಾಮಕ್ಕೆ ಬಂದ ಬಗ್ಗೆ ಮತ್ತು ಅವು ಎಲ್ಲಿರುತ್ತವೆ ಎಂಬ ಬಗ್ಗೆ ನಮಗೆ ಗೊತ್ತಿರುತ್ತದೆ. ಮುಂದಿನ ದಿನಗಳಲ್ಲಿ ಗ್ರಾಮದ ಜನರ ವಾಟ್ಸಫ್ ಗ್ರೂಪ್‌ಗಳನ್ನು ಮಾಡಿಕೊಂಡು ಮಾಹಿತಿ ಕೊಡುವ ಕೆಲಸ ಮಾಡುತ್ತೇವೆ ಎಂದು ತಿಳಿಸಿದರು. ಆನೆಗಳು ಬಂದ ವೇಳೆ ಜನರಿಗೆ ಜಾಗೃತಿ ಮೂಡಿಸುತ್ತೇವೆ ಎಂದು ಹೇಳಿದರು.


ಅನೆ ಕೆರೆಯನ್ನೇ ನಾಶ ಮಾಡಿದೆ
ಆನೆಗಳು ಬಂದು ನಮ್ಮ ಕೆರೆಯನ್ನೇ ನಾಶ ಮಾಡಿದೆ, ಕೆರೆಯ ಬದಿಯಲ್ಲಿದ್ದ ದಾರಿಯೂ ಇಲ್ಲದಂತಾಗಿದೆ, ನಡೆದುಕೊಂಡು ಹೋಗಲೂ ಸಾದ್ಯವಿಲ್ಲದ ಸ್ಥಿತಿ ನಿರ್ಮಾಣವಾಗಿದೆ ಎಂದು ಕಂಟ್ರಮಜಲು ಕಸ್ತೂರಿಯವರು ಸಭೆಗೆ ತಿಳಿಸಿದರು. ಇದಕ್ಕೆ ಸಹಮತ ವ್ಯಕ್ತಪಡಿಸಿದ ಗ್ರಾಪಂ ಉಪಾಧ್ಯಕ್ಷ ಪ್ರಮೋದ್ ರವರು ಕೆರೆಯಲ್ಲಿ ಆನೆಗಳು ಇಳಿದ ಕಾರಣ ಕೆರೆಯೇ ಈಗ ಇಲ್ಲದಂತಾಗಿದೆ. ಹಗಲು ಹೊತ್ತಿನಲ್ಲೂ ಬಂದು ಕೆರೆಯಲ್ಲಿ ಇಳಿಯುವ ಹತ್ತುವ ಮೂಲಕ ಅದನ್ನು ನಾಶ ಮಾಡಿದೆ ಎಂದು ಹೇಳಿದರು.


