ಔಷಧೀಯ ಗುಣವುಳ್ಳ ತೆಂಗು ಶ್ರೇಷ್ಠ ಬೆಳೆಯಾಗಿದೆ-ಬದನಾಜೆ ಶಂಕರ ಭಟ್
ಕಂಪೆನಿಯ ಬಗೆಗಿನ ರೈತರ ವಿಶ್ವಾಸವೇ ಫಲಪ್ರದವಾಗುತ್ತದೆ-ಕಡಮಜಲು ಸುಭಾಷ್ ರೈ
ಪುತ್ತೂರು: ದಕ್ಷಿಣ ಕನ್ನಡ ತೆಂಗು ರೈತ ಉತ್ಪಾದಕರ ಕಂಪನಿಯ 2023-24ನೇ ಸಾಲಿನ ವಾರ್ಷಿಕ ಮಹಾಸಭೆ ಜೂ.26ರಂದು ಜೈನಭವನದಲ್ಲಿ ನಡೆಯಿತು.
ತೆಂಗು ರೈತ ಉತ್ಪಾದಕರ ಕಂಪನಿಯ ಸಲಹೆಗಾರ ಬದನಾಜೆ ಶಂಕರ ಭಟ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಶ್ರೀಲಂಕಾ ಹಾಗೂ ಇತರ ದೇಶಗಳಿಂದ ಸಮುದ್ರದ ಮೂಳಕ ಬಂದ ತೆಂಗು ಬೆಳೆ ಕೇರಳದಲ್ಲಿ ಆರಂಭವಾಯಿತು. ಆದುದರಿಂದ ಇದಕ್ಕೆ ನಾರಿಕೇಳ ಎಂಬ ಹೆಸರು ಬಂದಿದೆ. ಕರ್ನಾಟಕದಲ್ಲಿ ಹೆಚ್ಚಾಗಿ ಕರಾವಳಿ ಪ್ರದೇಶದಲ್ಲಿ ಬೆಳೆಯಲಾಗುತ್ತದೆ. ತೆಂಗಿನ ಮರಕ್ಕೆ ಉಪ್ಪು ಅಗತ್ಯವಿದೆ. ಆದುದರಿಂದಲೇ ಸಮುದ್ರದ ಬದಿಯಲ್ಲಿ ಬೆಳೆಯುತ್ತದೆ ಎಂದರು. ತೆಂಗು ಔಷಧೀಯ ಗುಣವುಳ್ಳ ಬೆಳೆಯಾಗಿದೆ. ಇದರಲ್ಲಿ ಸುಮಾರು 12 ಔಷಧೀಯ ಗುಣಗಳಿವೆ. ಇದರ ಕೊತ್ತಳಿಗೆಯಲ್ಲಿ ಉಪ್ಪಿನ ಅಂಶವಿರುತ್ತದೆ. ತೆಂಗಿನ ಕಾಯಿಗೆ ಧಾರ್ಮಿಕ ಮಹತ್ವವೂ ಇದೆ. ತೆಂಗು ಶ್ರೇಷ್ಟವಾದ ಕಲ್ಪವೃಕ್ಷ. ಇದನ್ನು ಉಳಿಸಿ ಬೆಳೆಸುವ ಕಾರ್ಯವನ್ನು ಮಾಡಬೇಕು ಎಂದರು.
