ನೆಲ್ಯಾಡಿ: ಸಮಾಜ ಸೇವೆ ಮಾಡಲು ಸಾಕಷ್ಟು ಅವಕಾಶಗಳು ಇರುತ್ತವೆ. ಇದಕ್ಕೆ ಸ್ಥಿತಿವಂತರೇ ಆಗಬೇಕೆಂದಿಲ್ಲ. ಇಲ್ಲೊಬ್ಬ ಗ್ರಾ.ಪಂ.ಸದಸ್ಯರು ತನಗೆ ಬರುತ್ತಿರುವ ಪ್ರತಿ ತಿಂಗಳ ಗೌರವಧನ, ಸಭಾ ಭತ್ಯೆಯನ್ನು ತನ್ನ ವಾರ್ಡ್ನ ಶಾಲೆಗಳಲ್ಲಿ ಕಲಿಯುತ್ತಿರುವ ಬಡ ಮಕ್ಕಳ ಶಿಕ್ಷಣಕ್ಕೆ ನೀಡುವ ಮೂಲಕ ಮಾದರಿಯಾಗಿದ್ದಾರೆ.

ನೆಲ್ಯಾಡಿ ಗ್ರಾ.ಪಂ.ನ 2ನೇ ವಾರ್ಡ್ ಸದಸ್ಯ ಮೊಹಮ್ಮದ್ ಇಕ್ಬಾಲ್ ಅವರು ತನಗೆ ಬರುತ್ತಿರುವ ಗೌರವಧನ, ಸಭಾ ಭತ್ಯೆಯನ್ನು ತನ್ನ ವಾರ್ಡ್ನ ಶಾಲೆಗಳಲ್ಲಿ ಕಲಿಯುತ್ತಿರುವ ಬಡ ಮಕ್ಕಳ ಶಿಕ್ಷಣಕ್ಕೆ ನೀಡುವ ಮೂಲಕ ಮಾದರಿಯಾಗಿದ್ದಾರೆ. ಅಂದೆ ಹಾಗೆ ಮೊಹಮ್ಮದ್ ಇಕ್ಬಾಲ್ ಅವರೇನು ಸ್ಥಿತಿವಂತರಲ್ಲ. ತನ್ನ ವಾರ್ಡ್ನ ಸದಸ್ಯರ ಮತದಿಂದ ಪಂಚಾಯತ್ ಸದಸ್ಯನಾಗಿ ಆಯ್ಕೆಯಾಗಿರುವುದರಿಂದ ನನಗೆ ಬರುತ್ತಿರುವ ಗೌರವಧನ, ಸಭಾಭತ್ಯೆಯೂ ವಾರ್ಡ್ನ ಜನರ ಉಪಯೋಗಕ್ಕೆ ಸಿಗಬೇಕೆಂಬುದು ಅವರ ಅಭಿಲಾಷೆಯಾಗಿದೆ. ಅದರಂತೆ ತನ್ನ ಗೌರವಧನ, ಸಭಾಭತ್ಯೆಯನ್ನು ಬಳಕೆ ಮಾಡುತ್ತಿದ್ದಾರೆ.
31ರ ಹರೆಯದ ಮೊಹಮ್ಮದ್ ಇಕ್ಬಾಲ್ ಅವರು ಮೊದಲ ಬಾರಿಗೆ ಗ್ರಾ.ಪಂ.ಗೆ ಸದಸ್ಯನಾಗಿ ಆಯ್ಕೆಯಾದವರು. ತನ್ನ ವಾರ್ಡ್ನ ಸದಸ್ಯರಿಗೆ ಯಾವುದೇ ಸಮಸ್ಯೆ ಬಂದರೂ ತಕ್ಷಣ ಸ್ಪಂದಿಸುವ ಮನೋಭಾವ ಹೊಂದಿದ್ದಾರೆ. ಇವರು ಸದಸ್ಯನಾಗಿ ಆಯ್ಕೆಯಾಗಿ ನಾಲ್ಕೂವರೇ ವರ್ಷ ಪೂರ್ಣಗೊಂಡಿದ್ದು ಗ್ರಾ.ಪಂ.ನಿಂದ ತನಗೆ ಸಿಗುವ ಗೌರವಧನ, ಸಭಾಭತ್ಯೆಯಲ್ಲಿ ಈ ತನಕ ನಯಾಪೈಸೆಯೂ ತನ್ನ ಸ್ವಂತಕ್ಕೆ ಉಪಯೋಗಿಸಿಲ್ಲ. ಇದರ ಬದಲು ತನ್ನ ವಾರ್ಡ್ನ ಸದಸ್ಯರಿಗೆ ತನ್ನ ಸ್ವಂತ ಖರ್ಚಿನಲ್ಲೇ ಸಹಕಾರ ನೀಡುತ್ತಿದ್ದಾರೆ.
