ಪುತ್ತೂರು: ಅರಿಯಡ್ಕ ಅಮೈ ಪಯಂದೂರು ಶ್ರೀ ಉಳ್ಳಾಕುಲು ದೈವಸ್ಥಾನದ ಆಡಳಿತ ಮೊಕ್ತೇಸರರಾಗಿದ್ದ ಮಕ್ಕಳ ತಜ್ಞ ಡಾ| ಜಯರಾಮ ಶೆಟ್ಟಿ ಬಜ್ಪೆ(76ವ)ರವರು ಅಲ್ಪ ಕಾಲದ ಅಸೌಖ್ಯದಿಂದಾಗಿ ಜೂ.17 ರಂದು ನಿಧನರಾದರು.
ಇವರು 2002 ರಿಂದ ಪಯಂದೂರು ಶ್ರೀ ಉಳ್ಳಾಕುಲು ದೈವಸ್ಥಾನದ ಆಡಳಿತ ಮೊಕ್ತೇಸರರಾಗಿ ಸೇವೆ ಸಲ್ಲಿಸುತ್ತಿದ್ದರು. ಬಜಪೆಯಲ್ಲಿ 35 ವರ್ಷಗಳಿಂದ ವೈದ್ಯರಾಗಿ ಸೇವೆ, ಬಜಪೆ ವಿಮಾನ ನಿಲ್ದಾಣ, ಬಜಪೆ ವ್ಯ.ಸೇ.ಸ.ಬ್ಯಾಂಕ್ನ ವೈದ್ಯಕೀಯ ಸಲಹೆಗಾರರಾಗಿ, ಲಯನ್ಸ್ ಕ್ಲಬ್ ಜಿಲ್ಲಾ ಗವರ್ನರ್ ಆಗಿ, ನಿಂಜೂರು ಕೊಡಮಣಿತ್ತಾಯ ದೈವಸ್ಥಾನದ ಆಡಳಿತ ಮೊಕ್ತೇಸರರಾಗಿ, ಪೊರ್ಕೋಡಿ ಸೋಮನಾಥೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿಯಲ್ಲಿ 2 ಅವಧಿಗೆ ಅಧ್ಯಕ್ಷರಾಗಿ, ಬಜಪೆ ವಿಜಯ ವಿಠಲ ಭಜನಾ ಮಂದಿರ ಸಹಿತ ಹಲವು ಸಂಘ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದರು.
ಮೃತರು ಪತ್ನಿ ಸುಲೋಚನಾ ಜೆ ಶೆಟ್ಟಿ, ಪುತ್ರಿಯರಾದ ರೀಮಾ ಮತ್ತು ಮಹಿಮಾ, ಸಹೋದರರಾದ ಎ.ಕೆ ರೈ ಅರಿಯಡ್ಕ, ಶಶಿಕುಮಾರ್ ರೈ ಅರಿಯಡ್ಕ, ಸಹೋದರಿಯರಾದ ಭಾಗೀರಥಿ ಸಿ.ಶೆಟ್ಟಿ, ಮೋಹಿನಿ ಡಿ.ಹೆಗ್ಗೆ ಹಾಗೂ ಅಳಿಯಂದಿರು, ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.