ನಮ್ಮನ್ನು ನಾವು ರಕ್ಷಿಸಿಕೊಳ್ಳಲು ವಿಮೆ ಮಾಡಿಸಿಕೊಳ್ಳುವುದು ಅತೀ ಅಗತ್ಯ: ತ್ರಿವೇಣಿ ಪಲ್ಲತ್ತಾರು
ವಿಮೆಗೆ ಕೊಡುವ ನಾಮಿನಿ ಹೆಸರು ಸರಿಯಾಗಿ ಮತ್ತು ಸ್ಪಷ್ಟವಾಗಿರಲಿ: ಗೀತಾ
ಪುತ್ತೂರು: ನಮ್ಮ ಬದುಕಿನಲ್ಲಿ ಅನಿಶ್ಚಿತ ನಷ್ಟ ಎಂಬ ಗಂಡಾಂತರದ ವಿರುದ್ಧ ನಮ್ಮನ್ನು ನಾವು ರಕ್ಷಿಸಿಕೊಳ್ಳುವ ಮೂಲಕ ಅಪಾಯವನ್ನು ನಿರ್ವಹಿಸಲು ಮಾಡಿಕೊಳ್ಳುವ ಉಪಾಯವೇ ವಿಮೆ ಆಗಿದೆ. ನಾವು ವಿಮೆಯನ್ನು ಮಾಡಿಸಿಕೊಂಡಿದ್ದಲ್ಲಿ ಅದು ನಮಗೆ ರಕ್ಷಾ ಕವಚವಾಗಿ ಕಾರ್ಯನಿರ್ವಹಿಸುತ್ತದೆ. ನಾವು ವಿಮೆ ಮಾಡಿಸಿಕೊಳ್ಳುವ ಮೂಲಕ ನಮ್ಮ ಕುಟುಂಬದವರನ್ನು ಕೂಡ ಈ ವಿಮೆಗೆ ಒಳಪಡಿಸುವುದು ಅತೀ ಅಗತ್ಯವಾಗಿದೆ. ಪ್ರತಿಯೊಬ್ಬರು ವಿಮೆ ಮಾಡಿಸಿಕೊಳ್ಳುವ ಮೂಲಕ ಒಳಮೊಗ್ರು ಗ್ರಾಮವನ್ನು ವಿಮಾ ಗ್ರಾಮವನ್ನಾಗಿ ಮಾಡುವಲ್ಲಿ ತಾವೆಲ್ಲರೂ ಸಹಕಾರ ನೀಡಬೇಕು, ಈ ನಿಟ್ಟಿನಲ್ಲಿ ಎಸ್ಸಿಡಿಸಿಸಿ ಬ್ಯಾಂಕ್ನವರು ಆಯೋಜನೆ ಮಾಡಿದ ಕಾರ್ಯಕ್ರಮ ಅರ್ಥಪೂರ್ಣವಾಗಿದೆ ಎಂದು ಒಳಮೊಗ್ರು ಗ್ರಾಮ ಪಂಚಾಯತ್ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು ಹೇಳಿದರು.

ಅವರು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ನ ಕುಂಬ್ರ ಶಾಖಾ ವತಿಯಿಂದ ಜೂ.27 ರಂದು ಕುಂಬ್ರ ನವೋದಯ ರೈತ ಸಭಾಭವನದಲ್ಲಿ ನಡೆದ ಜನ ಸುರಕ್ಷಾ ಯೋಜನೆಗಳ ಸಂಪೂರ್ಣ ಅಭಿಯಾನ ಗ್ರಾಮ ಪಂಚಾಯತ್ ಮಟ್ಟದ ಮಾಹಿತಿ ಶಿಬಿರದಲ್ಲಿ ಸಭಾಧ್ಯಕ್ಷತೆ ವಹಿಸಿ ಮಾತನಾಡಿದರು. ಪ್ರತಿಯೊಬ್ಬರು ಪ್ರಧಾನ ಮಂತ್ರಿಗಳ ಪಿಎಂಎಸ್ಬಿವೈ ಮತ್ತು ಪಿಎಂಜೆಜೆವೈ ವಿಮೆಯನ್ನು ಮಾಡಿಸಿಕೊಳ್ಳುವ ಮೂಲಕ ಆರೋಗ್ಯ ಮತ್ತು ಅಪಘಾತಗಳಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳುವಂತೆ ಅವರು ತಿಳಿಸಿದರು.
