ಯಾತ್ರಿ ನಿವಾಸ ನಿರ್ಮಾಣ, ಮತ್ತು ಶಂಕುಸ್ಥಾಪನೆ ಬಗ್ಗೆ ನಿರ್ಣಯ
ಬಡಗನ್ನೂರು: ದೇಯಿ ಬೈದ್ಯೆತಿ ಕೋಟಿ ಚೆನ್ನಯ ಮೂಲಸ್ಥಾನ ಅಭಿವೃದ್ಧಿ ಚಾರಿಟೇಬಲ್ ಟ್ರಸ್ಟ್ ಇದರ ಸಭೆಯು ಮಂಗಳೂರಿನ ಕಂಕನಾಡಿ ಬ್ರಹ್ಮ ಬೈದರ್ಕಳ ಗರಡಿಯಲ್ಲಿ ಜು. 20 ರಂದು ನಡೆಯಿತು.
ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಟ್ರಸ್ಟ್ ಅಧ್ಯಕ್ಷ ಸಂಜೀವ ಪೂಜಾರಿ, ವಿಶ್ವದ ಬಿಲ್ಲವರು ಸೇರಿ ನಿರ್ಮಿಸಿದ ಶ್ರೀ ಕ್ಷೇತ್ರ ಗೆಜ್ಜೆಗಿರಿಯ ಅಭಿವೃದ್ಧಿಗೆ ಪೂರಕವಾಗಿ ಹಾಗೂ ಮಾತೆ ದೇಯಿ ಬೈದ್ಯೆತಿ ಕೋಟಿ ಚೆನ್ನಯ ಆದರ್ಶಗಳ ಜೊತೆ ನಾಟಿ ವೈದ್ಯದ ವಿಶೇಷತೆಯನ್ನು ಜಗತ್ತಿಗೆ ಸಾರುವ ಕೆಲಸ ಟ್ರಸ್ಟ್ ನ ಮೂಲಕ ಮುಂದಿನ ದಿವಸಗಳಲ್ಲಿ ನಡೆಯಲಿದೆ ಎಂದು ಅವರು ಹೇಳಿದರು.
ಸಭೆಯಲ್ಲಿ ಗೆಜ್ಜೆಗಿರಿ ಕ್ಷೇತ್ರಾಡಳಿತ ಸಮಿತಿಯ ಗೌರವ ಅಧ್ಯಕ್ಷ ಪೀತಾಂಬರ ಹೆರಾಜೆ, ಅಧ್ಯಕ್ಷ ರವಿ ಪೂಜಾರಿ ಚಿಲಿಂಬಿ, ವಾಸ್ತುತಜ್ಞ ಆರ್ಕಿಟೆಕ್ಟ್ ಪ್ರಮಲ್ ಕುಮಾರ್ ಕಾರ್ಕಳ, ಕ್ಷೇತ್ರಾಡಳಿತ ಉಪಾಧ್ಯಕ್ಷ ಹಾಗೂ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಉಲ್ಲಾಸ್ ಕೋಟ್ಯಾನ್, ಕ್ಷೇತ್ರಾಡಳಿತ ಸಮಿತಿಯ ಉಪಾಧ್ಯಕ್ಷ ದೀಪಕ್ ಕೋಟ್ಯಾನ್, ಪ್ರಧಾನ ಕಾರ್ಯದರ್ಶಿ ಡಾ. ರಾಜಾರಾಂ, ಕೋಶಾಧಿಕಾರಿ ಮೋಹನ್ ದಾಸ್ ವಾಮಂಜೂರು,ಟ್ರಸ್ಟ್ ನ ಕೋಶಾಧಿಕಾರಿ ಹರೀಶ್ ಸಾಲ್ಯಾನ್ ಬಜಗೋಳಿ,ಪ್ರಮುಖರಾದ ಡಾ. ಸಂತೋಷ್ ಕುಮಾರ್ ಬೈರಂಪಳ್ಳಿ, ನಾರಾಯಣ ಮಚ್ಚಿನ, ರಾಜೇಂದ್ರ ಚಿಲಿಂಬಿ, ಜಯವಿಕ್ರಂ ಕಲ್ಲಾಪು, ಹರೀಶ್ ಕೆ ಪೂಜಾರಿ, ಕುಮಾರ್ ಇರುವೈಲ್, ಜಯರಾಮ ಪೂಜಾರಿ ಬೆಳುವಾಯಿ, ಜಯರಾಂ ಬಂಗೇರ ಹೆರಾಜೆ ಬೆಳ್ತಂಗಡಿ ಮುಂತಾದವರು ಉಪಸ್ಥಿತರಿದ್ದರು.
ಯಾತ್ರಿ ನಿವಾಸ ಮತ್ತು ಅದರ ನಿರ್ಮಾಣದ ಶಂಕುಸ್ಥಾಪನೆಯ ತೀರ್ಮಾಣ:-
ಶ್ರೀ ಕ್ಷೇತ್ರ ಗೆಜ್ಜೆಗಿರಿಯಲ್ಲಿ ವಿಶ್ವದ ಬಿಲ್ಲವರನ್ನು ಸೇರಿಸಿಕೊಂಡು ಕ್ಷೇತ್ರದ ಅಭಿವೃದ್ಧಿಗೆ ಪೂರಕವಾಗಿ ಶ್ರೀ ಕ್ಷೇತ್ರದ ಪಕ್ಕದಲ್ಲಿ ಕ್ಷೇತ್ರಾಡಳಿತ ಸಮಿತಿ ಖರೀದಿಸಿದ ಜಾಗದಲ್ಲಿ ಪ್ರವಾಸಿಗರಿಗೆ ಮತ್ತು ಯಾತ್ರಿಕರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಯಾತ್ರಿಕ ನಿವಾಸವನ್ನು ನಿರ್ಮಾಣ ಮಾಡುವ ಬಗ್ಗೆ ಮತ್ತು ಅದರ ಶಂಕುಸ್ಥಾಪನೆ ಮಾಡುವ ಬಗ್ಗೆ ಸಭೆಯಲ್ಲಿ ತೀರ್ಮಾನಿಸಲಾಯಿತು.