ನೆಯನ್ನು ಓಡಿಸದೇ ಇದ್ದರೆ ಜನ ಭಯಮುಕ್ತರಾಗುವುದಿಲ್ಲ
ಗ್ರಾಪಂ ಸದಸ್ಯರಾದ ಪವನ್ ಡಿ.ಜಿ ದೊಡ್ಡಮನೆ ಮಾತನಾಡಿ, ಕಾಡಿನಿಂದ ನಾಡಿಗೆ ಬಂದ ಆನೆಯನ್ನು ಓಡಿಸದೇ ಇದ್ದಲ್ಲಿ ಜನ ಭಯಮುಕ್ತರಾಗಲು ಸಾಧ್ಯವಿಲ್ಲ. ಅಲ್ಲಿ ಆನೆ ಉಂಟು ಇಲ್ಲಿ ಆನೆ ಬಂತು ಎಂದು ಕೆಲವರು ಹೇಳುವಾಗ ರಾತ್ರಿ ಮನೆಯಿಂದ ಹೊರಗೆ ಬರಲು ಭಯವಾಗುತ್ತಿದೆ. ಕೆಲವೊಮ್ಮೆ ಮಧ್ಯಾಹ್ನವೂ ತೋಟಗಳಲ್ಲಿ ಆನೆ ಕಾಣಿಸುತ್ತಿದೆ. ಕೇರಳದಿಂದ ಬಂದ ಮೂರು ಆನೆಗಳು ಒಟ್ಟಾಗಿ ಅಲ್ಲಲ್ಲಿ ಸುತ್ತಾಡುತ್ತಿದೆ. ಸಣ್ಣ ಅಡಿಕೆ ಗಿಡ ಮತ್ತು ತೆಂಗಿನ ಗಿಡದ ತಿರುಳನ್ನು ತಿಂದು ಗಿಡವನ್ನೇ ನಾಶ ಮಾಡುತ್ತದೆ. ತೋಟದಲ್ಲಿನ ಮರದಲ್ಲಿದ್ದ ಹಲಸಿನ ಹಣ್ಣನ್ನೂ ತಿಂದು ಖಾಲಿ ಮಾಡುತ್ತವೆ. ದಿಕ್ಕು ತಪ್ಪಿದಾಂತಾದ ಆನೆಗಳು ಹಸಿವಿನಿಂದ ಊರಿಗೆ ಬಂದಿದೆ. ನಡಿಗೆ ಬಂದ ಕಾಡಾನೆಯನ್ನು ಹೇಗೆ ಓಡಿಸುವುದು ಎಂಬುದರ ಬಗ್ಗೆಯೇ ಇಲಾಖೆ ಮತ್ತು ಸಾರ್ವಜನಿಕರು ಆಲೋಚನೆ ಮಾಡಬೇಕಾಗಿದೆ. ಆನೆ ಕಾರಿಡಾರ್ ನಿರ್ಮಿಸುವ ಬಗ್ಗೆಯೂ ಚಿಂತನೆ ಅಗತ್ಯ. ಹೇಗಾದರೂ ಮಾಡಿ ಕೊಳ್ತಿಗೆ ಗ್ರಾಮಕ್ಕೆ ಆನೆ ಬರದಂತೆ ಶಾಶ್ವತ ಪರಿಹಾರ ದೊರಕಿಸಿಕೊಡಬೇಕು ಈ ನಿಟ್ಟಿನಲ್ಲಿ ಶಾಸಕರು ಪ್ರಯತ್ನ ಮಾಡುತ್ತಾರೆ ಮತ್ತು ನಮ್ಮ ಕಷ್ಟಕ್ಕೆ ಸ್ಪಂದಿಸುತ್ತಾರೆ ಎಂಬ ನಂಬಿಕೆ ಇದೆ ಎಂದು ಹೇಳಿದರು.


ಸೈರನ್ ಹಾಕಿದರೆ ಒಮ್ಮೆ ಓಡ್ತದೆ
ಗ್ರಾಪಂ ಉಪಾಧ್ಯಕ್ಷರಾದ ಪ್ರಮೋದ್ ಕೆ.ಎಸ್ ಮಾತನಾಡಿ, ಅರಣ್ಯ ಇಲಾಖೆಯವರು ಸೈರನ್ ಮೊಳಗಿಸಿದರೆ ಒಮ್ಮೆ ಆನೆ ಓಡುತ್ತದೆ ಮತ್ತೆ ಎರಡು ದಿನ ಬಿಟ್ಟು ಅದೇ ಜಾಗಕ್ಕೆ ಬರುತ್ತದೆ. ಅವು ಎಲ್ಲಿಂದ ಈ ಭಾಗಕ್ಕೆ ಎಂಟ್ರಿಯಾಗಿದೆಯೋ ಆ ದಾರಿಯಲ್ಲಿ ಸೋಲಾರ್ ತಂತಿ ಬೇಲಿ ಹಾಕಿದ ಕಾರಣ ಅವುಗಳಿಗೆ ದಿಕ್ಕು ತಪ್ಪಿದಾಂತಾಗಿದೆ. ಇಲ್ಲಿರುವ ಮೂರು ಆನೆಗಳು ಗಂಡಾನೆಗಳು ಆಗಿವೆ ಇವುಗಳನ್ನು ಓಡಿಸುವಲ್ಲಿ ಸರಕಾರ ಮತ್ತು ಇಲಾಖೆ ಏನೆಲ್ಲಾ ಕ್ರಮಗಳನ್ನು ಕೈಗೊಳ್ಳುತ್ತದೆಯೋ ಅದಕ್ಕೆ ನಮ್ಮೆಲ್ಲರ ಪೂರ್ಣ ಬೆಂಬಲ ಇದೆ, ಒಟ್ಟಿನಲ್ಲಿ ಇಲ್ಲಿರುವ ಆನೆಗಳು ಕಾಡು ಸೇರಬೇಕು ಅಷ್ಟೆ ನಮ್ಮೆಲ್ಲರ ಪ್ರಾರ್ಥನೆಯಾಗಿದೆ ಎಂದು ಹೇಳಿದರು.


