ಪುತ್ತೂರು: ಅಂತರಾಷ್ಟ್ರೀಯ ಖ್ಯಾತಿಯ ಸಂಗೀತ ನಿರ್ದೇಶಕ, ಹಾಗೂ ಗಾಯಕರಾದ ಶಂಕರ್ ಮಹಾದೇವನ್ ಅಕಾಡೆಮಿ ವತಿಯಿಂದ ನಡೆಯುವ ಆನ್ಲೈನ್ ಸಂಗೀತ ತರಗತಿಯು ಹಾರಾಡಿ ಸರಕಾರಿ ಮಾದರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆರಂಭಗೊಂಡಿತು.
ಎಸ್ಡಿಎಂಸಿ ಅಧ್ಯಕ್ಷೆ ಸುಲೋಚನಿ ಕಾರ್ಯಕ್ರಮ ಉದ್ಘಾಟಿಸಿ, ಸಂಗೀತವು ಮಕ್ಕಳಲ್ಲಿ ಏಕಾಗ್ರತೆಯನ್ನು ಹೆಚ್ಚಿಸುತ್ತದೆ, ಮಕ್ಕಳು ಸಂಗೀತದ ಮೂಲಕ ಸಾಧನೆ ಮಾಡಲಿ, ಹಾಗೂ ಈ ಯೋಜನೆಯನ್ನು ಕಲ್ಪಿಸಿದ ಅಕಾಡೆಮಿಗೆ ಕೃತಜ್ಞತೆಗಳನ್ನು ಸಲ್ಲಿಸಿದರು. ಮುಖ್ಯ ಶಿಕ್ಷಕ ಕೆಕೆ ಮಾಸ್ತರ್ ಸ್ವಾಗತಿಸಿ ಶುಭ ಹಾರೈಸಿದರು.
ಶಂಕರ್ ಮಹಾದೇವನ್ ಅಕಾಡೆಮಿಯ ಸಂಗೀತ ಪ್ರಾಧ್ಯಾಪಕಿ ನಂದಿನಿ ವಿನಾಯಕ್ ಪ್ರಾಸ್ತಾವಿಕ ಮಾತನಾಡಿ ಅಕಾಡೆಮಿಯು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಉಚಿತವಾಗಿ ಸಂಗೀತವನ್ನು ಕಲಿಸುವ ಮೂಲಕ ಹೆಚ್ಚು ತಿಳಿದುಕೊಳ್ಳುವ, ಹೆಚ್ಚು ಕಲಿಯುವ, ಹೆಚ್ಚು ಬಯಸುವ, ಸಹಾಯ ಹಸ್ತ ಚಾಚುವ, ಮೂಲಕ ಉನ್ನತ ಭಾರತದ ಕಾಯಕಕ್ಕೆ ಕೈ ಜೋಡಿಸುತ್ತಿದ್ದು ಸಂಗೀತದ ವಿವಿಧ ಸ್ತರಗಳ, ವಿವಿಧ ಭಾಷಾ ಹಾಡುಗಳನ್ನು ಕಲಿಸುವ ಉದ್ದೇಶ ಹೊಂದಿದೆ ಎಂದರು.
ಅಕಾಡೆಮಿಯ ಸಂಸ್ಥಾಪಕ ಹಾಗೂ ಇಸಿಒ ಶ್ರೀಧರ್ ರಂಗನಾಥನ್ ಆನ್ಲೈನ್ ಮೂಲಕ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಅಕಾಡೆಮಿಯ ಸಂಗೀತ ಶಿಕ್ಷಕಿ ಚಿನ್ಮಯಿ ಮನೀಶ್ ತ್ರಿಶೂರ್ ಮಕ್ಕಳಿಗೆ ಗಣಪತಿ ಸ್ತುತಿಯೊಂದಿಗೆ ತರಗತಿಗೆ ಚಾಲನೆ ನೀಡಿದರು. ಮುಖ್ಯ ಶಿಕ್ಷಕರಾದ ಕೆ.ಕೆ ಮಾಸ್ತರ್ ಸ್ವಾಗತಿಸಿ ಪ್ರೇಮ ಕೆ.ಸಿ ವಂದಿಸಿದರು. ಜನಾರ್ಧನ ದುರ್ಗ ಕಾರ್ಯಕ್ರಮ ನಿರೂಪಿಸಿದರು.