ಸಿವಿಲ್ ಇಂಜಿನಿಯರ‍್ಸ್‌ನ ರಾಷ್ಟ್ರೀಯ ಮಟ್ಟದ ‘ಶ್ರೇಷ್ಠ ಇಂಜಿನಿಯರ್’ ಪ್ರಶಸ್ತಿಗೆ ಮಾಸ್ಟರ್ ಪ್ಲಾನರಿಯ ಎಸ್.ಕೆ ಆನಂದ್ ಆಯ್ಕೆ

0

ಪುತ್ತೂರು: ನಿರ್ಮಾಣ ಉದ್ಯಮದ ಸುಧಾರಣೆಗೆ ನಿಸ್ವಾರ್ಥ ಕೊಡುಗೆ, ಅಭಿವೃದ್ಧಿಗೆ ಕೊಡುಗೆ ಮತ್ತು ಸಿವಿಲ್ ಎಂಜಿನಿಯರಿಂಗ್ ಕ್ಷೇತ್ರದಲ್ಲಿನ ಸಾಧನೆ, ಕಾರ್ಯಕ್ಷಮತೆ ಮತ್ತು ಕೊಡುಗೆಯನ್ನು ಗುರುತಿಸಿ ಅಸೋಸಿಯೇಶನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ‍್ಸ್(ಇಂಡಿಯಾ) ಇದರ ವತಿಯಿಂದ ನೀಡುವ ರಾಷ್ಟ್ರೀಯ ಮಟ್ಟದ ‘ಶ್ರೇಷ್ಠ ಇಂಜಿನಿಯರ್ ಪ್ರಶಸ್ತಿ-2025’ಕ್ಕೆ ಮಾಸ್ಟರ್ ಪ್ಲಾನರಿಯ ಎಸ್.ಕೆ ಆನಂದ ಕುಮಾರ್ ಆಯ್ಕೆಯಾಗಿದ್ದಾರೆ. ಪಾಂಡಿಚೇರಿಯಲ್ಲಿ ಜೂ.28ರಂದು ನಡೆಯಲಿರುವ ಕಾರ್ಯಕ್ರಮದಲ್ಲಿ ಅವರು ಪ್ರಶಸ್ತಿ ಸ್ವೀಕರಿಸಲಿದ್ದಾರೆ.


ಸಿವಿಲ್ ಇಂಜಿನಿಯರ್‌ನಲ್ಲಿ ಎಂ.ಟೆಕ್. ಪದವಿ ಪಡೆದಿರುವ ಎಸ್.ಕೆ ಆನಂದ್ ಅವರು ತನ್ನ ತಂದೆ ಎಸ್.ಕೆ. ಈಶ್ವರ ಭಟ್ ಪ್ರಾರಂಭಿಸಿದ್ದ ಮಾಸ್ಟರ್ ಪ್ಲಾನರಿಯನ್ನು 1976ರಿಂದ ಮುನ್ನಡೆಸುತ್ತಾ ’ಮಾಸ್ಟರ್ ಪ್ಲಾನರಿಯ’ ವ್ಯವಹಾರಕ್ಕೊಂದು ಹೊಸ ರೂಪು-ರೇಷೆಯನ್ನು ಕೊಟ್ಟಿದ್ದಾರೆ. ಅವರು 1996ರಲ್ಲೇ ಮಾರುಕಟ್ಟೆಗೆ ಪರಿಚಯಿಸಿದ್ದ ಕಾಂಕೂಡ್ ಉತ್ಪನ್ನಗಳು ಇಂದಿಗೂ ಗ್ರಾಹಕರ ಬಹುಬೇಡಿಕೆಯ ಉತ್ಪನ್ನಗಳಲ್ಲಿ ಒಂದಾಗಿದೆ. ’ರೋಟರಿ ಉದ್ಯೋಗ ರತ್ನ’ ಬಿರುದಿಗೆ ಪಾತ್ರರಾಗಿರುವ ಆನಂದ್ ಎಸ್.ಕೆ. ಅವರು ಧಾರ್ಮಿಕ, ಶೈಕ್ಷಣಿಕ ಹಾಗೂ ಸಮಾಜ ಸೇವಾ ಕ್ಷೇತ್ರದಲ್ಲೂ ತನ್ನನ್ನು ತಾನು ತೊಡಗಿಸಿಕೊಂಡು ಜನಾನುರಾಗಿಯಾಗಿದ್ದಾರೆ. ಇವರು ಎಂ.ಟೆಕ್ ಪರೀಕ್ಷಾ ಮಂಡಳಿ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ.