ರಾತ್ರಿ ಪಾಳಿಗೆ 24 ಹೆಚ್ಚುವರಿ ಸಿಬ್ಬಂದಿಗಳ ನೇಮಕ
ಕೊಳ್ತಿಗೆ ಗ್ರಾಮದಲ್ಲಿ ಆನೆ ದಾಳಿ ನಡೆದ ಬಳಿಕ ರಾತ್ರಿ ಪಾಳಿಗೆ ಹೆಚ್ಚುವರಿಯಾಗಿ ಸಿಬ್ಬಂದಿಗಳನ್ನು 6 ಟೀಮ್‌ಗಳಾಗಿ ನಿಯುಕ್ತಿಗೊಳಿಸಲಾಗಿದೆ. ಒಂದು ತಂಡದಲ್ಲಿ ನಾಲ್ಕು ಜನ ಸಿಬ್ಬಂದಿಗಳಿದ್ದು ಒಟ್ಟು 24 ಮಂದಿ ಸಿಬ್ಬಂದಿಗಳು ರಾತ್ರಿ ಪಾಳಿಯಲ್ಲಿ ಗ್ರಾಮದಲ್ಲಿ ಸುತ್ತಾಡುತ್ತಾರೆ. ಆನೆಗಳು ಕಂಡು ಬಂದಲ್ಲಿ ಅವುಗಳನ್ನು ಸೈರನ್ ಮೂಲಕ ಓಡಿಸುವ ಕೆಲಸವನ್ನು ಮಾಡುವುದರ ಜೊತೆಗೆ ಗ್ರಾಮಸ್ಥರಿಗೂ ಎಚ್ಚರದಿಂದ ಇರುವಂತೆ ಮಾಹಿತಿ ಕೊಡುತ್ತಾರೆ. ಜನ ಈ ಬಗ್ಗೆ ಯಾವುದೇ ಆತಂಕಪಡಬೇಕಿಲ್ಲ. ಸರಕಾರ ಜನರ ರಕ್ಷಣೆಗೆ ಬೇಕಾದ ಎಲ್ಲಾ ಸಿದ್ದತೆಗಳನ್ನು ಮಾಡಿಕೊಂಡಿದೆ ಎಂದು ಶಾಸಕರು ಸಭೆಗೆ ತಿಳಿಸಿದರು.


ಆನೆ ಹಿಡಿಯಲು ಸರಕಾರದ ಅನುಮತಿ ಬೇಕು

ನಾಡಿಗೆ ಬಂದ ಆನೆಯನ್ನು ಹಿಡಿಯಲು ಸರಕಾರದ ಅನುಮತಿ ಬೇಕು. ಕಾಡುಪ್ರಾಣಿಗಳ ಹಿಂಸೆ ಮಾಡದಂತೆ ನ್ಯಾಯಾಲಯದ ಆದೇಶವೂ ಇದೆ. ಸರಕಾರ ಈ ಬಗ್ಗೆ ನಿರ್ಧಾರ ಕೈಗೊಳ್ಳಬೇಕಾಗುತ್ತದೆ. ಒಂದು ಆನೆಯನ್ನು ಹಿಡಿಯಲು ಕನಿಷ್ಟ ಎಂಟು ಆನೆಗಳು ಮತ್ತು ಮಾವುತ ಬೇಕಾಗುತ್ತದೆ. ಕಾಡು ಪ್ರದೇಶಕ್ಕೆ ಆನೆಗಳು ಓಡಿ ಹೋದರೆ ಅವುಗಳನ್ನು ಹಿಡಿಯುವುದು ತುಂಬಾ ಕಷ್ಟವಾಗುತ್ತದೆ. ಪಳಗಿದ ಆನೆಗಳನ್ನು ಕಾಡಿನಲ್ಲಿ ಕರೆದುಕೊಂಡು ಹೋಗಲು ಮಾವುತನಿಗೂ ಕಷ್ಟ ಸಾಧ್ಯ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರವಾಗಿದೆ. ಆನೆಗಳ ನಿರಂತರ ದಾಳಿಯಿದ್ದಲ್ಲಿ ಮಾತ್ರ ಸರಕಾರ ಈ ಬಗ್ಗೆ ಕ್ರಮಕೈಗೊಳ್ಳುತ್ತದೆ. ಅಲ್ಲಿಯ ತನಕ ಅರಣ್ಯ ಇಲಾಖೆಯ ವತಿಯಿಂದ ಆನೆಯನ್ನು ಓಡಿಸಲು ಏನೆಲ್ಲಾ ಪ್ರಯೋಗವನ್ನು ಮಾಡಬೇಕೋ ಅದೆಲ್ಲವನ್ನೂ ಮಾಡುತ್ತಿರುತ್ತದೆ. ಒಟ್ಟು ಮೂರು ಆನೆಗಳು ಕೊಳ್ತಿಗೆ ಭಾಗದಲ್ಲಿ ಸುತ್ತಾಡುತ್ತಿದೆ ಅದನ್ನು ಇಲಾಖೆಯವರು ಓಡಿಸುವ ಎಲ್ಲಾ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಶಾಸಕರು ಸಭೆಯಲ್ಲಿ ತಿಳಿಸಿದರು.