ಇನ್ನೋರ್ವ ಸಲಹೆಗಾರ ಕಡಮಜಲು ಸುಭಾಷ್ ರೈ ಮಾತನಾಡಿ, ತೆಂಗು ರೈತ ಉತ್ಪಾದಕರ ಕಂಪೆನಿಯ ಬಗ್ಗೆ ಜಿಜ್ಞಾಸೆ ಇದೆ. ರೈತರಲ್ಲಿ ಕಂಪೆನಿಯ ಬಗ್ಗೆ ವಿಶ್ವಾಸವಿರಬೇಕು. ವಿಶ್ವಾಸವೇ ಫಲಪ್ರದವಾಗುತ್ತದೆ. ಈ ಕಂಪೆನಿ ಆರಂಭವಾಗಿ 4 ವರ್ಷವಾಗಿದೆ. ಇದು ಅಂಬೆಗಾಲಿಡುತ್ತಿರುವ ಕಂಪೆನಿಯಾಗಿದೆ. ಇದರಲ್ಲಿ ಸುಮಾರು 20 ಸಾವಿರ ರೈತರು ಇದ್ದಾರೆ ಅವರೇ ಇದಕ್ಕೆ ಯಜಮಾನರು ಎಂದರು. ತೆಂಗು ಬೆಳೆಗೆ ಹಂತ ಹಂತವಾಗಿ ಧಾರಣೆ ಹೆಚ್ಚಾಗಿ ಈಗ 70 ರೂ. ಇದೆ. 70 ರೂ. ಧಾರಣೆಯನ್ನು ತಂದ ಕೀರ್ತಿ ತೆಂಗು ರೈತ ಉತ್ಪಾದಕರ ಕಂಪೆನಿಗೆ ಸಲ್ಲುತ್ತದೆ. ರೈತರು ತೆಂಗನ್ನು ಈ ಕಂಪೆನಿಗೆ ಮಾರಾಟ ಮಾಡಿ೯ ಈ ಸಂಸ್ಥೆಯನ್ನು ಉಳಿಸಿ ಎಂದು ಹೇಳಿದ ಅವರು ಕಂಪೆನಿಯ ಯೋಚನೆ, ಯೋಜನೆಗಳು ಕಾರ್ಯಕರೂಪಕ್ಕೆ ಬಂದು ಮುಂದೆ ಸದೃಢ ಕಂಪೆನಿಯಾಗಿ ಮೂಡಿಬರಲಿ ಎಂದರು.
ಲೆಕ್ಕಪರಿಶೋಧಕರಾದ ಕಿರಣ್ 2023-24ನೇ ಸಾಲಿನ ಹಣಕಾಸು ವ್ಯವಹಾರಗಳನ್ನು ತಿಳಿಸಿ ಕಂಪನಿಯು ಒಟ್ಟು 5 ಕೋಟಿಯಷ್ಟು ವ್ಯವಹಾರ ನಡೆಸಿದೆ ಎಂದರು.

ಕಂಪನಿಯ ಸಲಹಾ ಸಮಿತಿ ಸದಸ್ಯರಾದ ನಿತ್ಯಾನಂದ ಮುಂಡೋಡಿ, ಚಿದಾನಂದ ಬೈಲಾಡಿ, ಕುಮಾರ್ ಪೆರ್ನಾಜೆ, ಪ್ರಭಾಕರ ಮಯ್ಯ, ಮಹಾಲಿಂಗ ನಾಯ್ಕ, ಗಣಪಯ್ಯ ಭಟ್, ಡೇವಿಡ್, ಪೂವಪ್ಪ ಗೌಡ ಐತ್ತೂರು, ನಿರ್ದೇಶಕರಾದ ಲತಾ ಪಿ, ವರ್ಧಮಾನ ಶೆಟ್ಟಿ, ಚಂದ್ರಹಾಸ, ಹರಿಪ್ರಸಾದ ಟಿ.ಬಿ., ವಸಂತ ಕೆ., ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪುತ್ತೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳ ಸದಸ್ಯರು ಭಾಗವಹಿಸಿದ್ದರು. ಸಲಹೆಗಾರ ಯತೀಶ್ ಕೆ.ಎಸ್. ಸಂಸ್ಥೆಯ ಭವಿಷ್ಯದ ಯೋಜನೆಗಳನ್ನು ತಿಳಿಸಿದರು. ನವ್ಯಾ ಅಮೈ ವಾರ್ಷಿಕ ವರದಿ ವಾಚಿಸಿದರು. ಕಂಪನಿಯ ಹೂಡಿಕೆದಾರರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಸರಸ್ವತಿ ಪ್ರಾರ್ಥಿಸಿ ಉಪಾಧ್ಯಕ್ಷ ಗಿರಿಧರ ಸ್ಕಂದ ಸ್ವಾಗತಿಸಿದರು. ನಿರ್ದೇಶಕ ತಿಮ್ಮಪ್ಪ ವಿ., ವಂದಿಸಿ ನವ್ಯಾ ಅಮೈ ಮತ್ತು ಶ್ರೀನಿಧಿ ಕಾರ್ಯಕ್ರಮ ನಿರೂಪಿಸಿದರು.