ಮುಖ್ಯ ಅತಿಥಿಯಾಗಿದ್ದ ಕುಂಬ್ರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಪ್ರಕಾಶ್ಚಂದ್ರ ರೈ ಕೈಕಾರರವರು ಮಾತನಾಡಿ, ವಿಮೆ ಮಾಡಿಸಿಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಆದರೆ ಹೆಚ್ಚಿನವರು ತಾವು ವಿಮೆ ಮಾಡಿಸಿಕೊಂಡಿರುತ್ತಾರೆ ಆದರೆ ತಮ್ಮ ಮನೆಯವರಿಗೆ ಮಾಡಿಸಿಕೊಂಡಿರುವುದು ಇದು ನಾವು ಮಾಡುವ ದೊಡ್ಡ ತಪ್ಪು ಆಗಿದೆ. ನಾವು ಹಾಗೂ ನಮ್ಮ ಮನೆಯವರಿಗೂ ವಿಮೆ ಮಾಡಿಸಿಕೊಳ್ಳುವುದು ಅತೀ ಅಗತ್ಯ ಎಂದು ಹೇಳಿದರು. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಅಮೂಲ್ಯ ಆರ್ಥಿಕ ಸಾಕ್ಷಾರತಾ ಕೇಂದ್ರದ ಆಪ್ತ ಸಮಾಲೋಚಕಿ ಗೀತಾರವರು ಜನ ಸುರಕ್ಷಾ ಯೋಜನೆಗಳ ಬಗ್ಗೆ ಮಾಹಿತಿ ನೀಡುತ್ತಾ, ಪ್ರತಿಯೊಬ್ಬರು ತಾವು ಯಾವ ಬ್ಯಾಂಕ್ನಲ್ಲಿ ಅಕೌಂಟ್ ಹೊಂದಿರುತ್ತೀರೋ ಅಲ್ಲಿಯೇ ವಿಮೆ ಮಾಡಿಸಿಕೊಳ್ಳಿ, ಕೆಲವೊಮ್ಮೆ ಎರಡು ಬ್ಯಾಂಕ್ಗಳಲ್ಲಿ ಅಕೌಂಟ್ ಹೊಂದಿದ್ದರೆ ಎರಡರಲ್ಲಿಯೂ ವಿಮೆ ಮಾಡಿಸಿಕೊಳ್ಳುವುದು ಬೇಡ ಒಂದೇ ಬ್ಯಾಂಕ್ನಲ್ಲಿ ಇರಲಿ, ಇನ್ನು ತಮ್ಮ ಅಕೌಂಟ್ಗಳಿಗೆ ಕೆವೈಸಿ ಮಾಡಿಸಿಕೊಳ್ಳುವ ಮೂಲಕ ಅಪ್ಡೇಟ್ ಮಾಡಿಸಿಕೊಳ್ಳುವುದು ಅತೀ ಅಗತ್ಯ ಎಂಬ ಮಾಹಿತಿಯೊಂದಿಗೆ ವಿಮೆಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು.
ಎಸ್ಸಿಡಿಸಿಸಿ ಬ್ಯಾಂಕ್ ಕುಂಬ್ರ ಶಾಖೆಯ ಸಿಬ್ಬಂದಿ ಕಿಶೋರ್ ಕುಮಾರ್ರವರು ಬ್ಯಾಂಕ್ನಿಂದ ಗ್ರಾಹಕರಿಗೆ ಸಿಗುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು. ವೇದಿಕೆಯಲ್ಲಿ ಕುಂಬ್ರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭವಾನಿ ಬಿ.ಆರ್ ಉಪಸ್ಥಿತರಿದ್ದರು. ಎಸ್ಡಿಸಿಸಿ ಬ್ಯಾಂಕ್ ಕುಂಬ್ರ ಶಾಖೆಯ ಮ್ಯಾನೇಜರ್ ವಿಶ್ವನಾಥ ಎಸ್ರವರು ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಸಿಬ್ಬಂದಿ ಅನಿಲ್ ಕುಮಾರ್ ರೈ, ನವೋದಯ ಪ್ರೇರಕಿ ಹರಿಣಾಕ್ಷಿ, ಗ್ರಾಹಕ ರಾಜೇಶ್ ರೈ ಪರ್ಪುಂಜ, ಪ್ರೇರಕಿ ಕಲ್ಪವಲ್ಲಿ ಅತಿಥಿಗಳಿಗೆ ಹೂ ನೀಡಿ ಸ್ವಾಗತಿಸಿದರು. ಪದ್ಮನಾಭ ಆಚಾರ್ಯ ಪ್ರಾರ್ಥಿಸಿದರು. ಭಾರತೀಯ ಜೀವ ವಿಮಾ ನಿಗಮದ ಮುಖ್ಯ ವಿಮಾ ಸಲಹೆಗಾರ ನಾರಾಯಣ ಕುಕ್ಕುಪುಣಿ ಕಾರ್ಯಕ್ರಮ ನಿರೂಪಿಸಿದರು.