ಉರುಳು ಇಟ್ಟು ಹಿಡಿಯುವುದಿದ್ದರೆ ನಾನೇ ಹಿಡಿಯುತ್ತಿದ್ದೆ..?!

ಆನೆಗಳ ಸ್ಥಳಾಂತರದ ಗಂಭೀರ ಚರ್ಚೆಯ ಮಧ್ಯೆ ಒಂದಷ್ಟು ನಗು ತರಿಸುವ ಮಾತುಗಳು ಕೂಡ ಕೇಳಿಬಂದವು. ಆನೆಯನ್ನು ಅಷ್ಟು ಸುಲಭದಲ್ಲಿ ಹಿಡಿದು ಸಾಗಿಸುವುದು ಅಸಾಧ್ಯ ಎಂಬ ವಿಚಾರ ಪ್ರತಿಯೊಬ್ಬರಿಗೂ ಗೊತ್ತಿದ್ದರೂ ಕೃಷಿಕರು ಹೇಗಾದರೂ ಮಾಡಿ ಆನೆಯನ್ನು ಸ್ಥಳಾಂತರ ಮಾಡಿ ಎಂದು ಪದೇ ಪದೇ ಕೇಳಿಕೊಂಡಾಗ ಶಾಸಕರು ನಗುಮೊಗದಿಂದಲೇ ‘ ಉರುಳು ಇಟ್ಟು ಹಿಡಿಯಲು ಸಾಧ್ಯವಾಗುತ್ತಿದ್ದರೆ ನಾನೇ ಹಿಡಿಯುತ್ತಿದ್ದೇ..’ ಎಂದು ಹೇಳಿದರು. ನಾನು ಎಂದಿಗೂ ಸುಳ್ಳು ಹೇಳಿ ಹೋಗಲ್ಲ ಆನೆಯನ್ನು ಹಿಡಿಯುವುದಕ್ಕೆ ಬಹಳಷ್ಟು ಕಾನೂನು ರೀತಿಯ ಕ್ರಮಗಳು ಇದೆ. ಆನೆಗಳ ಹಾವಳಿ ತಪ್ಪಿಸುವ ಸಲುವಾಗಿ ಸೋಲಾರ್ ಬೇಲಿ ಹಾಗೇ ಸ್ಥಳಾಂತರದ ಬಗ್ಗೆಯೂ ಚರ್ಚೆ ಮಾಡಿದ್ದೇನೆ. ಕೃಷಿಕರ ಕಷ್ಟ ನನಗೆ ಅರ್ಥ ಆಗ್ತಿದೆ. ಸರಕಾರ ಎಷ್ಟೇ ಪರಿಹಾರ ಕೊಟ್ಟರೂ ಒಂದು ಅಡಿಕೆ ಗಿಡ ಬೆಳೆದು ದೊಡ್ಡದಾಗಬೇಕಾದರೆ ಐದಾರು ವರ್ಷ ಬೇಕು ಅದನ್ನು ನಾಶ ಮಾಡಲು ಆನೆಗೆ ಒಂದು ಸೆಕೆಂಡು ಸಾಕು ಹೀಗಿರುವಾದ ಇದೊಂದು ಗಂಭೀರ ವಿಷಯ ಎಂಬುದು ನನಗೆ ಗೊತ್ತಿದೆ. ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಲು ಎಲ್ಲಾ ರೀತಿಯ ಪ್ರಯತ್ನ ಮಾಡುತ್ತೇನೆ ಎಂದು ತಿಳಿಸಿದರು.


