
ಈಶ್ವರಮಂಗಲ: ದಿನದಿಂದ ದಿನಕ್ಕೆಪುತ್ತೂರು, ಸುಳ್ಯ ಭಾಗದಲ್ಲಿ ಆನೆಗಳ ಉಪಟಳ ಹೆಚ್ಚಾಗುತ್ತಿದ್ದು ಜೂ.22ರ ರಾತ್ರಿ ಈಶ್ವರಮಂಗಲದ ನೆಟ್ಟಣಿಗೆ ಮುಡ್ನೂರು ಗ್ರಾಮದ ಕರ್ನಾಟಕ ಕೇರಳ ಗಡಿಪ್ರದೇಶವಾದ ಕೆಮ್ಮತಡ್ಕ ಪ್ರದೇಶದಲ್ಲಿ ಮತ್ತೇ ಆನೆ ತೋಟಕ್ಕೆ ಲಗ್ಗೆ ಇಟ್ಟು ಕೃಷಿ ನಾಶಗೈದ ಘಟನೆ ವರದಿಯಾಗಿದೆ.

ಕೆಮ್ಮತ್ತಡ್ಕ ಪ್ರದೇಶದ ಕೃಷಿಕರಾದ ಚೆನ್ನಕೇಶವ ಗೌಡ, ದಯಾನಂದ ಗೌಡ, ಕೃಷ್ಣಪ್ಪಗೌಡ,ಈಶ್ವರ ಪೂಜಾರಿ, ವೇಣುಗೋಪಾಲ, ಸತೀಶ್ ಪೂಜಾರಿ ಎಂಬವರ ತೋಟಕ್ಕೆ ಲಗ್ಗೆ ಇಟ್ಟ ಆನೆ ಅಲ್ಲಿನ ಬಾಳೆಗಿಡ,ತೆಂಗಿನ ಗಿಡ,ರಬ್ಬರ್ ಮರ, ಹಲಸು ಮರ, ಹಾಗೂ ಇನ್ನೀತರ ಕೃಷಿಯನ್ನು ನಾಶಮಾಡಿದೆ.
ಜೂ.21ರಂದೂ ಆನೆ ತೋಟಗಳಿಗೆ ಲಗ್ಗೆ
ಜೂ.21ರ ರಾತ್ರಿಯೂ ಆನೆ ಕೆಮ್ಮತ್ತಡ್ಕದ ಕೃಷಿ ಪ್ರದೇಶಗಳಿಗೆ ಲಗ್ಗೆ ಇಟ್ಟು ಕೃಷಿಕರಾದ ಯೋಗೀಶ್ ಕೆಮ್ಮತ್ತಡ್ಕ, ಶಾಂತಪ್ಪ ಕೆಮ್ಮತಡ್ಕ, ರಿತನ್ ಕೆಮ್ಮತ್ತಡ್ಕ, ಶೇಷಪ್ಪ ಕೆಮ್ಮತ್ತಡ್ಕ, ಆನಂದ ಪೂಜಾರಿ, ಉಮೇಶ್ ಪೂಜಾರಿ, ಈಶ್ವರ ನಾಯ್ಕ ಎಂಬವರ ತೋಟದಲ್ಲಿನ ಬಾಳೆಗಿಡ, ಹಲಸು ಮರ, ಇನ್ನೀತರ ಕೃಷಿಯನ್ನು ನಾಶಮಾಡಿದೆ. ತೋಟದಲ್ಲಿ ಅಳವಡಿಸರುವ ಪೈಪ್ ಲೈನ್ ಗಳು ಆನೆಯ ತುಳಿತಕ್ಕೆ ನಜ್ಜು ಗುಜ್ಜಾಗಿತ್ತು.
ಆತಂಕದಲ್ಲಿ ಸ್ಥಳೀಯರು:
ಆನೆ ಪ್ರತಿದಿನವೂ ಲಗ್ಗೆ ಇಟ್ಟು ಕೃಷಿ ಹಾನಿಗೈದು ರೈತರಿಗೆ ನಷ್ಟ ಉಂಟಾಗುತ್ತಿರುವುದು ಒಂದೆಡೆಯಾದರೆ, ರಾತ್ರಿ ವೇಳೆ ಈ ಪರಿಸರದಲ್ಲಿ ಸಂಚರಿಸುವ ಕುರಿತು ಸ್ಥಳೀಯರು ಭಯಭೀತರಾಗಿದ್ದಾರೆ.