90 ಸಾವಿರಕ್ಕೂ ಹೆಚ್ಚು ವಿನಿಯೋಗ:
ಮೊಹಮ್ಮದ್ ಇಕ್ಬಾಲ್ ಅವರು 2021ರ ಫೆಬ್ರವರಿಯಿಂದ ಗ್ರಾ.ಪಂ.ಸದಸ್ಯನಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ಸದಸ್ಯನಾಗಿ ಆಯ್ಕೆಗೊಂಡ ವೇಳೆ ಗ್ರಾ.ಪಂ.ಸದಸ್ಯರಿಗೆ ತಿಂಗಳಿಗೆ 1 ಸಾವಿರ ರೂ.ಗೌರವಧನ ಹಾಗೂ 100 ರೂ.ಸಭಾಭತ್ಯೆ ಸಿಗುತಿತ್ತು. 2 ವರ್ಷದ ನಂತರ ಗೌರವಧನ ಹಾಗೂ ಸಭಾಭತ್ಯೆ ಏರಿಕೆ ಮಾಡಲಾಗಿದ್ದು ಈಗ ಪ್ರತಿ ತಿಂಗಳು 2 ಸಾವಿರ ರೂ.ಗೌರವಧನ ಹಾಗೂ 300 ರೂ.ಸಭಾಭತ್ಯೆ ಸಿಗುತ್ತಿದೆ. ಮೊಹಮ್ಮದ್ ಇಕ್ಬಾಲ್ ಅವರು ಸದಸ್ಯನಾಗಿ ನಾಲ್ಕೂವರೇ ವರ್ಷ ಪೂರೈಸಿದ್ದು ಈ ತನಕ ಅಂದಾಜು 90 ಸಾವಿರ ರೂಪಾಯಿಯನ್ನು ಬಡ ಮಕ್ಕಳ ಶಿಕ್ಷಣಕ್ಕೆ ವಿನಿಯೋಗಿಸಿದ್ದಾರೆ.
ಚೆಕ್ ನೇರ ಶಾಲೆಗೆ;
ಆರಂಭದ ದಿನಗಳಲ್ಲಿ ಗೌರವಧನ ಹಾಗೂ ಸಭಾಭತ್ಯೆಯನ್ನು ಗ್ರಾಮ ಪಂಚಾಯತ್ನಿಂದ ಸದಸ್ಯರಿಗೆ ಚೆಕ್ ಮೂಲಕ ನೀಡಲಾಗುತ್ತಿತ್ತು. ಮೊಹಮ್ಮದ್ ಇಕ್ಬಾಲ್ ಅವರು ತನಗೆ ದೊರೆತ ಚೆಕ್ಗಳನ್ನು ತನ್ನ ವಾರ್ಡ್ನ ಯಾವುದಾದರೊಂದು ಅಂಗನವಾಡಿ, ಶಾಲೆ, ಹೈಸ್ಕೂಲ್, ಕಾಲೇಜುಗಳಿಗೆ ನೀಡುತ್ತಾರೆ. ಇತ್ತೀಚಿನ ದಿನಗಳಲ್ಲಿ ಗೌರವಧನವನ್ನು ಚೆಕ್ನ ಬದಲು ಸದಸ್ಯರ ಖಾತೆಗೆ ಜಮೆ ಮಾಡಲಾಗುತ್ತಿದೆ. ಮೊತ್ತ ತನ್ನ ಖಾತೆಗೆ ಜಮೆ ಆದರೂ ಮೊಹಮ್ಮದ್ ಇಕ್ಬಾಲ್ ಅವರು ಗೌರವಧನವನ್ನು ಚಾಚೂ ತಪ್ಪದೇ ಶಾಲೆಗೆ ನೀಡುತ್ತಿದ್ದಾರೆ. ಮೊಹಮ್ಮದ್ ಇಕ್ಬಾಲ್ ಅವರು ಈ ತನಕ ತನ್ನ ವಾರ್ಡ್ನ ಅಂಗನವಾಡಿ, ಪಿಎಂಶ್ರೀ ಸರಕಾರಿ ಉನ್ನತೀಕರಿಸಿದ ಹಿ.