ಕನ್‌ಸ್ಟ್ರಕ್ಷನ್, ಪ್ಲ್ಯಾನಿಂಗ್, ಕಸ್ಟಮೈಸೇಷನ್, ಎಸ್ಟಿಮೇಶನ್, ಡಿಸೈನಿಂಗ್ ಮತ್ತು ಎಕ್ಸಿಕ್ಯೂಶನ್, ಕನ್‌ಸಲ್ಟೇಶನ್ ಮತ್ತು ಮ್ಯಾನುಫ್ಯಾಕ್ಚರಿಂಗ್ ಸೇರಿದಂತೆ ಹಲವು ವಿಭಾಗಗಳಲ್ಲಿ ಮಾಸ್ಟರ್ ಆಗಿರುವ ಮಾಸ್ಟರ್ ಪ್ಲಾನರಿಯು 300 ಕ್ಕೂ ಹೆಚ್ಚು ಉತ್ಪನ್ನಗಳ ಮೂಲಕ ಉತ್ತಮ ಗುಣಮಟ್ಟ ಹಾಗೂ ಪರಿಸರ ಸ್ನೇಹಿ ಮತ್ತು ಗ್ರಾಹಕ ಸ್ನೇಹಿ ಉತ್ಪನ್ನಗಳನ್ನು ತಯಾರಿಸುತ್ತಿದೆ. ಪುತ್ತೂರಿನ ನೆಹರು ನಗರದಲ್ಲಿ ಕೇಂದ್ರ ಕಚೇರಿಯನ್ನು ಹೊಂದಿರುವ ಸಂಸ್ಥೆಯು ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಹಲವು ಕಡೆಗಳಲ್ಲಿ ತನ್ನ ರೂರಲ್ ಡೆವಲಪ್‌ಮೆಂಟ್ ಸೆಂಟರ್‌ಗಳ ಮೂಲಕ ಆ ಭಾಗದ ಅರ್ಹರಿಗೆ ಉದ್ಯೋಗವಕಾಶಗಳನ್ನು ನೀಡಿ ಅಲ್ಲೇ ತನ್ನ ಉತ್ಪನ್ನಗಳನ್ನು ತಯಾರಿಸಿ ಆ ಭಾಗದಲ್ಲಿ ಮಾರುಕಟ್ಟೆ ವಿಸ್ತರಿಸುವ ಮೂಲಕ ’ಡಿವಿಷನ್ ಆಫ್ ಲೇಬರ್’ ಮತ್ತು ’ವಿಕೇಂದ್ರೀಕರಣ’ ತತ್ವದ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿದೆ.‌


ಮಾಸ್ಟರ್ ಪ್ಲಾನರಿಯ ‘ಮಾಸ್ಟರ್’ ಕಾಮಗಾರಿಗಳಿವು:
ಮಾಸ್ಟರ್ ಪ್ಲಾನರಿಯ ಉತ್ಪನ್ನಗಳಾದ ಕಾಂಕ್ರೀಟ್, ಕಾಂಕೋಡ್, ಯುಪಿವಿಸಿ, ವುಡನ್ ಐಟಂ, ಸ್ಟೀಲ್ ಫ್ಯಾಬ್ರಿಕೇಶನ್, ಫೈಬರ್ ಸಾಮಾಗ್ರಿಗಳು ಸೇರಿದಂತೆ ಒಟ್ಟು ಆರು ಉತ್ಪನ್ನಗಳು ಮಾರುಕಟ್ಟೆಯಲ್ಲಿದೆ. ’ನಮ್ಮ ಮೆಟ್ರೋ’ ಬೆಂಗಳೂರು ಇವರಿಗೆ ಕೇಬಲ್ ಡಕ್ಟ್‌ಗಳ ಪೂರೈಕೆ, ಬೆಂಗಳೂರು ಬಿಬಿಎಂಪಿಗೆ ಸ್ಟಾರ್ಮ್ ವಾಟರ್ ಡ್ರೈನೇಜ್ ಸ್ಲ್ಯಾಬ್‌ಗಳ ಪೂರೈಕೆ, ಪುತ್ತೂರಿನ ಬಾಲವನ ಆರ್ಟ್ ಗ್ಯಾಲರಿ ನಿರ್ಮಾಣ, ಪುತ್ತೂರು ನ್ಯಾಯಾಲಯಗಳ ಸಂಕೀರ್ಣ ಕಾಮಗಾರಿ, ಉತ್ತರ ಕನ್ನಡದ ಯಾಣ ಮತ್ತು ವಿಭೂತಿ ಪಾಲ್ಸ್‌ಗಳಲ್ಲಿ ಅರಣ್ಯ ಇಲಾಖೆಗೆ ಪ್ರಿ-ಕಾಸ್ಟ್ ಸಾಮಾಗ್ರಿಗಳ ಪೂರೈಕೆ, ಆಳ್ವಾಸ್ ಕಾಲೇಜು, ನಿಟ್ಟೆ ಇಂಜಿನಿಯರಿಂಗ್ ಕಾಲೇಜು, ಕೆನರಾ ಇಂಜಿನಿಯರಿಂಗ್ ಕಾಲೇಜು, ಎನ್.ಐ.ಟಿ.ಕೆ. ಸುರತ್ಕಲ್, ಎಕ್ಸ್‌ಪರ್ಟ್ ಕಾಲೇಜು ಮಂಗಳೂರು ಹಾಗೂ ಹಾಸ್ಟೆಲ್‌ಗಳಿಗೆ ಕಾಂಕೂಡ್ ಉತ್ಪನ್ನಗಳ ಪೂರೈಕೆ, ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಛಾವಣಿ, ಬಾಯ್ಲರ್ ಕೋಣೆ ಇತ್ಯಾದಿಗಳ ನಿರ್ಮಾಣ ಮತ್ತು ದ.ಕ ಜಿಲ್ಲೆಯ ಹಲವು ದೇವಸ್ಥಾನಗಳಲ್ಲಿ ಮಾಸ್ಟರ್ ಪ್ಲಾನರಿಯ ತಂತ್ರಜ್ಞಾನದ ಬಳಕೆ ಮಾಡಲಾಗಿದೆ.


