ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅತಿಯಾದ ಮಳೆಯಿಂದ ಅಡಿಕೆ ಕೊಳೆರೋಗ ಮತ್ತು ಇತರ ವಾಣಿಜ್ಯ ಕೃಷಿಗಳಿಗೆ ಹಾನಿಯಾಗಿದ್ದು, ಕೆಂಪು ಕಲ್ಲು, ಮರಳು ಅಭಾವದಿಂದ ಕೆಲಸ, ವ್ಯಾಪಾರ-ವಹಿವಾಟು ಇಲ್ಲದೇ ಸಾರ್ವಜನಿಕರು ಮತ್ತು ವರ್ತಕರು ತೀವ್ರ ಸಂಕಷ್ಟದಲ್ಲಿದ್ದಾರೆ. ಇದೇ ವೇಳೆಯಲ್ಲಿ ಮೆಸ್ಕಾಂನವರು ವಿದ್ಯುತ್ ಬಳಕೆದಾರರಿಗೆ ಹೆಚ್ಚುವರಿ ಠೇವಣಿ ಹಣವನ್ನು ಕಟ್ಟಲು ಸೂಚಿಸಿದ್ದು, ಇದು ಸಾರ್ವಜನಿಕರಿಗೆ ಮತ್ತು ವರ್ತಕರಿಗೆ ಹೆಚ್ಚಿನ ಹೊರೆಯಾಗಿದೆ. ಈ ಹೆಚ್ಚುವರಿ ವಿದ್ಯುತ್ ಠೇವಣಿ ಪಾವತಿಸಲು ಒತ್ತಡವನ್ನು ಹಾಕದೆ ಸ್ವಲ್ಪ ಸಮಯದವರೆಗೆ ಮುಂದೂಡಬೇಕೆಂದು ಕುಂಬ್ರ ವರ್ತಕರ ಸಂಘದಿಂದ ಮೆಸ್ಕಾಂ ಜ್ಯೂನಿಯರ್ ಇಂಜಿನಿಯರ್ ಮೂಲಕ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ರವರಿಗೆ ಮನವಿ ಸಲ್ಲಿಸಿದ್ದಾರೆ.
ವರ್ತಕರ ಸಂಘದ ಅಧ್ಯಕ್ಷ ಪಿ.ಕೆ ಮಹಮ್ಮದ್ ಕೂಡುರಸ್ತೆಯವರ ನೇತೃತ್ವದಲ್ಲಿ ತೆರಳಿದ ನಿಯೋಗವು ಮೆಸ್ಕಾಂ ಜೆಇ ರವೀಂದ್ರರವರಿಗೆ ಈ ಮನವಿಯನ್ನು ಸಲ್ಲಿಸಿದೆ. ವಿದ್ಯುತ್ ಬಳಕೆದಾರರು ಹೆಚ್ಚುವರಿ ಠೇವಣಿ ಪಾವತಿ ಮಾಡುವುದು ಕಡ್ಡಾಯವಾಗಿದ್ದು ಆದರೆ ಇಂದಿನ ಪರಿಸ್ಥಿತಿಯಲ್ಲಿ ಬಹಳಷ್ಟು ಮಂದಿಗೆ ಹಣದ ಅಭಾವದಿಂದ ತೊಂದರೆಯಾಗಿದೆ. ಮೆಸ್ಕಾಂನಿಂದ ಠೇವಣಿ ಪಾವತಿ ಮಾಡದಿದ್ದರೆ ವಿದ್ಯುತ್ ಕಡಿತ ಮಾಡಲಾಗುವುದು ಎಂಬ ಎಚ್ಚರಿಕೆ ಕೂಡ ಬರುತ್ತಿದೆ. ಇದರಿಂದ ಗ್ರಾಹಕರಿಗೆ ಬಹಳಷ್ಟು ತೊಂದರೆಯಾಗಿದೆ. ಆದ್ದರಿಂದ ಗ್ರಾಹಕರಿಗೆ ಒತ್ತಡ ಹಾಕದೆ ಸ್ವಲ್ಪ ಸಮಯ ಕಾಲಾವಕಾಶ ನೀಡಿ ಸಹಕರಿಸಬೇಕು ಎಂದು ನಿಯೋಗ ಮನವಿ ಮಾಡಿಕೊಂಡಿತ್ತು.
ನಿಯೋಗದಲ್ಲಿ ವರ್ತಕರ ಸಂಘದ ಸ್ಥಾಪಕ ಅಧ್ಯಕ್ಷ ಶ್ಯಾಮ್ಸುಂದರ ರೈ ಕೊಪ್ಪಳ, ಮಾಜಿ ಅಧ್ಯಕ್ಷರುಗಳಾದ ನಾರಾಯಣ ಪೂಜಾರಿ ಕುರಿಕ್ಕಾರ, ಮೆಲ್ವಿನ್ ಮೊಂತೆರೋ,ದಿವಾಕರ ಶೆಟ್ಟಿ, ಲಕ್ಷ್ಮಣ ಕೆ ಮತ್ತಿತರರು ಉಪಸ್ಥಿತರಿದ್ದರು.