ಪ್ರಾ.ಶಾಲೆ ನೆಲ್ಯಾಡಿ, ಸಂತಜಾರ್ಜ್ ವಿದ್ಯಾಸಂಸ್ಥೆ ನೆಲ್ಯಾಡಿ, ಯುನಿವರ್ಸಿಟಿ ಕಾಲೇಜು ನೆಲ್ಯಾಡಿ ಶಾಲೆಗಳಿಗೆ ನೀಡಿದ್ದಾರೆ. ಅಂಗನವಾಡಿಯವರು ಅಂಗನವಾಡಿಗೆ ಬೇಕಾದ ಫ್ಯಾನ್ ಅಥವಾ ಇನ್ನಿತರ ಅವಶ್ಯಕತೆಗೆ ಬಳಕೆ ಮಾಡಿದ್ದಾರೆ. ಶಾಲೆಯ ಮುಖ್ಯಸ್ಥರು ಈ ಹಣವನ್ನು ತಮ್ಮ ಶಾಲೆಯಲ್ಲಿ ಕಲಿಯುತ್ತಿರುವ ಬಡ ಮಕ್ಕಳ ಶಿಕ್ಷಣಕ್ಕೆ ಉಪಯೋಗಿಸುತ್ತಿದ್ದಾರೆ. ಒಟ್ಟಿನಲ್ಲಿ ಗ್ರಾ.ಪಂ.ನಿಂದ ಸಿಗುವ ಗೌರವಧನದಲ್ಲಿ ನಯಾಪೈಸೆಯನ್ನೂ ತನ್ನ ಸ್ವಂತಕ್ಕೆ ಬಳಸಿಕೊಳ್ಳದೆ ಬಡ ಮಕ್ಕಳ ಶಿಕ್ಷಣಕ್ಕೆ ನೆರವು ನೀಡುತ್ತಿರುವ ಮೊಹಮ್ಮದ್ ಇಕ್ಬಾಲ್ ಅವರ ಸಮಾಜ ಸೇವೆಗೆ ಜನರಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ.
ಮೊಹಮ್ಮದ್ ಇಕ್ಬಾಲ್ ಪರಿಚಯ:
ಇವರು ನೆಲ್ಯಾಡಿ ಗ್ರಾಮದ ಮೊರಂಕಳ ದಿ| ಅಹಮ್ಮದ್ ಕುಂಞಿ ಹಾಗೂ ಖುಲ್ಸು ದಂಪತಿಯ ಏಕೈಕ ಪುತ್ರ. ಮೊಹಮ್ಮದ್ ಇಕ್ಬಾಲ್ ಅವರಿಗೆ ಐವರು ಸಹೋದರಿಯರೂ ಇದ್ದಾರೆ. ಮೊರಂಕಳದಲ್ಲಿ 40 ಸೆಂಟ್ಸ್ ಜಾಗದಲ್ಲಿ ವಾಸವಾಗಿದ್ದಾರೆ. ಪಿಯುಸಿ ಬಳಿಕ ಐಟಿಐ ಡಿಪ್ಲೋಮಾ ಮಾಡಿದ್ದಾರೆ. ಕೆಲ ವರ್ಷ ಕತಾರ್ನಲ್ಲಿ ಕೆಲಸ ಮಾಡಿದ್ದರು. 1 ವರ್ಷದ ಹಿಂದೆ ನೆಲ್ಯಾಡಿಯಲ್ಲಿ ಎಂ.ಐ.ಎಂಟರ್ಪ್ರೈಸಸ್ ಪೈಂಟ್ ಮಾರಾಟದ ಅಂಗಡಿ ಮುನ್ನಡೆಸುತ್ತಿದ್ದಾರೆ. ತಂದೆ ನಿಧನರಾಗಿರುವುದರಿಂದ ಮನೆಯ ಜವಾಬ್ದಾರಿಯನ್ನೂ ನಿಭಾಯಿಸುವುದರೊಂದಿಗೆ ಸಮಾಜ ಸೇವೆಯೂ ಮಾಡುತ್ತಿದ್ದಾರೆ.
