ಎಸ್ಡಿಎಂಸಿ ಮತ್ತು ಶಿಕ್ಷಕ ವೃಂದ ಸಮನ್ವಯತೆಯಿಂದ ಕೆಲಸ ಮಾಡಿದಾಗ ಯಶಸ್ಸು ಖಚಿತ-ಇಕ್ಬಾಲ್ ಹುಸೇನ್
ಪುತ್ತೂರು: ಶಿಕ್ಷಕ ವೃಂದದವರು ಮತ್ತು ಎಸ್ಡಿಎಂಸಿ ಒಗ್ಗಟ್ಟಿನಿಂದ, ಸಮನ್ವಯತೆಯಿಂದ ಕೆಲಸ ಕಾರ್ಯಗಳನ್ನು ಮಾಡಿದಾಗ ಯಶಸ್ಸು ಲಭಿಸುತ್ತದೆ ಎನ್ನುವುದಕ್ಕೆ ನಮ್ಮ ಪಾಪೆಮಜಲು ಪ್ರೌಢ ಶಾಲೆ ಸಾಕ್ಷಿಯಾಗಿದ್ದು ಅದರ ಪರಿಣಾಮವಾಗಿಯೇ ಶಾಲೆ ನಿರಂತರ 100% ಫಲಿತಾಂಶ ದಾಖಲಿಸುತ್ತಾ ಬರುತ್ತಿದೆ ಎಂದು ಪಾಪೆಮಜಲು ಪ್ರೌಢ ಶಾಲಾ ಕಾರ್ಯಾಧ್ಯಕ್ಷ ಇಕ್ಬಾಲ್ ಹುಸೇನ್ ಕೌಡಿಚ್ಚಾರ್ ಹೇಳಿದರು.

ಜೂ.27ರಂದು ಪಾಪೆಮಜಲು ಪ್ರೌಢ ಶಾಲೆಯಲ್ಲಿ ನಡೆದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿ ಪಡೆದ ಹಾಗೂ ಶೇ.100 ಫಲಿತಾಂಶ ಪಡೆದ ಶಾಲೆಯ ವಿದ್ಯಾರ್ಥಿಗಳಿಗೆ ಮತ್ತು ಜೂ.30ರಂದು ನಿವೃತ್ತಿ ಹೊಂದಲಿರುವ ಪಾಪೆಮಜಲು ಸ.ಪ್ರಾ.ಶಾಲೆಯ ಶಿಕ್ಷಕಿ ಮೇಬಲ್ ಡಿಸೋಜಾರವರಿಗೆ ನಡೆದ ಅಭಿನಂದನಾ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ನಮ್ಮ ಶಾಲೆಯ ಮಕ್ಕಳು ಎಸ್ಸೆಸ್ಸೆಲ್ಸಿಯಲ್ಲಿ ಸಾಧನೆ ಮಾಡಿರುವುದು ನಮಗೆಲ್ಲಾ ಹೆಮ್ಮೆ ತಂದಿದ್ದು ಈ ಸಾಧನೆಯ ಹಿಂದೆ ನಮ್ಮ ಶಾಲೆಯ ಶಿಕ್ಷಕ ವೃಂದದವರ ಗರಿಷ್ಠ ಪರಿಶ್ರಮ ಇದೆ, ಅದಕ್ಕಾಗಿ ಇವತ್ತು ಶಿಕ್ಷಕ ವೃಂದದವರನ್ನೂ ಸನ್ಮಾನಿಸುವ ಕಾರ್ಯ ಮಾಡಿದ್ದೇವೆ, ಒಟ್ಟಿನಲ್ಲಿ ನಮ್ಮ ಪಾಪೆಮಜಲು ಪ್ರೌಢ ಶಾಲೆ ಸಾಧನೆಯ ಮೂಲಕ ಉತ್ತಮ ಹೆಸರನ್ನು ಪಡೆಯುತ್ತಿದೆ ಎಂದು ಅವರು ಹೇಳಿದರು. ನಿವೃತ್ತಿ ಹೊಂದಲಿರುವ ಪಾಪೆಮಜಲು ಸ.ಹಿ.ಪ್ರಾ.ಶಾಲೆಯ ಶಿಕ್ಷಕಿ ಮೇಬಲ್ ಡಿಸೋಜಾರವರು ಸ್ಕೌಟ್ ಗೈಡ್ಸ್ನ ತಾಲೂಕು ಮಟ್ಟದ ಕಾರ್ಯಕ್ರಮವನ್ನು ಪಾಪೆಮಜಲು ಪ್ರಾಥಮಿಕ ಶಾಲೆಯಲ್ಲಿ ಏರ್ಪಡಿಸಲು ಪ್ರಮುಖ ಪಾತ್ರ ವಹಿಸಿ ಊರಿಗೆ ಕೀರ್ತಿ ತಂದಿದ್ದಾರೆ, ಮಕ್ಕಳ ಬಗ್ಗೆ ಅಪಾರ ಕಾಳಜಿ ಮತ್ತು ಪ್ರೀತಿ ಹೊಂದಿರುವ ಅವರು ಸಮಾಜಕ್ಕೆ ಮಾದರಿ ಶಿಕ್ಷಕಿಯಾಗಿ ಗುರುತಿಸಿಕೊಂಡಿದ್ದಾರೆ, ಶಿಕ್ಷಕಿ ವೃತ್ತಿ ಜೊತೆಗೆ ಅವರಲ್ಲಿರುವ ಮಾನವೀಯ ಕಳಕಳಿ ಎಲ್ಲರಿಗೂ ಆದರ್ಶವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಇಂದಿನ ಕಾರ್ಯಕ್ರಮದಲ್ಲಿ ಭಾಗವಹಿಸಬೇಕಿದ್ದ ಶಾಸಕ ಅಶೋಕ್ ಕುಮಾರ್ ರೈಯವರು ಅನಿವಾರ್ಯ ಕಾರಣದಿಂದ ಕಾರ್ಯಕ್ರಮಮಕ್ಕೆ ಗೈರಾಗಿದ್ದರೂ ನನಗೆ ಕರೆ ಮಾಡಿ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಶುಭ ಹಾರೈಸಿದ್ದಾರೆ ಎಂದು ಇಕ್ಬಾಲ್ ಹುಸೇನ್ ಕೌಡಿಚ್ಚಾರ್ ಹೇಳಿದರು.