ಸಂಜೆಯಾಗುತ್ತಲೇ ಪೆರ್ಲಂಪಾಡಿಯಲ್ಲಿ ಜನವೇ ಇಲ್ಲ
ಆನೆಯ ಕಾಟದಿಂದಾಗಿ ಸಂಜೆಯಾಗುತ್ತಲೇ ಜನ ಮನೆ ಸೇರಿಕೊಳ್ಳುವ ಕಾರಣ ಪೆರ್ಲಂಪಾಡಿ ಪೇಟೆಯಲ್ಲಿ ಜನವೇ ಇರುವುದಿಲ್ಲ. ಇದರಿಂದಾಗಿ ಇಲ್ಲಿನ ವರ್ತಕರಿಗೂ ತೊಂದರೆಯಾಗಿದೆ. ಇದಲ್ಲದೆ ಮಕ್ಕಳನ್ನು ಬೆಳಗ್ಗೆ ಸಂಜೆ ಕರೆದುಕೊಂಡು ಬರಲು ಕೂಡ ಕಷ್ಟವಾಗಿದೆ. ಒಟ್ಟಿನಲ್ಲಿ ಆನೆಯಿಂದಾಗಿ ಆರ್ಥಿಕ ನಷ್ಟದೊಂದಿಗೆ ಜನ ಜೀವನ ಕೂಡ ಕಷ್ಟವಾಗಿದೆ ಎಂದು ಸಾರ್ವಜನಿಕರು ತಿಳಿಸಿದರು.


ಇದು ಗಂಭೀರ ವಿಚಾರವಾಗಿದೆ: ಕಾವು ಹೇಮನಾಥ ಶೆಟ್ಟಿ
ಆಹಾರ ಹುಡುಕಿಕೊಂಡೋ ಅಥವಾ ಇನ್ಯಾವುದೋ ಕಾರಣಕ್ಕೆ ಕಾಡಿನಲ್ಲಿರಬೇಕಾದ ಆನೆಗಳು ನಾಡಿಗೆ ಅಥವಾ ಮನೆ ಬಾಗಿಲಿನ ಮೂಲಕ ಓಡಾಡುವಾಗ ಸಹಜವಾಗಿ ಜನರಿಗೆ ಭಯ ಉಂಟಾಗುತ್ತದೆ. ಆನೆಗಳನ್ನು ಓಡಿಸುವಲ್ಲಿ ಶಾಸಕರ ನಿರ್ದೇಶನದಂತೆ ಇಲಾಖೆಯವರು ಆಹೋರಾತ್ರಿ ಕೆಲಸ ಮಾಡುತ್ತಿದ್ದಾರೆ. ಆದರೆ ಆನೆ ಮತ್ತೆ ಮತ್ತೆ ಕಾಣಿಸಿಕೊಂಡಾಗ ಜನರಲ್ಲಿ ಭಯ ಸಹಜವಾಗಿದ್ದು ಇದು ಗಂಭೀರವಾದ ವಿಚಾರವಾಗಿದೆ ಎಂದು ಕೆಪಿಸಿಸಿ ಸಂಯೋಜಕರಾದ ಕಾವು ಹೇಮನಾಥ ಶೆಟ್ಟಿ ಹೇಳಿದರು. ಶಾಸಕರು ಈಗಾಗಲೇ ಇದನ್ನು ಗಂಭೀರವಾಗಿ ಪರಿಗಣಿಸಿದ್ದಾರೆ, ಸರಕರದ ಗಮನಕ್ಕೂ ತಂದಿದ್ದಾರೆ. ಎಲ್ಲಾ ಉಪಕ್ರಮಗಳನ್ನು ಕೈಗೊಂಡು ಆನೆ ಹೋಗದೇ ಇದ್ದರೆ ಏನು ಮಾಡುವುದು ಎಂಬುದು ಇಲ್ಲಿ ಜಿಜ್ಞಾಸೆಯಾಗಿದೆ. ಶಾಸಕರ ನೇತೃತ್ವದಲ್ಲಿ ಇಲಾಖೆಯವರು ಆನೆಯನ್ನು ನಿಯಂತ್ರಣಕ್ಕೆ ತಂದೇ ತರುತ್ತಾರೆ ಎಂಬ ಭರವಸೆ ಈ ಗ್ರಾಮಸ್ಥರಲ್ಲಿದೆ. ಹೋಗದೇ ಇದ್ದರೆ ಏನು ಕ್ರಮಕೈಗೊಳ್ಳಬೇಕೋ ಅದನ್ನು ಸರಕಾರ ಮಾಡಬೇಕಾಗುತ್ತದೆ ಎಂದು ಹೇಳಿದರು.