ಕಳೆದ 75 ವರ್ಷಗಳಲ್ಲಿ ವಿವಿಧ ಕ್ಷೇತ್ರಗಳಲ್ಲಿ ತನ್ನ ವ್ಯವಹಾರಗಳನ್ನು ವಿಸ್ತರಿಸಿರುವ ಮಾಸ್ಟರ್ ಪ್ಲಾನರಿಯ ಸಹ-ಸಂಸ್ಥೆಗಳಾಗಿರುವ ಮಂಗಲ್ ಸ್ಟೋರ್ಸ್, ಸ್ನೇಹ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಹಾಗೂ ರೂರಲ್ ಡೆವಲಪ್‌ಮೆಂಟ್ ಸೆಂಟರ್‌ಗಳು, ಸಿಮೆಂಟ್ ಮಾರಾಟ ಮಳಿಗೆಗಳ ಮೂಲಕ ವೈವಿಧ್ಯಮಯ ಕಾರ್ಯವ್ಯಾಪ್ತಿಯ ಮೂಲಕ ಹತ್ತೂರಲ್ಲಿ ಹೆಸರು ಪಡೆದಿರುವ ಮಾಸ್ಟರ್ ಪ್ಲಾನರಿಯು 2024ರ ಡಿಸೆಂಬರ್‌ನಲ್ಲಿ ಅಮೃತ ಮಹೋತ್ಸವವನ್ನು ಆಚರಿಸಿತ್ತು. ಸಂಸ್ಥೆಯ ಕಾರ್ಯ ವೈಖರಿ ಮತ್ತು ಗುಣಮಟ್ಟಭರಿತ ಕಾಮಗಾರಿಗಳನ್ನು ಮೆಚ್ಚಿ, ಕುದುರೆಮುಖ ವನ್ಯಜೀವಿ ವಿಭಾಗ, ಕರ್ನಾಟಕ ರಾಜ್ಯ ನಿರ್ಮಾಣ ಕೇಂದ್ರ (ಕಾರ್ನಿಕ್), ಎನ್.ಐ.ಟಿ.ಕೆ. ಸುರತ್ಕಲ್, ದಕ್ಷಿಣ ಕನ್ನಡ ನಿರ್ಮಿತಿ ಕೇಂದ್ರ ಸೇರಿದಂತೆ ಹಲವು ಸರಕಾರಿ ಮತ್ತು ಸರಕಾರೇತರ ಸಂಸ್ಥೆಗಳು ’ಮಾಸ್ಟರ್ ಪ್ಲಾನರಿಗೆ’ ಪ್ರಶಂಸಾ ಪತ್ರವನ್ನು ನೀಡಿವೆ.
ಪತ್ನಿ ರೇಖಾ ಆನಂದ್, ಪುತ್ರರಾದ ಅಕ್ಷಯ್ ಎಸ್.ಕೆ., ಅರ್ಜುನ್ ಎಸ್.ಕೆ., ಆಕಾಶ್ ಎಸ್.ಕೆ. ಮತ್ತು ಪುತ್ರಿ ಆರ್ತಿ ಎಸ್.ಕೆ.ಯವರೊಂದಿಗೆ ಮಂಜಲ್ಪಡ್ಪುನಲ್ಲಿ ವಾಸ್ತವ್ಯವಿದ್ದಾರೆ

LEAVE A REPLY

Please enter your comment!
Please enter your name here