ನಾಮಿನಿ ಹೆಸರು ಸರಿಯಾಗಿರಲಿ
ಹೆಚ್ಚಿನವರು ವಿಮೆ ಮಾಡಿಸಿಕೊಳ್ಳುವಾಗ ತಮ್ಮ ನಾಮಿನಿ ಹೆಸರು ಸರಿಯಾಗಿ ಕೊಡದೇ ಮುಂದೆ ಸಮಸ್ಯೆಯಾಗುತ್ತದೆ. ಕೆಲವೊಮ್ಮೆ ಮನೆಯಲ್ಲಿ ಕರೆಯುವ ಹೆಸರನ್ನೇ ಕೊಡುತ್ತೇವೆ. ಇದರಿಂದ ಖಂಡಿತ ಸಮಸ್ಯೆ ಬರುತ್ತದೆ ಆದ್ದರಿಂದ ಆಧಾರ್ ಕಾರ್ಡ್ನಲ್ಲಿ ಯಾವ ರೀತಿಯಲ್ಲಿ ಹೆಸರು ಇದೆಯೋ ಅದೇ ರೀತಿ ವಿಮೆಗೂ ಹೆಸರು ಕೊಡಿ ಎಂದು ಆಪ್ತ ಸಮಾಲೋಚಕಿ ಗೀತಾರವರು ತಿಳಿಸಿದರು.
ಹೃದಯಾಘಾತವು ಅಪಘಾತ ವಿಮೆಯಲ್ಲಿ ಬರುವುದಿಲ್ಲ
ಇದನ್ನು ನಾವು ತಿಳಿದುಕೊಳ್ಳಬೇಕಾಗಿದೆ. ಹೃದಯಾಘಾತವು ಅಪಘಾತ ವಿಮೆಯಲ್ಲಿ ಬರುವುದಿಲ್ಲ ನಾವು 20 ರೂಪಾಯಿಯ ಅಪಘಾತ ವಿಮೆ ಮಾಡಿಸಿಕೊಂಡು ಹೃದಯಾಘಾತ ಸಂಭವಿಸಿದರೆ ಅದಕ್ಕೆ ವಿಮೆ ಕ್ಲೈಮ್ ಆಗುವುದಿಲ್ಲ. ಅದಕ್ಕೆ ಆರೋಗ್ಯ ವಿಮೆಯೇ ಮಾಡಿಸಿಕೊಳ್ಳಬೇಕಾಗುತ್ತದೆ ಎಂದು ಗೀತಾರವರು ತಿಳಿಸಿದರು.
ಅಕೌಂಟ್ ಅನ್ನು ಪರಿಶೀಲನೆ ಮಾಡುತ್ತಾ ಇರಿ
ಹೆಚ್ಚಿನವರು ಬ್ಯಾಂಕ್ನಲ್ಲಿ ಅಕೌಂಟ್ ಮಾಡುತ್ತಾರೆ ಆದರೆ ಒಮ್ಮೆ ಅಕೌಂಟ್ ತೆರೆದ ಬಳಿಕ ಅದರ ಗೋಜಿಗೆ ಹೋಗುವುದಿಲ್ಲ ಇದು ಸರಿಯಲ್ಲ ನಮ್ಮ ಅಕೌಂಟ್ ಅನ್ನು 3 ತಿಂಗಳು ಚಾಲನೆಯಲ್ಲಿ ಇಲ್ಲದಿದ್ದರೆ ಅಟೋಮ್ಯಾಟಿಕ್ ಆಗಿ ಬ್ಲಾಕ್ ಆಗುತ್ತದೆ. ಇದರಿಂದ ಸಮಸ್ಯೆ ಉಂಟಾಗುತ್ತದೆ ಆದ್ದರಿಂದ ಅಕೌಂಟ್ಗೆ ತಿಂಗಳಿಗೆ ಒಮ್ಮೆಯಾದರು ಒಂದಿಷ್ಟು ಹಣ ಹಾಕುವುದು, ತೆಗೆಯುವುದು ಮಾಡ್ತಾ ಇರಬೇಕು. ಪ್ರತಿಯೊಬ್ಬರು ಪ್ರಧಾನ ಮಂತ್ರಿಗಳ ಪಿಎಂಎಸ್ಬಿವೈ ವಿಮೆ ವರ್ಷಕ್ಕೆ ರೂ.20 ಪಾವತಿಸಿ, 2 ಲಕ್ಷ ರೂ.ವರೆಗಿನ ಅಪಘಾತ ವಿಮೆ, ವಯೋಮಿತಿ 19ರಿಂದ 70 ಆಗಿರುತ್ತದೆ. ಪಿಎಂಜೆಜೆಬಿವೈ ವರ್ಷಕ್ಕೆ ರೂ.436 ಪಾವತಿ 2 ಲಕ್ಷ ರೂ.ವರೆಗಿನ ವಿಮೆ. ವಯೋಮಿತಿ 18ರಿಂದ 50 ವರ್ಷ ಆಗಿರುತ್ತದೆ. ಪ್ರತಿಯೊಬ್ಬರು ವಿಮೆ ಮಾಡಿಸಿಕೊಂಡು ಒಳಮೊಗ್ರು ಸಂಪೂರ್ಣ ವಿಮೆ ಗ್ರಾಮವನ್ನಾಗಿ ಮಾಡುವಂತೆ ವಿನಂತಿ.
ಗೀತಾ, ಆಪ್ತ ಸಮಾಲೋಚಕಿ, ಅಮೂಲ್ಯ ಆರ್ಥಿಕ ಸಾಕ್ಷಾರತಾ ಕೇಂದ್ರ ಪುತ್ತೂರು