ಗುಂಪಿನಿಂದ ಹೊರ ಹಾಕಿದ ಆನೆಗಳು : ಎಸಿಎಫ್ ಸುಬ್ಬಯ್ಯ
ಆನೆಗಳು ಸಮೂಹ ಜೀವಿಗಳು. ಆನೆಗಳ ಸಂಖ್ಯೆ ಅದರ ಕುಟುಂಬದಲ್ಲಿ ಜಾಸ್ತಿಯಾದಾಗ ಗಂಡಾನೆಗಳನ್ನು ಗುಂಪಿನಿಂದ ಹೊರ ಹಾಕುತ್ತವೆ. ಗುಂಪಿನಿಂದ ಹೊರ ಹಾಕಲ್ಪಟ್ಟ ಆನೆಗಳು ಕಾಡಿನಿಂದ ನಾಡಿಗೆ ಬಂದು ಜನರಿಗೆ ತೊಂದರೆ ಕೊಡುತ್ತದೆ.ಅವುಗಳನ್ನು ಏಕಾಏಕಿ ಓಡಿಸಲು ಸಾಧ್ಯವಿಲ್ಲ. ನಿಧಾನಕ್ಕೆ ಅವುಗಳನ್ನು ಅಟ್ಟಿಸಬೇಕಾಗುತ್ತದೆ. ಆನೆಗಳನ್ನು ಕೊಲ್ಲುವುದು ಕಾನೂನಿಗೆ ವಿರುದ್ದವಾಗಿದೆ. ಕಾಡು ಪ್ರದೇಶಕ್ಕೆ ಅವು ಓಡಿ ಹೋಗುವ ಕಾರಣ ಅವುಗಳನ್ನು ಹಿಡಿದು ಸ್ಥಳಾಂತರ ಮಾಡಲು ಸ್ವಲ್ಪ ಕಷ್ಟ. ಜನರಿಗೆ ಅವುಗಳಿಂದ ತೊಂದರೆಯಾಗದ ರೀತಿಯಲ್ಲಿ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ರಾತ್ರಿ ವೇಳೆ ಸೈರನ್ ಮೊಳಗಿಸುವ ಕೆಲಸ ನಿರಂತರ ನಡೆಯುತ್ತಿದೆ. ಸೈರನ್ ಶಬ್ದಕ್ಕೆ ಆನೆಗಳು ಭಯಗೊಂಡು ಓಡುತ್ತವೆ. ನಾಡಿಗೆ ಬಂದ ಆನೆ ಖಂಡಿತವಾಗಿಯೂ ಕಾಡಿಗೆ ಹೋಗಿಯೇ ಹೋಗುತ್ತದೆ. ಈ ವಿಚಾರದಲ್ಲಿ ಜನ ಆತಂಕ ಪಡಬೇಕಿಲ್ಲ. ಆನೆಗಳನ್ನು ಕಂಡರೆ ಇಲಾಖೆ ಗಮನಕ್ಕೆ ತನ್ನಿ, ನೀವಾಗಿಯೇ ಅವುಗಳನ್ನು ಓಡಿಸಲು ಹೋಗಬೇಡಿ, ಒಂಟಿ ಆನೆಗಳು ಅಪಾಯವಾಗಿದೆ. ಇಲಾಖೆ ಬಳಿ ಅದನ್ನು ಓಡಿಸಲು ಆಯುಧಗಳಿವೆ ಎಂದು ಎಸಿಎಫ್ ಸುಬ್ಬಯ್ಯ ನಾಯ್ಕ್‌ರವರು ಹೇಳಿದರು.


