ನಮ್ಮ ಹಿರಿಯರ ಆದರ್ಶದ ಬೆಳಕಲ್ಲಿ ಸೌಹಾರ್ದತೆಯಿಂದ ಬೆಳಗೋಣ-ನಾರಾಯಣ ರೈ ಕುಕ್ಕುವಳ್ಳಿ
ಪುತ್ತೂರು: ಕರ್ನಾಟಕ ಮುಸ್ಲಿಂ ಜಮಾಅತ್ ರೆಂಜ ಸರ್ಕಲ್ ವತಿಯಿಂದ ಸ್ವಾತಂತ್ರ್ಯ ಸೌಹಾರ್ದ ಸಂಗಮ ರೆಂಜದಲ್ಲಿ ನಡೆಯಿತು. ಕೆಎಂಜೆ ರೆಂಜ ಸರ್ಕಲ್ ಇದರ ಅಧ್ಯಕ್ಷ ಅಬ್ದುಲ್ ಕುಂಞಿ ಮಾಸ್ಟರ್ ಅಧ್ಯಕ್ಷತೆ ವಹಿಸಿದ್ದರು.
ಕೆಎಂಜೆ ಪುತ್ತೂರು ಝೋನ್ ಕೋಶಾಧಿಕಾರಿ ಅಬ್ದುಲ್ ಜಲೀಲ್ ಸಖಾಫಿ ಕಾರ್ಯಕ್ರಮ ಉದ್ಘಾಟಿಸಿ ನಾವು ಸೌಹಾರ್ದಯುತವಾಗಿ, ಎಲ್ಲಾ ಭೇದಭಾವಗಳ ಮರೆತು ಒಂದಾಗಿ ಬಾಳೋಣ ಎಂದು ಸಂದೇಶ ನೀಡಿದರು. ಅತಿಥಿಯಾಗಿದ್ದ ನಿವೃತ್ತ ಶಿಕ್ಷಕ, ಸುದ್ದಿ ಪ್ರತಿಭಾರಂಗದ ಅಂಕಣಕಾರ ನಾರಾಯಣ ರೈ ಕುಕ್ಕುವಳ್ಳಿ ಮಾತನಾಡಿ ನಾವೆಲ್ಲರೂ ನಮ್ಮ ಹಿರಿಯರ ಆದರ್ಶದ ಬೆಳಕಲ್ಲಿ ಸೌಹಾರ್ದತೆಯಿಂದ ಬೆಳಗಬೇಕು. ಈ ನೆಲದ ಸಂವಿಧಾನ, ಕಾನೂನು ರಕ್ಷಕರಾಗಿ ಸಮಾಜಕ್ಕೆ ಸಮಾಜಕ್ಕೆ ಮಾದರಿಯಾಗೋಣ ಎಂದು ಹೇಳಿದರು.
ಕೆಎಂಜೆ ದ.ಕ ಈಸ್ಟ್ ಜಿಲ್ಲೆಯ ಮಾಧ್ಯಮ ಕಾರ್ಯದರ್ಶಿ ಅಬ್ದುಲ್ ಹಮೀದ್ ಸುಣ್ಣಮೂಲೆ ಮಾತನಾಡಿ ಭಾರತಮಾತೆಯ ಮಕ್ಕಳಾದ ನಾವು ಸೌಹಾರ್ದಯುತವಾಗಿ ಬಾಳಿ ಸುಸಂಸ್ಕೃತ ಸಮೃದ್ಧ ಭಾರತ ಕಟ್ಟೋಣ ಎಂದರು.
ಕೆಎಂಜೆ ರೆಂಜ ಸರ್ಕಲ್ನ ಸದಸ್ಯ ಅಬ್ಬಾಸ್ ಮದನಿ ದುವಾ ನೆರವೇರಿಸಿದರು. ದ.ಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಮಾಜ ಸೇವಕ ಮಹಮ್ಮದ್ ಹಾಜಿ ಕುಕ್ಕುವಳ್ಳಿಯವರು ತನ್ನ ಬಾಲ್ಯದ ಶಿಕ್ಷಣ, ಗುರುಹಿರಿಯರ ಮಹತ್ವದ ಕುರಿತು ನೆನಪಿಸುತ್ತಾ ಸರ್ವ ಜನಾಂಗದ ಶಾಂತಿಯ ತೋಟದ ಸುಂದರ ಹೂವುಗಳಾಗಿ ಕಂಪು ಬೀರೋಣ ಎಂದು ಸೌಹಾರ್ದ ಸಂದೇಶ ನೀಡಿದರು.
ರೆಂಜ ಸರ್ಕಲ್ ಉಸ್ತುವಾರಿ ಹಂಝ ಲತೀಫಿ, ಕೋಶಾಧಿಕಾರಿ ಅಬ್ದುಲ್ ಮದನಿ, ಲೇಖಕ ಅಬ್ದುಲ್ ಅಝೀಝ್ ನೂರಾನಿ, ಸಂದರ್ಭೋಚಿತವಾಗಿ ಮಾತನಾಡಿದರು. ಕೆ.ಎಂ.ಜೆ ರೆಂಜ ಸರ್ಕಲ್ ಪ್ರ.ಕಾರ್ಯದರ್ಶಿ ಮೂಸ ಮದನಿ ಸ್ವಾಗತಿಸಿದರು. ಕಾರ್ಯದರ್ಶಿ ಮುಹಮ್ಮದ್ ಮದನಿ ವಂದಿಸಿದರು.