ದೀಪ ಬೆಳಗಿಸಿ ಸಭೆ ಉದ್ಘಾಟಿಸಿದ ಪಾಪೆಮಜಲು ಸ.ಹಿ.ಪ್ರಾ.ಶಾಲೆಯ ಎಸ್ಡಿಎಂಸಿ ಮಾಜಿ ಅಧ್ಯಕ್ಷ ಧನಂಜಯ ನಾಯ್ಕ್ ಮದ್ಲ ಶಾಲೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಉತ್ತಮವಾಗಿ ಕಾರ್ಯನಿರ್ವಹಣೆ-ಮೋನಪ್ಪ ಪೂಜಾರಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ಶಾಲಾ ಮುಖ್ಯ ಗುರು ಬಿ ಮೋನಪ್ಪ ಪೂಜಾರಿ ‘ನಮ್ಮ ಶಾಲೆಯ ಶಿಕ್ಷಕ ವೃಂದದವರು, ಎಸ್ಡಿಎಂಸಿ ಉತ್ತಮವಾಗಿ ಕಾರ್ಯಾಚರಣೆ ನಡೆಸುತ್ತಿದ್ದು ಶಾಲಾ ಫಲಿತಾಂಶ ನಮಗೆಲ್ಲಾ ಸಂತಸ ತಂದಿದೆ, ನಿವೃತ್ತಿ ಹೊಂದಲಿರುವ ಮೇಬಲ್ ಡಿಸೋಜಾ ಅವರು ಓರ್ವ ಮಾದರಿ ಶಿಕ್ಷಕಿಯಾಗಿದ್ದಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ:
ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿ ಪಡೆದ ನಮಿತಾ ಎಂ, ವರ್ಷಾ, ಜಸ್ಮಿತಾ ಹಾಗೂ ನಿಖಿಲ್ ಕುಮಾರ್ರವರಿಗೆ ಹಾಗೂ ಶೇ.100 ಫಲಿತಾಂಶ ಪಡೆಯಲು ಕಾರಣಕರ್ತರಾದ ಶಾಲೆಯ ವಿದ್ಯಾರ್ಥಿಗಳಿಗೆ ಶಾಲು ಹೊದಿಸಿ ಸ್ಮರಣಿಕೆ ನೀಡಿ ಸನ್ಮಾನಿಸಿ ಅಭಿನಂದಿಸಲಾಯಿತು.
ಶಿಕ್ಷಕ ವೃಂದಕ್ಕೆ ಸನ್ಮಾನ:
ಶಾಲೆ ಶೇ.100 ಫಲಿತಾಂಶ ಪಡೆಯಲು ಕಾರಣಕರ್ತರಾದ ಶಿಕ್ಷಕ ವೃಂದಕ್ಕೆ ಎಸ್ಡಿಎಂಸಿ ಪರವಾಗಿ ಶಾಲು ಹೊದಿಸಿ, ಹೂ ನೀಡಿ ಸನ್ಮಾನಿಸಿ ಅಭಿನಂದಿಸಲಾಯಿತು.