ವೇದಿಕೆಯಲ್ಲಿ ಕೊಳ್ತಿಗೆ ಗ್ರಾಪಂ ಅಧ್ಯಕ್ಷೆ ಅಕ್ಕಮ್ಮ, ಅರಣ್ಯ ಸಂರಕ್ಷಣಾಧಿಕಾರಿ ಕಿರಣ್ ಬಿ.ಕೆ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಅಮಲ ರಾಮಚಂದ್ರ, ಬಾಯಂಬಾಡಿ ಶ್ರೀ ಷಣ್ಮುಖದೇವ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಗಂಗಾಧರ ಗೌಡ ಕೆಮ್ಮಾರ, ಕೊಳ್ತಿಗೆ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ವಿಶ್ವನಾಥ ಶೆಟ್ಟಿ ಪೆರ್ಲಂಪಾಡಿ ಮತ್ತಿತರರು ಉಪಸ್ಥಿತರಿದ್ದರು. ಕೊಳ್ತಿಗೆ ಗ್ರಾಪಂ ಉಪಾಧ್ಯಕ್ಷ ಪ್ರಮೋದ್ ಕೆ.ಎಸ್ ಸ್ವಾಗತಿಸಿ, ಸದಸ್ಯ ಪವನ್ ಡಿ.ಜಿ ವಂದಿಸಿದರು.

ಪರಿಹಾರಕ್ಕೆ ಇಲಾಖೆಗೆ ಅರ್ಜಿ ಸಲ್ಲಿಸಿ
ಆನೆ ದಾಳಿಯಿಂದ ನಷ್ಟಕ್ಕೊಳಗಾದ ಕೃಷಿಕರು ಇಲಾಖೆಗೆ ಅರ್ಜಿ ಸಲ್ಲಿಸಿ ಪರಿಹಾರ ಪಡೆದುಕೊಳ್ಳಬೇಕು. ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಾಗುತ್ತದೆ., ಕೃಷಿಕರು ಇಲ್ಲಿನ ಉಪ ವಲಯ ಅರಣ್ಯಾಧಿಕಾರಿ ಮೂಲಕ ಅರ್ಜಿ ನೀಡಿದರೆ ಸಾಕು ಅದನ್ನು ಅವರೇ ಆನ್ ಲೈನ್‌ಗೆ ಹಾಕುತ್ತಾರೆ. ಅಡಿಕೆ 10 ವರ್ಷದಿಂದ ಮೇಲ್ಪಟ್ಟ ಗಿಡಕ್ಕೆ 4೦೦೦, 5 ರಿಂದ 9 ವರ್ಷದವರೆಗಿನ ಗಿಡಕ್ಕೆ 16೦೦, ಸಣ್ಣ ಗಿಡಕ್ಕೆ 8೦೦ , ಬಾಳಿಗಿಡಕ್ಕೆ 320, ಭತ್ತ ಕ್ವಿಂಟ್ವಾಳ್‌ಗೆ 246 ರೂ ಪರಿಹಾರವನ್ನು ಸರಕಾರ ನೀಡುತ್ತದೆ ಎಂದು ಶಾಸಕ ಅಶೋಕ್ ರೈ ಅವರು ಸಭೆಗೆ ತಿಳಿಸಿದರು. ಯಾರಿಗೆಲ್ಲಾ ಆನೆಯಿಂದ ನಷ್ಟವಾಗಿದೆಯೋ ಅವರೆಲ್ಲಾ ಅರ್ಜಿ ಹಾಕಲೇಬೇಕು ಅರ್ಜಿ ಹಾಕದೇ ಇದ್ದಲ್ಲಿ ಪರಿಹಾರ ಸಿಗುವುದಿಲ್ಲ ಎಂದು ಹೇಳಿದರು.

ರೂ.12 ಲಕ್ಷದ 65 ಸಾವಿರ ಪರಿಹಾರ ವಿತರಣೆ
ಈಗಾಗಲೇ ಆನೆ ದಾಳಿ ಸೇರಿದಂತೆ ಕೃಷಿ ನಷ್ಟವಾದ ರೈತರಿಗೆ 2024-25ನೇ ಸಾಲಿನಲ್ಲಿ ರೂ.12 ಲಕ್ಷದ 65 ಸಾವಿರ ಪರಿಹಾರ ಧನ ವಿತರಿಸಲಾಗಿದೆ ಎಂಬ ವಿಚಾರವನ್ನು ಶಾಸಕರು ಸಭೆಯ ಗಮನಕ್ಕೆ ತಂದರು. ಆನೆ ದಾಳಿಯಿಂದ ಕೃಷಿ ನಷ್ಟ ಉಂಟಾದ ರೈತರು ತಕ್ಷಣವೇ ಸೂಕ್ತ ಫೋಟೋ ದಾಖಲೆಗಳನ್ನು ಇಟ್ಟು ಸರಕಾರಕ್ಕೆ ಅರ್ಜಿಯನ್ನು ಕೊಡಿ ಎಂದು ತಿಳಿಸಿದರು.


