ಉಪ್ಪಿನಂಗಡಿ: ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿಯ ಹಿನ್ನೆಲೆಯಲ್ಲಿ ಉಪ್ಪಿನಂಗಡಿಯಲ್ಲಿ ಉಭಯ ಪಥಗಳ ನಡುವೆ ವಿಭಾಜಕ ರಚಿಸಲು ಹಾಕಿರುವ ಮಣ್ಣಿನಲ್ಲಿ ಸತತ ಎರಡನೇ ದಿನವೂ ಮಹಿಳೆಯರು ಹೂತು ಹೋಗಿ ಅಪಾಯ ಸಂಭವಿಸಿದ್ದು, ಸಕಾಲಿಕ ರಕ್ಷಣಾ ಕಾರ್ಯದಿಂದಾಗಿ ಮಹಿಳೆಯರನ್ನು ರಕ್ಷಿಸಲಾದ ಘಟನೆ ವರದಿಯಾಗಿದೆ.

ಪ್ರಸಕ್ತ ಈ ಹಿಂದೆ ಇದ್ದ ಹೆದ್ದಾರಿಯಿಂದ ಶಾಲಾ ರಸ್ತೆ ಮತ್ತು ದೇವಸ್ಥಾನ ರಸ್ತೆಗೆ ಸಂಪರ್ಕ ಸಾಧಿಸುವ ರಸ್ತೆಯನ್ನು ಹೆದ್ದಾರಿ ವಿಸ್ತರಣೆಯ ಕಾಮಗಾರಿಯ ವೇಳೆ ತೆರವು ಮಾಡಲಾಗಿತ್ತು. ಈ ಮಧ್ಯೆ ಮಂಗಳೂರು -ಬೆಂಗಳೂರು ನಡುವೆ ನೇರ ಸಂಪರ್ಕ ಸಾಧಿಸುವ ಬಸ್ಸುಗಳು ಉಪ್ಪಿನಂಗಡಿಯ ಬಸ್ ನಿಲ್ದ್ದಾಣಕ್ಕೆ ಬಾರದೇ ಮೇಲ್ಸೇತುವೆ ಪ್ರಾರಂಭಗೊಳ್ಳುವ ಸ್ಥಳದಲ್ಲಿಯೇ ಪ್ರಯಾಣಿಕರನ್ನು ಇಳಿಸುವುದರಿಂದಾಗಿ ಮತ್ತು ಬಸ್ ನಿಲ್ದಾಣಕ್ಕೆ ಹೋಗುವವರು ಕೂಡಾ ಸುತ್ತು ಬಳಸಿ ಗಮ್ಯ ಸ್ಥಳವನ್ನು ಸೇರುವ ಬದಲು ಸಮೀಪದ ಹಾದಿಯನ್ನಾಗಿ ಈ ಹಿಂದಿದ್ದ ರಸ್ತೆಯನ್ನೇ ಬಳಸಲು ಮುಂದಾಗುತ್ತಿರುವುದು ಸಾಮಾನ್ಯವಾಗಿ ಕಂಡು ಬರುತ್ತಿದ್ದು, ಇದಕ್ಕಾಗಿ ಇವರು ಎರಡು ಪಾರ್ಶ್ವಗಳ ಹೆದ್ದಾರಿ ನಡುವಿನ ವಿಭಾಜಕವನ್ನು ದಾಟಬೇಕಾಗಿದೆ. ಹೆದ್ದಾರಿಯ ನಡುವೆ ವಿಭಾಜಕದ ನಿರ್ಮಾಣಕ್ಕಾಗಿ ಮಣ್ಣು ಹಾಕಲಾಗಿದ್ದು, ಬಿಸಿಲ ವಾತಾವರಣವಿದ್ದಾಗ ಹಾಕಲಾದ ಮಣ್ಣಿನ ಮೇಲೆ ನಡೆದಾಡಿದರೆ ಯಾವುದೇ ಸಮಸ್ಯೆಗಳು ಮೂಡುತ್ತಿರಲಿಲ್ಲ. ಆದರೆ ಕಳೆದ ಮೂರ್ನಾಲ್ಕು ದಿನಗಳಿಂದ ಸತತ ಮಳೆ ಸುರಿಯುತ್ತಿದ್ದ ಹಾಕಲಾಗಿದ್ದ ಮಣ್ಣುಗಳು ಮೃದುವಾಗಿ ಕಾಲಿಟ್ಟರೆ ಹೂತು ಹೋಗುವ ಸ್ಥಿತಿ ನಿರ್ಮಾಣವಾಗಿದೆ.