’ ನನ್ನ ವಾರ್ಡ್ನ ಸದಸ್ಯರು ನನಗೆ ಮತ ನೀಡಿ ಗ್ರಾ.ಪಂ.ಸದಸ್ಯನಾಗಿ ಆಯ್ಕೆ ಮಾಡಿದ್ದಾರೆ. ನಾನೇನು ಕಷ್ಟಪಟ್ಟು ನನ್ನ ಶ್ರಮದಿಂದ ಇಲ್ಲವೇ ಪರೀಕ್ಷೆ ಬರೆದು ಈ ಸ್ಥಾನ ಗಿಟ್ಟಿಸಿಕೊಂಡಿಲ್ಲ. ನನ್ನನ್ನು ಆಯ್ಕೆ ಮಾಡಿರುವ ವಾರ್ಡ್ನ ಸದಸ್ಯರ ಋಣ ನನ್ನ ಮೇಲಿದೆ. ಅದಕ್ಕಾಗಿಯೇ ನನಗೆ ಬರುವ ಗೌರವಧನ, ಸಭಾಭತ್ಯೆಯನ್ನು ನನ್ನ ಸ್ವಂತಕ್ಕೆ ಬಳಸದೇ ಇರಲು ಸದಸ್ಯನಾಗಿ ಆಯ್ಕೆಯಾಗಿ ಬಂದ ದಿನವೇ ನಿರ್ಧರಿಸಿದ್ದೆ. ಅದರಂತೆ ನನ್ನ ಗೌರವಧನವನ್ನು ವಾರ್ಡ್ನ ಬಡ ಮಕ್ಕಳ ಶಿಕ್ಷಣಕ್ಕೆ ನೀಡುತ್ತಿದ್ದೇನೆ. ಇದು ನನಗೆ ಸಂತಸ ತಂದಿದೆ.’
-ಮೊಹಮ್ಮದ್ ಇಕ್ಬಾಲ್, ಸದಸ್ಯರು
ಗ್ರಾ.ಪಂ.ನೆಲ್ಯಾಡಿ
’ ಗ್ರಾ.ಪಂ.ಸದಸ್ಯ ಮೊಹಮ್ಮದ್ ಇಕ್ಬಾಲ್ ಅವರು ನಾವು ಕೇಳದೇ ಅವರಿಗೆ ಸಿಗುವ ಗೌರವಧನವನ್ನು ಕಳೆದ ನಾಲ್ಕು ವರ್ಷಗಳಿಂದ ನಮ್ಮ ಶಾಲೆಗೂ ನೀಡಿ ಅರ್ಹತೆ ಇರುವ ಮಕ್ಕಳ ಶಿಕ್ಷಣಕ್ಕೆ ಬಳಸುವಂತೆ ಹೇಳಿದ್ದಾರೆ. ಅದರಂತೆ ಅವರು ನೀಡುವ ಧನ ಸಹಾಯವನ್ನು ಸಂಸ್ಥೆಯಲ್ಲಿ ಆರ್ಥಿಕವಾಗಿ ಹಿಂದುಳಿದ ಮಕ್ಕಳ ಶುಲ್ಕ ಪಾವತಿ ಸಹಿತ ವಿದ್ಯಾಭ್ಯಾಸಕ್ಕೆ ಸಂಬಂಧಿಸಿದಂತೆ ಬಳಕೆ ಮಾಡುತ್ತಿದ್ದೇವೆ.’
ಎಂ.ಐ.ತೋಮಸ್, ಮುಖ್ಯಶಿಕ್ಷಕರು
ಸಂತಜಾರ್ಜ್ ಕನ್ನಡ ಮಾಧ್ಯಮ ಪ್ರೌಢಶಾಲೆ , ನೆಲ್ಯಾಡಿ