2030ಕ್ಕೆ ಮಹಿಳೆಯರು ಸ್ವಾವಲಂಬಿಗಳಾಗಿ ಬದುಕುವ ಗುರಿ ಇದೆ-ಕುಸುಮಾಧರ ಎಸ್.ಕೆ.
ಅಧ್ಯಕ್ಷತೆ ವಹಿಸಿದ್ದ ತೆಂಗು ರೈತ ಉತ್ಪಾದಕರ ಕಂಪನಿಯ ಅಧ್ಯಕ್ಷ ಕುಸುಮಾಧರ ಎಸ್.ಕೆ. ಪ್ರಾಸ್ತಾವಿಕವಾಗಿ ಮಾತನಾಡಿ ತೆಂಗು ರೈತ ಉತ್ಪಾದಕರ ಕಂಪನಿ 2021ರಲ್ಲಿ ರಿಜಿಸ್ಟರ್ ಆಗಿದ್ದು ಕರ್ನಾಟಕದಾದ್ಯಂತ ಸುಮಾರು 20 ಸಾವಿರಕ್ಕಿಂತ ಆಧಿಕ ರೈತ ಸದಸ್ಯರನ್ನು ಹೊಂದಿದೆ. ಇದರಲ್ಲಿ 10 ಸಾವಿರಕ್ಕಿಂತ ಹೆಚ್ಚಿನ ರೈತ ಸದಸ್ಯರು ಪಾಲು ಬಂಡವಾಳ ಹೊಂದಿದ್ದಾರೆ. ಸಿಪಿಸಿಆರ್ಐ ಮತ್ತು ಎಲ್ಲಾ ವಿಜ್ಞಾನಿಗಳು, ಕೃಷಿ ತಜ್ಞರನ್ನು ಒಳಗೂಡಿಸಿಕೊಂಡು 4ನೇ ವರ್ಷಕ್ಕೆ ಕಾಲಿಡುತ್ತಿದ್ದೇವೆ. ಸಂಸ್ಥೆಯನ್ನು ದೇಶದಾದ್ಯಂತ ಮುಂದುವರೆಸಲು ಯೋಜನೆ ಹಾಕಿಕೊಂಡಿದ್ದೇವೆ ಎಂದರು. ಸಂಸ್ಥೆಯು ತೆಂಗಿನ ಮರದ ಬೇರಿನಿಂದ ಗರಿಯವರೆಗೆ ಮಾಡಬಹುದಾದ ಮೌಲ್ಯವರ್ಧಿತ ಉತ್ಪನ್ನಗಳನ್ನು ಮಾಡುತ್ತಿದ್ದೇವೆ. ಕಲ್ಪರಸ, ಐಸ್ಕ್ರೀಮ್, ತೆಂಗಿನೆಣ್ಣೆ, ಮುಂತಾದ ಉತ್ಪನ್ನಗಳನ್ನು ಹೊರತಂದಿದ್ದೇವೆ. ನಮ್ಮಲ್ಲಿ ತರಬೇತಿ ಪಡೆದು ಗೆರಟೆಯಿಂದ ಮೌಲ್ಯವರ್ಧಿತ ಉತ್ಪನ್ನಗಳನ್ನು ಮಾಡಿ ತಿಂಗಳಿಗೆ 30 ರಿಂದ 40 ಸಾವಿರ ಉತ್ಪತ್ತಿ ಮಾಡುವ ರೈತ ಮಹಿಳೆಯರಿದ್ದಾರೆ. 2030ಕ್ಕೆ ಮಹಿಳೆಯರು ಸ್ವಾವಲಂಬಿಗಳಾಗಿ ಬದುಕುವ ಹಾಗೆ ಮಾಡುತ್ತೇವೆ. ಮುಂದಿನ ದಿನಗಳಲ್ಲಿ ತೆಂಗಿಗೆ 100 ರೂ. ಬೆಲೆ ಆಗುತ್ತದೆ ಎಂದರು.