ಕಳೆದ ಮಂಗಳವಾರದಂದು ಶಾಲೆಗೆ ನಿಗದಿತ ಅವಧಿಯೊಳಗೆ ತಲುಪುವ ಒತ್ತಡಕ್ಕೆ ಸಿಲುಕಿದ್ದ ಶಿಕ್ಷಕಿಯೋರ್ವರು ತಾನು ಪ್ರಯಾಣಿಸುವ ಬಸ್ ನಿಲ್ದಾಣಕ್ಕೆ ತಲುಪುವ ಮುನ್ನವೇ ಹೆದ್ದಾರಿಯಲ್ಲಿಯೇ ಇಳಿದು, ಇನ್ನೊಂದು ಪಾರ್ಶ್ವದ ರಸ್ತೆಗೆ ಹೋಗುವ ಸಲುವಾಗಿ ವಿಭಾಜಕಕ್ಕೆ ಹಾಕಲಾದ ಮಣ್ಣಿನಲ್ಲಿ ಕಾಲಿರಿಸಿದ್ದಾರೆ. ನೋಡ ನೋಡುತ್ತಿದ್ದಂತೆಯೇ ಸೊಂಟಮಟ್ಟದ ವರೆಗೆ ಹೂತು ಹೋದ ಅವರನ್ನು ಸಮೀಪದಲ್ಲೇ ಇದ್ದ ಜೆಸಿಬಿ ಯಂತ್ರದ ಸಹಾಯದಿಂದ ಸುರಕ್ಷಿತವಾಗಿ ಮೇಲಕ್ಕೆತ್ತಲಾಯಿತು.

ಬಧವಾರದಂದು ಅಂತಹದ್ದೇ ಘಟನೆ ಮರುಕಳಿಸಿದ್ದು, ಖಾಸಗಿ ವಿದ್ಯಾ ಸಂಸ್ಥೆಯ ಶಾಲಾ ಪರಿವೀಕ್ಷಕಿ ಮೀನಾಕ್ಷಿ ಎಂಬವರು ಎಂದಿನಂತೆ ಹೆದ್ದಾರಿಯಲ್ಲೇ ಬಸ್ಸಿನಿಂದ ಇಳಿದು ಇನ್ನೊಂದು ಪಾರ್ಶ್ವದ ರಸ್ತೆಗೆ ಹೋಗುವ ಸಲುವಾಗಿ ವಿಭಾಜಕದಲ್ಲಿ ಮಣ್ಣು ಹಾಕಲಾದ ಸ್ಥಳಕ್ಕೆ ಕಾಲಿರಿಸಿದಂತೆ ಮಣ್ಣಿನಲ್ಲಿ ಹೂತು ಹೋಗಿದ್ದಾರೆ. ಈ ವೇಳೆ ರಸ್ತೆಯಲ್ಲಿ ಸಂಚರಿಸುತ್ತಿದ್ದ ಅಟೋ ರಿಕ್ಷಾ ಚಾಲಕ ತಕ್ಷಣವೇ ಸಹಾಯಕ್ಕಾಗಿ ಧಾವಿಸಿ ಬಂದರಾದರೂ ಅವರೂ ಕೂಡಾ ಮಣ್ಣಿನಲ್ಲಿ ಹೂತು ಹೋದಂತಾಗಿ ಪ್ರಯಾಸದಿಂದ ಮೇಲೆದ್ದರು. ಬಳಿಕ ರಕ್ಷಣಾತ್ಮಕವಾಗಿ ಪರಿವೀಕ್ಷಕಿಯವರನ್ನು ಮೇಲೆತ್ತಲಾಯಿತು. ಬಳಿಕ ಅವರು ಸ್ಥಳೀಯ ದೇವಸ್ಥಾನದಲ್ಲಿ ಮೈಗೆ ಮತ್ತಿದ್ದ ಮಣ್ಣನ್ನು ತೆಗೆದು ಕರ್ತವ್ಯಕ್ಕೆ ಹಾಜರಾದರು.