ಮೇಬಲ್ ಡಿಸೋಜಾಗೆ ಗೌರವಾರ್ಪಣೆ:
ಜೂ.30ರಂದು ನಿವೃತ್ತಿ ಹೊಂದಲಿರುವ ಪಾಪೆಮಜಲು ಸ.ಪ್ರಾ.ಶಾಲೆಯ ಶಿಕ್ಷಕಿ ಮೇಬಲ್ ಡಿಸೋಜಾರವರನ್ನು ಶಾಲು ಹೊದಿಸಿ, ಸ್ಮರಣಿಕೆ ಫಲಪುಷ್ಪ ನೀಡಿ ಸನ್ಮಾನಿಸಿ ಅಭಿನಂದಿಸಲಾಯಿತು. ಶಿಕ್ಷಕಿ ಪ್ರವೀಣಾ ರೈ ಅವರು ಮೇಬಲ್ ಡಿಸೋಜಾರವರ ಸನ್ಮಾನ ಪತ್ರ ವಾಚಿಸಿದರು. ಪಾಪೆಮಜಲು ಸ.ಹಿ.ಪ್ರಾ.ಶಾಲೆಯ ನಿವೃತ್ತ ಶಿಕ್ಷಕಿ ತೆರೇಸಾ ಸಿಕ್ವೇರಾ ಅವರು ಮೇಬಲ್ ಡಿಸೋಜಾರ ಕುರಿತು ಮೆಚ್ಚುಗೆ ಮಾತುಗಳನ್ನಾಡಿದರು.
ಈ ಅಭಿಮಾನ ಮರೆಯಲು ಸಾಧ್ಯವಿಲ್ಲ-ಮೇಬಲ್ ಡಿಸೋಜಾ
ಸನ್ಮಾನ ಸ್ವೀಕರಿಸಿದ ಪಾಪೆಮಜಲು ಸ.ಹಿ.ಪ್ರಾ.ಶಾಲೆಯ ಶಿಕ್ಷಕಿ ಮೇಬಲ್ ಡಿಸೊಜಾ ಮಾತನಾಡಿ, ನಿವೃತ್ತಿಗೆ ಮೊದಲೇ ನನ್ನನ್ನು ಕರೆದು ಸನ್ಮಾನಿಸಿದ ನಿಮ್ಮ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ, ಪಾಪೆಮಜಲು ಪ್ರೌಢ ಶಾಲೆ ಎಲ್ಲ ವಿಭಾಗಗಳಲ್ಲೂ ಸಾಧನೆ ಮಾಡುತ್ತಿರುವುದು ಖುಷಿ ತಂದಿದೆ, ನಿಮ್ಮ ಈ ಅಭಿಮಾನದ ಸನ್ಮಾನವನ್ನು ಯಾವತ್ತೂ ಮರೆಯಲು ಸಾಧ್ಯವಿಲ್ಲ ಎಂದು ಹೇಳಿದರು.

ನಿವೃತ್ತ ಅರಣ್ಯಾಧಿಕಾರಿ ಸುಬ್ರಹ್ಮಣ್ಯ ಗೌಡ, ಪಾಪೆಮಜಲು ಸ.ಹಿ.ಪ್ರಾ.ಶಾಲೆಯ ನಿವೃತ್ತ ಶಿಕ್ಷಕಿ ತೆರೇಸಾ ಸಿಕ್ವೇರಾ, ಪಾಪೆಮಜಲು ಸ.ಹಿ.ಪ್ರಾ.ಶಾಲಾ ಎಸ್ಡಿಎಂಸಿ ಅಧ್ಯಕ್ಷ ಅಪ್ಪಯ್ಯ ನಾಯ್ಕ್ ಮೊದಲಾದವರು ಮಾತನಾಡಿದರು. ವೇದಿಕೆಯಲ್ಲಿ ಉದ್ಯಮಿ ರಮೇಶ್ ಪರ್ಪುಂಜ, ಶಿಕ್ಷಣ ತಜ್ಞ ದಶರಥ್ ರೈ, ಶಾಲಾ ಎಸ್ಡಿಎಂಸಿ ಸದಸ್ಯರಾದ ಜಿ.ಚಂದ್ರ, ತಿಮ್ಮಪ್ಪ ನಾಯ್ಕ ಪೈಲಕಲ್ಲು, ಹೊನ್ನಪ್ಪ ನಾಯ್ಕ ಬಪ್ಪಪುಂಡೇಲು, ಭಾಗೀರಥಿ, ಲೀಲಾವತಿ, ರೇವತಿ, ಚನಿಯಪ್ಪ ದರ್ಬೆತ್ತಡ್ಕ, ಶಾಲಾ ನಾಯಕ ಯುವರಾಜ್ ಉಪಸ್ಥಿತರಿದ್ದರು.
ಶಿಕ್ಷಕಿ ಸವಿತಾ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಪೂರ್ಣಿಮಾ ವಂದಿಸಿದರು. ಶಿಕ್ಷಕರಾದ ಹರಿಪ್ರಸಾದ್, ಶಾಲೆಟ್ ಜೆ.ಎನ್ ರೆಬೆಲ್ಲೋ, ಹರಿಣಾಕ್ಷಿ, ಪ್ರೀತಾ ವಿವಿಧ ಕಾರ್ಯಕ್ರಮ ನಿರ್ವಹಿಸಿ ಸಹಕರಿಸಿದರು.