ಬಿಜೆಪಿಯ ಹಲವು ನಾಯಕರೂ ಶೀಘ್ರ ಸೇರ್ಪಡೆ – ಅಶೋಕ್ ಕುಮಾರ್ ರೈ
ಪುತ್ತೂರು: ಬಿಜೆಪಿ ಸುಳ್ಳುಗಳಿಗೆ ಕಾಂಗ್ರೆಸ್ ಉತ್ತರ ಜನ ಜಗೃತಿ ಸಭೆಯ ಬಳಿಕ ಬಿಜೆಪಿ ನಿಜ ಬಣ್ಣ ಜನತೆಯ ಮುಂದೆ ಬಯಲು ಮಾಡಿದ್ದು , ಕಾಂಗ್ರೆಸ್ ಸರಕಾರದ ಸಾಧನೆ ಮತ್ತು ಪುತ್ತೂರಿನಲ್ಲಿ ನಡೆಯುತ್ತಿರುವ ಅಭಿವೃದ್ದಿಯನ್ನು ಮೆಚ್ಚಿ ಕಳೆದ ಮೂರು ದಿನಗಳಲ್ಲಿ ಸುಮಾರು 150 ಕ್ಕೂ ಮಿಕ್ಕಿ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಸೇರ್ಪಡೆಯಾಗಿದ್ದು, ಮುಂದೆ ಇನ್ನಷ್ಟೂ ಕಾರ್ಯಕರ್ತರನ್ನು ಸೇರ್ಪಡೆಯಾಗುತ್ತಾರೆ ಎಂದು ಶಾಸಕ ಅಶೋಕ್ ರೈ ಹೇಳಿದರು.
ಅವರು ಪುತ್ತೂರು ಶಾಸಕರ ಕಚೇರಿ ಸಭಾಂಗಣದಲ್ಲಿ ಪಕ್ಷಕ್ಕೆ ಸೇರ್ಪಡೆಯಾದ ಸುಮಾರು 30 ಮಂದಿ ಬಿಜೆಪಿ ಕಾರ್ಯಕರ್ತರನ್ನು ಪಕ್ಷಕ್ಕೆ ಸೇರ್ಪಡೆಗೊಳಿಸಿ ಮಾತನಾಡಿದರು.
ಕರ್ನಾಟಕ ಸರಕಾರದ ಪಂಚ ಗ್ಯಾರಂಟಿ ಯೋಜನೆಗಳಿಂದ ಬಹುತೇಕ ಮಧ್ಯಮ ಮತ್ತು ಬಡ ವರ್ಗ ಕುಟುಂಬಗಳ ಮನೆ ಬೆಳಗುವಂತಾಗಿದೆ. ಬಡವರ ಪರ ಇರುವುದು ಕಾಂಗ್ರೆಸ್ ಸರಕಾರ ಮಾತ್ರ ಎಂದು ಎಲ್ಲರಿಗೂ ಗೊತ್ತಾಗಿದೆ. ಪುತ್ತೂರಿನಲ್ಲಿ ನಡೆಯುತ್ತಿರುವ ಅಭಿವೃದ್ದಿ ಕಾರ್ಯಗಳು ಯುವ ಜನತೆಯನ್ನು ಕಾಂಗ್ರೆಸ್ನತ್ತ ಸೆಳೆಯುವಂತೆ ಮಾಡಿದೆ. ಬಿಜೆಪಿ ಅನೇಕ ವರ್ಷಗಳಿಂದ ಜನತೆಯ ಮುಂದೆ ಹೇಳುತ್ತಿರುವ ಸುಳ್ಳುಗಳು ಮತ್ತು ಸುಳ್ಳು ಭರವಸೆಗಳಿಂದ ರೋಸಿ ಹೋಗಿದ್ದು ಈ ಎಲ್ಲಾ ಕಾರಣಗಳಿಂದ ಬಿಜೆಪಿಯನ್ನು ತೊರೆದು ಹಲವು ಮಂದಿ ಕಾಂಗ್ರೆಸ್ ಸೇರ್ಪಡೆಯಾಗುತ್ತಿರುವುದು ಸಂತೋಷದ ವಿಚಾರವಾಗಿದೆ ಎಂದು ಹೇಳಿದರು.
ಬಿಜೆಪಿ ನಾಯಕರು ಶೀಘ್ರದಲ್ಲೇ ಕಾಂಗ್ರೆಸ್ ಸೇರ್ಪಡೆ
ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪುತ್ತೂರು ಹಾಗೂ ಬಂಟ್ವಾಳ ತಾಲೂಕು ವ್ಯಾಪ್ತಿಯ ಹಲವಾರು ಬಿಜೆಪಿ ನಾಯಕರು ಈಗಾಗಲೇ ನನ್ನನ್ನು ಸಂಪರ್ಕ ಮಾಡಿದ್ದು, ಕಾಂಗ್ರೆಸ್ ಸೇರುವ ಇಂಗಿತ ವ್ಯಕ್ತಪಡಿಸಿದ್ದಾರೆ. ಪಕ್ಷಕ್ಕೆ ಸ್ವ ಇಚ್ಚೆಯಿಂದ ಸೇರ್ಪಡೆಯಾಗುವ ಎಲ್ಲರನ್ನೂ ಆತ್ಮೀಯವಾಗಿ ಸ್ವಾಗತಿಸುವ ಕೆಲಸ ಮಾಡಲಾಗುತ್ತಿದೆ. ಯಾವುದೇ ಬೇಡಿಕೆಯನ್ನು ಮುಂದಿಟ್ಟು ಯಾರೂ ಪಕ್ಷಕ್ಕೆ ಸೇರ್ಪಡೆಯಾಗುತ್ತಿಲ್ಲ. ಬಿಜೆಪಿ ನಾಯಕರುಗಳನ್ನು ಸೂಕ್ತ ವೇದಿಕೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಮಾಡಲಾಗುತ್ತಿದೆ ಎಂದು ಹೇಳಿದರು. ಯಾರೂ ನಿರೀಕ್ಷೆ ಮಾಡದ ಕೆಲವು ಬಿಜೆಪಿ ಮುಖಂಡರು ಕಾಂಗ್ರೆಸ್ ಪಕ್ಷವನ್ನು ಸೇರಲಿದ್ದು ಈ ಸೇರ್ಪಡೆ ಬಿಜೆಪಿಗೂ ಅಚ್ಚರಿಯನ್ನುಂಟು ಮಾಡಲಿದೆ ಎಂದು ಶಾಸಕರು ಈ ಸಂದರ್ಭದಲ್ಲಿ ಹೇಳಿದರು.