ಆಹಾರಕ್ಕಾಗಿಯೇ ಕಾಡು ಪ್ರಾಣಿಗಳು ಕಾಡಿಂದ ನಾಡಿಗೆ ಬರ‍್ತವೆ…!
ಮನುಷ್ಯನಿಂದ ಹಿಡಿದು ಪ್ರಾಣಿಗಳ ತನಕ ಹಸಿವು ನೀಗಿಸಲು ಆಹಾರ ಬೇಕು ಇದೇ ಆಹಾರವನ್ನು ಹುಡುಕಿಕೊಂಡು ಕಾಡು ಪ್ರಾಣಿಗಳು ಕಾಡಿಂದ ನಾಡಿಗೆ ಬರ‍್ತವೆ ಅದಕ್ಕೆ ಆಹಾರ ಬೇಕು ಅಷ್ಟೇ ಎಂಬ ವಿಚಾರವನ್ನು ಶಾಸಕರು ಮತ್ತೆ ಮತ್ತೆ ನೆನಪಿಸಿದರು. ಮನುಷ್ಯ ತನ್ನ ಸ್ವಾರ್ಥಕ್ಕಾಗಿ ಕಾಡು ನಾಶ ಮಾಡುತ್ತಿದ್ದಾನೆ ಇದರಿಂದ ಸಹಜವಾಗಿಯೇ ಕಾಡು ಪ್ರಾಣಿಗಳು ನಾಡಿಗೆ ಬರುತ್ತವೆ. ಕಾಡಲ್ಲಿ ಯಥೇಚ್ಚವಾಗಿ ಅವುಗಳಿಗೆ ಆಹಾರ ಸಿಕ್ಕರೆ ನಾಡಿಗೆ ಬರುವುದಿಲ್ಲ ಆದ್ದರಿಂದ ಕಾಡು ತುಂಬಾ ಹಣ್ಣಿನ ಮರಗಳನ್ನು ಬೆಳೆಸುವ ಕೆಲಸ ಆಗಬೇಕು. ಒಬ್ಬ ರೈತ ಮಂಗಗಳ ಹಾವಳಿ ತಪ್ಪಿಸುವ ತೋಟದ ಸುತ್ತ ಪಪ್ಪಾಯಿ ಗಿಡ ಬೆಳೆಸಿದ್ದರು ಪಪ್ಪಾಯಿ ಆಗುತ್ತಿದ್ದಂತೆ ಮಂಗಗಳು ತೋಟಕ್ಕೆ ಬರುವುದು ನಿಂತಿತು. ನಾನು ಈಗಾಗಲೇ ಉಪ್ಪಿನಂಗಡಿ ರಸ್ತೆಯುದ್ಧಕ್ಕೂ 350 ವಿವಿಧ ಜಾತಿಯ ಹಣ್ಣಿನ ಗಿಡಗಳನ್ನು ನಾಟಿ ಮಾಡಿಸಿದ್ದೇನೆ ಎಂದು ತಿಳಿಸಿದ ರೈಯವರು, ಮಾವಿನ ಮಿಡಿಗಳನ್ನು ಕೊಯ್ಯುವುದನ್ನು ನಿಷೇಧಿಸಿದ್ದರಿಂದ ಈ ವರ್ಷ ಬಹಳಷ್ಟು ಹಣ್ಣುಗಳ ಸಿಕ್ಕಿವೆ. ಇದರಿಂದ ಅದೆಷ್ಟೋ ಪ್ರಾಣಿ, ಪಕ್ಷಿ, ಮನುಷ್ಯರಿಗೂ ಹಣ್ಣುಗಳು ಸಿಕ್ಕಿವೆ ಎಂಬ ವಿಚಾರವನ್ನು ತಿಳಿಸಿದರು.

LEAVE A REPLY

Please enter your comment!
Please enter your name here