ಹೆದ್ದಾರಿ ಮಧ್ಯದಲ್ಲಿ ಅಳವಡಿಸಲಾದ ರಸ್ತೆ ವಿಭಾಜಕ ಸ್ಥಳವು ಆಳವಾಗಿದ್ದು, ಇತ್ತೀಚೆಗಷ್ಟೇ ಮಣ್ಣು ಹಾಕಿರುವುದರಿಂದ ಮಳೆ ನೀರಿನಿಂದ ಸಡಿಲಗೊಂಡು ಅಪಾಯಕಾರಿಯಾಗಿದೆ. ಸಂಬಂಧಪಟ್ಟ ಕಾಮಗಾರಿ ಗುತ್ತಿಗೆದಾರ ಸಂಸ್ಥೆ ಜನರನ್ನು ಈ ಭಾಗದ ಮೂಲಕ ಸಂಚರಿಸದಂತೆ ಎಚ್ಚರಿಸಲು ಸೂಕ್ತ ಫಲಕ ಅಥವಾ ತಡೆಯನ್ನು ಅಳವಡಿಸುವ ಕಾರ್ಯವನ್ನು ಆದ್ಯತೆಯಲ್ಲಿ ನಡೆಸಬೇಕಾಗಿದೆ.
ಮಕ್ಕಳಾಗಿದ್ದಲ್ಲಿ ಗತಿಯೇನೂ?
ಘಟನೆಯ ಬಗ್ಗೆ ಮಾಧ್ಯಮಕ್ಕೆ ಮಾಹಿತಿ ನೀಡಿದ ಬುಧವಾರ ಅವಘಡಕ್ಕೆ ತುತ್ತಾದ ಮಹಿಳೆ ಮೀನಾಕ್ಷಿಯವರು, ಯಾವುದೇ ರೀತಿಯಲ್ಲಿ ಅಪಾಯದ ಮುಂಜಾಗ್ರತಾ ಫಲಕ ಅಳವಡಿಸದ ಕಾರಣ ನಾನು ಸಹಿತ ಹಲವರು ಇಲ್ಲಿ ಹೂತು ಹೋಗಿ ಸಮಸ್ಯೆಗೆ ಸಿಲುಕಿದೆವು. ಬೊಬ್ಬೆ ಹೊಡೆದು ಸಹಾಯ ಯಾಚಿಸಿ ರಕ್ಷಿಸಲ್ಪಟ್ಟಿದ್ದೇವೆ. ಆದರೆ ಇದೇ ರೀತಿಯಲ್ಲಿ ಸಣ್ಣ ಗಾತ್ರದ ಮಕ್ಕಳು ಏನಾದರೂ ಈ ರಸ್ತೆಯಲ್ಲಿ ದಾಟಿ ಶಾಲೆಗೆ ತಲುಪಲು ಮುಂದಾದರೆ ಸಂಭವಿಸಿಸುವ ಅನಾಹುತವಾದರೂ ಯಾವ ಬಗೆಯದ್ದು. ಮಕ್ಕಳು ಹುದುಗಿ ಹೋದರೆ ಸಂಪೂರ್ಣವಾಗಿ ಮಣ್ಣಿನಡಿ ಸಿಲುಕಿ ಪ್ರಾಣಪಾಯವಾಗುವ ಸಾಧ್ಯತೆ ಇರುವುದರಿಂದ ಹೆದ್ದಾರಿ ಮಧ್ಯದ ಇಂತಹ ಅಪಾಯಕಾರಿ ಸ್ಥಳಗಳನ್ನು ಜನ ಸಂಚಾರಕ್ಕೆ ನಿರ್ಬಂಧ ವಿಧಿಸುವ ರೀತಿಯಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಅಗ್ರಹಿಸಿದ್ದಾರೆ.