ಸೋಮವಾರದಂದು ಮುಂಡೂರು, ಹಾಗೂ ಆರ್ಯಾಪು ಗ್ರಾಮದ ಸುಮಾರು 40 ಕ್ಕೂ ಮಿಕ್ಕಿ ಬಿಜೆಪಿ ಕಾರ್ಯಕರ್ತರು ಪಕ್ಷಕ್ಕೆ ಸೇರ್ಪಡೆಯಾದರು.
ಪುತ್ತೂರಿನಲ್ಲಿ ಪಕ್ಷ ಇನ್ನಷ್ಟು ಗಟ್ಟಿಯಾಗುತ್ತಿದೆ; ಕೆ ಪಿ ಆಳ್ವ
ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವರವರು ಮಾತನಾಡಿ, ಪುತ್ತೂರಿನಲ್ಲಿ ಪಕ್ಷ ಇನ್ನಷ್ಟು ಗಟ್ಟಿಯಾಗುತ್ತಿದೆ. ಶಾಸಕ ಅಶೋಕ್ ರೈ ಅವರ ಅಭಿವೃದ್ದಿ ಕಾರ್ಯಗಳು ಎಲ್ಲರನ್ನೂ ಅಚ್ಚರಿಗೊಳಿಸಿದೆ, ಈ ಹಿಂದೆ ಯಾವ ಶಾಸಕರೂ ಮಾಡದ ಅಭಿವೃದ್ದಿ ಕಾರ್ಯಗಳನ್ನು ಶಾಸಕರು ಮಾಡುತ್ತಿದ್ದಾರೆ. ಪಕ್ಷಾತೀತವಾಗಿ ಅವರು ಮಾಡುತ್ತಿರುವ ಅಕ್ರಮ ಸಕ್ರಮ ಹಾಗೂ ಇತರೆ ಅಭಿವೃದ್ದಿ ಕಾರ್ಯಗಳು ಯುವ ಜನತೆಯನ್ನು ಪಕ್ಷದತ್ತ ಆಕರ್ಷಿಸುವಂತೆ ಮಾಡಿದೆ ಎಂದು ಬ್ಲಾಕ್ ಅಧ್ಯಕ್ಷರಾದ ಕೃಷ್ಣಪ್ರಸಾದ್ ಆಳ್ವ ಹೇಳಿದರು.
ವೇದಿಕೆಯಲ್ಲಿ ಕೆಪಿಸಿಸಿ ಸಂಯೋಜಕರಾದ ಕಾವು ಹೇಮನಾಥ ಶೆಟ್ಟಿ, ಗ್ಯಾರಂಟಿ ಸಮಿತಿ ಅಧ್ಯಕ್ಷರಾದ ಉಮಾನಾಥ ಶೆಟ್ಟಿ ಪೆರ್ನೆ, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಮುರಳೀದರ್ ರೈ ಮಠಂತಬೆಟ್ಟು, ಜಿಪಂ ಮಾಜಿ ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ, ಯುವ ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿ ಶ್ರೀಪ್ರಸಾದ್ ಪಾಣಾಜೆ, ಎನ್ಎಸ್ಯುಐ ರಾಜ್ಯ ಉಪಾಧ್ಯಕ್ಷರಾದ ಫಾರೂಕ್ ಬಾಯಬ್ಬೆ, ಪಾಣಜೆ ಉಸ್ತುವಾರಿ ಶಂಕರ ನಾರಾಯಣ ಭಟ್, ನೆಟ್ಟಣಿಗೆ ಮುಡ್ನೂರು ಗ್ರಾಪಮ ಸದಸ್ಯ ಶ್ರೀರಾಂ ಪಕ್ಕಳ, ಆರ್ಯಾಪು ವಲಯ ಕಾಂಗ್ರೆಸ್ ಅಧ್ಯಕ್ಷರಾದ ಗಿರೀಶ್ ರೈ , ಮುಂಡೂರು ವಲಯ ಕಾಂಗ್ರೆಸ್ ಅಧ್ಯಕ್ಷರಾದ ಪ್ರವೀಣ್ ಆಚಾರ್ಯ, ಪುತ್ತೂರು ಸರಕಾರಿ ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿಯ ಸದಸ್ಯರಾದ ಸುದೇಶ್ ಶೆಟ್ಟಿ ಶಾಂತಿನಗರ, ಸಿದ್ದಿಕ್ ಸುಲ್ತಾನ್ ಕೂಡುರಸ್ತೆ, ಮೊದಲಾದವರು ಉಪಸ್ಥಿತರಿದ್ದರು.